Sunday, April 19, 2009

ಇಂಟರ್ನೆಟ್ ಮೂಲಕ ಮತ ಹಾಕಿ!

ನನ್ನ ಅರ್ಧ ಜೀವನ ಇಂಟರ್ನೆಟ್ ಮೂಲಕ ನಡೆಯುತ್ತಿದೆ. ಬ್ಯಾಂಕು, ಮನೆಯ ಎಲ್ಲಾ ಬಿಲ್ ಪೇಮೆಂಟು, ಪ್ರಯಾಣ ಟಿಕೆಟ್ ಬುಕಿಂಗು, ಹೊಟೆಲ್ ಬುಕಿಂಗು, ಸಿನೆಮಾ ಟಿಕೆಟ್ ಬುಕಿಂಗು ಸೇರಿದಂತೆ ಎಲ್ಲಾ ಇಂಟರ್ನೆಟ್ಟಲ್ಲೇ.... ಇಂಥ `ಹೈಟೆಕ್ ನಾನು' ಈಗ ನಾಲಾಯಕ್ ಒಬ್ಬರಿಗೆ ಮತ ಹಾಕಲು ಯಾವುದೋ ಮತಗಟ್ಟೆ ಹುಡುಕಿಕೊಂಡು ಹೋಗಿ ಕ್ಯೂ ನಿಲ್ಲುವುದೇ? ಛೆ.. ಛೆ..

ಈ ಯೋಚನೆ ಬಂದಾಗಲೆಲ್ಲ, ಮತ ಹಾಕಲೂ ಇಂಟರ್ನೆಟ್ ವ್ಯವಸ್ಥೆಯಿದ್ದರೆ, ಮನೆಯಲ್ಲೋ, ಆಫೀಸಿನಲ್ಲೋ ಕುಳಿತು ಮತ ಚಲಾಯಿಸಬಹುದಿತ್ತು ಅಂತ ನನಗೆ ಅನೇಕ ಬಾರಿ ಅನಿಸಿದೆ. ನಿಮಗೂ ಅನಿಸಿರಬಹುದು. ನನಗೆ ಇಂಟರ್ನೆಟ್ ಆಧಾರಿತ ಮತದಾನ ವ್ಯವಸ್ಥೆ ಕುರಿತು ಅಪಾರ ಭರವಸೆಯಿದೆ. ಇವತ್ತಲ್ಲಾ ನಾಳೆ ಈ ವ್ಯವಸ್ಥೆ ಜಾರಿಗೆ ಬಂದೇ ಬರುತ್ತದೆ ಎಂದು ಬಲವಾಗಿ ನಂಬಿರುವವನು ನಾನು.

ಈ ವ್ಯವಸ್ಥೆ ಜಾರಿಗೆ ಬಂದರೆ, ಒಟ್ಟಾರೆ ಮತದಾನ ಪ್ರಮಾಣ, ಅದರಲ್ಲೂ ನಗರ ಪ್ರದೇಶಗಳಲ್ಲಿ ಗಣನೀಯವಾಗಿ ಹೆಚ್ಚಾಗುತ್ತದೆ. ಈಗಿನ ಮತದಾನ ಪ್ರಕ್ರಿಯೆಯಿಂದ ಸುಶಿಕ್ಷಿತರು ದೂರ ಉಳಿಯುತ್ತಿದ್ದಾರೆ. ಒಂದು ಸಮೀಕ್ಷೆಯ ಪ್ರಕಾರ, ಮತಗಟ್ಟೆಗೆ ಖುದ್ದಾಗಿ ಬಂದು ಮತ ಹಾಕುವುದಕ್ಕಿಂತ ಇಂಟರ್ನೆಟ್ಟಿನಲ್ಲಿ ಮತ ಹಾಕಲು ಇಷ್ಟ ಪಟ್ಟವರ ಸಂಖ್ಯೆ ಶೇ.66. (ನನ್ನನ್ನೂ ಸೇರಿದಂತೆ!) ಅಂದರೆ, ಅವರೆಲ್ಲ ಇಂಟರ್ನೆಟ್ ಮೂಲಕ ಮತದಾನದಲ್ಲಿ ಪಾಲ್ಗೊಳ್ಳುವುದರಿಂದ ಚುನಾವಣೆಯಲ್ಲಿ ಸುಶಿಕ್ಷಿತರ ಪಾತ್ರ ಹೆಚ್ಚುತ್ತದೆ. ಆಗ, ಉತ್ತಮ ಅಭ್ಯರ್ಥಿಯ ಆಯ್ಕೆ ಸಾಧ್ಯವಾಗುತ್ತದೆ. ಜಾತಿ ಆಧಾರಿತ ಚುನಾವಣಾ ಫಲಿತಾಂಶ ಬರುವುದಿಲ್ಲ. ಸಾವಿರ ರುಪಾಯಿ ನೋಟು ಕೊಟ್ಟು ವೋಟು ಖರೀದಿಸುವ ಆಟ ಕಡಿಮೆಯಾಗುತ್ತದೆ. ಇದರಿಂದ ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ - ಎಂದು ನನ್ನ ವಾದ.

ಈಗ ದೊಡ್ಡ ಪ್ರಶ್ನೆ, ಇಂಟರ್ನೆಟ್ ಆಧಾರಿತ ಮತದಾನ ಮಾಡುವುದು ಹೇಗೆ? ಇಂಟರ್ನೆಟ್ ಮೂಲಕ ಬೋಗಸ್ ವೋಟಿಂಗ್, ಮಾಸ್ ವೋಟಿಂಗ್ ಹಾಗೂ ಸೈಬರ್ ಫ್ರಾಡ್ ಸಮಸ್ಯೆಯಿದೆಯಲ್ಲ! ಅದನ್ನು ಬಗೆಹರಿಸುವುದು ಹೇಗೆ? ಇದಕ್ಕೆ ತಕ್ಷಣ ಸಿದ್ಧ ಉತ್ತರ ಇಲ್ಲ. ಆದರೆ, ಈ ಕುರಿತು ಅಧ್ಯಯನ ಹಾಗೂ ಸಂಶೋಧನೆಗಳು ನಡೆಯುತ್ತಿರುವುದು ನಿಜ.

ಅಮೆರಿಕದ ಕೆಲವು ರಾಜ್ಯಗಳಲ್ಲಿ ರೆಫರೆಂಡಮ್ಮಿಗೆ, ಕೆನಡಾದ ಕೆಲವು ಮುನಸಿಪಾಲಿಟಿಗೆ ಹಾಗೂ ಇನ್ನೂ ಕೆಲವು ಯೂರೋಪ್ ದೇಶಗಳಲ್ಲಿ ಇಂಟರ್ನೆಟ್ ಆಧಾರಿತ ವೋಟಿಂಗ್ ವ್ಯವಸ್ಥೆಯನ್ನು ಈಗಾಗಲೇ ಪ್ರಯೋಗಿಕವಾಗಿ ಬಳಸಲಾಗುತ್ತಿದೆ. ಅದಕ್ಕೆ ಸೈಬರ್ ವೋಟಿಂಗ್ ಅಂತಲೂ ಹೆಸರಿದೆ. VOI - Voting Over Internet ಅಂತಲೂ ಹೇಳುತ್ತಾರೆ. ಇಷ್ಟೇ ಅಲ್ಲದೇ, ಇನ್ನೂ ಹಲವಾರು ರೀತಿಯ ಪ್ರಯೋಗಗಳು ನಡೆಯುತ್ತಿವೆ. HTML, XML, ಥರ EML - Election Markup Language ಅನ್ನೋ ತಾಂತ್ರಿಕ ಪ್ರೋಟೋಕಾಲನ್ನೇ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಯಾವ ಪಕ್ಕಾ ವ್ಯವಸ್ಥೆಯೂ ಇನ್ನೂ ಸಿದ್ಧವಾಗಿಲ್ಲ.

ಕಾಗದದ ವೋಟಿನಂತೆ, ಡಿಜಿಟಲ್ ವೋಟಿಗೂ ಕಾನೂನಿನ ಸಮ್ಮತಿ ಇರಬೇಕಾಗುತ್ತದೆ. ಭಾರತದಲ್ಲಿ, EVMನಲ್ಲಿ ವೋಟ್ ಹಾಕಿದರೂ, ಮತದಾರ ಖುದ್ದಾಗಿ ತಾನು ವೋಟು ಚಲಾಯಿಸಿದ್ದಕ್ಕಾಗಿ ಸಹಿ ಅಥವಾ ಹೆಬ್ಬೆಟ್ಟು ಗುರುತು ಹಾಕಿರುತ್ತಾನೆ. ಸೈಬರ್ ವೋಟಿನಲ್ಲಿ ಈ ವೆರಿಫಿಕೇಶನ್ ಮಾಡುವುದು ಹಾಗೂ ಸಾಂವಿಧಾನಿಕ ಸಾಕ್ಷಿಪತ್ರ ಪಡೆಯುವುದು ಹೇಗೆ ಎಂಬ ಪ್ರಶ್ನೆ ಇನ್ನೂ ಬಗೆಹರಿದಿಲ್ಲ. ಅದಕ್ಕೆ, ಬಯೋಮೆಟ್ರಿಕ್ ವೆರಿಫಿಕೇಶನ್, ರಜಿಸ್ಟರ್ಡ್ ಡಿಜಿಟಲ್ ಸಿಗ್ನೇಚರ್ ಅಥವಾ PKI - Public Key Infrastructure ತಂತ್ರಜ್ಞಾನ ಪರಿಹಾರ ಎಂದುಕೊಳ್ಳಲಾಗುತ್ತಿದೆ. ನನಗೆ ಈ ವಿಷಯ ತಿಳಿಸಿದ್ದು ಅಮೆರಿಕ ಸಂವಿಧಾನದ ಪರಿಣತ ಅಕ್ರಂ ಎಲಿಯಾಸ್.


ಎನಿವೇ, ಈ ನಡುವೆ ಲೈಟಾಗಿ ನನ್ನದೆರಡು ಫಂಡಾ :-)

ಫಂಡಾ 1.

ಇಂಟರ್ನೆಟ್ ವೋಟಿಂಗ್ ವ್ಯವಸ್ಥೆ ಇರಬೇಕು ಅಂತ ನನ್ನ ಒತ್ತಾಯ. ಆದರೆ, ಸುರಕ್ಷತಾ ಕಾರಣಕ್ಕಾಗಿ ಈ ಸೌಕರ್ಯ ಎಲ್ಲರಿಗೂ ಸಿಗಬಾರದು. ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆದಿರುವ ಹಾಗೂ ಕನಿಷ್ಠ 10 ಸಾವಿರ ರುಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇರುವ ನೌಕರರಿಗೆ ಅಥವಾ ಕನಿಷ್ಠ 3 ವರ್ಷ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿರುವ ವೃತ್ತಿಪರರಿಗೆ/ಬಿಸಿನೆಸ್ ವ್ಯಕ್ತಿಗಳಿಗೆ ಮಾತ್ರ ಅಂತರ್ಜಾಲದ ಮೂಲಕ ವೋಟ್ ಹಾಕಲು ಅನುವು ಮಾಡಿಕೊಡಬೇಕು. (ಇವೆರಡೂ ಇಲ್ಲದವರಿಗೆ ಮಾಮೂಲಿ ಮಾದರಿ ಹಾಗೂ 2ನೇ ಅಂತರ್ಜಾಲ ಮಾದರಿಯಿದೆ.)

ಇಂಥ ಅರ್ಹ ಮತದಾರರು, ತಮ್ಮ ಬ್ಯಾಂಕ್ ಖಾತೆಗೆ ಲಾಗಿನ್ ಆಗಿ, ಅಲ್ಲಿ, ತಮ್ಮ ವೋಟರ್ ಐಡಿ ನಂಬರ್ ತುಂಬಿ ಮತ ಚಲಾಯಿಸಬೇಕು. ಹೀಗೆ ಮತ ಚಲಾಯಿಸುವಾಗ ಮತದಾರನ ಬ್ಯಾಂಕ್ ಖಾತೆಯಿಂದ 1 ರುಪಾಯಿ ಡಿಡಕ್ಟ್ ಆಗಬೇಕು. ಅಂದರೆ, ಮತದಾರ ಮತ ಚಲಾಯಿಸಲು ತನ್ನ ಇಂಟರ್ನೆಟ್ ಬ್ಯಾಂಕಿಂಗಿನ ಟ್ರಾನ್ಸಾಕ್ಷನ್ ಪಾಸವರ್ಡನ್ನೇ ಬಳಸಬೇಕು.

ಇದರಿಂದ - ಲಾಭವೇನು?


  • ಈ ಪದ್ಧತಿಯಲ್ಲಿ ಮತದಾರನ ವೆರಿಫಿಕೇಶನ್ ಪಕ್ಕಾ ಆಗುತ್ತದೆ. ಬೋಗಸ್ ವ್ಯಕ್ತಿಗಳು ಮತಹಾಕಲು ಆಗುವುದಿಲ್ಲ. ಏಕೆಂದರೆ, ತಲೆ ಇರುವ ಯಾವುದೇ ವ್ಯಕ್ತಿ ತನ್ನ ಬ್ಯಾಂಕಿಂಗ್ ಟ್ರಾನ್ಸಾಕ್ಷನ್ ಪಾಸವರ್ಡನ್ನು ಬೇರೆಯವರಿಗೆ ಹೇಳಲಾರ. ಅಥವಾ 500 ರುಪಾಯಿಗೆ ಮಾರಿಕೊಳ್ಳಲಾರ.

