Wednesday, April 15, 2009

ಚುನಾವಣಾ ಸಮೀಕ್ಷೆ ಎಷ್ಟು ಸತ್ಯ? - ಒಂದು ಖಾಸ್ ಬಾತ್

ದೀಗ ಚುನಾವಣಾ ಸಮಯ ಎನ್ನುವುದಕ್ಕಿಂತಲೂ ಚುನಾವಣಾ ಸಮೀಕ್ಷೆಗಳ ಸಮಯ ಎಂದರೇ ಹೆಚ್ಚು ಸರಿ. ಎಲ್ಲಾ ಟೀವಿ ಚಾನಲ್ಲುಗಳೂ ಚುನಾವಣಾ ಸಮೀಕ್ಷೆ ನಡೆಸುತ್ತಿವೆ. ತೆರೆಯ ಮೇಲೆ ಗ್ರಾಫ್ ತೋರಿಸುವುದೂ, ಮೂರು ನಾಲ್ಕು ರಾಜಕಾರಣಿಗಳ ಜೊತೆ ಚರ್ಚೆ ನಡೆಸುವುದೂ ಮಾಮೂಲಿಯಾಗಿದೆ. ಆದರೆ, ದೊಡ್ಡ ವಿವಾದ ಮಾತ್ರ ಹಾಗೇ ಇದೆ. ಚುನಾವಣಾ ಸಮೀಕ್ಷೆಗಳು ಎಷ್ಟು ವಿಶ್ವಾಸಾರ್ಹ? ಹಿಂದಿನ ಚುನಾವಣಾ ಸಮೀಕ್ಷೆಗಳು ಹೇಳಿದ ಸೀಟುಗಳ ಸಂಖ್ಯೆಗಳೆಲ್ಲಾ ಸರಿಹೋಗಿಲ್ಲವಲ್ಲ? ಮಾಧ್ಯಮಗಳು ಇಂಥ ಬೋಗಸ್ ಪದ್ಧತಿಯನ್ನು ಬಳಸಿಕೊಳ್ಳಬೇಕೇ? ಮೂರು-ನಾಲ್ಕು ಚುನಾವಣಾ ಸಮೀಕ್ಷೆಯಲ್ಲಿ ಪಾಲ್ಗೊಂಡ ಅನುಭವದಲ್ಲಿ ನನ್ನ ಅಭಿಪ್ರಾಯವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

1. ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಬೇಕೇ ಬೇಕು. (ಆದರೆ, Exit Poll - ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶವನ್ನು ಮಾತ್ರ ಎಲ್ಲ ಹಂತದ ಮತದಾನ ಮುಗಿದ ನಂತರವೇ ಪ್ರಕಟಿಸಬೇಕು. ಅಭಿವೃದ್ಧಿಹೊಂದಿದ ದೇಶದಲ್ಲೂ ಇದೇ ವ್ಯವಸ್ಥೆಯಿದೆ. ಈ ವರ್ಷದಿಂದ ಭಾರತದಲ್ಲೂ ಈ ಷರತ್ತನ್ನು ಚುನಾವಣಾ ಆಯೋಗ ಜಾರಿಗೊಳಿಸಿದೆ.)

2. ಈ ಸಮೀಕ್ಷೆಗಳನ್ನು ರಾಜಕೀಯ ಪಕ್ಷಗಳು ಟೀಕಿಸುವುದು ಅಥವಾ ವಿರೋಧಿಸುವುದು ಸಹಜ. ಆದರೆ, ವಾಸ್ತವ ಏನೂ ಅಂದರೆ, ಚುನಾವಣೆಗೆ ಮೊದಲು ಬಹುತೇಕ ರಾಜಕೀಯ ಪಕ್ಷಗಳು ರಹಸ್ಯವಾಗಿ ತಮ್ಮದೇ ಸಮೀಕ್ಷೆ ನಡೆಸುತ್ತವೆ. ಆ ಸಮೀಕ್ಷೆಗಳಿಗೆ ಅನುಗುಣವಾಗಿ ತಮ್ಮ ಚುನಾವಣಾ ಯೋಜನೆಯನ್ನು ರೂಪಿಸುತ್ತವೆ. ಕಳೆದ ವರ್ಷದಂತೆ ಈ ವರ್ಷವೂ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮದೇ ಸಮೀಕ್ಷೆ ನಡೆಸಿವೆ. ಬಹಿರಂಗವಾಗಿ ಏನೇ ಹೇಳಲಿ,ಅಂತರಂಗದಲ್ಲಿ ತಮ್ಮ ಸಮೀಕ್ಷೆಗಳ ಫಲಿತಾಂಶದ ಸತ್ಯ ಏನು ಎಂದು ಎರಡೂ ಪಕ್ಷದ ವರಿಷ್ಠರಿಗೆ ಗೊತ್ತು!

