Showing posts with label Election. Show all posts
Showing posts with label Election. Show all posts

Sunday, April 19, 2009

ಇಂಟರ್ನೆಟ್ ಮೂಲಕ ಮತ ಹಾಕಿ!

ನನ್ನ ಅರ್ಧ ಜೀವನ ಇಂಟರ್ನೆಟ್ ಮೂಲಕ ನಡೆಯುತ್ತಿದೆ. ಬ್ಯಾಂಕು, ಮನೆಯ ಎಲ್ಲಾ ಬಿಲ್ ಪೇಮೆಂಟು, ಪ್ರಯಾಣ ಟಿಕೆಟ್ ಬುಕಿಂಗು, ಹೊಟೆಲ್ ಬುಕಿಂಗು, ಸಿನೆಮಾ ಟಿಕೆಟ್ ಬುಕಿಂಗು ಸೇರಿದಂತೆ ಎಲ್ಲಾ ಇಂಟರ್ನೆಟ್ಟಲ್ಲೇ.... ಇಂಥ `ಹೈಟೆಕ್ ನಾನು' ಈಗ ನಾಲಾಯಕ್ ಒಬ್ಬರಿಗೆ ಮತ ಹಾಕಲು ಯಾವುದೋ ಮತಗಟ್ಟೆ ಹುಡುಕಿಕೊಂಡು ಹೋಗಿ ಕ್ಯೂ ನಿಲ್ಲುವುದೇ? ಛೆ.. ಛೆ..

ಈ ಯೋಚನೆ ಬಂದಾಗಲೆಲ್ಲ, ಮತ ಹಾಕಲೂ ಇಂಟರ್ನೆಟ್ ವ್ಯವಸ್ಥೆಯಿದ್ದರೆ, ಮನೆಯಲ್ಲೋ, ಆಫೀಸಿನಲ್ಲೋ ಕುಳಿತು ಮತ ಚಲಾಯಿಸಬಹುದಿತ್ತು ಅಂತ ನನಗೆ ಅನೇಕ ಬಾರಿ ಅನಿಸಿದೆ. ನಿಮಗೂ ಅನಿಸಿರಬಹುದು. ನನಗೆ ಇಂಟರ್ನೆಟ್ ಆಧಾರಿತ ಮತದಾನ ವ್ಯವಸ್ಥೆ ಕುರಿತು ಅಪಾರ ಭರವಸೆಯಿದೆ. ಇವತ್ತಲ್ಲಾ ನಾಳೆ ಈ ವ್ಯವಸ್ಥೆ ಜಾರಿಗೆ ಬಂದೇ ಬರುತ್ತದೆ ಎಂದು ಬಲವಾಗಿ ನಂಬಿರುವವನು ನಾನು.

ಈ ವ್ಯವಸ್ಥೆ ಜಾರಿಗೆ ಬಂದರೆ, ಒಟ್ಟಾರೆ ಮತದಾನ ಪ್ರಮಾಣ, ಅದರಲ್ಲೂ ನಗರ ಪ್ರದೇಶಗಳಲ್ಲಿ ಗಣನೀಯವಾಗಿ ಹೆಚ್ಚಾಗುತ್ತದೆ. ಈಗಿನ ಮತದಾನ ಪ್ರಕ್ರಿಯೆಯಿಂದ ಸುಶಿಕ್ಷಿತರು ದೂರ ಉಳಿಯುತ್ತಿದ್ದಾರೆ. ಒಂದು ಸಮೀಕ್ಷೆಯ ಪ್ರಕಾರ, ಮತಗಟ್ಟೆಗೆ ಖುದ್ದಾಗಿ ಬಂದು ಮತ ಹಾಕುವುದಕ್ಕಿಂತ ಇಂಟರ್ನೆಟ್ಟಿನಲ್ಲಿ ಮತ ಹಾಕಲು ಇಷ್ಟ ಪಟ್ಟವರ ಸಂಖ್ಯೆ ಶೇ.66. (ನನ್ನನ್ನೂ ಸೇರಿದಂತೆ!) ಅಂದರೆ, ಅವರೆಲ್ಲ ಇಂಟರ್ನೆಟ್ ಮೂಲಕ ಮತದಾನದಲ್ಲಿ ಪಾಲ್ಗೊಳ್ಳುವುದರಿಂದ ಚುನಾವಣೆಯಲ್ಲಿ ಸುಶಿಕ್ಷಿತರ ಪಾತ್ರ ಹೆಚ್ಚುತ್ತದೆ. ಆಗ, ಉತ್ತಮ ಅಭ್ಯರ್ಥಿಯ ಆಯ್ಕೆ ಸಾಧ್ಯವಾಗುತ್ತದೆ. ಜಾತಿ ಆಧಾರಿತ ಚುನಾವಣಾ ಫಲಿತಾಂಶ ಬರುವುದಿಲ್ಲ. ಸಾವಿರ ರುಪಾಯಿ ನೋಟು ಕೊಟ್ಟು ವೋಟು ಖರೀದಿಸುವ ಆಟ ಕಡಿಮೆಯಾಗುತ್ತದೆ. ಇದರಿಂದ ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ - ಎಂದು ನನ್ನ ವಾದ.

ಈಗ ದೊಡ್ಡ ಪ್ರಶ್ನೆ, ಇಂಟರ್ನೆಟ್ ಆಧಾರಿತ ಮತದಾನ ಮಾಡುವುದು ಹೇಗೆ? ಇಂಟರ್ನೆಟ್ ಮೂಲಕ ಬೋಗಸ್ ವೋಟಿಂಗ್, ಮಾಸ್ ವೋಟಿಂಗ್ ಹಾಗೂ ಸೈಬರ್ ಫ್ರಾಡ್ ಸಮಸ್ಯೆಯಿದೆಯಲ್ಲ! ಅದನ್ನು ಬಗೆಹರಿಸುವುದು ಹೇಗೆ? ಇದಕ್ಕೆ ತಕ್ಷಣ ಸಿದ್ಧ ಉತ್ತರ ಇಲ್ಲ. ಆದರೆ, ಈ ಕುರಿತು ಅಧ್ಯಯನ ಹಾಗೂ ಸಂಶೋಧನೆಗಳು ನಡೆಯುತ್ತಿರುವುದು ನಿಜ.

ಅಮೆರಿಕದ ಕೆಲವು ರಾಜ್ಯಗಳಲ್ಲಿ ರೆಫರೆಂಡಮ್ಮಿಗೆ, ಕೆನಡಾದ ಕೆಲವು ಮುನಸಿಪಾಲಿಟಿಗೆ ಹಾಗೂ ಇನ್ನೂ ಕೆಲವು ಯೂರೋಪ್ ದೇಶಗಳಲ್ಲಿ ಇಂಟರ್ನೆಟ್ ಆಧಾರಿತ ವೋಟಿಂಗ್ ವ್ಯವಸ್ಥೆಯನ್ನು ಈಗಾಗಲೇ ಪ್ರಯೋಗಿಕವಾಗಿ ಬಳಸಲಾಗುತ್ತಿದೆ. ಅದಕ್ಕೆ ಸೈಬರ್ ವೋಟಿಂಗ್ ಅಂತಲೂ ಹೆಸರಿದೆ. VOI - Voting Over Internet ಅಂತಲೂ ಹೇಳುತ್ತಾರೆ. ಇಷ್ಟೇ ಅಲ್ಲದೇ, ಇನ್ನೂ ಹಲವಾರು ರೀತಿಯ ಪ್ರಯೋಗಗಳು ನಡೆಯುತ್ತಿವೆ. HTML, XML, ಥರ EML - Election Markup Language ಅನ್ನೋ ತಾಂತ್ರಿಕ ಪ್ರೋಟೋಕಾಲನ್ನೇ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಯಾವ ಪಕ್ಕಾ ವ್ಯವಸ್ಥೆಯೂ ಇನ್ನೂ ಸಿದ್ಧವಾಗಿಲ್ಲ.