  • ಈಗಿನಂತೆ, ಬೋಗಸ್ ಮತದಾರರನ್ನು ಸೃಷ್ಟಿಸಲು ಸಾಧ್ಯವಿಲ್ಲ ಏಕೆಂದರೆ, ಪ್ರತಿ ಬ್ಯಾಂಕ್ ಅಕೌಂಟ್ ತೆರೆಯಲು ಆರ್.ಬಿ.ಐ ಮಾರ್ಗದರ್ಶಿ ಸೂತ್ರಗಳು ತುಂಬಾ ಕಟ್ಟುನಿಟ್ಟಾಗಿವೆ. ವೋಟರ್ಸ ಐಡಿಗಿಂತ ಬ್ಯಾಂಕ್ ಐಡಿ ಉತ್ತಮ.

  • ಆದರೂ, ಗಣಿಧಣಿಗಳಂಥ ಶ್ರೀಮಂತ ಅಭ್ಯರ್ಥಿಗಳು ತಮ್ಮ ಪರಿಚಯದ ಬ್ಯಾಂಕಲ್ಲೆಲ್ಲ 'ಅಕ್ಷರಶಃ ಮತ ಬ್ಯಾಂಕ್' ಸ್ಥಾಪಿಸಿಕೊಳ್ಳುವ ಸಲುವಾಗಿ, ಕೊಳಚೆ ಪ್ರದೇಶಗಳ ಮತದಾರರ ಹೆಸರಿನಲ್ಲೂ ಬ್ಯಾಂಕ್ ಅಕೌಂಟ್ ತೆರೆದು ಅದರ ಇಂಟರ್ನೆಟ್ ಕಂಟ್ರೋಲನ್ನು ತಾವು ಇಟ್ಟುಕೊಳ್ಳುವ ಸಾದ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ, "ಪ್ರತಿ ಅಕೌಂಟಿನಲ್ಲಿ 10000 ರುಪಾಯಿ ಕನಿಷ್ಠ ಇರಬೇಕು ಹಾಗೂ ಇಂಟರ್ನೆಟ್ ಮತ ಹಾಕುವವರು ಯಾವುದಾದರೂ ಪ್ರತಿಷ್ಠಿತ ಕಂಪನಿ ಅಥವಾ ಸರ್ಕಾರಿ ನೌಕರರಾಗಿರಬೇಕು. ಇಲ್ಲವೇ, ಕನಿಷ್ಠ 3 ವರ್ಷ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿರಬೇಕು" ಎಂಬ ಅಂಶವನ್ನು ಗಮನಿಸಿ. ಈ ಷರತ್ತಿನಿಂದಾಗಿ, ಬೋಗಸ್ ಮತದಾರರನ್ನು ಸೃಷ್ಟಿಸುವುದು ಎಂಥ ಶ್ರೀಮಂತರಿಗೂ ಕಷ್ಟ ಹಾಗೂ ಬಲು ದುಬಾರಿ.

ಆದರೆ, ನನ್ನ-ನಿಮ್ಮಂಥ ಸಾಚಾ ಮತದಾರರಿಗೆ ಈ ಪದ್ಧತಿ ಬಹಳ ಅನುಕೂಲ ತಾನೇ?

ಫಂಡಾ 2

ಇದು ಈಗಿನ ಕೋರ್ ಬ್ಯಾಂಕಿಂಗ್ ಮಾದರಿಯ, ಕೋರ್ ವೋಟಿಂಗ್ ವ್ಯವಸ್ಥೆ. ಅಂದರೆ, ನೋಂದಾಯಿತ ಮತದಾರ ದೇಶದ ಯಾವುದೇ ಮತಗಟ್ಟೆ ಅಥವಾ ಬ್ಯಾಂಕಿಗೆ ಹೋಗಿ ಮತ ಚಲಾಯಿಸಲು ಅವಕಾಶವಿರಬೇಕು. ಉತ್ತರ ಪ್ರದೇಶದ ಮತದಾರ ಬೆಂಗಳೂರಿನ ಶಿವಾಜಿನಗರದ ಮತಗಟ್ಟೆಗೆ ಹೋಗಿ ಉತ್ತರ ಪ್ರದೇಶದ ತನ್ನ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸುವಂತಿರಬೇಕು. ಅಥವಾ ಬೆಂಗಳೂರಿನ ಮತದಾರ ಹೈದರಾಬಾದಿನ ಬ್ಯಾಂಕ್ ಶಾಖೆಯೊಂದರಲ್ಲಿ ತನ್ನೂರಿನ ಅಭ್ಯರ್ಥಿಗೆ ಮತದಾನ ಮಾಡುವಂತಿರಬೇಕು. ಮತದಾರರ ಗುರುತಿನ ಚೀಟಿ, ಸಹಿ ಅಥವಾ ಹೆಬ್ಬೆಟ್ಟು ಗುರುತುಗಳನ್ನು ಮತಗಟ್ಟೆ ಅಥವಾ ಬ್ಯಾಂಕ್ ಅಧಿಕಾರಿ, ಆನ್ ಲೈನಲ್ಲಿ ಪರಿಶೀಲಿಸಿ ಆ ಮತದಾರನಿಗೆ ಆನ್ ಲೈನಲ್ಲೇ ಮತಹಾಕಲು ಅವಕಾಶ ನೀಡಬೇಕು. ಈ ಮತ ಉದ್ದೇಶಿತ ಕ್ಷೇತ್ರದ ಅಭ್ಯರ್ಥಿಯ ಲೆಕ್ಕಕ್ಕೆ ಜಮಾ ಆಗಬೇಕು

ಲಕ್ಷಾಂತರ ರುಪಾಯಿಯನ್ನೇ ಹೀಗೆ ದೇಶದ ಎಲ್ಲೆಂದರಲ್ಲಿ ಜಮಾ ಮಾಡಲು ಅವಕಾಶವಿರುವಾಗ ಒಂದು 'ಜುಜುಬಿ' ವೋಟನ್ನು 'ಕೋರ್ ವೋಟಿಂಗ್' ಪದ್ಧತಿಯಲ್ಲಿ ಜಮಾ ಮಾಡಲು ಸಾಧ್ಯವಿಲ್ಲವೇ?

ಇದರಿಂದ ಆಗುವ ಲಾಭಗಳು:


  • ನಾವು ಭಾರತದಲ್ಲಿ ಯಾವುದೇ ಊರಿಗೆ ಹೋದರೂ, ಮತದಾನದಿಂದ ವಂಚಿತರಾಗಬೇಕಿಲ್ಲ.
  • ಮತದಾರರ ವೆರಿಫಿಕೇಶನ್ ಪಕ್ಕಾ. ಏಕೆಂದರೆ, ಈಗಿನ ಮತದಾನ ಪದ್ಧತಿಯೇ ಇಲ್ಲೂ ಅನ್ವಯವಾಗುತ್ತದೆ.
  • ತಾಂತ್ರಿಕವಾಗಿ ಜಾರಿಗೊಳಿಸುವುದು ಸುಲಭ.

ಚುನಾವಣಾ ಆಯೋಗ ಈ ಬ್ಲಾಗ್ ಓದುವುದಿಲ್ಲ ಅಂತ ನನಗೆ ಗೊತ್ತು. ಆದರೆ, ಈ 2 ಫಂಡಾಗೆ ನೀವೇನಂತೀರಿ?

Wednesday, April 15, 2009

ಚುನಾವಣಾ ಸಮೀಕ್ಷೆ ಎಷ್ಟು ಸತ್ಯ? - ಒಂದು ಖಾಸ್ ಬಾತ್

ದೀಗ ಚುನಾವಣಾ ಸಮಯ ಎನ್ನುವುದಕ್ಕಿಂತಲೂ ಚುನಾವಣಾ ಸಮೀಕ್ಷೆಗಳ ಸಮಯ ಎಂದರೇ ಹೆಚ್ಚು ಸರಿ. ಎಲ್ಲಾ ಟೀವಿ ಚಾನಲ್ಲುಗಳೂ ಚುನಾವಣಾ ಸಮೀಕ್ಷೆ ನಡೆಸುತ್ತಿವೆ. ತೆರೆಯ ಮೇಲೆ ಗ್ರಾಫ್ ತೋರಿಸುವುದೂ, ಮೂರು ನಾಲ್ಕು ರಾಜಕಾರಣಿಗಳ ಜೊತೆ ಚರ್ಚೆ ನಡೆಸುವುದೂ ಮಾಮೂಲಿಯಾಗಿದೆ. ಆದರೆ, ದೊಡ್ಡ ವಿವಾದ ಮಾತ್ರ ಹಾಗೇ ಇದೆ. ಚುನಾವಣಾ ಸಮೀಕ್ಷೆಗಳು ಎಷ್ಟು ವಿಶ್ವಾಸಾರ್ಹ? ಹಿಂದಿನ ಚುನಾವಣಾ ಸಮೀಕ್ಷೆಗಳು ಹೇಳಿದ ಸೀಟುಗಳ ಸಂಖ್ಯೆಗಳೆಲ್ಲಾ ಸರಿಹೋಗಿಲ್ಲವಲ್ಲ? ಮಾಧ್ಯಮಗಳು ಇಂಥ ಬೋಗಸ್ ಪದ್ಧತಿಯನ್ನು ಬಳಸಿಕೊಳ್ಳಬೇಕೇ? ಮೂರು-ನಾಲ್ಕು ಚುನಾವಣಾ ಸಮೀಕ್ಷೆಯಲ್ಲಿ ಪಾಲ್ಗೊಂಡ ಅನುಭವದಲ್ಲಿ ನನ್ನ ಅಭಿಪ್ರಾಯವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

1. ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಬೇಕೇ ಬೇಕು. (ಆದರೆ, Exit Poll - ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶವನ್ನು ಮಾತ್ರ ಎಲ್ಲ ಹಂತದ ಮತದಾನ ಮುಗಿದ ನಂತರವೇ ಪ್ರಕಟಿಸಬೇಕು. ಅಭಿವೃದ್ಧಿಹೊಂದಿದ ದೇಶದಲ್ಲೂ ಇದೇ ವ್ಯವಸ್ಥೆಯಿದೆ. ಈ ವರ್ಷದಿಂದ ಭಾರತದಲ್ಲೂ ಈ ಷರತ್ತನ್ನು ಚುನಾವಣಾ ಆಯೋಗ ಜಾರಿಗೊಳಿಸಿದೆ.)

2. ಈ ಸಮೀಕ್ಷೆಗಳನ್ನು ರಾಜಕೀಯ ಪಕ್ಷಗಳು ಟೀಕಿಸುವುದು ಅಥವಾ ವಿರೋಧಿಸುವುದು ಸಹಜ. ಆದರೆ, ವಾಸ್ತವ ಏನೂ ಅಂದರೆ, ಚುನಾವಣೆಗೆ ಮೊದಲು ಬಹುತೇಕ ರಾಜಕೀಯ ಪಕ್ಷಗಳು ರಹಸ್ಯವಾಗಿ ತಮ್ಮದೇ ಸಮೀಕ್ಷೆ ನಡೆಸುತ್ತವೆ. ಆ ಸಮೀಕ್ಷೆಗಳಿಗೆ ಅನುಗುಣವಾಗಿ ತಮ್ಮ ಚುನಾವಣಾ ಯೋಜನೆಯನ್ನು ರೂಪಿಸುತ್ತವೆ. ಕಳೆದ ವರ್ಷದಂತೆ ಈ ವರ್ಷವೂ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮದೇ ಸಮೀಕ್ಷೆ ನಡೆಸಿವೆ. ಬಹಿರಂಗವಾಗಿ ಏನೇ ಹೇಳಲಿ,ಅಂತರಂಗದಲ್ಲಿ ತಮ್ಮ ಸಮೀಕ್ಷೆಗಳ ಫಲಿತಾಂಶದ ಸತ್ಯ ಏನು ಎಂದು ಎರಡೂ ಪಕ್ಷದ ವರಿಷ್ಠರಿಗೆ ಗೊತ್ತು!

3. ಈಗ ಪತ್ರಿಕೋದ್ಯಮವನ್ನೇ ತೆಗೆದುಕೊಂಡರೆ, ನಮ್ಮ ವರದಿಗಾರರು ತಮ್ಮ ಕ್ಷೇತ್ರದಲ್ಲಿ ಸಂಚರಿಸಿ 25-30 ಜನರನ್ನು ಮಾತನಾಡಿಸಿ ಬರೆಯುವ ಕ್ಷೇತ್ರ ಸಮೀಕ್ಷೆಗಳಿಗಿಂತ Large Samples ಇರುವ ಸಮೀಕ್ಷೆಗಳೇ ಹೆಚ್ಚು ನಿಖರ ಹಾಗೂ ವಿಶ್ವಾಸಾರ್ಹ. ಆ ದೃಷ್ಟಿಯಲ್ಲಿ ಈ ಸಮೀಕ್ಷೆಗಳು ಆಧುನಿಕ ಪತ್ರಿಕೋದ್ಯಮಕ್ಕೆ ಒಂದು ವರ ಎಂದು ನನ್ನ ಅಭಿಪ್ರಾಯ.