3. ಈಗ ಪತ್ರಿಕೋದ್ಯಮವನ್ನೇ ತೆಗೆದುಕೊಂಡರೆ, ನಮ್ಮ ವರದಿಗಾರರು ತಮ್ಮ ಕ್ಷೇತ್ರದಲ್ಲಿ ಸಂಚರಿಸಿ 25-30 ಜನರನ್ನು ಮಾತನಾಡಿಸಿ ಬರೆಯುವ ಕ್ಷೇತ್ರ ಸಮೀಕ್ಷೆಗಳಿಗಿಂತ Large Samples ಇರುವ ಸಮೀಕ್ಷೆಗಳೇ ಹೆಚ್ಚು ನಿಖರ ಹಾಗೂ ವಿಶ್ವಾಸಾರ್ಹ. ಆ ದೃಷ್ಟಿಯಲ್ಲಿ ಈ ಸಮೀಕ್ಷೆಗಳು ಆಧುನಿಕ ಪತ್ರಿಕೋದ್ಯಮಕ್ಕೆ ಒಂದು ವರ ಎಂದು ನನ್ನ ಅಭಿಪ್ರಾಯ.

4. ಈ ಸಮೀಕ್ಷೆಗಳು ಹಲವು ಬಾರಿ ವಿಫಲವಾಗುತ್ತವೆ. ಕೆಲವು ಬಾರಿ ಸಂಪೂರ್ಣ ಉಲ್ಟಾ ಆಗುತ್ತವೆ (ಕಳೆದ ವರ್ಷದ CNN-IBN ಸಮೀಕ್ಷೆ ಥರ). ಈ ಸಮೀಕ್ಷೆಗಳು ಯಶಸ್ವಿಯಾಗುವುದು ಬಿಡುವುದು ಆರು ಅಂಶಗಳನ್ನು ಅವಲಂಬಿಸಿವೆ:

a) ಉತ್ತಮ ಸಮೀಕ್ಷಾ ಗಣದ ಆಯ್ಕೆ
b) ಉತ್ತಮ ಸಮೀಕ್ಷಾ ಗಣದ ಗಾತ್ರ
c) ಸೂಕ್ತ ಪ್ರಶ್ನಾವಳಿ
d) ಸಮೀಕ್ಷೆ ನಡೆಸುವ ಸಮಯ
e) ಉತ್ತಮ ಹಾಗೂ ಪ್ರಾಮಾಣಿಕ ಕ್ಷೇತ್ರ ಕಾರ್ಯ ಹಾಗೂ
f) ಮಾಹಿತಿಯ ಉತ್ತಮ ಸಂಸ್ಕರಣೆ ಮತ್ತು ವಿಶ್ಲೇಷಣೆ

ಈ ಆರು ಹಂತಗಳಲ್ಲಿ ಒಂದರಲ್ಲಿ ಎಡವಿದರೂ ಸಮೀಕ್ಷೆ ದಾರಿ ತಪ್ಪುತ್ತದೆ.

5. ಇನ್ನೊಂದು ಪ್ರಮುಖ ಅಂಶವನ್ನು ಎಲ್ಲರೂ ಗಮನಿಸಲೇ ಬೇಕು. ಸಮೀಕ್ಷೆ ಅಂದರೆ, ಪ್ರತಿ ಪಕ್ಷ ಗೆಲ್ಲಬಹುದಾದ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಎಂಬ ಅಭಿಪ್ರಾಯವಿದೆ. ಇದು ತಪ್ಪು. ಸಮೀಕ್ಷೆಗಳು ಎಂದರೆ ಒಟ್ಟಾರೆ ಟ್ರೆಂಡ್ ಸೂಚಿಸುವ ದಿಗ್ದರ್ಶಕಗಳು ಮಾತ್ರ. Numbersಗಿಂತ Inference ಮುಖ್ಯ.