ಕಾಗದದ ವೋಟಿನಂತೆ, ಡಿಜಿಟಲ್ ವೋಟಿಗೂ ಕಾನೂನಿನ ಸಮ್ಮತಿ ಇರಬೇಕಾಗುತ್ತದೆ. ಭಾರತದಲ್ಲಿ, EVMನಲ್ಲಿ ವೋಟ್ ಹಾಕಿದರೂ, ಮತದಾರ ಖುದ್ದಾಗಿ ತಾನು ವೋಟು ಚಲಾಯಿಸಿದ್ದಕ್ಕಾಗಿ ಸಹಿ ಅಥವಾ ಹೆಬ್ಬೆಟ್ಟು ಗುರುತು ಹಾಕಿರುತ್ತಾನೆ. ಸೈಬರ್ ವೋಟಿನಲ್ಲಿ ಈ ವೆರಿಫಿಕೇಶನ್ ಮಾಡುವುದು ಹಾಗೂ ಸಾಂವಿಧಾನಿಕ ಸಾಕ್ಷಿಪತ್ರ ಪಡೆಯುವುದು ಹೇಗೆ ಎಂಬ ಪ್ರಶ್ನೆ ಇನ್ನೂ ಬಗೆಹರಿದಿಲ್ಲ. ಅದಕ್ಕೆ, ಬಯೋಮೆಟ್ರಿಕ್ ವೆರಿಫಿಕೇಶನ್, ರಜಿಸ್ಟರ್ಡ್ ಡಿಜಿಟಲ್ ಸಿಗ್ನೇಚರ್ ಅಥವಾ PKI - Public Key Infrastructure ತಂತ್ರಜ್ಞಾನ ಪರಿಹಾರ ಎಂದುಕೊಳ್ಳಲಾಗುತ್ತಿದೆ. ನನಗೆ ಈ ವಿಷಯ ತಿಳಿಸಿದ್ದು ಅಮೆರಿಕ ಸಂವಿಧಾನದ ಪರಿಣತ ಅಕ್ರಂ ಎಲಿಯಾಸ್.


ಎನಿವೇ, ಈ ನಡುವೆ ಲೈಟಾಗಿ ನನ್ನದೆರಡು ಫಂಡಾ :-)

ಫಂಡಾ 1.

ಇಂಟರ್ನೆಟ್ ವೋಟಿಂಗ್ ವ್ಯವಸ್ಥೆ ಇರಬೇಕು ಅಂತ ನನ್ನ ಒತ್ತಾಯ. ಆದರೆ, ಸುರಕ್ಷತಾ ಕಾರಣಕ್ಕಾಗಿ ಈ ಸೌಕರ್ಯ ಎಲ್ಲರಿಗೂ ಸಿಗಬಾರದು. ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆದಿರುವ ಹಾಗೂ ಕನಿಷ್ಠ 10 ಸಾವಿರ ರುಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇರುವ ನೌಕರರಿಗೆ ಅಥವಾ ಕನಿಷ್ಠ 3 ವರ್ಷ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿರುವ ವೃತ್ತಿಪರರಿಗೆ/ಬಿಸಿನೆಸ್ ವ್ಯಕ್ತಿಗಳಿಗೆ ಮಾತ್ರ ಅಂತರ್ಜಾಲದ ಮೂಲಕ ವೋಟ್ ಹಾಕಲು ಅನುವು ಮಾಡಿಕೊಡಬೇಕು. (ಇವೆರಡೂ ಇಲ್ಲದವರಿಗೆ ಮಾಮೂಲಿ ಮಾದರಿ ಹಾಗೂ 2ನೇ ಅಂತರ್ಜಾಲ ಮಾದರಿಯಿದೆ.)

ಇಂಥ ಅರ್ಹ ಮತದಾರರು, ತಮ್ಮ ಬ್ಯಾಂಕ್ ಖಾತೆಗೆ ಲಾಗಿನ್ ಆಗಿ, ಅಲ್ಲಿ, ತಮ್ಮ ವೋಟರ್ ಐಡಿ ನಂಬರ್ ತುಂಬಿ ಮತ ಚಲಾಯಿಸಬೇಕು. ಹೀಗೆ ಮತ ಚಲಾಯಿಸುವಾಗ ಮತದಾರನ ಬ್ಯಾಂಕ್ ಖಾತೆಯಿಂದ 1 ರುಪಾಯಿ ಡಿಡಕ್ಟ್ ಆಗಬೇಕು. ಅಂದರೆ, ಮತದಾರ ಮತ ಚಲಾಯಿಸಲು ತನ್ನ ಇಂಟರ್ನೆಟ್ ಬ್ಯಾಂಕಿಂಗಿನ ಟ್ರಾನ್ಸಾಕ್ಷನ್ ಪಾಸವರ್ಡನ್ನೇ ಬಳಸಬೇಕು.

ಇದರಿಂದ - ಲಾಭವೇನು?


  • ಈ ಪದ್ಧತಿಯಲ್ಲಿ ಮತದಾರನ ವೆರಿಫಿಕೇಶನ್ ಪಕ್ಕಾ ಆಗುತ್ತದೆ. ಬೋಗಸ್ ವ್ಯಕ್ತಿಗಳು ಮತಹಾಕಲು ಆಗುವುದಿಲ್ಲ. ಏಕೆಂದರೆ, ತಲೆ ಇರುವ ಯಾವುದೇ ವ್ಯಕ್ತಿ ತನ್ನ ಬ್ಯಾಂಕಿಂಗ್ ಟ್ರಾನ್ಸಾಕ್ಷನ್ ಪಾಸವರ್ಡನ್ನು ಬೇರೆಯವರಿಗೆ ಹೇಳಲಾರ. ಅಥವಾ 500 ರುಪಾಯಿಗೆ ಮಾರಿಕೊಳ್ಳಲಾರ.

  • ಈಗಿನಂತೆ, ಬೋಗಸ್ ಮತದಾರರನ್ನು ಸೃಷ್ಟಿಸಲು ಸಾಧ್ಯವಿಲ್ಲ ಏಕೆಂದರೆ, ಪ್ರತಿ ಬ್ಯಾಂಕ್ ಅಕೌಂಟ್ ತೆರೆಯಲು ಆರ್.ಬಿ.ಐ ಮಾರ್ಗದರ್ಶಿ ಸೂತ್ರಗಳು ತುಂಬಾ ಕಟ್ಟುನಿಟ್ಟಾಗಿವೆ. ವೋಟರ್ಸ ಐಡಿಗಿಂತ ಬ್ಯಾಂಕ್ ಐಡಿ ಉತ್ತಮ.

  • ಆದರೂ, ಗಣಿಧಣಿಗಳಂಥ ಶ್ರೀಮಂತ ಅಭ್ಯರ್ಥಿಗಳು ತಮ್ಮ ಪರಿಚಯದ ಬ್ಯಾಂಕಲ್ಲೆಲ್ಲ 'ಅಕ್ಷರಶಃ ಮತ ಬ್ಯಾಂಕ್' ಸ್ಥಾಪಿಸಿಕೊಳ್ಳುವ ಸಲುವಾಗಿ, ಕೊಳಚೆ ಪ್ರದೇಶಗಳ ಮತದಾರರ ಹೆಸರಿನಲ್ಲೂ ಬ್ಯಾಂಕ್ ಅಕೌಂಟ್ ತೆರೆದು ಅದರ ಇಂಟರ್ನೆಟ್ ಕಂಟ್ರೋಲನ್ನು ತಾವು ಇಟ್ಟುಕೊಳ್ಳುವ ಸಾದ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ, "ಪ್ರತಿ ಅಕೌಂಟಿನಲ್ಲಿ 10000 ರುಪಾಯಿ ಕನಿಷ್ಠ ಇರಬೇಕು ಹಾಗೂ ಇಂಟರ್ನೆಟ್ ಮತ ಹಾಕುವವರು ಯಾವುದಾದರೂ ಪ್ರತಿಷ್ಠಿತ ಕಂಪನಿ ಅಥವಾ ಸರ್ಕಾರಿ ನೌಕರರಾಗಿರಬೇಕು. ಇಲ್ಲವೇ, ಕನಿಷ್ಠ 3 ವರ್ಷ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿರಬೇಕು" ಎಂಬ ಅಂಶವನ್ನು ಗಮನಿಸಿ. ಈ ಷರತ್ತಿನಿಂದಾಗಿ, ಬೋಗಸ್ ಮತದಾರರನ್ನು ಸೃಷ್ಟಿಸುವುದು ಎಂಥ ಶ್ರೀಮಂತರಿಗೂ ಕಷ್ಟ ಹಾಗೂ ಬಲು ದುಬಾರಿ.

ಆದರೆ, ನನ್ನ-ನಿಮ್ಮಂಥ ಸಾಚಾ ಮತದಾರರಿಗೆ ಈ ಪದ್ಧತಿ ಬಹಳ ಅನುಕೂಲ ತಾನೇ?