4. ಈ ಸಮೀಕ್ಷೆಗಳು ಹಲವು ಬಾರಿ ವಿಫಲವಾಗುತ್ತವೆ. ಕೆಲವು ಬಾರಿ ಸಂಪೂರ್ಣ ಉಲ್ಟಾ ಆಗುತ್ತವೆ (ಕಳೆದ ವರ್ಷದ CNN-IBN ಸಮೀಕ್ಷೆ ಥರ). ಈ ಸಮೀಕ್ಷೆಗಳು ಯಶಸ್ವಿಯಾಗುವುದು ಬಿಡುವುದು ಆರು ಅಂಶಗಳನ್ನು ಅವಲಂಬಿಸಿವೆ:

a) ಉತ್ತಮ ಸಮೀಕ್ಷಾ ಗಣದ ಆಯ್ಕೆ
b) ಉತ್ತಮ ಸಮೀಕ್ಷಾ ಗಣದ ಗಾತ್ರ
c) ಸೂಕ್ತ ಪ್ರಶ್ನಾವಳಿ
d) ಸಮೀಕ್ಷೆ ನಡೆಸುವ ಸಮಯ
e) ಉತ್ತಮ ಹಾಗೂ ಪ್ರಾಮಾಣಿಕ ಕ್ಷೇತ್ರ ಕಾರ್ಯ ಹಾಗೂ
f) ಮಾಹಿತಿಯ ಉತ್ತಮ ಸಂಸ್ಕರಣೆ ಮತ್ತು ವಿಶ್ಲೇಷಣೆ

ಈ ಆರು ಹಂತಗಳಲ್ಲಿ ಒಂದರಲ್ಲಿ ಎಡವಿದರೂ ಸಮೀಕ್ಷೆ ದಾರಿ ತಪ್ಪುತ್ತದೆ.

5. ಇನ್ನೊಂದು ಪ್ರಮುಖ ಅಂಶವನ್ನು ಎಲ್ಲರೂ ಗಮನಿಸಲೇ ಬೇಕು. ಸಮೀಕ್ಷೆ ಅಂದರೆ, ಪ್ರತಿ ಪಕ್ಷ ಗೆಲ್ಲಬಹುದಾದ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಎಂಬ ಅಭಿಪ್ರಾಯವಿದೆ. ಇದು ತಪ್ಪು. ಸಮೀಕ್ಷೆಗಳು ಎಂದರೆ ಒಟ್ಟಾರೆ ಟ್ರೆಂಡ್ ಸೂಚಿಸುವ ದಿಗ್ದರ್ಶಕಗಳು ಮಾತ್ರ. Numbersಗಿಂತ Inference ಮುಖ್ಯ.

ಉದಾಹರಣೆಗೆ ಕಳೆದ ಲೋಕಸಭಾ ಚುನಾವಣೆಯ ಸಮೀಕ್ಷೆಗಳನ್ನು ನೋಡಿ. ಕಳೆದ 4-5 ವರ್ಷಗಳವರೆಗೂ ಕನ್ನಡ ಪತ್ರಿಕೋದ್ಯಮದಲ್ಲಿ ಈ ಸಮೀಕ್ಷೆಗಳ ಭರಾಟೆ ಅಷ್ಟಾಗಿ ಇರಲಿಲ್ಲ. ಪ್ರಕಟಿಸಿದರೂ ಈ ಸಮೀಕ್ಷೆಗಳನ್ನು 2-3-4 ಕಾಲಮ್ಮಿನ ಒಂದು ಸುದ್ದಿಯಾಗಿ ಪ್ರಕಟಿಸುವ ವಾಡಿಕೆಯಿತ್ತು. ಈ ಹಂತದಲ್ಲಿ ಕನ್ನಡಪ್ರಭದಲ್ಲಿ NDTV Indian Express - AC Nielsen ಸಮೀಕ್ಷೆಯನ್ನು ವಿವರವಾಗಿ ಪ್ರಕಟಿಸುವ ಹಾಗೂ Over Play ಮಾಡುವ ನಿರ್ಧಾರ ಕೈಗೊಂಡಾಗ ನನಗೂ ಈ ಸಮೀಕ್ಷೆಗಳ ಕುರಿತು ಅಳುಕಿತ್ತು. ಆದರೆ, ಈ ಕಾರ್ಯದಲ್ಲಿ ನಾನು ನಿಕಟವಾಗಿ ತೊಡಗಿಸಿಕೊಂಡ ನಂತರ ನನಗೆ ಈ ಸಮೀಕ್ಷೆಗಳ ಕುರಿತು ಧೈರ್ಯ ಹಾಗೂ ನಂಬಿಕೆ ಬಂತು.

ನಮ್ಮ ಆರಂಭದ ಸುತ್ತಿನ ಸಮೀಕ್ಷೆಯಲ್ಲಿ "ಎನ್.ಡಿ.ಎ ಪ್ರಕಾಶಿಸುತ್ತಿದೆ - ಬಿಜೆಪಿ ಮೈತ್ರಿ ಕೂಟಕ್ಕೇ ಮತ್ತೆ ಅಧಿಕಾರ ಸಂಭವ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅದನ್ನೇ ಕನ್ನಡಪ್ರಭದಲ್ಲಿ ಬ್ಯಾನರ್ ಶೀರ್ಷೀಕೆಯಾಗಿ ಪ್ರಕಟಿಸಿದೆವು. ಆದರೆ, ಎರಡು ಮತ್ತು ಮೂರನೇ ಸುತ್ತಿನ ಚುನಾವಣಾ ಪೂರ್ವ ಸಮೀಕ್ಷೆಗಳು ಮುಗಿಯುವ ಹೊತ್ತಿಗೆ ಕಾಂಗ್ರೆಸ್ ಮೈತ್ರಿ ಕೂಟದ ಅಲೆ ಹೆಚ್ಚು ಕಂಡುಬಂತು. ಬಿಜೆಪಿ ಮೈತ್ರಿಕೂಟಕ್ಕೆ ಅಧಿಕಾರ ಸಿಗುವುದು ಕಷ್ಟ ಎಂದು ಸಮೀಕ್ಷೆಗಳು ತಿಳಿಸಿದವು. ಆಗ ನಾವು "ಎನ್.ಡಿ.ಎ ಮಂಕಾಗುತ್ತಿದೆ" ಎಂದು ಬ್ಯಾನರ್ ಶೀರ್ಷಿಕೆಯಲ್ಲಿ ಸಮೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದೂ ಅಷ್ಟೇ ನಿಜ. Exit Poll ಸಮೀಕ್ಷೆಯ ನಂತರವಂತೂ ಬಿಜೆಪಿಗೆ ಅಧಿಕಾರ ದೂರದ ಮಾತು ಎಂಬ ಅಂಶ ಗೊತ್ತಾಯಿತು. ಸಮೀಕ್ಷೆಗಳು ಅಂದಾಜು ಮಾಡಿದ್ದ ಸಂಖ್ಯೆ ಸರಿ ಇಲ್ಲದಿದ್ದರೂ ಸಮೀಕ್ಷೆ ತೋರಿಸಿದ ಒಟ್ಟಾರೆ ದಿಕ್ಕು ಸರಿಯಾಗೇ ಇತ್ತು. ಎನ್.ಡಿ.ಎ. ಶೈನ್ ಆಗಲಿಲ್ಲ.

ಕರ್ನಾಟಕದಲ್ಲೂ ಅಷ್ಟೇ ಬಿಜೆಪಿಗೆ 15-19 ಸೀಟು ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದರೆ ಯಾರೂ ನಂಬಲಿಲ್ಲ. ಆಗ ಕನ್ನಡಪ್ರಭವನ್ನು ಟೀಕಿಸಿದವರು ಹಲವರು. ಈ ಟೀಕೆಗಳಿಂದ ನಾನು ತುಸು ಡಿಪ್ರೆಸ್ ಆದದ್ದು ನಿಜ. ಆದರೆ, ಫಲಿತಾಂಶ ಬಂದಾಗ ಬಿಜೆಪಿಗೆ 18 ಸೀಟು ಸಿಕ್ಕಿತ್ತು. ಅಂದರೆ, ಕರ್ನಾಟಕದಲ್ಲಿ ಬಿಜೆಪಿ ಬಲಗೊಂಡಿದ್ದನ್ನು ಸಮೀಕ್ಷೆ ಸರಿಯಾಗೇ ಪತ್ತೆ ಹಚ್ಚಿತ್ತು.

ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತೂ ಸಮೀಕ್ಷೆ ನಡೆಸಿದ್ದೆವು. ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ಸಿಗೆ ಮತ್ತೆ ಅಧಿಕಾರ ಕಷ್ಟ. ಬಿಜೆಪಿ ಹಾಗೂ ಜೆಡಿಎಸ್ ಬಲಗೊಂಡಿವೆ. ಆದರೆ, ಯಾವ ಪಕ್ಷಕ್ಕೆ ಅಧಿಕಾರ ಎಂದು ಹೇಳಲು ಆಗುತ್ತಿಲ್ಲ. Too Close to Call - ಎಂದು ಸಮೀಕ್ಷೆ ತಿಳಿಸಿತ್ತು. (That's the exact four-words the survey said.) ಕೊನೆಗೆ ಬಂದ ಫಲಿತಾಂಶ ಎಷ್ಟು Close ಆಗಿತ್ತು ಅಂದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಅದಿಕಾರಕ್ಕೆ ಕೂದಲೆಳೆ ಅಂತರದಲ್ಲಿ ಇದ್ದವು. ಜೆಡಿಎಸ್ ಅತ್ತ ಬಲ ಕೊಟ್ಟರೆ ಆ ಸರ್ಕಾರ ಇತ್ತ ಬಲ ಕೊಟ್ಟರೆ ಈ ಸರ್ಕಾರ ಎಂಬ ಪರಿಸ್ಥಿತಿ ನಿರ್ಮಾಣವಾಗಲಿಲ್ಲವೇ? ಅಷ್ಟೇ ಅಲ್ಲ, ಚಂದ್ರಬಾಬು ನಾಯ್ಡುಗೆ ಅಧಿಕಾರ ಗಗನಕುಸುಮ ಎಂದೂ ಸಮೀಕ್ಷೆ ತಿಳಿಸಿತ್ತು. ಸಂಖ್ಯೆ ಸರಿ ಇಲ್ಲದಿದ್ದರೂ ಸಮೀಕ್ಷೆ ತೋರಿಸಿದ್ದ ದಿಕ್ಕು ಸುಳ್ಳಾಗಲಿಲ್ಲವಲ್ಲ!

ಬಹಿರಂಗವಾಗಿ, ರಾಜಕೀಯ ಪಕ್ಷಗಳು ಈ ಸಮೀಕ್ಷೆಯೆಲ್ಲ ಬೋಗಸ್ ಎಂದೇ ಹೇಳಿದವು. ಆದರೆ, ಕಾಂಗ್ರೆಸ್ ಗಾಳಿ ಬಲವಾಗುತ್ತಿದೆ ಎಂದು ನಮ್ಮ ಸಮೀಕ್ಷೆ ಪ್ರಕಟವಾದಾಗ ಕಾಂಗ್ರೆಸ್ 1.5 ಲಕ್ಷ ಪ್ರತಿಗಳನ್ನು ಪ್ರೀಮಿಯಂ ಬೆಲೆಗೆ ಕೊಂಡುಕೊಂಡು ಮತಕ್ಷೇತ್ರಗಳಲ್ಲಿ ಹಂಚಿದರೆ, ಜೆಡಿಎಸ್ 2.5 ಲಕ್ಷ ಪ್ರತಿಗಳನ್ನು ಕೊಂಡುಕೊಂಡಿತು. ಜೆಡಿಎಸ್ ಸಂತೋಷಕ್ಕೆ ಕಾರಣವೆಂದರೆ, - ಆಗಿನ ಪರಿಸ್ಥಿತಿಯಲ್ಲಿ ಜನತಾದಳ ಸಂಪೂರ್ಣ ಅವಶೇಷವಾಗಿತ್ತು. ದೇವೇಗೌಡರು ಹೊಸತಾಗಿ ಜೆಡಿಎಸ್ ಪಕ್ಷ ಪಟ್ಟಿದ್ದರು. ಆದರೆ, ಯಾವ ಸಮೀಕ್ಷೆಯೂ ಜೆಡಿಎಸ್ ಇರುವನ್ನು ಗುರುತಿಸಿರಲಿಲ್ಲ. ಇತರೆ ಎಂಬ ಕಾಲಂ ಅಡಿ ಜೆಡಿಎಸ್ ಸ್ಥಾನಗಳನ್ನು ತೋರಿಸಲಾಗುತ್ತಿತ್ತು. ಆದರೆ, ನಮ್ಮ ಸಮೀಕ್ಷೆಯಲ್ಲಿ ಜೆಡಿಎಸ್ ಎಂದು ಪ್ರತ್ಯೇಕವಾಗಿ ಗುರುತಿಸಿ ಅದು ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಹೇಳಿದ್ದೆವು.