ಉದಾಹರಣೆಗೆ ಕಳೆದ ಲೋಕಸಭಾ ಚುನಾವಣೆಯ ಸಮೀಕ್ಷೆಗಳನ್ನು ನೋಡಿ. ಕಳೆದ 4-5 ವರ್ಷಗಳವರೆಗೂ ಕನ್ನಡ ಪತ್ರಿಕೋದ್ಯಮದಲ್ಲಿ ಈ ಸಮೀಕ್ಷೆಗಳ ಭರಾಟೆ ಅಷ್ಟಾಗಿ ಇರಲಿಲ್ಲ. ಪ್ರಕಟಿಸಿದರೂ ಈ ಸಮೀಕ್ಷೆಗಳನ್ನು 2-3-4 ಕಾಲಮ್ಮಿನ ಒಂದು ಸುದ್ದಿಯಾಗಿ ಪ್ರಕಟಿಸುವ ವಾಡಿಕೆಯಿತ್ತು. ಈ ಹಂತದಲ್ಲಿ ಕನ್ನಡಪ್ರಭದಲ್ಲಿ NDTV Indian Express - AC Nielsen ಸಮೀಕ್ಷೆಯನ್ನು ವಿವರವಾಗಿ ಪ್ರಕಟಿಸುವ ಹಾಗೂ Over Play ಮಾಡುವ ನಿರ್ಧಾರ ಕೈಗೊಂಡಾಗ ನನಗೂ ಈ ಸಮೀಕ್ಷೆಗಳ ಕುರಿತು ಅಳುಕಿತ್ತು. ಆದರೆ, ಈ ಕಾರ್ಯದಲ್ಲಿ ನಾನು ನಿಕಟವಾಗಿ ತೊಡಗಿಸಿಕೊಂಡ ನಂತರ ನನಗೆ ಈ ಸಮೀಕ್ಷೆಗಳ ಕುರಿತು ಧೈರ್ಯ ಹಾಗೂ ನಂಬಿಕೆ ಬಂತು.

ನಮ್ಮ ಆರಂಭದ ಸುತ್ತಿನ ಸಮೀಕ್ಷೆಯಲ್ಲಿ "ಎನ್.ಡಿ.ಎ ಪ್ರಕಾಶಿಸುತ್ತಿದೆ - ಬಿಜೆಪಿ ಮೈತ್ರಿ ಕೂಟಕ್ಕೇ ಮತ್ತೆ ಅಧಿಕಾರ ಸಂಭವ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅದನ್ನೇ ಕನ್ನಡಪ್ರಭದಲ್ಲಿ ಬ್ಯಾನರ್ ಶೀರ್ಷೀಕೆಯಾಗಿ ಪ್ರಕಟಿಸಿದೆವು. ಆದರೆ, ಎರಡು ಮತ್ತು ಮೂರನೇ ಸುತ್ತಿನ ಚುನಾವಣಾ ಪೂರ್ವ ಸಮೀಕ್ಷೆಗಳು ಮುಗಿಯುವ ಹೊತ್ತಿಗೆ ಕಾಂಗ್ರೆಸ್ ಮೈತ್ರಿ ಕೂಟದ ಅಲೆ ಹೆಚ್ಚು ಕಂಡುಬಂತು. ಬಿಜೆಪಿ ಮೈತ್ರಿಕೂಟಕ್ಕೆ ಅಧಿಕಾರ ಸಿಗುವುದು ಕಷ್ಟ ಎಂದು ಸಮೀಕ್ಷೆಗಳು ತಿಳಿಸಿದವು. ಆಗ ನಾವು "ಎನ್.ಡಿ.ಎ ಮಂಕಾಗುತ್ತಿದೆ" ಎಂದು ಬ್ಯಾನರ್ ಶೀರ್ಷಿಕೆಯಲ್ಲಿ ಸಮೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದೂ ಅಷ್ಟೇ ನಿಜ. Exit Poll ಸಮೀಕ್ಷೆಯ ನಂತರವಂತೂ ಬಿಜೆಪಿಗೆ ಅಧಿಕಾರ ದೂರದ ಮಾತು ಎಂಬ ಅಂಶ ಗೊತ್ತಾಯಿತು. ಸಮೀಕ್ಷೆಗಳು ಅಂದಾಜು ಮಾಡಿದ್ದ ಸಂಖ್ಯೆ ಸರಿ ಇಲ್ಲದಿದ್ದರೂ ಸಮೀಕ್ಷೆ ತೋರಿಸಿದ ಒಟ್ಟಾರೆ ದಿಕ್ಕು ಸರಿಯಾಗೇ ಇತ್ತು. ಎನ್.ಡಿ.ಎ. ಶೈನ್ ಆಗಲಿಲ್ಲ.