ಫಂಡಾ 2

ಇದು ಈಗಿನ ಕೋರ್ ಬ್ಯಾಂಕಿಂಗ್ ಮಾದರಿಯ, ಕೋರ್ ವೋಟಿಂಗ್ ವ್ಯವಸ್ಥೆ. ಅಂದರೆ, ನೋಂದಾಯಿತ ಮತದಾರ ದೇಶದ ಯಾವುದೇ ಮತಗಟ್ಟೆ ಅಥವಾ ಬ್ಯಾಂಕಿಗೆ ಹೋಗಿ ಮತ ಚಲಾಯಿಸಲು ಅವಕಾಶವಿರಬೇಕು. ಉತ್ತರ ಪ್ರದೇಶದ ಮತದಾರ ಬೆಂಗಳೂರಿನ ಶಿವಾಜಿನಗರದ ಮತಗಟ್ಟೆಗೆ ಹೋಗಿ ಉತ್ತರ ಪ್ರದೇಶದ ತನ್ನ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸುವಂತಿರಬೇಕು. ಅಥವಾ ಬೆಂಗಳೂರಿನ ಮತದಾರ ಹೈದರಾಬಾದಿನ ಬ್ಯಾಂಕ್ ಶಾಖೆಯೊಂದರಲ್ಲಿ ತನ್ನೂರಿನ ಅಭ್ಯರ್ಥಿಗೆ ಮತದಾನ ಮಾಡುವಂತಿರಬೇಕು. ಮತದಾರರ ಗುರುತಿನ ಚೀಟಿ, ಸಹಿ ಅಥವಾ ಹೆಬ್ಬೆಟ್ಟು ಗುರುತುಗಳನ್ನು ಮತಗಟ್ಟೆ ಅಥವಾ ಬ್ಯಾಂಕ್ ಅಧಿಕಾರಿ, ಆನ್ ಲೈನಲ್ಲಿ ಪರಿಶೀಲಿಸಿ ಆ ಮತದಾರನಿಗೆ ಆನ್ ಲೈನಲ್ಲೇ ಮತಹಾಕಲು ಅವಕಾಶ ನೀಡಬೇಕು. ಈ ಮತ ಉದ್ದೇಶಿತ ಕ್ಷೇತ್ರದ ಅಭ್ಯರ್ಥಿಯ ಲೆಕ್ಕಕ್ಕೆ ಜಮಾ ಆಗಬೇಕು

ಲಕ್ಷಾಂತರ ರುಪಾಯಿಯನ್ನೇ ಹೀಗೆ ದೇಶದ ಎಲ್ಲೆಂದರಲ್ಲಿ ಜಮಾ ಮಾಡಲು ಅವಕಾಶವಿರುವಾಗ ಒಂದು 'ಜುಜುಬಿ' ವೋಟನ್ನು 'ಕೋರ್ ವೋಟಿಂಗ್' ಪದ್ಧತಿಯಲ್ಲಿ ಜಮಾ ಮಾಡಲು ಸಾಧ್ಯವಿಲ್ಲವೇ?

ಇದರಿಂದ ಆಗುವ ಲಾಭಗಳು:


  • ನಾವು ಭಾರತದಲ್ಲಿ ಯಾವುದೇ ಊರಿಗೆ ಹೋದರೂ, ಮತದಾನದಿಂದ ವಂಚಿತರಾಗಬೇಕಿಲ್ಲ.
  • ಮತದಾರರ ವೆರಿಫಿಕೇಶನ್ ಪಕ್ಕಾ. ಏಕೆಂದರೆ, ಈಗಿನ ಮತದಾನ ಪದ್ಧತಿಯೇ ಇಲ್ಲೂ ಅನ್ವಯವಾಗುತ್ತದೆ.
  • ತಾಂತ್ರಿಕವಾಗಿ ಜಾರಿಗೊಳಿಸುವುದು ಸುಲಭ.

ಚುನಾವಣಾ ಆಯೋಗ ಈ ಬ್ಲಾಗ್ ಓದುವುದಿಲ್ಲ ಅಂತ ನನಗೆ ಗೊತ್ತು. ಆದರೆ, ಈ 2 ಫಂಡಾಗೆ ನೀವೇನಂತೀರಿ?

Wednesday, April 15, 2009

ಚುನಾವಣಾ ಸಮೀಕ್ಷೆ ಎಷ್ಟು ಸತ್ಯ? - ಒಂದು ಖಾಸ್ ಬಾತ್

ದೀಗ ಚುನಾವಣಾ ಸಮಯ ಎನ್ನುವುದಕ್ಕಿಂತಲೂ ಚುನಾವಣಾ ಸಮೀಕ್ಷೆಗಳ ಸಮಯ ಎಂದರೇ ಹೆಚ್ಚು ಸರಿ. ಎಲ್ಲಾ ಟೀವಿ ಚಾನಲ್ಲುಗಳೂ ಚುನಾವಣಾ ಸಮೀಕ್ಷೆ ನಡೆಸುತ್ತಿವೆ. ತೆರೆಯ ಮೇಲೆ ಗ್ರಾಫ್ ತೋರಿಸುವುದೂ, ಮೂರು ನಾಲ್ಕು ರಾಜಕಾರಣಿಗಳ ಜೊತೆ ಚರ್ಚೆ ನಡೆಸುವುದೂ ಮಾಮೂಲಿಯಾಗಿದೆ. ಆದರೆ, ದೊಡ್ಡ ವಿವಾದ ಮಾತ್ರ ಹಾಗೇ ಇದೆ. ಚುನಾವಣಾ ಸಮೀಕ್ಷೆಗಳು ಎಷ್ಟು ವಿಶ್ವಾಸಾರ್ಹ? ಹಿಂದಿನ ಚುನಾವಣಾ ಸಮೀಕ್ಷೆಗಳು ಹೇಳಿದ ಸೀಟುಗಳ ಸಂಖ್ಯೆಗಳೆಲ್ಲಾ ಸರಿಹೋಗಿಲ್ಲವಲ್ಲ? ಮಾಧ್ಯಮಗಳು ಇಂಥ ಬೋಗಸ್ ಪದ್ಧತಿಯನ್ನು ಬಳಸಿಕೊಳ್ಳಬೇಕೇ? ಮೂರು-ನಾಲ್ಕು ಚುನಾವಣಾ ಸಮೀಕ್ಷೆಯಲ್ಲಿ ಪಾಲ್ಗೊಂಡ ಅನುಭವದಲ್ಲಿ ನನ್ನ ಅಭಿಪ್ರಾಯವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

1. ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಬೇಕೇ ಬೇಕು. (ಆದರೆ, Exit Poll - ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶವನ್ನು ಮಾತ್ರ ಎಲ್ಲ ಹಂತದ ಮತದಾನ ಮುಗಿದ ನಂತರವೇ ಪ್ರಕಟಿಸಬೇಕು. ಅಭಿವೃದ್ಧಿಹೊಂದಿದ ದೇಶದಲ್ಲೂ ಇದೇ ವ್ಯವಸ್ಥೆಯಿದೆ. ಈ ವರ್ಷದಿಂದ ಭಾರತದಲ್ಲೂ ಈ ಷರತ್ತನ್ನು ಚುನಾವಣಾ ಆಯೋಗ ಜಾರಿಗೊಳಿಸಿದೆ.)

2. ಈ ಸಮೀಕ್ಷೆಗಳನ್ನು ರಾಜಕೀಯ ಪಕ್ಷಗಳು ಟೀಕಿಸುವುದು ಅಥವಾ ವಿರೋಧಿಸುವುದು ಸಹಜ. ಆದರೆ, ವಾಸ್ತವ ಏನೂ ಅಂದರೆ, ಚುನಾವಣೆಗೆ ಮೊದಲು ಬಹುತೇಕ ರಾಜಕೀಯ ಪಕ್ಷಗಳು ರಹಸ್ಯವಾಗಿ ತಮ್ಮದೇ ಸಮೀಕ್ಷೆ ನಡೆಸುತ್ತವೆ. ಆ ಸಮೀಕ್ಷೆಗಳಿಗೆ ಅನುಗುಣವಾಗಿ ತಮ್ಮ ಚುನಾವಣಾ ಯೋಜನೆಯನ್ನು ರೂಪಿಸುತ್ತವೆ. ಕಳೆದ ವರ್ಷದಂತೆ ಈ ವರ್ಷವೂ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮದೇ ಸಮೀಕ್ಷೆ ನಡೆಸಿವೆ. ಬಹಿರಂಗವಾಗಿ ಏನೇ ಹೇಳಲಿ,ಅಂತರಂಗದಲ್ಲಿ ತಮ್ಮ ಸಮೀಕ್ಷೆಗಳ ಫಲಿತಾಂಶದ ಸತ್ಯ ಏನು ಎಂದು ಎರಡೂ ಪಕ್ಷದ ವರಿಷ್ಠರಿಗೆ ಗೊತ್ತು!

3. ಈಗ ಪತ್ರಿಕೋದ್ಯಮವನ್ನೇ ತೆಗೆದುಕೊಂಡರೆ, ನಮ್ಮ ವರದಿಗಾರರು ತಮ್ಮ ಕ್ಷೇತ್ರದಲ್ಲಿ ಸಂಚರಿಸಿ 25-30 ಜನರನ್ನು ಮಾತನಾಡಿಸಿ ಬರೆಯುವ ಕ್ಷೇತ್ರ ಸಮೀಕ್ಷೆಗಳಿಗಿಂತ Large Samples ಇರುವ ಸಮೀಕ್ಷೆಗಳೇ ಹೆಚ್ಚು ನಿಖರ ಹಾಗೂ ವಿಶ್ವಾಸಾರ್ಹ. ಆ ದೃಷ್ಟಿಯಲ್ಲಿ ಈ ಸಮೀಕ್ಷೆಗಳು ಆಧುನಿಕ ಪತ್ರಿಕೋದ್ಯಮಕ್ಕೆ ಒಂದು ವರ ಎಂದು ನನ್ನ ಅಭಿಪ್ರಾಯ.