ಇದನ್ನೆಲ್ಲ ಸಮೀಕ್ಷೆ ಸ್ಪಷ್ಟವಾಗಿ ಕಂಡುಕೊಂಡಿತ್ತು. ಇದನ್ನು ಬಿಟ್ಟು ಕೆಲವರು, ಕೇವಲ ಸಮೀಕ್ಷೆಯ ಸಂಖ್ಯೆಗೆ ಮಹತ್ವ ಕೊಟ್ಟು, ಸಮೀಕ್ಷೆಗಳೆಲ್ಲಾ ಬೋಗಸ್ ಎಂದು ಅಪಪ್ರಚಾರ ಮಾಡಿದರು.

2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಅಷ್ಟೇ. ಸುವರ್ಣ ನ್ಯೂಸ್ - ಕನ್ನಡಪ್ರಭ - ಸಿಫೋರ್ ಸಮೀಕ್ಷೆ ಅದ್ಭುತ ಯಶಸ್ಸು ಕಂಡಿತು. ಕೇವಲ ಟ್ರೆಂಡ್ ಅಷ್ಟೇ ಅಲ್ಲ, ಸಂಖ್ಯೆ ಸಹ ಶೇ.98ರಷ್ಟು ನಿಖರವಾಗಿತ್ತು. This is the only survey that has hit the bulls-eye ಎಂದು Times of India ಮುಖಪುಟದಲ್ಲಿ ಬರೆದಿತ್ತು.

ಹಾಗಂತ ಎಲ್ಲ ಬಾರಿಯೂ ಸಮೀಕ್ಷೆಯ ಸಂಖ್ಯೆ ಇಷ್ಟೊಂದು ನಿಖರವಾಗಿರುತ್ತದೆ ಎಂದು ನಾನೇನೂ ಹೇಳುವುದಿಲ್ಲ. ಆದರೆ, ಸಮೀಕ್ಷೆಗಳಿಂದ ಮತದಾರರ ನಿಖರ ನಾಡಿ ಮಿಡಿತವಂತೂ ಖಂಡಿತವಾಗಿ ತಿಳಿಯುತ್ತದೆ.

In last October, I had a rare chance of being at the thick of the American Elections. ಇದು ನನ್ನ ಪತ್ರಿಕೋದ್ಯಮ ಜೀವನದ ಅತ್ಯದ್ಭುತ ಅನುಭವವೂ ಹೌದು. ಆಗ ಅಲ್ಲಿನ ಅನೇಕ ಪತ್ರಕರ್ತರ ಜೊತೆ ನಿಕಟವಾಗಿ ಒಡನಾಡುವ ಅವಕಾಶ ನನ್ನದಾಯಿತು. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ 'ಡೈರೆಕ್ಟರ್ ಆಫ್ ಪೋಲಿಂಗ್ ' ಜಾನ್ ಕೊಹೆನ್ ಅವರ ಜೊತೆ ನಾನು ಈ ಚುನಾವಣಾ ಪೂರ್ವ ಸಮೀಕ್ಷೆ ಹಾಗೂ ಚುನಾವಣೋತ್ತರ ಸಮೀಕ್ಷೆಯ ಕುರಿತು ಒಂದರ್ಧ ಗಂಟೆ ಮಾತನಾಡಿದ್ದೆ. ಅವರ ಅನುಭವದಲ್ಲಿ, ಸಮೀಕ್ಷೆಗಳು ಎಡವಿದರೆ ಅದಕ್ಕೆ ಆ ಸಮೀಕ್ಷೆ ನಡೆಸುವ ಸಂಸ್ಥೆ ಕಾರಣ. ಸಮೀಕ್ಷೆ ತಪ್ಪಾಯಿತು ಎಂಬ ಕಾರಣಕ್ಕೆ Psephology - ಸಮೀಕ್ಷಾ ವಿಜ್ಞಾನವೇ ಸುಳ್ಳು ಎನ್ನುವಂತಿಲ್ಲ. The methods and executions are very important ಎನ್ನುತ್ತಾರೆ ಅವರು.

ಶಿಕಾಗೋ ಟ್ರಿಬ್ಯೂನ್ನಿನ ಖ್ಯಾತ ರಾಜಕೀಯ ಅಂಕಣಕಾರ ಕ್ಲಾರೆನ್ಸ್ ಪೇಜ್ ಜೊತೆ ಚುನಾವಣಾ ಸಮೀಕ್ಷೆಗಳ ಕುರಿತು ಮಾತನಾಡಿದಾಗ ಅವರು ಹೇಳಿದ್ದೂ ಅದನ್ನೇ. "ಸಮೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ರೂಪಿಸಲಾಗಿದೆ, ಯಾವ ರೀತಿಯ ಸಮೀಕ್ಷಾ ಗಣವನ್ನು ಆಯ್ದುಕೊಳ್ಳಲಾಗಿದೆ ಹಾಗೂ ಯಾವ ಸಂದರ್ಭದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ ಎಂಬುದು ಬಹಳ ಮುಖ್ಯ. ಇದರಲ್ಲಿ ಎಡವಿದರೆ ಸಮೀಕ್ಷೆಯೂ ಎಡವುತ್ತದೆ. ಇಲ್ಲವಾದಲ್ಲಿ, ಸಮೀಕ್ಷೆ ಎಡವಲು ಅವಕಾಶವೇ ಇಲ್ಲ."

ಎಬಿಸಿ ನ್ಯೂಸಿನ ವೈಟ್ ಹೌಸ್ ವರದಿಗಾರ್ತಿ ಆನ್ ಕಾಂಪ್ಟನ್ ಹೇಳಿದ್ದು - "ಈ ಸಮೀಕ್ಷೆಗಳನ್ನು ಕೇವಲ ನಂಬರ್ ಗೇಮ್ ಅಂತ ತಿಳಿಯಬಾರದು. We should use the pre-poll and exit poll statistics to find the reasons for the results."

ಹಾಗಾಗಿ, ಸಮೀಕ್ಷೆಗಳು ಆದುನಿಕ ಪತ್ರಿಕೊದ್ಯಮಕ್ಕೆ ಬೇಕೇ ಬೇಕು. ಆದರೆ, ನಾವು ಸರಿಯಾಗಿ ಸಮೀಕ್ಷೆ ನಡೆಸಬೇಕು ಅಷ್ಟೇ.

Sunday, April 12, 2009

ಟ್ವೀಟರ್.. ಟ್ವೀಟರ್.. ವಾಟ್ ಯು ಆರ್ !

ನಿಮಗಿನ್ನೂ ಹಿಡಿದಿಲ್ಲವೇ ಈ ಹುಚ್ಚು!

‘ನಾನು ಏನೂ ಮಾಡುತ್ತಿಲ್ಲ’ ಎಂಬ ಅತ್ಯಂತ ಸಿಲ್ಲಿ ಸಂದೇಶದಿಂದ ಹಿಡಿದು ‘ನ್ಯೂಯಾರ್ಕಿನ ಕಟ್ಟಡವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹುಚ್ಚುಚ್ಚಾಗಿ ಗುಂಡುಹಾರಿಸಿ ಹತ್ತಾರು ಜನರನ್ನು ಸಾಯಿಸುತ್ತಿದ್ದಾನೆ’ ಎಂಬ ಬ್ರೇಕಿಂಗ್ ನ್ಯೂಸ್‌ವರೆಗೆ... ಟ್ವೀಟರ್ ಸೈಟಿನಲ್ಲಿ ಕೋಟಿ ಕೋಟಿ ಸಂದೇಶಗಳು ಲಭ್ಯ.



೧. ನಾನೀಗ ಕಾಫಿ ಕುಡಿಯಲು ಹೋಗ್ತಿದ್ದೇನೆ.
೨. ರಾತ್ರಿಗೆ ಏನು ಅಡಿಗೆ ಮಾಡೋಣ ಅಂತ ಯೋಚಿಸ್ತಿದ್ದೇನೆ.
೩. ಲಂಡನ್‌ನಲ್ಲೂ ಲುಂಗಿ ಉಡೋವ್ರು ಇದ್ದಾರಾ? ಯಾರಾದ್ರೂ ಹೇಳಿ ಪ್ಲೀಸ್.
೪. ಅಯ್ಯೋ... ಹೊಸೂರು ರಸ್ತೆಯತ್ತ ಈಗ ಯಾರೂ ಬರಬೇಡಿ. ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್.
೫. ಮೈ ಗಾಡ್. ಹೊಸೂರು ರಸ್ತೆಯಲ್ಲಿ ಬಾಂಬ್ ಸ್ಫೋಟಿಸಿದೆ. ನಾಲ್ಕೈದು ಜನಾನಾದ್ರೂ ಸತ್ತಿದ್ದಾರೆ ಅಂತ ಹೇಳ್ತಿದ್ದಾರೆ.
೬. ಕಾಪಾಡಿ... ಕಾಪಾಡಿ... ಪೊಲೀಸರು ನನ್ನನ್ನು ಅನ್ಯಾಯವಾಗಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕಿದ್ದಾರೆ.

ಮೇಲಿನ ಅರ್ಧ ಡಜನ್ ವಾಕ್ಯಗಳನ್ನು ಓದಿದಾಗ ನಿಮಗೆ ಏನೆನ್ನಿಸಿತು?

  • ನಿಮಗೆ ಏನೂ ಅನ್ನಿಸದಿದ್ದರೆ ‘ನಿಮಗೆ ವಯಸ್ಸಾಯಿತು. ಜೀವನದಲ್ಲಿ ಆಸಕ್ತಿ ಹೊರಟುಹೋಗಿದೆ’ ಅಂತ ಅರ್ಥ.
  • ‘ಸ್ನಾನಾ ಮಾಡ್ಕೊಳೋ, ಪೌಡರ್ ಹಚ್ಕೋಳೋ, ಹಲ್ ಉಜ್ಕೊಳೋ’ ಎನ್ನುವ ಅಸಂಬದ್ಧ ಸಿನಿಮಾ ಹಾಡಿನಂತಿದೆ ಪಕ್ಕದ ಆರು ಸಾಲುಗಳು ಅಂತ ಅನ್ನಿಸಿದರೆ ನೀವು ಕನ್ನಡ ಸಿನೆಮಾಗೆ ಸಂಗೀತ ಸಾಹಿತ್ಯ ನೀಡಲು ಯೋಗ್ಯ ಕವಿ ಅಂತ ಅರ್ಥ.
  • ಇವೆಲ್ಲ ಎಸ್‌ಎಂಎಸ್ ಸಂದೇಶ ಇರಬಹುದು ಅಂತ ನಿಮಗನ್ನಿಸಿದರೆ, ನೀವು ಮೊಬೈಲ್ ಎಕ್ಸ್ ಪರ್ಟ್ ಎಂದು ತಿಳಿಯಬಹುದು.
  • ಈ ವಾಕ್ಯಗಳು ‘ಟ್ವೀಟರ್ ಸಂಭಾಷಣೆ’ ಅಂತ ನಿಮಗನ್ನಿಸಿದರೆ -ವಾರೆ ವ್ಹಾ... ನಿಮಗೆ ೨೧ನೇ ಶತಮಾನದ ಸರ್ವಜ್ಞ ಅಂತ ಬಿರುದು ನೀಡಬಹುದು!
ಇಷ್ಟಕ್ಕೂ ಏನಿದು ಟ್ವೀಟರ್?...

ಟ್ವೀಟರ್ -ಸದ್ಯ ಜಗತ್ತಿಗೆ ಹುಚ್ಚು ಹಿಡಿಸಿರುವ ಇಂಟರ್‌ನೆಟ್ಟಿನ ಹೊಸ ಸೆನ್‌ಸೇಷನ್. ಜನರು-ಜನರೊಡನೆ ‘ಮಿನಿ-ಸಂದೇಶ’ಗಳನ್ನು ವಿನಿಮಯ ಮಾಡಿಕೊಳ್ಳುವ ಒಂದು ಇಂಟರ್‌ನೆಟ್ ತಾಣ. ಅಂತರ್ಜಾಲದ ಭಾಷೆಯಲ್ಲೇ ಹೇಳುವುದಾದರೆ, ‘ಮೈಕ್ರೋ ಬ್ಲಾಗಿಂಗ್’ ವೆಬ್‌ಸೈಟ್. ಒಬ್ಬರು ಇನ್ನೊಬ್ಬರೊಡನೆ ಅಥವಾ ಲಕ್ಷಾಂತರ ಜನರೊಜನೆ ಸಂಪರ್ಕ ಸಾಧಿಸಿ ಮಾಹಿತಿ ಹಂಚಿಕೊಳ್ಳುವ ಸೋಶಿಯಲ್ ನೆಟ್‌ವರ್ಕ್.

‘ನಾನು ಏನೂ ಮಾಡುತ್ತಿಲ್ಲ’ ಎಂಬ ಅತ್ಯಂತ ಸಿಲ್ಲಿ ಸಂದೇಶದಿಂದ ಹಿಡಿದು ‘ನ್ಯೂಯಾರ್ಕಿನ ಕಟ್ಟಡವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹುಚ್ಚುಚ್ಚಾಗಿ ಗುಂಡುಹಾರಿಸಿ ಹತ್ತಾರು ಜನರನ್ನು ಸಾಯಿಸುತ್ತಿದ್ದಾನೆ’ ಎಂಬ ಬ್ರೇಕಿಂಗ್ ನ್ಯೂಸ್‌ವರೆಗೆ... ಟ್ವೀಟರ್ ಸೈಟಿನಲ್ಲಿ ಕೋಟಿ ಕೋಟಿ ಸಂದೇಶಗಳು ಲಭ್ಯ.