ಕರ್ನಾಟಕದಲ್ಲೂ ಅಷ್ಟೇ ಬಿಜೆಪಿಗೆ 15-19 ಸೀಟು ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದರೆ ಯಾರೂ ನಂಬಲಿಲ್ಲ. ಆಗ ಕನ್ನಡಪ್ರಭವನ್ನು ಟೀಕಿಸಿದವರು ಹಲವರು. ಈ ಟೀಕೆಗಳಿಂದ ನಾನು ತುಸು ಡಿಪ್ರೆಸ್ ಆದದ್ದು ನಿಜ. ಆದರೆ, ಫಲಿತಾಂಶ ಬಂದಾಗ ಬಿಜೆಪಿಗೆ 18 ಸೀಟು ಸಿಕ್ಕಿತ್ತು. ಅಂದರೆ, ಕರ್ನಾಟಕದಲ್ಲಿ ಬಿಜೆಪಿ ಬಲಗೊಂಡಿದ್ದನ್ನು ಸಮೀಕ್ಷೆ ಸರಿಯಾಗೇ ಪತ್ತೆ ಹಚ್ಚಿತ್ತು.

ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತೂ ಸಮೀಕ್ಷೆ ನಡೆಸಿದ್ದೆವು. ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ಸಿಗೆ ಮತ್ತೆ ಅಧಿಕಾರ ಕಷ್ಟ. ಬಿಜೆಪಿ ಹಾಗೂ ಜೆಡಿಎಸ್ ಬಲಗೊಂಡಿವೆ. ಆದರೆ, ಯಾವ ಪಕ್ಷಕ್ಕೆ ಅಧಿಕಾರ ಎಂದು ಹೇಳಲು ಆಗುತ್ತಿಲ್ಲ. Too Close to Call - ಎಂದು ಸಮೀಕ್ಷೆ ತಿಳಿಸಿತ್ತು. (That's the exact four-words the survey said.) ಕೊನೆಗೆ ಬಂದ ಫಲಿತಾಂಶ ಎಷ್ಟು Close ಆಗಿತ್ತು ಅಂದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಅದಿಕಾರಕ್ಕೆ ಕೂದಲೆಳೆ ಅಂತರದಲ್ಲಿ ಇದ್ದವು. ಜೆಡಿಎಸ್ ಅತ್ತ ಬಲ ಕೊಟ್ಟರೆ ಆ ಸರ್ಕಾರ ಇತ್ತ ಬಲ ಕೊಟ್ಟರೆ ಈ ಸರ್ಕಾರ ಎಂಬ ಪರಿಸ್ಥಿತಿ ನಿರ್ಮಾಣವಾಗಲಿಲ್ಲವೇ? ಅಷ್ಟೇ ಅಲ್ಲ, ಚಂದ್ರಬಾಬು ನಾಯ್ಡುಗೆ ಅಧಿಕಾರ ಗಗನಕುಸುಮ ಎಂದೂ ಸಮೀಕ್ಷೆ ತಿಳಿಸಿತ್ತು. ಸಂಖ್ಯೆ ಸರಿ ಇಲ್ಲದಿದ್ದರೂ ಸಮೀಕ್ಷೆ ತೋರಿಸಿದ್ದ ದಿಕ್ಕು ಸುಳ್ಳಾಗಲಿಲ್ಲವಲ್ಲ!