4. ಈ ಸಮೀಕ್ಷೆಗಳು ಹಲವು ಬಾರಿ ವಿಫಲವಾಗುತ್ತವೆ. ಕೆಲವು ಬಾರಿ ಸಂಪೂರ್ಣ ಉಲ್ಟಾ ಆಗುತ್ತವೆ (ಕಳೆದ ವರ್ಷದ CNN-IBN ಸಮೀಕ್ಷೆ ಥರ). ಈ ಸಮೀಕ್ಷೆಗಳು ಯಶಸ್ವಿಯಾಗುವುದು ಬಿಡುವುದು ಆರು ಅಂಶಗಳನ್ನು ಅವಲಂಬಿಸಿವೆ:

a) ಉತ್ತಮ ಸಮೀಕ್ಷಾ ಗಣದ ಆಯ್ಕೆ
b) ಉತ್ತಮ ಸಮೀಕ್ಷಾ ಗಣದ ಗಾತ್ರ
c) ಸೂಕ್ತ ಪ್ರಶ್ನಾವಳಿ
d) ಸಮೀಕ್ಷೆ ನಡೆಸುವ ಸಮಯ
e) ಉತ್ತಮ ಹಾಗೂ ಪ್ರಾಮಾಣಿಕ ಕ್ಷೇತ್ರ ಕಾರ್ಯ ಹಾಗೂ
f) ಮಾಹಿತಿಯ ಉತ್ತಮ ಸಂಸ್ಕರಣೆ ಮತ್ತು ವಿಶ್ಲೇಷಣೆ

ಈ ಆರು ಹಂತಗಳಲ್ಲಿ ಒಂದರಲ್ಲಿ ಎಡವಿದರೂ ಸಮೀಕ್ಷೆ ದಾರಿ ತಪ್ಪುತ್ತದೆ.

5. ಇನ್ನೊಂದು ಪ್ರಮುಖ ಅಂಶವನ್ನು ಎಲ್ಲರೂ ಗಮನಿಸಲೇ ಬೇಕು. ಸಮೀಕ್ಷೆ ಅಂದರೆ, ಪ್ರತಿ ಪಕ್ಷ ಗೆಲ್ಲಬಹುದಾದ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಎಂಬ ಅಭಿಪ್ರಾಯವಿದೆ. ಇದು ತಪ್ಪು. ಸಮೀಕ್ಷೆಗಳು ಎಂದರೆ ಒಟ್ಟಾರೆ ಟ್ರೆಂಡ್ ಸೂಚಿಸುವ ದಿಗ್ದರ್ಶಕಗಳು ಮಾತ್ರ. Numbersಗಿಂತ Inference ಮುಖ್ಯ.

ಉದಾಹರಣೆಗೆ ಕಳೆದ ಲೋಕಸಭಾ ಚುನಾವಣೆಯ ಸಮೀಕ್ಷೆಗಳನ್ನು ನೋಡಿ. ಕಳೆದ 4-5 ವರ್ಷಗಳವರೆಗೂ ಕನ್ನಡ ಪತ್ರಿಕೋದ್ಯಮದಲ್ಲಿ ಈ ಸಮೀಕ್ಷೆಗಳ ಭರಾಟೆ ಅಷ್ಟಾಗಿ ಇರಲಿಲ್ಲ. ಪ್ರಕಟಿಸಿದರೂ ಈ ಸಮೀಕ್ಷೆಗಳನ್ನು 2-3-4 ಕಾಲಮ್ಮಿನ ಒಂದು ಸುದ್ದಿಯಾಗಿ ಪ್ರಕಟಿಸುವ ವಾಡಿಕೆಯಿತ್ತು. ಈ ಹಂತದಲ್ಲಿ ಕನ್ನಡಪ್ರಭದಲ್ಲಿ NDTV Indian Express - AC Nielsen ಸಮೀಕ್ಷೆಯನ್ನು ವಿವರವಾಗಿ ಪ್ರಕಟಿಸುವ ಹಾಗೂ Over Play ಮಾಡುವ ನಿರ್ಧಾರ ಕೈಗೊಂಡಾಗ ನನಗೂ ಈ ಸಮೀಕ್ಷೆಗಳ ಕುರಿತು ಅಳುಕಿತ್ತು. ಆದರೆ, ಈ ಕಾರ್ಯದಲ್ಲಿ ನಾನು ನಿಕಟವಾಗಿ ತೊಡಗಿಸಿಕೊಂಡ ನಂತರ ನನಗೆ ಈ ಸಮೀಕ್ಷೆಗಳ ಕುರಿತು ಧೈರ್ಯ ಹಾಗೂ ನಂಬಿಕೆ ಬಂತು.

ನಮ್ಮ ಆರಂಭದ ಸುತ್ತಿನ ಸಮೀಕ್ಷೆಯಲ್ಲಿ "ಎನ್.ಡಿ.ಎ ಪ್ರಕಾಶಿಸುತ್ತಿದೆ - ಬಿಜೆಪಿ ಮೈತ್ರಿ ಕೂಟಕ್ಕೇ ಮತ್ತೆ ಅಧಿಕಾರ ಸಂಭವ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅದನ್ನೇ ಕನ್ನಡಪ್ರಭದಲ್ಲಿ ಬ್ಯಾನರ್ ಶೀರ್ಷೀಕೆಯಾಗಿ ಪ್ರಕಟಿಸಿದೆವು. ಆದರೆ, ಎರಡು ಮತ್ತು ಮೂರನೇ ಸುತ್ತಿನ ಚುನಾವಣಾ ಪೂರ್ವ ಸಮೀಕ್ಷೆಗಳು ಮುಗಿಯುವ ಹೊತ್ತಿಗೆ ಕಾಂಗ್ರೆಸ್ ಮೈತ್ರಿ ಕೂಟದ ಅಲೆ ಹೆಚ್ಚು ಕಂಡುಬಂತು. ಬಿಜೆಪಿ ಮೈತ್ರಿಕೂಟಕ್ಕೆ ಅಧಿಕಾರ ಸಿಗುವುದು ಕಷ್ಟ ಎಂದು ಸಮೀಕ್ಷೆಗಳು ತಿಳಿಸಿದವು. ಆಗ ನಾವು "ಎನ್.ಡಿ.ಎ ಮಂಕಾಗುತ್ತಿದೆ" ಎಂದು ಬ್ಯಾನರ್ ಶೀರ್ಷಿಕೆಯಲ್ಲಿ ಸಮೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದೂ ಅಷ್ಟೇ ನಿಜ. Exit Poll ಸಮೀಕ್ಷೆಯ ನಂತರವಂತೂ ಬಿಜೆಪಿಗೆ ಅಧಿಕಾರ ದೂರದ ಮಾತು ಎಂಬ ಅಂಶ ಗೊತ್ತಾಯಿತು. ಸಮೀಕ್ಷೆಗಳು ಅಂದಾಜು ಮಾಡಿದ್ದ ಸಂಖ್ಯೆ ಸರಿ ಇಲ್ಲದಿದ್ದರೂ ಸಮೀಕ್ಷೆ ತೋರಿಸಿದ ಒಟ್ಟಾರೆ ದಿಕ್ಕು ಸರಿಯಾಗೇ ಇತ್ತು. ಎನ್.ಡಿ.ಎ. ಶೈನ್ ಆಗಲಿಲ್ಲ.

ಕರ್ನಾಟಕದಲ್ಲೂ ಅಷ್ಟೇ ಬಿಜೆಪಿಗೆ 15-19 ಸೀಟು ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದರೆ ಯಾರೂ ನಂಬಲಿಲ್ಲ. ಆಗ ಕನ್ನಡಪ್ರಭವನ್ನು ಟೀಕಿಸಿದವರು ಹಲವರು. ಈ ಟೀಕೆಗಳಿಂದ ನಾನು ತುಸು ಡಿಪ್ರೆಸ್ ಆದದ್ದು ನಿಜ. ಆದರೆ, ಫಲಿತಾಂಶ ಬಂದಾಗ ಬಿಜೆಪಿಗೆ 18 ಸೀಟು ಸಿಕ್ಕಿತ್ತು. ಅಂದರೆ, ಕರ್ನಾಟಕದಲ್ಲಿ ಬಿಜೆಪಿ ಬಲಗೊಂಡಿದ್ದನ್ನು ಸಮೀಕ್ಷೆ ಸರಿಯಾಗೇ ಪತ್ತೆ ಹಚ್ಚಿತ್ತು.

ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತೂ ಸಮೀಕ್ಷೆ ನಡೆಸಿದ್ದೆವು. ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ಸಿಗೆ ಮತ್ತೆ ಅಧಿಕಾರ ಕಷ್ಟ. ಬಿಜೆಪಿ ಹಾಗೂ ಜೆಡಿಎಸ್ ಬಲಗೊಂಡಿವೆ. ಆದರೆ, ಯಾವ ಪಕ್ಷಕ್ಕೆ ಅಧಿಕಾರ ಎಂದು ಹೇಳಲು ಆಗುತ್ತಿಲ್ಲ. Too Close to Call - ಎಂದು ಸಮೀಕ್ಷೆ ತಿಳಿಸಿತ್ತು. (That's the exact four-words the survey said.) ಕೊನೆಗೆ ಬಂದ ಫಲಿತಾಂಶ ಎಷ್ಟು Close ಆಗಿತ್ತು ಅಂದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಅದಿಕಾರಕ್ಕೆ ಕೂದಲೆಳೆ ಅಂತರದಲ್ಲಿ ಇದ್ದವು. ಜೆಡಿಎಸ್ ಅತ್ತ ಬಲ ಕೊಟ್ಟರೆ ಆ ಸರ್ಕಾರ ಇತ್ತ ಬಲ ಕೊಟ್ಟರೆ ಈ ಸರ್ಕಾರ ಎಂಬ ಪರಿಸ್ಥಿತಿ ನಿರ್ಮಾಣವಾಗಲಿಲ್ಲವೇ? ಅಷ್ಟೇ ಅಲ್ಲ, ಚಂದ್ರಬಾಬು ನಾಯ್ಡುಗೆ ಅಧಿಕಾರ ಗಗನಕುಸುಮ ಎಂದೂ ಸಮೀಕ್ಷೆ ತಿಳಿಸಿತ್ತು. ಸಂಖ್ಯೆ ಸರಿ ಇಲ್ಲದಿದ್ದರೂ ಸಮೀಕ್ಷೆ ತೋರಿಸಿದ್ದ ದಿಕ್ಕು ಸುಳ್ಳಾಗಲಿಲ್ಲವಲ್ಲ!

ಬಹಿರಂಗವಾಗಿ, ರಾಜಕೀಯ ಪಕ್ಷಗಳು ಈ ಸಮೀಕ್ಷೆಯೆಲ್ಲ ಬೋಗಸ್ ಎಂದೇ ಹೇಳಿದವು. ಆದರೆ, ಕಾಂಗ್ರೆಸ್ ಗಾಳಿ ಬಲವಾಗುತ್ತಿದೆ ಎಂದು ನಮ್ಮ ಸಮೀಕ್ಷೆ ಪ್ರಕಟವಾದಾಗ ಕಾಂಗ್ರೆಸ್ 1.5 ಲಕ್ಷ ಪ್ರತಿಗಳನ್ನು ಪ್ರೀಮಿಯಂ ಬೆಲೆಗೆ ಕೊಂಡುಕೊಂಡು ಮತಕ್ಷೇತ್ರಗಳಲ್ಲಿ ಹಂಚಿದರೆ, ಜೆಡಿಎಸ್ 2.5 ಲಕ್ಷ ಪ್ರತಿಗಳನ್ನು ಕೊಂಡುಕೊಂಡಿತು. ಜೆಡಿಎಸ್ ಸಂತೋಷಕ್ಕೆ ಕಾರಣವೆಂದರೆ, - ಆಗಿನ ಪರಿಸ್ಥಿತಿಯಲ್ಲಿ ಜನತಾದಳ ಸಂಪೂರ್ಣ ಅವಶೇಷವಾಗಿತ್ತು. ದೇವೇಗೌಡರು ಹೊಸತಾಗಿ ಜೆಡಿಎಸ್ ಪಕ್ಷ ಪಟ್ಟಿದ್ದರು. ಆದರೆ, ಯಾವ ಸಮೀಕ್ಷೆಯೂ ಜೆಡಿಎಸ್ ಇರುವನ್ನು ಗುರುತಿಸಿರಲಿಲ್ಲ. ಇತರೆ ಎಂಬ ಕಾಲಂ ಅಡಿ ಜೆಡಿಎಸ್ ಸ್ಥಾನಗಳನ್ನು ತೋರಿಸಲಾಗುತ್ತಿತ್ತು. ಆದರೆ, ನಮ್ಮ ಸಮೀಕ್ಷೆಯಲ್ಲಿ ಜೆಡಿಎಸ್ ಎಂದು ಪ್ರತ್ಯೇಕವಾಗಿ ಗುರುತಿಸಿ ಅದು ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಹೇಳಿದ್ದೆವು.

ಇದನ್ನೆಲ್ಲ ಸಮೀಕ್ಷೆ ಸ್ಪಷ್ಟವಾಗಿ ಕಂಡುಕೊಂಡಿತ್ತು. ಇದನ್ನು ಬಿಟ್ಟು ಕೆಲವರು, ಕೇವಲ ಸಮೀಕ್ಷೆಯ ಸಂಖ್ಯೆಗೆ ಮಹತ್ವ ಕೊಟ್ಟು, ಸಮೀಕ್ಷೆಗಳೆಲ್ಲಾ ಬೋಗಸ್ ಎಂದು ಅಪಪ್ರಚಾರ ಮಾಡಿದರು.

2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಅಷ್ಟೇ. ಸುವರ್ಣ ನ್ಯೂಸ್ - ಕನ್ನಡಪ್ರಭ - ಸಿಫೋರ್ ಸಮೀಕ್ಷೆ ಅದ್ಭುತ ಯಶಸ್ಸು ಕಂಡಿತು. ಕೇವಲ ಟ್ರೆಂಡ್ ಅಷ್ಟೇ ಅಲ್ಲ, ಸಂಖ್ಯೆ ಸಹ ಶೇ.98ರಷ್ಟು ನಿಖರವಾಗಿತ್ತು. This is the only survey that has hit the bulls-eye ಎಂದು Times of India ಮುಖಪುಟದಲ್ಲಿ ಬರೆದಿತ್ತು.

ಹಾಗಂತ ಎಲ್ಲ ಬಾರಿಯೂ ಸಮೀಕ್ಷೆಯ ಸಂಖ್ಯೆ ಇಷ್ಟೊಂದು ನಿಖರವಾಗಿರುತ್ತದೆ ಎಂದು ನಾನೇನೂ ಹೇಳುವುದಿಲ್ಲ. ಆದರೆ, ಸಮೀಕ್ಷೆಗಳಿಂದ ಮತದಾರರ ನಿಖರ ನಾಡಿ ಮಿಡಿತವಂತೂ ಖಂಡಿತವಾಗಿ ತಿಳಿಯುತ್ತದೆ.

In last October, I had a rare chance of being at the thick of the American Elections. ಇದು ನನ್ನ ಪತ್ರಿಕೋದ್ಯಮ ಜೀವನದ ಅತ್ಯದ್ಭುತ ಅನುಭವವೂ ಹೌದು. ಆಗ ಅಲ್ಲಿನ ಅನೇಕ ಪತ್ರಕರ್ತರ ಜೊತೆ ನಿಕಟವಾಗಿ ಒಡನಾಡುವ ಅವಕಾಶ ನನ್ನದಾಯಿತು. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ 'ಡೈರೆಕ್ಟರ್ ಆಫ್ ಪೋಲಿಂಗ್ ' ಜಾನ್ ಕೊಹೆನ್ ಅವರ ಜೊತೆ ನಾನು ಈ ಚುನಾವಣಾ ಪೂರ್ವ ಸಮೀಕ್ಷೆ ಹಾಗೂ ಚುನಾವಣೋತ್ತರ ಸಮೀಕ್ಷೆಯ ಕುರಿತು ಒಂದರ್ಧ ಗಂಟೆ ಮಾತನಾಡಿದ್ದೆ. ಅವರ ಅನುಭವದಲ್ಲಿ, ಸಮೀಕ್ಷೆಗಳು ಎಡವಿದರೆ ಅದಕ್ಕೆ ಆ ಸಮೀಕ್ಷೆ ನಡೆಸುವ ಸಂಸ್ಥೆ ಕಾರಣ. ಸಮೀಕ್ಷೆ ತಪ್ಪಾಯಿತು ಎಂಬ ಕಾರಣಕ್ಕೆ Psephology - ಸಮೀಕ್ಷಾ ವಿಜ್ಞಾನವೇ ಸುಳ್ಳು ಎನ್ನುವಂತಿಲ್ಲ. The methods and executions are very important ಎನ್ನುತ್ತಾರೆ ಅವರು.