ಟ್ವೀಟರ್ ಒಂದು ಇಂಟರ್‌ನೆಟ್ ತಾಣವಾದರೂ, ಇದಕ್ಕೆ ಮಾಹಿತಿಯನ್ನು ಮೊಬೈಲ್ ಫೋನಿನ ಮೂಲಕವೂ ಕಳಿಸಬಹುದು ಹಾಗೂ ತನಗೆ ಬಂದ ಮಾಹಿತಿಯನ್ನು ಮೊಬೈಲ್ ಫೋನಿನ ಎಸ್‌ಎಂಎಸ್ ರೂಪದಲ್ಲೂ ಪಡೆಯಬಹುದು. ಆದ್ದರಿಂದಲೇ, ಟ್ವೀಟರ್ ಸರ್ವಾಂತರ್ಮಯಿ.

ಇಂಟರ್‌ನೆಟ್ಟಿನಲ್ಲಿ ಇಂತಹ ಮಾಹಿತಿ ಮೊದಲೂ ದೊರೆಯುತ್ತಿತ್ತಲ್ಲ. ಈಗ ಟ್ವೀಟರಿನದೇನು ಮಹಾ?

ಟ್ವೀಟರ್ ಆರಂಭ ಆಗುವುದಕ್ಕಿಂತಲೂ ಮೊದಲೂ, ಇಂಟರ್‌ನೆಟ್‌ಲ್ಲಿ ಇಂತಹ ಮಾಹಿತಿ ದೊರೆಯುತ್ತಿದ್ದವು ಎನ್ನುವುದು ನಿಜ. ಆದರೆ, ಆ ಮಾಹಿತಿ ಟ್ವೀಟರ್ ಸಂದೇಶಗಳಷ್ಟು ‘ಲೈವ್’ (ನೇರ ಪ್ರಸಾರ) ಆಗಿರಲಿಲ್ಲ. ಜಗತ್ತಿನ ಯಾವುದೇ ಮಾಹಿತಿ ವ್ಯವಸ್ಥೆಗಿಂತಲೂ ಟ್ವೀಟರ್ ಹೆಚ್ಚು ಲೈವ್ ಎನ್ನೋದು ವಿಶೇಷ.
...ಒಂದು ಉದಾಹರಣೆ ನೋಡಿ:
ಕೆಲವು ತಿಂಗಳ ಹಿಂದೆ, ನ್ಯೂಯಾರ್ಕಿನ ಹಡ್ಸನ್ ನದಿಯಲ್ಲಿ ವಿಮಾನವೊಂದು ‘ಇಳಿದ’ ವಿಚಾರ ಗೊತ್ತಲ್ಲ. ಆ ಸುದ್ದಿಯನ್ನು ಮೊಟ್ಟ ಮೊದಲು ವಿಶ್ವಕ್ಕೆ ವರದಿ ಮಾಡಿದ್ದು, ಪತ್ರಿಕೆಯಲ್ಲ, ರೇಡಿಯೋ ಅಲ್ಲ, ಟೀವಿಯಲ್ಲ, ಇಂಟರ್‌ನೆಟ್ ಸೈಟುಗಳೂ ಅಲ್ಲ. ಅದೇ ನದಿಯಲ್ಲಿ ದೋಣಿ ವಿಹಾರ ಮಾಡುತ್ತಿದ್ದ ವ್ಯಕ್ತಿಯೊಬ್ಬ, ತನ್ನ ಕಣ್ಣೆದುರೇ ವಿಮಾನ ನದಿಗೆ ಇಳಿಯುತ್ತಿರುವುದನ್ನು ನೋಡಿದ. ಅರರೇ... ಇದೇನಿದು ನದಿಗೆ ವಿಮಾನ ಎಂದು ಅಚ್ಚರಿಗೊಂಡ. ತಕ್ಷಣ ಆ ಸಂದೇಶ ಹಾಗೂ ಚಿತ್ರವನ್ನು ಟ್ವೀಟರ್‌ಗೆ ಕಳಿಸಿದ. ಈ ಸುದ್ದಿಯನ್ನು ಅದೆಷ್ಟೋ ಸಾವಿರ ಜನರು ಟ್ವೀಟರಿನಲ್ಲಿ ನೋಡಿದ ಆನಂತರವಷ್ಟೇ, ರೇಡಿಯೋ, ಟೀವಿಗಳಲ್ಲಿ ಈ ಸುದ್ದಿ ಪ್ರಸಾರವಾಯಿತು. ಅದೇ ರೀತಿ, ಮುಂಬೈ ಮೇಲಿನ ಉಗ್ರರ ದಾಳಿ ಕೂಡ ಟ್ವೀಟರಿನ ಮೂಲಕ ಜಗತ್ತನ್ನು ತ್ವರಿತವಾಗಿ ತಲುಪಿತು.

ಅಂದರೆ ಇದೊಂದು ಸುದ್ದಿ ಮಾಧ್ಯಮವೇ?

ಇದನ್ನು ಖಂಡಿತ ಸುದ್ದಿ ಮಾಧ್ಯಮ ಎಂದು ಕರೆಯಬಹುದು. ಆದರೆ, ಇದು ಜನಿಸಿದಾಗ ಇದೊಂದು ಸುದ್ದಿ ಮಾಧ್ಯಮವಾಗಬಹುದು, ಕೋಟ್ಯಂತರ ಜನ ಈ ಸೇವೆಗೆ ಮುಗಿ ಬೀಳಬಹುದು ಎಂಬ ಕಲ್ಪನೆ ಇರಲಿಲ್ಲ.

ವ್ಯಕ್ತಿಯೊಬ್ಬ, ತನ್ನ ಕಚೇರಿಯಿಂದ, ಕಾರಿಂದ, ಸ್ವದೇಶದಿಂದ, ವಿದೇಶದಿಂದ, ಕಂಪ್ಯೂಟರಿಂದ, ಮೊಬೈಲ್ ಫೋನಿಂದ ಎಲ್ಲೆಂದರಲ್ಲಿಂದ ತನ್ನ ಹಾಲಿ ಸ್ಥಿತಿಯನ್ನು ಮಿತ್ರರಿಗೆ ತಿಳಿಸಲು ಅವಕಾಶ ಕಲ್ಪಿಸುವುದಷ್ಟೇ ಟ್ವೀಟರಿನ ಉದ್ದೇಶವಾಗಿತ್ತು. ‘ನಾನು ಈ ಕ್ಷಣದಲ್ಲಿ ಏನು ಮಾಡುತ್ತಿದ್ದೇನೆ? ಎಲ್ಲಿದ್ದೇನೆ? ಏನು ಚಿಂತಿಸುತ್ತಿದ್ದೇನೆ?’ -ಎಂಬ ಪುಟಾಣಿ ಮಾಹಿತಿಯನ್ನು ಗೆಳೆಯರ ಬಳಿ ಹಂಚಿಕೊಳ್ಳಲು ವೇದಿಕೆ ನೀಡುವುದಷ್ಟೇ ಟ್ವೀಟರಿನ ಯೋಜನೆಯಾಗಿತ್ತು. ಆದರೆ, ಇಂದು ಬಳಕೆದಾರರು, ತಾವೇ, ಹಲವಾರು ಉಪಯೋಗಗಳನ್ನು ಕಂಡುಕೊಂಡಿದ್ದಾರೆ.

ಟ್ವೀಟರಿನ ಉಪಯೋಗವೇನು?

೧. ಒಬಾಮಾ ಮಾದರಿ : ಅಮೆರಿಕ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ಲಕ್ಷಾಂತರ ಯುವಕರ ಸೇನೆ ಕಟ್ಟಲು, ಅವರೊಡನೆ ಸದಾ ಸಂಪರ್ಕದಲ್ಲಿರಲು, ಬರಾಕ್ ಒಬಾಮಾ ಈ ಸೇವೆ ಬಳಸಿಕೊಂಡಾಗಿನಿಂದ ‘ಟ್ವೀಟರ್’ ಅಮೆರಿಕದಲ್ಲಿ ಮಾತ್ರವಲ್ಲ ಜಗತ್ತಿನ ಇತರೆಡೆಯೂ ಪ್ರಸಿದ್ಧವಾಗಿದೆ. ಅಂದರೆ, ಜನನಾಯಕನೊಬ್ಬ ತನ್ನ ಬೆಂಬಲಿಗರನ್ನು ಒಟ್ಟುಗೂಡಿಸಲು ಹಾಗೂ ಅವರೊಡನೆ ಸಂಪರ್ಕದಲ್ಲಿರಲು ಟ್ವೀಟರ್ ಉಪಯೋಗವಾಗುತ್ತಿದೆ. ಒಬಾಮಾ, ಈಗ ಅಧ್ಯಕ್ಷರಾದ ಮೇಲೂ ಟ್ವೀಟರನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಅವರ ಸಂದೇಶ ಪಡೆಯಲು, ಅವರೊಡನೆ ಸಂಪರ್ಕದಲ್ಲಿ ಇರಲು ೭ ಲಕ್ಷ ಜನ ಸದಸ್ಯರಾಗಿದ್ದಾರೆ.
ಮೊನ್ನೆ ಮೊನ್ನೆ, ಕರ್ನಾಟಕದಲ್ಲಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ರಾಜ್ಯ ಬಿಜೆಪಿ ಘಟಕದವರು, ಟ್ವೀಟರ್ ಬಳಕೆ ಆರಂಭಿಸಿದ್ದಾರೆ. ಇದಕ್ಕಿನ್ನೂ ಹೆಚ್ಚು ಸದಸ್ಯರಿಲ್ಲ ಎನ್ನಿ. ಸಿನಿಮಾ ತಾರೆಯರು, ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಟ್ವೀಟರ್‌ಗಿಂತ ಉತ್ತಮ ಮಾರ್ಗ ಬೇರೊಂದಿಲ್ಲ.

೨. ಪತ್ರಿಕೆಗಳ ಮಾದರಿ : ಪತ್ರಿಕೆ, ಟೀವಿ ಚಾನಲ್‌ಗಳು ಹಾಗೂ ಇಂಟರ್‌ನೆಟ್ ಸೈಟುಗಳು ಬ್ರೆಕಿಂಗ್ ಸುದ್ದಿಗಳನ್ನು ಟ್ವೀಟರ್ ಮೂಲಕ ನೀಡಲು ಆರಂಭಿಸಿವೆ. ಓದುಗರು ಈ ಸುದ್ದಿಯನ್ನು ಇಂಟರ್‌ನೆಟ್ ಮೂಲಕ ಅಥವಾ ಮೊಬೈಲ್ ಫೋನ್ ಮೂಲಕ ಉಚಿತವಾಗಿ ಪಡೆಯಬಹುದು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಉಚಿತ ಟ್ವೀಟರ್ ಸೇವೆಗೆ ೪.೫ ಲಕ್ಷ ಚಂದಾದಾರರಿದ್ದಾರೆ. ಅದೇ ರೀತಿ, ಭಾರತದಲ್ಲಿ ಸಿಎನ್‌ಎನ್ ಐಬಿಎನ್, ಡಿಎನ್‌ಎ, ಇಂಡಿಯಾ ಟುಡೇಯಂಥ ಅನೇಕ ಪತ್ರಿಕೆಗಳು ಟ್ವೀಟರ್ ಸೇವೆ ಆರಂಭಿಸಿವೆ. ಅಲ್ಲದೇ, ಅನೇಕ ಪತ್ರಿಕೆಗಳು ಹಾಗೂ ಚಾನೆಲ್‌ಗಳು ಟ್ವೀಟರಿನ ಮೂಲಕ ಸಿಗುವ ಮಾಹಿತಿಯನ್ನು ತಮ್ಮ ವರದಿಗೆ ಪೂರಕವಾಗಿ ಬಳಸಿಕೊಳ್ಳುತ್ತಿವೆ.

೩. ಕಂಪನಿ ಗ್ರಾಹಕ ಸಂಪರ್ಕ ಮಾದರಿ : ಒಂದು ಕಂಪನಿ, ತನ್ನ ಗ್ರಾಹಕರೊಡನೆ ಸಂಪರ್ಕದಲ್ಲಿರಲು ಟ್ವೀಟರನ್ನು ಬಳಸಿಕೊಳ್ಳುತ್ತಿದೆ. ಉದಾಹರಣೆಗೆ ಗ್ರಾಹಕರು ಟ್ವೀಟರ್ ಮೂಲಕ ನೋಕಿಯಾ ಕಂಪನಿಯನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಅಥವಾ ಮಾಹಿತಿ ತರಿಸಿಕೊಳ್ಳಬಹುದು. ಗೂಗಲ್ ಕಂಪನಿಯ ಟ್ವೀಟರ್ ಸೇವೆಗೆ ೩-೪ ಲಕ್ಷ ಜನ ಸದಸ್ಯರಿದ್ದಾರೆ.