ಬಹಿರಂಗವಾಗಿ, ರಾಜಕೀಯ ಪಕ್ಷಗಳು ಈ ಸಮೀಕ್ಷೆಯೆಲ್ಲ ಬೋಗಸ್ ಎಂದೇ ಹೇಳಿದವು. ಆದರೆ, ಕಾಂಗ್ರೆಸ್ ಗಾಳಿ ಬಲವಾಗುತ್ತಿದೆ ಎಂದು ನಮ್ಮ ಸಮೀಕ್ಷೆ ಪ್ರಕಟವಾದಾಗ ಕಾಂಗ್ರೆಸ್ 1.5 ಲಕ್ಷ ಪ್ರತಿಗಳನ್ನು ಪ್ರೀಮಿಯಂ ಬೆಲೆಗೆ ಕೊಂಡುಕೊಂಡು ಮತಕ್ಷೇತ್ರಗಳಲ್ಲಿ ಹಂಚಿದರೆ, ಜೆಡಿಎಸ್ 2.5 ಲಕ್ಷ ಪ್ರತಿಗಳನ್ನು ಕೊಂಡುಕೊಂಡಿತು. ಜೆಡಿಎಸ್ ಸಂತೋಷಕ್ಕೆ ಕಾರಣವೆಂದರೆ, - ಆಗಿನ ಪರಿಸ್ಥಿತಿಯಲ್ಲಿ ಜನತಾದಳ ಸಂಪೂರ್ಣ ಅವಶೇಷವಾಗಿತ್ತು. ದೇವೇಗೌಡರು ಹೊಸತಾಗಿ ಜೆಡಿಎಸ್ ಪಕ್ಷ ಪಟ್ಟಿದ್ದರು. ಆದರೆ, ಯಾವ ಸಮೀಕ್ಷೆಯೂ ಜೆಡಿಎಸ್ ಇರುವನ್ನು ಗುರುತಿಸಿರಲಿಲ್ಲ. ಇತರೆ ಎಂಬ ಕಾಲಂ ಅಡಿ ಜೆಡಿಎಸ್ ಸ್ಥಾನಗಳನ್ನು ತೋರಿಸಲಾಗುತ್ತಿತ್ತು. ಆದರೆ, ನಮ್ಮ ಸಮೀಕ್ಷೆಯಲ್ಲಿ ಜೆಡಿಎಸ್ ಎಂದು ಪ್ರತ್ಯೇಕವಾಗಿ ಗುರುತಿಸಿ ಅದು ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಹೇಳಿದ್ದೆವು.

ಇದನ್ನೆಲ್ಲ ಸಮೀಕ್ಷೆ ಸ್ಪಷ್ಟವಾಗಿ ಕಂಡುಕೊಂಡಿತ್ತು. ಇದನ್ನು ಬಿಟ್ಟು ಕೆಲವರು, ಕೇವಲ ಸಮೀಕ್ಷೆಯ ಸಂಖ್ಯೆಗೆ ಮಹತ್ವ ಕೊಟ್ಟು, ಸಮೀಕ್ಷೆಗಳೆಲ್ಲಾ ಬೋಗಸ್ ಎಂದು ಅಪಪ್ರಚಾರ ಮಾಡಿದರು.

2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಅಷ್ಟೇ. ಸುವರ್ಣ ನ್ಯೂಸ್ - ಕನ್ನಡಪ್ರಭ - ಸಿಫೋರ್ ಸಮೀಕ್ಷೆ ಅದ್ಭುತ ಯಶಸ್ಸು ಕಂಡಿತು. ಕೇವಲ ಟ್ರೆಂಡ್ ಅಷ್ಟೇ ಅಲ್ಲ, ಸಂಖ್ಯೆ ಸಹ ಶೇ.98ರಷ್ಟು ನಿಖರವಾಗಿತ್ತು. This is the only survey that has hit the bulls-eye ಎಂದು Times of India ಮುಖಪುಟದಲ್ಲಿ ಬರೆದಿತ್ತು.

ಹಾಗಂತ ಎಲ್ಲ ಬಾರಿಯೂ ಸಮೀಕ್ಷೆಯ ಸಂಖ್ಯೆ ಇಷ್ಟೊಂದು ನಿಖರವಾಗಿರುತ್ತದೆ ಎಂದು ನಾನೇನೂ ಹೇಳುವುದಿಲ್ಲ. ಆದರೆ, ಸಮೀಕ್ಷೆಗಳಿಂದ ಮತದಾರರ ನಿಖರ ನಾಡಿ ಮಿಡಿತವಂತೂ ಖಂಡಿತವಾಗಿ ತಿಳಿಯುತ್ತದೆ.