ಶಿಕಾಗೋ ಟ್ರಿಬ್ಯೂನ್ನಿನ ಖ್ಯಾತ ರಾಜಕೀಯ ಅಂಕಣಕಾರ ಕ್ಲಾರೆನ್ಸ್ ಪೇಜ್ ಜೊತೆ ಚುನಾವಣಾ ಸಮೀಕ್ಷೆಗಳ ಕುರಿತು ಮಾತನಾಡಿದಾಗ ಅವರು ಹೇಳಿದ್ದೂ ಅದನ್ನೇ. "ಸಮೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ರೂಪಿಸಲಾಗಿದೆ, ಯಾವ ರೀತಿಯ ಸಮೀಕ್ಷಾ ಗಣವನ್ನು ಆಯ್ದುಕೊಳ್ಳಲಾಗಿದೆ ಹಾಗೂ ಯಾವ ಸಂದರ್ಭದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ ಎಂಬುದು ಬಹಳ ಮುಖ್ಯ. ಇದರಲ್ಲಿ ಎಡವಿದರೆ ಸಮೀಕ್ಷೆಯೂ ಎಡವುತ್ತದೆ. ಇಲ್ಲವಾದಲ್ಲಿ, ಸಮೀಕ್ಷೆ ಎಡವಲು ಅವಕಾಶವೇ ಇಲ್ಲ."

ಎಬಿಸಿ ನ್ಯೂಸಿನ ವೈಟ್ ಹೌಸ್ ವರದಿಗಾರ್ತಿ ಆನ್ ಕಾಂಪ್ಟನ್ ಹೇಳಿದ್ದು - "ಈ ಸಮೀಕ್ಷೆಗಳನ್ನು ಕೇವಲ ನಂಬರ್ ಗೇಮ್ ಅಂತ ತಿಳಿಯಬಾರದು. We should use the pre-poll and exit poll statistics to find the reasons for the results."

ಹಾಗಾಗಿ, ಸಮೀಕ್ಷೆಗಳು ಆದುನಿಕ ಪತ್ರಿಕೊದ್ಯಮಕ್ಕೆ ಬೇಕೇ ಬೇಕು. ಆದರೆ, ನಾವು ಸರಿಯಾಗಿ ಸಮೀಕ್ಷೆ ನಡೆಸಬೇಕು ಅಷ್ಟೇ.

Monday, April 06, 2009

ಬ್ರೇಕಿಂಗ್ ನ್ಯೂಸ್: ಭಾರತ ಚುನಾವಣೆ 2009ಗೆ ಗೂಗಲ್ ಸೈಟ್



ಈಗ ನಡೆಯುತ್ತಿರುವ ಭಾರತ ಲೋಕಸಭಾ ಚುನಾವಣೆಗಾಗಿ, ಗೂಗಲ್ ಇಂಡಿಯಾ, ಕೆಲವೇ ಗಂಟೆಗಳ ಹಿಂದೆ, ವಿಶೇಷ ಇಂಟರ್ನೆಟ್ ಸೈಟೊಂದನ್ನು ಆರಂಭಿಸಿದೆ. http://www.google.co.in/loksabha2009

ಇದರಲ್ಲಿ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಮಾಹಿತಿ ಹಾಗೂ 6 ಚುನಾವಣಾ ಟೂಲ್ ಇವೆ.
1. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸುವುದು
2. ಮತಗಟ್ಟೆ ಎಲ್ಲಿದೆ ಎಂದು ತಿಳಿಯುವುದು
3. ಗೂಗಲ್ ನಕಾಶೆಯಲ್ಲಿ ಲೋಕಸಭಾ ಕ್ಷೇತ್ರ ದರ್ಶನ
4. ಈ ಚುನಾವಣೆ ಸಂಬಂಧಿತ ಸುದ್ದಿ, ಬ್ಲಾಗ್, ವಿಡಿಯೋ ಹಾಗೂ ಹೇಳಿಕೆಗಳನ್ನು ಓದಲು, ನೋಡಲು ಅವಕಾಶ
5. ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿತ ವಿವಿಧ ಅಂಕಿ ಅಂಶಗಳನ್ನು ನೋಡುವುದು
6. ಈ ವರ್ಷದ ಅಭ್ಯರ್ಥಿಗಳು ಹಾಗೂ ಹಾಲಿ ಎಂಪಿಗಳ ಕುರಿತು ಮಾಹಿತಿ ಮತ್ತು ಹಿನ್ನೆಲೆ ತಿಳಿಯುವುದು

ಹಿಂದೂಸ್ತಾನ್ ಟೈಮ್ಸ್ ಪತ್ರಿಕಾ ಸಮೂಹ, ಬೆಂಗಳೂರಿನ ಜನಾಗ್ರಹ, ಅಸೋಸಿಯೇಶನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್, ಇಂಡಿಕಸ್ ಎನಾಲಿಟಿಕ್ಸ್, ಲಿಬರ್ಟಿ ಇನ್ಸ್ಟಿಟ್ಯೂಟ್ ಹಾಗೂ ಪಿಆರ್ಎಸ್ ಲೆಜಿಸ್ಲೇಟಿವ್ ಸರ್ವಿಸ್ - ಸಹಯೋಗದಲ್ಲಿ ಗೂಗಲ್ ಈ ಸೈಟನ್ನು ಆರಂಭಿಸಿದೆ.

ನನ್ನ ಮೊದಲ ನೋಟದಲ್ಲಿ ಈ ಸೈಟ್ ಓಕೆ ಅಂತ ಅನ್ನಿಸಿದರೂ ಇದರ ಉಪಯುಕ್ತತೆ ಕುರಿತು ಇನ್ನೂ ಖಚಿತ ಅಭಿಪ್ರಾಯ ಮೂಡಿಲ್ಲ. ಮತದಾರ ಪಟ್ಟಿಯಲ್ಲಿ ನನ್ನ ಹೆಸರು ತೋರಿಸಲು ಈ ಟೂಲ್ ವಿಫಲವಾಯಿತು. ಈ ರಾತ್ರಿ ಈ ಸೈಟಿನಲ್ಲಿ ಹೆಚ್ಚು ಪ್ರಯೋಗ ಮಾಡುವ ಉದ್ದೇಶವಿದೆ.

Tuesday, January 13, 2009

ದಿವಾಳಿ ಜಡ್ಜ್ !


ಭಾಗ - 9

ಅಮೆರಿಕದಲ್ಲಿ ಪೊಲೀಸ್ ಕಮಿಷನರ್ ಅಥವಾ ಕೋರ್ಟುಗಳ ನ್ಯಾಯಾಧೀಶರಾಗಲು ಸಾರ್ವಜನಿಕ ಚುನಾವಣೆಯಲ್ಲಿ ಗೆಲ್ಲಬೇಕು! ಇಂಥ ಪದ್ಧತಿ ಅಮೆರಿಕದಲ್ಲಿ ಮಾತ್ರ ಇದೆ. ಅದಕ್ಕಿಂತ ಅಲ್ಲಿ ‘ದಿವಾಳಿ ಜಡ್ಜ್’ ಇದ್ದಾರೆ. ಗೊತ್ತೇ?


ನ್ನ ಅಜ್ಞಾನವೋ ಅಥವಾ ನಿಮಗೂ ಇದೊಂದು ಹೊಸ ವಿಷಯವೋ ಗೊತ್ತಿಲ್ಲ. ನನಗಂತೂ ಇದು ಸೋಜಿಗವೆನಿಸಿತು.

ಅಮೆರಿಕದ ಜಿಲ್ಲಾ ವರಿಷ್ಠಾಧಿಕಾರಿ ಹುದ್ದೆ ಹಾಗೂ ಕೋರ್ಟುಗಳ ನ್ಯಾಯಾಧೀಶರ ಹುದ್ದೆ ಜಗತ್ತಿನಲ್ಲೇ ವಿಶಿಷ್ಟ. ಏಕೆಂದರೆ, ಈ ಹುದ್ದೆಗಳಿಗೆ ಚುನಾವಣೆ ನಡೆಯುತ್ತದೆ. ನ್ಯಾಯಾಧೀಶರಾಗಲು ಬಯಸುವವರು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಆಗಲು ಇಚ್ಚಿಸುವವರು ರಾಜಕಾರಣಿಗಳ ರೀತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕು. ಸ್ವಲ್ಪ ಹೆಚ್ಚು ಕಡಿಮೆ ರಾಜಕಾರಣಿಗಳ ರೀತಿಯೇ ಪ್ರಚಾರ ಮಾಡಬೇಕು. ಹಲವಾರು ಮಿಲಿಯನ್ ಡಾಲರ್ ಹಣ ಖರ್ಚು ಮಾಡಬೇಕು. ಹಾಗೂ ತಮ್ಮ ಅಧಿಕಾರಾವಧಿ ಮುಗಿದ ತಕ್ಷಣ ಅಧಿಕಾರ ಬಿಟ್ಟಿಳಿಯಬೇಕು. ಒಂದು ವೇಳೆ ಆಯ್ಕೆಯಾದ ಪೊಲೀಸ್ ವರಿಷ್ಠಾಧಿಕಾರಿ ಅಥವಾ ನ್ಯಾಯಾಧೀಶ ಸರಿಯಾಗಿ ಕೆಲಸ ಮಾಡಲಿಲ್ಲ ಎಂದಾದರೆ ಆತನ್ನು ಜನರು ಮತ್ತೆ ‘ಕಾಲ್ ಬ್ಯಾಕ್’ ಮತದಾನ ಮಾಡಿ ಹುದ್ದೆಯಿಂದ ಕೆಳಗಿಳಿಸಬಹುದು. ಇಂಥದೊಂದು ಪದ್ಧತಿ ಅಮೆರಿಕದಲ್ಲಿ ಮಾತ್ರ ಇದೆ.