೪. ಸುಮ್ಮನೆ ಹರಟೆ ಮಾದರಿ : ಇದಲ್ಲದೇ, ಶೇ.೭೦ರಷ್ಟು ಜನ, ಟ್ವೀಟರನ್ನು ಚಾಟ್ ರೂಮಿನಂತೆ ಸುಮ್ ಸುಮ್‌ನೇ ಹರಟೆಗೆ ಬಳಸಿಕೊಳ್ಳುತ್ತಾರೆ.

೫. ಮಾಹಿತಿ ಕೇಳುವ ಮಾದರಿ : ಲಂಡನ್‌ನಲ್ಲಿ ಲುಂಗಿ ಉಡುವವರು ಇದ್ದಾರಾ ಎಂಬ ಸಿಲ್ಲಿ ಪ್ರಶ್ನೆಯಿಂದ ಹಿಡಿದು ಅತ್ಯುತ್ತಮ ವಾಷಿಂಗ್ ಮಷಿನ್ ಯಾವುದು ಎಂಬ ಗ್ರಾಹಕ ಪ್ರಶ್ನೆಯ ತನಕ ಯಾವ ಪ್ರಶ್ನೆಯನ್ನು ಬೇಕಾದರೂ ಟ್ವೀಟರ್ ಮೂಲಕ ಕೇಳಬಹುದು. ನಿಮ್ಮ ಪ್ರಶ್ನೆ ನೋಡುವ ಟ್ವೀಟಿಗರು ಉತ್ತರ ನೀಡುತ್ತಾರೆ.

ನಾವೂ ಟ್ವೀಟರ್ ಬಳಸಬೇಕೆಂದರೆ... ಹೇಗೆ? ಎಲ್ಲಿ?

ಮೊದಲು http://www.twitter.com/ ಸೈಟಿಗೆ ಹೋಗಿ. ಅಲ್ಲಿ ಹೊಸ ಸದಸ್ಯರಾಗಿ. ನಿಮ್ಮದೊಂದು ಟ್ವೀಟರ್ ಪುಟ ತಯಾರಾಗುತ್ತದೆ. ಇಲ್ಲಿ ನೀವು ಟ್ವೀಟರ್ ಸಂದೇಶ ಬರೆದರೆ, ಅವು ಒಂದರ ಕೆಳಗೆ ಒಂದರಂತೆ ದಾಖಲಾಗುತ್ತಾ ಹೋಗುತ್ತವೆ. ಹಾಗೂ ನಿಮ್ಮ ಮಿತ್ರರ ಸಂದೇಶಗಳೂ ಇಲ್ಲಿ ಕಾಣಿಸುತ್ತವೆ. ನೀವಿಲ್ಲಿ, ಹೊಸ ಹೊಸ ಮಿತ್ರರನ್ನು ಹುಡುಕಿಕೊಳ್ಳಬಹುದು. ಅವರ ಸಂದೇಶಗಳನ್ನು ನೀವು ಪಡೆಯಬಹುದು ಅಥವಾ ಇತರರು ನಿಮ್ಮ ಸಂದೇಶಗಳಿಗೆ ಚಂದಾದಾರರಾಗಬಹುದು.



ಇದು ಪುಗಸಟ್ಟೆ ಸೇವೆ. ನಿಮಗೆ ಈ ಮೇಲ್ ವಿಳಾಸ ಇದ್ದರೆ ಸಾಕು. ಫಾರಂ ತುಂಬಿದ ೨ ನಿಮಿಷದ ಒಳಗಾಗಿ ನೀವು ಟ್ವೀಟರ್ ಬಳಸಲು ಆರಂಭಿಸಬಹುದು. ನಿಮ್ಮ ಮೊಬೈಲ್ ಫೋನಿನ ಮೂಲಕವೂ ನೀವು ಟ್ವೀಟರ್ ಬಳಸಬಹುದು. ಮೊಬೈಲ್ ಬಳಸಿದರೆ, ಮೊಬೈಲ್ ಸೇವಾ ಕಂಪನಿಯ ಶುಲ್ಕವನ್ನು ಮಾತ್ರ ನೀವು ತೆರಬೇಕಾಗುತ್ತದೆ.

ಆದರೆ, ನೆನಪಿರಲಿ. ಟ್ವೀಟರ್ ಸಂದೇಶ ಚಿಕ್ಕದಾಗಿರಬೇಕು. ಈ ಸಂದೇಶದಲ್ಲಿ ೧೪೦ ಅಕ್ಷರಗಳು ಮಾತ್ರ ಇರಬಹುದು. ಆದ್ದರಿಂದ ಗಾತ್ರದಲ್ಲಿ ಚಿಕ್ಕದಾದ ಟ್ವೀಟರ್ ಸಂದೇಶವನ್ನು ಇಂಟರ್‌ನೆಟ್ಟಿನ ಎಸ್‌ಎಂಎಸ್ ರೂಪ ಅಂತ ಬೇಕಾದರೂ ಬಣ್ಣಿಸಬಹುದು.
ಟ್ವೀಟರಿನ ಒಂದು ಸಂದೇಶಕ್ಕೆ ‘ಟ್ವೀಟ್’ ಎಂದು ಹೆಸರು. ಟ್ವೀಟರ್ ಸಂದೇಶ ಕಳಿಸುವ ಕ್ರಿಯೆಗೆ ‘ಟ್ವೀಟಿಂಗ್’, ‘ಟ್ವೀಟ್ ಮಾಡುವುದು’ ಎಂದು ಹೇಳುತ್ತಾರೆ.

ಇದೆಲ್ಲಾ ಕೇಳಿದ ಮೇಲೆ, ಟ್ವೀಟರಿನಲ್ಲಿ ಅದ್ಭುತವೇನೂ ಇಲ್ಲ. ಈಮೇಲ್, ಬ್ಲಾಗಿಂಗ್ ಥರ ಇದಿನ್ನೊಂದು ಇಂಟರ್‌ನೆಟ್ ಸೇವೆ ಅಷ್ಟೇ, ಅನ್ನಿಸುತ್ತದೆ. ಆದರೆ, ಯಾಕೆ ಜಗತ್ತಿಗೆ ಟ್ವೀಟರಿನ ಹುಚ್ಚು ಹಿಡಿದಿದೆ?

ಅದೇ ಯಾರಿಗೂ ಅರ್ಥವಾಗುತ್ತಿಲ್ಲ. ಟ್ವೀಟರ್ ಕಂಪನಿಯ ಸ್ಥಾಪಕರಿಗೂ ತಮ್ಮ ಕಂಪನಿ ಇಷ್ಟು ಪ್ರಮಾಣದಲ್ಲಿ ಬೆಳೆಯುತ್ತದೆ ಎಂದು ಗೊತ್ತಿರಲಿಲ್ಲ. ಕೇವಲ ೨ ವರ್ಷದಲ್ಲಿ ಟ್ವೀಟರಿಗೆ ೭೦-೮೦ ಲಕ್ಷ ಸದಸ್ಯರಾಗಿಬಿಟ್ಟಿದ್ದಾರೆ. ಎರಡು ವರ್ಷದಲ್ಲಿ ಕಂಪನಿ ಶೇ.೧೪೦೦ರಷ್ಟು ಬೆಳವಣಿಗೆ ಸಾಧಿಸಿದೆ. ಇಷ್ಟು ಕಡಿಮೆ ಅವಧಿಯಲ್ಲಿ, ಇಷ್ಟು ವೇಗದಲ್ಲಿ ಜನಪ್ರಿಯವಾದ ಇಂಟರ್‌ನೆಟ್ ಸೇವೆ ಬೇರೊಂದಿಲ್ಲ.
ಟ್ವೀಟರ್ ಯಶಸ್ಸಿನ ನಂತರ ಅಂತಹ ಇನ್ನೂ ಅನೇಕ ಮೈಕ್ರೋ ಬ್ಲಾಗಿಂಗ್ ಸೇವೆ ಆರಂಭವಾದವು. ಆದರೆ, ಯಾವುದೂ ಟ್ವೀಟರಂತೆ ಜನಪ್ರಿಯವಾಗಿಲ್ಲ. (ಚೀನಾದಲ್ಲಿ ಮಾತ್ರ ಅಸಲಿ ಟ್ವೀಟರ್‌ಗಿಂತ ಮೇಡ್-ಇನ್-ಚೈನಾ ಟ್ವೀಟರ್ರ್‍ಏ ಜನಪ್ರಿಯ. ಇದು ಅವರ ದೇಶಪ್ರೇಮಕ್ಕೆ ಸಾಕ್ಷಿ.)

ವಿಚಿತ್ರವೆಂದರೆ, ಟ್ವೀಟರಿಗೆ ಸದ್ಯ ಒಂದು ನಯಾಪೈಸೆ ಆದಾಯವೂ ಇಲ್ಲ. ಪ್ರತಿ ವರ್ಷ ಕೋಟ್ಯಂತರ ಡಾಲರ್ ಖರ್ಚಾಗುತ್ತಿದೆ. ಟ್ವೀಟರ್ ಇನ್ನು ಮುಂದಾದರೂ ಹೇಗೆ ಲಾಭ ಮಾಡುತ್ತದೆ ಎಂದು ಯಾರಿಗೂ ಅರ್ಥವಾಗುತ್ತಿಲ್ಲ.

ಈ ನಡುವೆ, ಜನಪ್ರಿಯತೆ ನೋಡಿ, ೫೦ ಕೋಟಿ ಡಾಲರಿಗೆ ಟ್ವೀಟರನ್ನು ಕೊಳ್ಳಲು ಫೇಸ್‌ಬುಕ್ ಕಂಪನಿ ಮುಂದಾಯಿತು. ಆದರೆ, ಟ್ವೀಟರ್ ಒಪ್ಪಲಿಲ್ಲ. ಬ್ಲಾಗರ್, ಗೂಗಲ್ ಅರ್ಥ್ (ಕೀಹೋಲ್), ಪಿಕಾಸಾ ಮುಂತಾದ ಕಂಪನಿಗಳನ್ನು ಈಗಾಗಲೇ ಗುಳುಂ ಮಾಡಿರುವ ದೈತ್ಯ ಕಂಪನಿ ಗೂಗಲ್, ಈಗ ಟ್ವೀಟರನ್ನು ಕೊಳ್ಳಲು ಆಸೆಪಟ್ಟಿದೆಯೆಂಬ ಸುದ್ದಿಯಿದೆ. ಆದರೆ, ಕಂಪನಿಯನ್ನು ಮಾರಲು ಟ್ವೀಟರ್ ಇನ್ನೂ ಮನಸ್ಸು ಮಾಡಿಲ್ಲ. ಆ ಬ್ರೇಕಿಂಗ್ ನ್ಯೂಸ್ ಬೇಕೆಂದರೆ ಟ್ವೀಟರಿಗೆ ಸದಸ್ಯರಾಗಿ.
ಹ್ಯಾಪಿ ಟ್ವೀಟಿಂಗ್.

Follow Me on www.Twitter.com/RaviHegde

Wednesday, April 08, 2009

ಗೂಗಲ್ ಮತ್ತು ಪತ್ರಿಕೆಗಳ ನಡುವೆ ಯುದ್ಧಾರಂಭ

ಹೀಗಾಗುತ್ತೆ ಅಂತ ನನಗೆ ಅನಿಸಿತ್ತು. ಒಂದಲ್ಲಾ ಒಂದು ದಿನ ಪತ್ರಿಕೆಗಳು ಹಾಗೂ ಗೂಗಲ್ ನಡುವೆ ಯುದ್ಧವಾಗುತ್ತದೆ ಅಂತ ನನಗೆ ಯಾಕೋ ತೀವ್ರ ಅನುಮಾನ ಶುರುವಾಗಿತ್ತು. ಅದೀಗ ನಿಜವಾಗಿದೆ. ಗೂಗಲ್ ಹಾಗೂ ಅಮೆರಿಕದ ಪತ್ರಿಕೆಗಳ ನಡುವೆ ಕಳೆದ 3-4 ವರ್ಷಗಳಿಂದ ಶೀತಲ ಸಮರ ನಡೆಯುತ್ತಿತ್ತು. ಆದರೆ, ಗೂಗಲ್, ಅಮೆರಿಕದಲ್ಲಿ, ಕಳೆದ ವಾರದಿಂದ ತನ್ನ ನ್ಯೂಸ್ ಸೈಟಿನಲ್ಲಿ ಜಾಹೀರಾತು ಪ್ರಕಟಿಸಲು ಶುರು ಮಾಡಿದ್ದೇ ತಡ, ಬಹಿರಂಗ ಸಮರ ಆರಂಭವಾಗಿದೆ.

1. ವಿಶ್ವದ ಮಾಧ್ಯಮ ಸಾಮ್ರಾಟ ರೂಪರ್ಟ್ ಮರ್ಡೋಕ್, ಕಳೆದ ವಾರ, ಗೂಗಲ್ ವಿರುದ್ಧ ಕೆಂಡ ಕಾರಿದ್ದ. "ಅಂತರ್ಜಾಲದ ಸುದ್ದಿ ಓದುಗರು ಇನ್ನು ದುಡ್ಡು ಕೊಡಬೇಕು. ಗೂಗಲ್ಲಿನಂಥ ಪರಾವಲಂಬಿಗಳು ಪುಗಸಟ್ಟೆ ನಮ್ಮ ಶ್ರಮವನ್ನು ಬಳಸಿಕೊಂಡು ತಾವು ಲಾಭ ಮಾಡಿಕೊಳ್ಳಲು ಅನುವು ಮಾಡಿಕೊಡಬಾರದು. ಅಮೆರಿಕದ ಪತ್ರಿಕೆಗಳೆಲ್ಲ ಧೈರ್ಯ ಮಾಡಬೇಕು. ಮಾಧ್ಯಮಗಳ ಸುದ್ದಿ ಕದಿಯದಂತೆ ಗೂಗಲ್ಲಿಗೆ ಕಡಿವಾಣ ಹಾಕಬೇಕು." ಎಂದು ಆತ ಕಟುವಾಗೇ ಅಬ್ಬರಿಸಿದ್ದ.