In last October, I had a rare chance of being at the thick of the American Elections. ಇದು ನನ್ನ ಪತ್ರಿಕೋದ್ಯಮ ಜೀವನದ ಅತ್ಯದ್ಭುತ ಅನುಭವವೂ ಹೌದು. ಆಗ ಅಲ್ಲಿನ ಅನೇಕ ಪತ್ರಕರ್ತರ ಜೊತೆ ನಿಕಟವಾಗಿ ಒಡನಾಡುವ ಅವಕಾಶ ನನ್ನದಾಯಿತು. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ 'ಡೈರೆಕ್ಟರ್ ಆಫ್ ಪೋಲಿಂಗ್ ' ಜಾನ್ ಕೊಹೆನ್ ಅವರ ಜೊತೆ ನಾನು ಈ ಚುನಾವಣಾ ಪೂರ್ವ ಸಮೀಕ್ಷೆ ಹಾಗೂ ಚುನಾವಣೋತ್ತರ ಸಮೀಕ್ಷೆಯ ಕುರಿತು ಒಂದರ್ಧ ಗಂಟೆ ಮಾತನಾಡಿದ್ದೆ. ಅವರ ಅನುಭವದಲ್ಲಿ, ಸಮೀಕ್ಷೆಗಳು ಎಡವಿದರೆ ಅದಕ್ಕೆ ಆ ಸಮೀಕ್ಷೆ ನಡೆಸುವ ಸಂಸ್ಥೆ ಕಾರಣ. ಸಮೀಕ್ಷೆ ತಪ್ಪಾಯಿತು ಎಂಬ ಕಾರಣಕ್ಕೆ Psephology - ಸಮೀಕ್ಷಾ ವಿಜ್ಞಾನವೇ ಸುಳ್ಳು ಎನ್ನುವಂತಿಲ್ಲ. The methods and executions are very important ಎನ್ನುತ್ತಾರೆ ಅವರು.

ಶಿಕಾಗೋ ಟ್ರಿಬ್ಯೂನ್ನಿನ ಖ್ಯಾತ ರಾಜಕೀಯ ಅಂಕಣಕಾರ ಕ್ಲಾರೆನ್ಸ್ ಪೇಜ್ ಜೊತೆ ಚುನಾವಣಾ ಸಮೀಕ್ಷೆಗಳ ಕುರಿತು ಮಾತನಾಡಿದಾಗ ಅವರು ಹೇಳಿದ್ದೂ ಅದನ್ನೇ. "ಸಮೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ರೂಪಿಸಲಾಗಿದೆ, ಯಾವ ರೀತಿಯ ಸಮೀಕ್ಷಾ ಗಣವನ್ನು ಆಯ್ದುಕೊಳ್ಳಲಾಗಿದೆ ಹಾಗೂ ಯಾವ ಸಂದರ್ಭದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ ಎಂಬುದು ಬಹಳ ಮುಖ್ಯ. ಇದರಲ್ಲಿ ಎಡವಿದರೆ ಸಮೀಕ್ಷೆಯೂ ಎಡವುತ್ತದೆ. ಇಲ್ಲವಾದಲ್ಲಿ, ಸಮೀಕ್ಷೆ ಎಡವಲು ಅವಕಾಶವೇ ಇಲ್ಲ."

ಎಬಿಸಿ ನ್ಯೂಸಿನ ವೈಟ್ ಹೌಸ್ ವರದಿಗಾರ್ತಿ ಆನ್ ಕಾಂಪ್ಟನ್ ಹೇಳಿದ್ದು - "ಈ ಸಮೀಕ್ಷೆಗಳನ್ನು ಕೇವಲ ನಂಬರ್ ಗೇಮ್ ಅಂತ ತಿಳಿಯಬಾರದು. We should use the pre-poll and exit poll statistics to find the reasons for the results."

ಹಾಗಾಗಿ, ಸಮೀಕ್ಷೆಗಳು ಆದುನಿಕ ಪತ್ರಿಕೊದ್ಯಮಕ್ಕೆ ಬೇಕೇ ಬೇಕು. ಆದರೆ, ನಾವು ಸರಿಯಾಗಿ ಸಮೀಕ್ಷೆ ನಡೆಸಬೇಕು ಅಷ್ಟೇ.

1 comment:

Mohan said...

Yes Hegde Sir
It is true that we should do scientifically. at the same time the result will be + or – 5%, I agree with you .Good article Regards