ಕಳೆದ ನವೆಂಬರ್ ೪ರಂದು ಅಧ್ಯಕ್ಷೀಯ ಚುನಾವಣೆಯ ಮತದಾನದ ಜೊತೆಯಲ್ಲೇ ಅಮೆರಿಕದ ಅನೇಕ ರಾಜ್ಯಗಳಲ್ಲಿ ಪೊಲೀಸ್ ವರಿಷ್ಠ ಹಾಗೂ ನ್ಯಾಯಾಧೀಶರ ಆಯ್ಕೆಗೂ ಜನ ಓಟು ಹಾಕಿದರು.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಎಂದರೆ ಜಗತ್ಪ್ರಸಿದ್ಧ. ಆದರೆ, ಅಲ್ಲಿ ಪ್ರತಿ ವರ್ಷ ನಡೆಯುವ ಇನ್ನಿತರ ಸಹಸ್ರಾರು ಚುನಾವಣೆಗಳ ಬಗ್ಗೆ ಬಹುಜನರಿಗೆ ಗೊತ್ತೇ ಆಗುವುದಿಲ್ಲ. ಅಮೆರಿಕಕ್ಕೆ ಹೋಗಿ ಬಂದ ಅನೇಕರು ವೈಟ್ ಹೌಸ್, ನಯಾಗರಾ ಫಾಲ್ಸು, ಡಿಸ್ನಿ ಲ್ಯಾಂಡು, ಹಾಲಿವುಡ್ಡು, ಲಾಸ್‌ವೇಗಾಸ್ ಅಂತೆಲ್ಲ ಸಾಕಷ್ಟು ಪ್ರವಾಸ ಕಥನ ಬರೆದಿದ್ದಾರೆ. ಆದರೆ, ಅಮೆರಿಕದ ನ್ಯಾಯಾಂಗ ಚುನಾವಣೆ ಅಥವಾ ಷರೀಫ್ ಚುನಾವಣೆ ಕುರಿತ ಬರಹವನ್ನು ನಾನಂತೂ ಓದಿರಲಿಲ್ಲ. ಅದಕ್ಕಾಗಿ, ಪೊಲೀಸ್ ವರಿಷ್ಠ ಹಾಗೂ ನ್ಯಾಯಾಧೀಶರ ಹುದ್ದೆಯ ಚುನಾವಣೆ ನನಗೆ ಸೋಜಿಗ ಎನಿಸಿತು.

ಇದ್ಯಾಕೆ ಹೀಗೆ? ಅಮೆರಿಕದಲ್ಲಿ ಮಾತ್ರ ಈ ವಿಶಿಷ್ಟ ಪದ್ಧತಿ ಯಾಕಿದೆ? ಎಂದು ವಾಷಿಂಗ್‌ಟನ್ ಡಿ.ಸಿ.ಯ ಕ್ಯಾಪಿಟಲ್ ಕಮ್ಯುನಿಕೇಶನ್ ಗ್ರೂಪ್‌ನ ನಿರ್ದೇಶಕರಲ್ಲೊಬ್ಬರಾದ ಅಕ್ರಂ ಎಲಿಯಾಸ್ ಅವರನ್ನು ಕೇಳಿದೆ.

That is the beauty of American Democracy ಎಂದರು ಅವರು.

ಅಮೆರಿಕದ ಜನತಂತ್ರ ಒಂದು ಸಂಪೂರ್ಣ ಪ್ರಜಾಪ್ರಭುತ್ವ ಮಾದರಿ. ಚೆಕ್ ಆಂಡ್ ಬ್ಯಾಲೆನ್ಸ್ ಹಾಗೂ ಎಲ್ಲಾ ಹಂತದಲ್ಲೂ ಪ್ರಜೆಗಳ ಅಭಿಪ್ರಾಯಕ್ಕೆ ಮಹತ್ವ ನೀಡುವುದು ಅಮೆರಿಕ ಪ್ರಜಾಪ್ರಭುತ್ವ ಪದ್ಧತಿಯ ಹೆಗ್ಗುರುತು. ಹಾಗಾಗಿ ಅಮೆರಿಕದಲ್ಲಿ ಜನಮತ ಗಣನೆಗಾಗಿ ನಡೆದಷ್ಟು ಚುನಾವಣೆಗಳು ಜಗತ್ತಿನ ಇನ್ಯಾವ ದೇಶದಲ್ಲೂ ನಡೆಯುವುದಿಲ್ಲ.

ಅಮೆರಿಕದಲ್ಲಿ, ತಮ್ಮ ಬಡಾವಣೆಯ ಮನೆಗಳಿಗೆ ನೀಲಿ ಬಣ್ಣದ ಬದಲು ಹಳದಿ ಬಣ್ಣ ಬಳಿಯೋಣವೇ ಎಂಬ ವಿಷಯದಿಂದ ಹಿಡಿದು ರಾಜ್ಯದ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಾಧೀಶರ ಆಯ್ಕೆಯವರೆಗೆ ವಿವಿಧ ವಿಷಯಗಳ ಕುರಿತು ಚುನಾವಣೆ ನಡೆಯುತ್ತದೆ.
ಹಾಗಾದರೆ, ಇರಾಕ್ ಮೇಲೆ ಯುದ್ಧ ಮಾಡಲು ಬುಷ್ ಯಾಕೆ ಜನಾಭಿಪ್ರಾಯ ಕೇಳಲಿಲ್ಲ ಎಂಬ ನನ್ನ ಪ್ರಶ್ನೆಗೆ ಎಲಿಯಾಸ್ ಉತ್ತರ ಒಂದು ದೊಡ್ಡ ನಗು!

ಕೌಂಟಿ ಷರೀಫ್

ನಮ್ಮ ಪೊಲೀಸ್ ಕಮಿಷನರ್ ಅಥವಾ ಎಸ್ಪಿ ಹುದ್ದೆಯ ಅಮೆರಿಕನ್ ಹೆಸರು ‘ಕೌಂಟಿ ಷರೀಫ್’. ಈತ ಆಯಾ ಜಿಲ್ಲೆಯ ಪೊಲೀಸ್ ವಿಭಾಗದ ಚುನಾಯಿತ ಮುಖ್ಯಸ್ಥ. ಈತನ ಅಡಿಯಲ್ಲಿ ಇಡೀ ಪೊಲೀಸ್ ಇಲಾಖೆ ಕೆಲಸ ಮಾಡುತ್ತದೆ. (ಈ ಹುದ್ದೆಗೆ ಸಮಾನಾಂತರವಾಗಿ ನನಗೆ ತಕ್ಷಣದ ಹೋಲಿಕೆ ಕಾಣಿಸಿದ್ದು ಬೆಂಗಳೂರಿನ ಮೇಯರ್ ಹುದ್ದೆ. ಮೇಯರ್ ಕೂಡ ಜನರಿಂದ ಆಯ್ಕೆಯಾದ ಪ್ರತಿನಿಧಿ ತಾನೇ? ಈತನ ಅಡಿಯಲ್ಲಿ ಇಡೀ ಮಹಾನಗರ ಪಾಲಿಕೆ ಕೆಲಸ ಮಾಡುತ್ತದೆ. ಅವಧಿ ಮುಗಿದ ನಂತರ ಆ ಹುದ್ದೆಗೆ ಮತ್ತೆ ಚುನಾವಣೆ ನಡೆಯುತ್ತದೆಯಷ್ಟೇ?)

ಷರೀಫ್‌ಗಳ ಅಧಿಕಾರ ರಾಜ್ಯದಿಂದ ರಾಜ್ಯಕ್ಕೆ, ಕೌಂಟಿಯಿಂದ ಕೌಂಟಿಗೆ ಬದಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಷರೀಫ್‌ಗೆ ಪೂರ್ಣ ಅಧಿಕಾರವಿದ್ದರೆ ಇನ್ನು ಕೆಲವು ಪ್ರದೇಶಗಳಲ್ಲಿ ಷರೀಫ್‌ಗೆ ನಿಗದಿತ ಅಧಿಕಾರ ಮಾತ್ರ ಇದೆ. ಇನ್ನೂ ಕೆಲವೆಡೆ ಷರೀಫ್ ಅಂದರೆ ಭಾರತದ ರಾಷ್ಟ್ರಪತಿಯಂತೆ ಒಂದು ‘ರಬ್ಬರ್ ಸ್ಟಾಂಪ್’ ಮಾತ್ರ.