"ಗೂಗಲ್ ನ್ಯೂಸ್ ಜೀವಿಸಿರುವುದೇ ನಮ್ಮಂಥ ಪತ್ರಿಕೆಗಳಿಂದ. ಆದರೆ, ಇಂದು ಗೂಗಲ್ ಎಷ್ಟು ದೊಡ್ಡ ರಾಕ್ಷಸ ಆಗಿದೆ ಎಂದರೆ, ಪತ್ರಿಕೆಗಳನ್ನೇ ನುಂಗಿಹಾಕುತ್ತಿದೆ. ಈಗಾಗಲೂ, ಪತ್ರಿಕೆಗಳು ಒಗ್ಗಟ್ಟಾಗಿ ಗೂಗಲ್ಲನ್ನು ಎದುರಿಸಬೇಕು." ಎಂದು ಆತ ಕರೆ ಕೊಟ್ಟಿದ್ದ.

"ಗೂಗಲ್ ನ್ಯೂಸ್ ತನ್ನ ಸರ್ಚ್ ಲಿಂಕ್ ಮೂಲಕ ನಮ್ಮ ಅಂತರ್ಜಾಲ ಸುದ್ದಿ ತಾಣಕ್ಕೆ ಓದುಗರನ್ನು ಕಳಿಸುತ್ತದೆ ನಿಜ. ಆದರೆ, ಆ ಓದುಗರು ನಮ್ಮ ತಾಣಕ್ಕೆ ಹೊರೆಯಾಗುತ್ತರೆಯೇ ಹೊರತು ಅವರಿಂದ ನಯಾ ಪೈಸೆ ಲಾಭವಿಲ್ಲ."

If a user can’t find the content that’s most relevant to them from a search engine, that search engine is useless. Relevance is everything – and that works both ways. Taking their content out of Google would hurt a newspaper (unless they’re making nothing from the page view), but it would hurt Google too.

"ನೆನಪಿರಲಿ, ನಮಗೆ ಗೂಗಲ್ ಎಷ್ಟು ಅನಿವಾರ್ಯ ಎಂದು ಅನಿಸುತ್ತಿದೆಯೋ ಗೂಗಲ್ಲಿಗೂ ನಾವು ಅಷ್ಟೇ ಅನಿವಾರ್ಯ. ನಮ್ಮಂಥವರ ವಿಶ್ವಾಸಾರ್ಹ ಕಾಂಟೆಂಟ್ ಇಲ್ಲದಿದ್ದರೆ ಗೂಗಲ್ ನ್ಯೂಸ್ ಸೈಟಿಗೂ ಜನಹೋಗುವುದಿಲ್ಲ. ಚಿಲ್ಲರೆ ಸೈಟುಗಳ ಸುದ್ದಿಯಿಂದ ಗೂಗಲ್ ನ್ಯೂಸ್ ನಡೆಯುವುದಿಲ್ಲ. ಆದ್ದರಿಂದ, ಅಮೆರಿಕದ ಪತ್ರಿಕೆಗಳು ಗೂಗಲ್ಲನ್ನು ಎದುರಿಸಲು ಇದು ಸಕಾಲ" ಎಂದು ಮರ್ಡೋಕ್ ಯುದ್ಧದ ಪಾಂಚಜನ್ಯ ಮೊಳಗಿಸಿದ್ದಾನೆ.

2. ಮಂಗಳವಾರ ಗೂಗಲ್ ಮೇಲೆ ಇನ್ನೊಂದು ನೇರ ಆಕ್ರಮಣ. ಈಗ ಅಮೆರಿಕದ ಅತಿ ದೊಡ್ಡ ಸುದ್ದಿ ಸಂಸ್ಥೆ AP - ಅಸೋಸಿಯೇಟೆಡ್ ಪ್ರೆಸ್ಸಿಂದ.

ಈ ಸಂಸ್ಥೆ ಪತ್ರಿಕಾ ಹೇಳಿಕೆ ನೀಡಿ ತನ್ನ ಇಂಟರ್ನೆಟ್ ಕಾಂಟೆಂಟಿನ ಹಕ್ಕು ಸ್ವಾಮ್ಯ ರಕ್ಷಣೆಗೆ ಏನು ಬೇಕೋ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುವುದಾಗಿ ತಿಳಿಸಿದೆ. ಹೇಳಿಕೆಯಲ್ಲಿ ಗೂಗಲ್ಲನ್ನು ನೇರವಾಗಿ ಹೆಸರಿಸಿಲ್ಲ. ಆದರೆ, ಅಂಥ ನ್ಯೂಸ್ ಅಗ್ರಿಗೇಟರುಗಳು, ಪುಗಸಟ್ಟೆಯಾಗಿ ತಮ್ಮ ಸುದ್ದಿಯನ್ನು ಬಳಸಿಕೊಳ್ಳುವುದನ್ನು ತಡೆಯುವುದಾಗಿ ಹೇಳಿದೆ. ತನ್ನ ಪ್ರಯತ್ನದಲ್ಲಿ ಪಾಲ್ಗೊಳ್ಳಲು ಇತರ ಪತ್ರಿಕೆಗಳೂ ಮುಂದಾಗಬೇಕು ಎಂದು ಎಪಿ ಕರೆ ನೀಡಿದೆ.

The board also unanimously agreed to work with portals and other partners who legally license our content and who reward the cooperative for its vast newsgathering efforts — and to seek legal and legislative remedies against those who don't. We believe all of your newspapers will join our battle to protect our content and receive appropriate compensation for it.

(ಪತ್ರಿಕಾ ಪ್ರಕಟಣೆ ಇಲ್ಲಿದೆ.)

3. ಇತ್ತ, ಗೂಗಲ್ ಸುಮ್ಮನೆ ಕುಳಿತಿಲ್ಲ. ಎಪಿ ಹೇಳಿಕೆಗೆ ತೀಕ್ಷ್ಣವಾಗಿ ಮರು ಹೇಳಿಕೆ ನೀಡಿದೆ. "ನಾವು ಕಾಪಿರೈಟ್ ಉಲ್ಲಂಘಿಸುತ್ತಿಲ್ಲ. ಅಮೆರಿಕದ ಕಾಪಿರೈಟ್ ಕಾನೂನಿನ ಪ್ರಕಾರ, ಯಾವುದೇ ಸುದ್ದಿಯ ತುಣುಕನ್ನು ಹಾಗೂ ಲಿಂಕನ್ನು ಪ್ರಕಟಿಸಲು ಗೂಗಲ್ಲಿಗೆ ಅವಕಾಶವಿದೆ. ಇದನ್ನು ತಡೆಯುವ ವಿಟೋ ಹಕ್ಕು ಮಾಧ್ಯಮಗಳಿಗೆ ಇಲ್ಲ. ಆದರೂ, ಅಮೆರಿಕದ ಯಾವುದೇ ಪತ್ರಿಕೆಯೂ ತನ್ನ ಕಾಂಟೆಂಟನ್ನು ಗೂಗಲ್ಲಿನಿಂದ ತೆಗೆದುಹಾಕಬಹುದಾದ ಅವಕಾಶವನ್ನು ನಾವು ಕಲ್ಪಿಸಿದ್ದೇವೆ. ಸುಮ್ಮನೇ, robot.txt ಬಳಸಿದರೆ ಸಾಕು. ನಾವು ಅಂತಹ ಪತ್ರಿಕೆಯ ತಂಟೆಗೆ ಹೋಗುವುದಿಲ್ಲ." ಎಂದು ಗೂಗಲ್ ತನ್ನ ಎದುರಾಳಿಗಳನ್ನು ಚಿವುಟಿದೆ. (ಯೂ ಕ್ಯಾನ್ ಗೆಟ್ ಔಟ್. ವಿ ಡೋಂಟ್ ಕೇರ್ ಎಂಬ ವಾಕ್ಯ ಮಾತ್ರ ಇಲ್ಲ.)

"ಈಗ ನೀವೇನೂ ಮಾಡಲಾಗುವುದಿಲ್ಲ. ಏಕೆಂದರೆ ಟಿಕೆಟ್ಸ್ ಆರ್ ಸೋಲ್ಡ್ ಔಟ್ !" - ಎಂಬ ಪರೋಕ್ಷ ಉದಾಹರಣೆಯ ಮೂಲಕ "ದೊಡ್ಡ ಪತ್ರಿಕೆಗಳು ಹಾಗೂ ದೊಡ್ಡ ಸುದ್ದಿಸಂಸ್ಥೆಗಳು ಇಲ್ಲದಿದ್ದರೆ ನಾವು ಸ್ಥಳೀಯ ಪತ್ರಿಕೆಗಳು ಹಾಗೂ ಸ್ಥಳೀಯ ಸುದ್ದಿ ಮೂಲಗಳನ್ನು ಬಳಸಿಕೊಳ್ಳುತ್ತೇವೆ ಎಂಬ ಇಂಗಿತವನ್ನು ಗೂಗಲ್ ವ್ಯಕ್ತಪಡಿಸಿದೆ. (ಯಥಾ ಪ್ರತಿ ಇಲ್ಲಿ ನೋಡಿ)

4. ಅಮೆರಿಕದ ಎಲ್ಲ ಪತ್ರಿಕೆಗಳು ಹಾಗೂ ಸುದ್ದಿ ಸಂಸ್ಥೆಗಳು ಒಂದಾದರೆ ಗೂಗಲ್ ನ್ಯೂಸನ್ನು ಮಣಿಸುವುದು ಹಾಗೂ ಮುದ್ರಣ ಮಾಧ್ಯವನ್ನು ಸಾಯದಂತೆ ತಡೆಯುವುದು ಕಷ್ಟವೇನಲ್ಲ. ಆದರೆ, ಅಂತಹ ಒಗ್ಗಟ್ಟು ಅಮೆರಿಕದಂಥ ದೇಶದಲ್ಲಿ ಬರುವುದು ಕಷ್ಟ. ಏಕೆಂದರೆ, ಅದೊಂದು ಕ್ಯಾಪಿಟಲಿಸ್ಟಿಕ್ ಇಕಾನಮಿಯ ದೇಶ. ಆ ಆರ್ಥಿಕ ಪದ್ಧತಿಯಲ್ಲಿ ಒಂದು ಮೀನನ್ನು ಇನ್ನೊಂದು ಮೀನು ತಿಂದು ಬದುಕುತ್ತಿರುತ್ತದೆ. ಹಾಗಾಗಿ, 10 ಪತ್ರಿಕೆಗಳು ಗೂಗಲ್ಲಿನಿಂದ ಹೊರ ಹೋದರೆ, ಆ ಸ್ಥಾನವನ್ನು ಇನ್ನು 10 ಪತ್ರಿಕೆಗಳು ಆಕ್ರಮಿಸಿಕೊಳ್ಳಲು ಗೂಗಲ್ ಜೊತೆ ಕೈಜೋಡಿಸುತ್ತವೆ. ರೂಪರ್ಟ್ ಮರ್ಡೋಕ್ ಹಾಗೂ ಎಪಿಗೆ ಗೂಗಲ್ ಹೇಳಿದ್ದು ಇದನ್ನೇ - ನೀವು ಬೇಕಾದರೆ ಗೂಗಲ್ ಬಿಟ್ಟು ತೊಲಗಿ. ನಮಗೆ ಇನ್ನೂ ಬೇಕಾದಷ್ಟು ಪತ್ರಿಕೆ ಹಾಗೂ ಸುದ್ದಿ ಮೂಲಗಳು ಇವೆ - ಅಂತ.

ಈ ಸಮರ ಎಲ್ಲಿಗೆ ಹೋಗಿ ಮಟ್ಟುತ್ತದೆ?