ನ್ಯಾಯಾಧೀಶರ ಚುನಾವಣೆ

ಷರೀಫ್ ಚುನಾವಣೆಗಿಂತ ನನಗೆ ವಿಚಿತ್ರ ಎನಿಸಿದ್ದು ನ್ಯಾಯಾಂಗ ಚುನಾವಣೆ. ಅಮೆರಿಕದಲ್ಲಿ ಇಡೀ ದೇಶಕ್ಕೆಲ್ಲಾ ಒಂದು ಫೆಡರಲ್ ಸುಪ್ರೀಂ ಕೋರ್ಟ್ ಇದ್ದರೆ, ಪ್ರತಿ ರಾಜ್ಯದಲ್ಲೂ ಒಂದೊಂದು ಸುಪ್ರೀಂ ಕೋರ್ಟ್ ಇದೆ. ರಾಜ್ಯ ಸುಪ್ರೀಂ ಕೋರ್ಟ್ ಸೇರಿದಂತೆ, ಕೆಳ ನ್ಯಾಯಾಲಯಗಳ ನ್ಯಾಯಾಧೀಶರು ಚುನಾವಣೆಯಲ್ಲಿ ಜನರಿಂದಲೇ ಆಯ್ಕೆಯಾಗುತ್ತಾರೆ.

ಈ ಚುನಾವಣೆಯಲ್ಲಿ ನ್ಯಾಯಾಧೀಶರು ತಮಗೇ ಓಟು ನೀಡಿ ಎಂದು ಮತಯಾಚಿಸಬೇಕು. ‘ನನಗೆ ಓಟು ನೀಡಿದರೆ ನಾನು ಉತ್ತಮ ಜಡ್ಜ್‌ಮೆಂಟ್ ನೀಡುತ್ತೇನೆ’ ಎಂದು ಪ್ರಚಾರ ಮಾಡಬೇಕು. ಇದಕ್ಕಾಗಿ ಕೆಲವು ಅಭ್ಯರ್ಥಿಗಳು ಹತ್ತಾರು ಮಿಲಿಯನ್ ಡಾಲರ್ ಹಣ ಖರ್ಚು ಮಾಡುತ್ತಾರೆ. ಅವರ ಅಧಿಕಾರಾವಧಿ ಕೆಲವು ರಾಜ್ಯಗಳಲ್ಲಿ ೧೦ ವರ್ಷ ಇನ್ನು ಕೆಲವು ರಾಜ್ಯಗಳಲ್ಲಿ ೧೫ ವರ್ಷ.

ಅಮೆರಿಕದ ಫೆಡರಲ್ ಕೋರ್ಟಿನ ನ್ಯಾಯಾಧೀಶರು ಮಾತ್ರ ಸರ್ಕಾರದಿಂದ ನೇಮಕಗೊಳ್ಳುತ್ತಾರೆ. ಆದರೆ, ಅವರಿಗೆ ನಿವೃತ್ತಿ ಎಂಬುದೇ ಇಲ್ಲ. ಸಾಯುವವರೆಗೂ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು! ಇದೂ ಒಂದು ಅಮೆರಿಕ ನ್ಯಾಯಾಂಗ ವ್ಯವಸ್ಥೆಯ ವೈಶಿಷ್ಟ್ಯ.

ಒಂದು ವೇಳೇ, ಇದೇ ವ್ಯವಸ್ಥೆ ಭಾರತದಲ್ಲಿ ಬಂದರೆ ಹೇಗಿರುತ್ತದೆ? -ಎಂದು ಒಂದು ಕ್ಷಣ ಯೋಚಿಸಿದೆ. ನ್ಯಾಯಾಧೀಶರು ಹಾಗೂ ಪೊಲೀಸರ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಂತಾದ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಮುಂದೆ ಪೊಲೀಸ್ ಮುಖ್ಯಸ್ಥರಾಗುವವರು ಹಾಗೂ ನ್ಯಾಯಾಧೀಶರಾಗುವವರು ಸಿಕ್ಕಾಪಟ್ಟೆ ಹಣ, ಹೆಂಡ, ಸೀರೆ, ಪಂಚೆ ಮುಂತಾದವುಗಳನ್ನು ಹಂಚುತ್ತಾರೆ. ಆರಿಸಿ ಬಂದಮೇಲೆ, ಒಂದು ಪಕ್ಷದ ಪೊಲೀಸರು ಇನ್ನೊಂದು ಪಕ್ಷದ ಅನುಯಾಯಿಗಳನ್ನು ಹಿಗ್ಗಾಮುಗ್ಗಾ ಹಿಂಸಿಸಿ ಬಂಧಿಸಿ ಜೈಲಿಗೆ ನೂಕುತ್ತಾರೆ. ಅದೇ ಪಕ್ಷದ ನ್ಯಾಯಾಧೀಶ ಇದ್ದರೆ ಕೋರ್ಟಿನಲ್ಲಿ ಆ ಪ್ರಕರಣಕ್ಕೆ ಜಯವಾಗುತ್ತೆ. ಆದರೆ, ಬೇರೆ ಪಕ್ಷದ ನ್ಯಾಯಾಧೀಶ ಇದ್ದರೆ ಕೇಸ್ ಪುಸ್ ಆಗುತ್ತದೆ! ಓ ಗಾಡ್... ಸದ್ಯ ಭಾರತದಲ್ಲಿ ಇಷ್ಟೊಂದು ಕೆಟ್ಟ ವ್ಯವಸ್ಥೆಯಿಲ್ಲ ಎಂದು ಸಮಾಧಾನ.

ಹಾಗಾದರೆ, ಅಮೆರಿಕದಲ್ಲಿ ಮಾತ್ರ ಯಾಕೆ ಈ ವ್ಯವಸ್ಥೆ ವಿಫಲವಾಗಿಲ್ಲ?

ಏಕೆಂದರೆ, ಅಮೆರಿಕದ ಶೇ.೯೦ರಷ್ಟು ಮತದಾರರು ಪ್ರಜ್ಞಾವಂತ ಮತದಾರರು. ಅವರು ಹಣ, ಹೆಂಡಕ್ಕೆ ಮತ ಚಲಾಯಿಸುವುದಿಲ್ಲ. ಆದ್ದರಿಂದ, ಅಲ್ಲಿ ಭ್ರಷ್ಟಾಚಾರದಿಂದ ಆರಿಸಿಬರುವುದು ಕಷ್ಟ. ಅದಕ್ಕಾಗಿ, ಅಲ್ಲಿ ಷರೀಫ್ ಹಾಗೂ ನ್ಯಾಯಾಂಗ ಚುನಾವಣಾ ವ್ಯವಸ್ಥೆ ಯಶಸ್ವಿಯಾಗುತ್ತಿದೆ.

ದಿವಾಳಿ ಜಡ್ಜ್

ಕೊನೆಯಲ್ಲೊಂದು ಕಿರು ಮಾಹಿತಿ: ಅಮೆರಿಕದ ಜಿಲ್ಲಾ ನ್ಯಾಯಾಲಯಗಳಲ್ಲಿ ‘ದಿವಾಳಿ ನ್ಯಾಯಾಧೀಶ’ - Bankruptcy Judge ಎಂಬ ವಿಚಿತ್ರ ಹುದ್ದೆಯೊಂದಿದೆ. ಈ ನ್ಯಾಯಾಧೀಶರು ಅಮೆರಿಕದ ನ್ಯಾಯಾಲಯ ಹಾಗೂ ಸಂಸತ್ತಿನ ಶಿಫಾರಸುಗಳ ಮೂಲಕ ನೇಮಕೊಳ್ಳುತ್ತಾರೆ. ಅಮೆರಿಕದಲ್ಲಿ ದಿವಾಳಿಯಾಗುವವರ ಪ್ರಕರಣ ಅಧಿಕ. ಅಂಥ ದಿವಾಳಿ ಪ್ರಕರಣಗಳನ್ನು ಪರಿಶೀಲಿಸಿ ಅವರಿಗೆ ದಿವಾಳಿ ಪಟ್ಟ ಕರುಣಿಸುವುದು ಈ ನ್ಯಾಯಾಧೀಶರ ಕೆಲಸ!

ನಾನು ಕಳೆದ ಅಕ್ಟೋಬರ್‌ನಲ್ಲಿ ಅಮೆರಿಕದಲ್ಲಿದ್ದಾಗ ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಪರಿಣಾಮವಾಗಿ ದಿವಾಳಿಯಾಗುವವರ ಸಂಖ್ಯೆ ಹೆಚ್ಚಾಗಿತ್ತು. ಅದಕ್ಕಾಗಿ ಅಮೆರಿಕದ ದಿವಾಳಿ ನ್ಯಾಯಾಧೀಶರಿಗೆಲ್ಲ ಬಿಡುವಿಲ್ಲದಷ್ಟು ಕೆಲಸವಿತ್ತು!