ಪ್ರಕರಣ ಅಮೆರಿಕದ ಸುಪ್ರೀಂ ಕೋರ್ಟಿಗೆ ಹೋಗುತ್ತದೆ. ನ್ಯೂಯಾರ್ಕ್ ಟೈಮ್ಸಿನಂಥ ಪತ್ರಿಕೆಗೆ ಅಲ್ಲಿ ಸೋಲಾಗುತ್ತದೆ. ಆ ಪತ್ರಿಕೆ ಇಂಟರ್ನೆಟ್ ಆವೃತ್ತಿಯನ್ನೇ ಸ್ಥಗಿತಗೊಳಿಸುತ್ತದೆ. ಗೂಗಲ್ ಇನ್ನೂ ಬಲಗೊಂಡು EPICಎಂಬ ಸೇವೆ ಆರಂಭಿಸುತ್ತದೆ.... ಇದನ್ನೆಲ್ಲಾ ಭವಿಷ್ಯ ಹೇಳಿರುವ ಹಳೆಯ ಇಂಟರ್ನೆಟ್ ವಿಡಿಯೋ ಒಂದು ನೆನಪಾಗುತ್ತಿದೆ. Future of Media - Googlezon / EPIC 2015 ಎಂಬ 10 ನಿಮಿಷದ ವಿಡಿಯೋ ಅದು. ಮುಂದೇನಾಗಬಹುದು ಎಂಬುದನ್ನು ಕಲ್ಪನೆ ಮಾಡಿಕೊಂಡು 2004ರಲ್ಲೇ ಸಿದ್ಧಗೊಳಿಸಿದ (EPIC 2014) ಅದ್ಭುತ ವಿಡಿಯೋ. 2007ರಲ್ಲಿ ಅಪ್ಡೇಟ್ ಆಗಿದೆ. ಅಕ್ಷರಃ ಭವಿಷ್ಯ ನಿಜ ಆಗುತ್ತೆ ಅಂತಲ್ಲ. ಆದರೆ, ಸದ್ಯ ಅಮೆರಿಕದ ಪತ್ರಿಕೋದ್ಯಮ ಘಟನೆಗಳು ಅದರ ದಿಕ್ಕಿನಲ್ಲೇ ಸಾಗುತ್ತಿದೆ ಅನ್ನುವುದಂತೂ ನಿಜ. ಪತ್ರಿಕೋದ್ಯಮದಲ್ಲಿ ಇರುವ ನಾವು ನೋಡಲೇಬೇಕಾದ ವಿಡಿಯೋ ಇದು. (ನಿಮಗೆ ಯೂಟ್ಯೂಬ್ ನಿಷೇಧವಿದ್ದರೆ ಈ ಲಿಂಕ್ ನೋಡಿ)

Monday, April 06, 2009

ಬ್ರೇಕಿಂಗ್ ನ್ಯೂಸ್: ಭಾರತ ಚುನಾವಣೆ 2009ಗೆ ಗೂಗಲ್ ಸೈಟ್



ಈಗ ನಡೆಯುತ್ತಿರುವ ಭಾರತ ಲೋಕಸಭಾ ಚುನಾವಣೆಗಾಗಿ, ಗೂಗಲ್ ಇಂಡಿಯಾ, ಕೆಲವೇ ಗಂಟೆಗಳ ಹಿಂದೆ, ವಿಶೇಷ ಇಂಟರ್ನೆಟ್ ಸೈಟೊಂದನ್ನು ಆರಂಭಿಸಿದೆ. http://www.google.co.in/loksabha2009

ಇದರಲ್ಲಿ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಮಾಹಿತಿ ಹಾಗೂ 6 ಚುನಾವಣಾ ಟೂಲ್ ಇವೆ.
1. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸುವುದು
2. ಮತಗಟ್ಟೆ ಎಲ್ಲಿದೆ ಎಂದು ತಿಳಿಯುವುದು
3. ಗೂಗಲ್ ನಕಾಶೆಯಲ್ಲಿ ಲೋಕಸಭಾ ಕ್ಷೇತ್ರ ದರ್ಶನ
4. ಈ ಚುನಾವಣೆ ಸಂಬಂಧಿತ ಸುದ್ದಿ, ಬ್ಲಾಗ್, ವಿಡಿಯೋ ಹಾಗೂ ಹೇಳಿಕೆಗಳನ್ನು ಓದಲು, ನೋಡಲು ಅವಕಾಶ
5. ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿತ ವಿವಿಧ ಅಂಕಿ ಅಂಶಗಳನ್ನು ನೋಡುವುದು
6. ಈ ವರ್ಷದ ಅಭ್ಯರ್ಥಿಗಳು ಹಾಗೂ ಹಾಲಿ ಎಂಪಿಗಳ ಕುರಿತು ಮಾಹಿತಿ ಮತ್ತು ಹಿನ್ನೆಲೆ ತಿಳಿಯುವುದು

ಹಿಂದೂಸ್ತಾನ್ ಟೈಮ್ಸ್ ಪತ್ರಿಕಾ ಸಮೂಹ, ಬೆಂಗಳೂರಿನ ಜನಾಗ್ರಹ, ಅಸೋಸಿಯೇಶನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್, ಇಂಡಿಕಸ್ ಎನಾಲಿಟಿಕ್ಸ್, ಲಿಬರ್ಟಿ ಇನ್ಸ್ಟಿಟ್ಯೂಟ್ ಹಾಗೂ ಪಿಆರ್ಎಸ್ ಲೆಜಿಸ್ಲೇಟಿವ್ ಸರ್ವಿಸ್ - ಸಹಯೋಗದಲ್ಲಿ ಗೂಗಲ್ ಈ ಸೈಟನ್ನು ಆರಂಭಿಸಿದೆ.

ನನ್ನ ಮೊದಲ ನೋಟದಲ್ಲಿ ಈ ಸೈಟ್ ಓಕೆ ಅಂತ ಅನ್ನಿಸಿದರೂ ಇದರ ಉಪಯುಕ್ತತೆ ಕುರಿತು ಇನ್ನೂ ಖಚಿತ ಅಭಿಪ್ರಾಯ ಮೂಡಿಲ್ಲ. ಮತದಾರ ಪಟ್ಟಿಯಲ್ಲಿ ನನ್ನ ಹೆಸರು ತೋರಿಸಲು ಈ ಟೂಲ್ ವಿಫಲವಾಯಿತು. ಈ ರಾತ್ರಿ ಈ ಸೈಟಿನಲ್ಲಿ ಹೆಚ್ಚು ಪ್ರಯೋಗ ಮಾಡುವ ಉದ್ದೇಶವಿದೆ.

Sunday, April 05, 2009

ಗುಡ್ ಬೈ ಕೊಲರಾಡೋ - 52 ಪುಟ Rocky ಮರಣ ಸಂಚಿಕೆ

‘ಕನ್ನಡಿಗರೇ, ಇನ್ನು ಬರೋಣವೆ?' - ಹಾಲ್ದೊಡ್ಡೇರಿಯವರು ಬರೆದ, ಜಿ.ಎ.ನರಸಿಂಹ ಮೂರ್ತಿಯವರ 'ಕಥೆಗಾರ' ಪತ್ರಿಕೆ ಕಣ್ಮುಚ್ಚಿದ ಕಥೆ ಓದಿದೆ. ಯಾಕೋ ಈ ರೀತಿ, ಪತ್ರಿಕೆಯ ಸಾವಿನ ಸುದ್ದಿ ಓದಿದ ನಂತರ, ಕೆಲ ಸಮಯ ನನ್ನನ್ನು ಖಾಲಿತನ ಆವರಿಸುತ್ತದೆ.

ಹತ್ತು ಹದಿನೈದು ವರ್ಷಗಳ ಹಿಂದೆ, ಪ್ರಜಾಮತ ಹಾಗೂ ಇಲ್ಲಸ್ಟ್ರೇಟೆಡ್ ವೀಕ್ಲಿ ಪತ್ರಿಕೆಗಳು ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ಕೊನೆಯುಸಿರೆಳೆದವು. ಬದುಕುಳಿಯಲು ಆ ಎರಡೂ ಪತ್ರಿಕೆಗಳು ನಡೆಸಿದ ಕೊನೆಯ ಹೋರಾಟವನ್ನು ನಾನು ಕಣ್ಣಾರೆ ಕಂಡಿದ್ದೆ. ಈ ಘಟನೆ ನೆನಪಾದಾಗಲೆಲ್ಲ, ಯಾಕೋ - ಈಜಲು ಬಾರದ ವ್ಯಕ್ತಿ ನದಿಯಲ್ಲಿ ಮುಳುಗುತ್ತಿರುವ, ಆತ ಬದುಕುಳಿಯಲು ಪಟ ಪಟನೆ ಕೈಕಾಲು ಬಡಿಯುತ್ತಿರುವ, ಶ್ವಾಸನಾಳದಲ್ಲಿ ನೀರು ಸೇರಿ ಆತ ಉಸಿರಾಡಲು ಕಷ್ಟ ಪಡುತ್ತಿರುವ... ಹಾಗೂ ಈ ದೃಶ್ಯವನ್ನೆಲ್ಲ ನಾನು ಅಸಹಾಯಕನಾಗಿ ನೋಡುತ್ತಿರುವ - ಸಂಕಟದ ಭಾವನೆ ನನ್ನನ್ನು ಕಾಡಲಾರಂಭಿಸುತ್ತದೆ.

‘ಕನ್ನಡಿಗರೇ, ಇನ್ನು ಬರೋಣವೆ’? ಎಂಬ ಮುಖಪುಟದ ಶೀರ್ಷಿಕೆ ಓದಿದಾಗ ನನಗೆ ' ಗುಡ್ ಬೈ ಕೊಲರಾಡೋ' ಎಂಬ ತೀರಾ ಇತ್ತೀಚಿನ ಮರಣ ಶೀರ್ಷಿಕೆ ನೆನಪಾಯಿತು. ನಿಮ್ಮ ಬಳಿ ಈ ನೋವಿನ ಸುದ್ದಿಯನ್ನು ಹಂಚಿಕೊಳ್ಳೋಣ ಅನಿಸಿತು.

ಇದೇ 2009ರ ಫೆಬ್ರವರಿ 27ರಂದು ಅಮೆರಿಕದ Rocky Mountain News ಪತ್ರಿಕೆ ಕೊನೆಯುಸಿರೆಳೆಯಿತು. ಪ್ರೀತಿಯಿಂದ 'ರಾಕಿ' ಎಂದೇ ಕರೆಯಲ್ಪಡುತ್ತಿದ್ದ ಈ ಪತ್ರಿಕೆ 150ನೇ ವರ್ಷ ಆಚರಿಸಲು ಇನ್ನು ಕೇವಲ 55 ದಿನ ಬಾಕಿ ಇತ್ತು. ಆದರೆ, ಶತಮಾನದ ಕಾಲ ಗುಂಡುಕಲ್ಲಿನಂತಿದ್ದ ಆ ಪತ್ರಿಕೆ ಕೇವಲ 2 ತಿಂಗಳು ಉಸಿರು ಹಿಡಿದುಕೊಂಡಿರಲು ಸಾಧ್ಯವಾಗಲಿಲ್ಲ. ಆರ್ಥಿಕ ಸಂಕಷ್ಟದಿಂದ ಪತ್ರಿಕೆ ಅಷ್ಟು ಘಾಸಿಗೊಂಡಿತ್ತು. ಅಮೆರಿಕದಲ್ಲಿ ಪತ್ರಿಕೆಗಳ ಸ್ಥಿತಿ ಅಷ್ಟು ಗಂಭೀರವಾಗಿದೆ.

52 ಪುಟಗಳ ವಿದಾಯ ಸಂಚಿಕೆ



ಸಾಯುವ ದಿನ, 'ರಾಕಿ' ಮುಖಪುಟದಲ್ಲಿ, ಗುಡ್ ಬೈ ಕೊಲರಾಡೋ ಎಂಬ ಶೀರ್ಷಿಕೆ ಹಾಕಿ, ಓದುಗರಿಗೆ ತನ್ನ ನಿಧನ ವಾರ್ತೆಯನ್ನು ತಾನೇ ತಿಳಿಸಿತು. ತನ್ನ ಮೊದಲ ಸಂಚಿಕೆಯ ಮುಖಪುಟವನ್ನು ಮರುಮುದ್ರಿಸಿ ಮಾಸ್ಟ್ ಹೆಡ್ ಕೆಳಗೆ Final Edition - 1859 - 2009 ಎಂದು ದೊಡ್ಡದಾಗಿ ಪ್ರಕಟಿಸಿತು. ಈ ಪುಟದ ನಡುವೆ ಕೊನೆಯ ಸಂಪಾದಕೀಯ.

ಅಷ್ಟೇ ಅಲ್ಲ, ತನ್ನ 150 ವರ್ಷ ಇತಿಹಾಸದ ಸವಿನೆನಪುಗಳನ್ನೊಳಗೊಂಡ 52 ಪುಟಗಳ ವಿಶೇಷ ಸ್ಮರಣ ಸಂಚಿಕೆಯನ್ನೂ (ಮರಣ ಸಂಚಿಕೆ ಎಂದರೂ ಸರಿ) ರಾಕಿ ಅಂದು ಓದುಗರಿಗೆ ನೀಡಿತು. ಆ ಸಂಚಿಕೆ ನೋಡುವಾಗ ನನ್ನ ಕಣ್ಣೂ ತೇವವಾದದ್ದು ನಿಜ. ಆ ಸಂಚಿಕೆಯನ್ನು ನೀವೂ ಬೇಕಾದರೆ ಇಲ್ಲಿ ನೋಡಬಹುದು.

'ರಾಕಿ'ಯ ವಿರುದ್ಧ ನೂರಾರು ವರ್ಷ ಬದ್ಧವೈರಿಯಂತೆ ಸ್ಪರ್ಧಿಸಿದ್ದು "ಡೆನ್ವರ್ ಪೋಸ್ಟ್" ಎಂಬ ಇನ್ನೊಂದು ಪತ್ರಿಕೆ. ಆದರೆ, ರಾಕಿಯ ಸಾವಿನ ದಿನ, ಡೆನ್ವರ್ ಪೋಸ್ಟ್, ತನ್ನ ಮುಖಪುಟದಲ್ಲಿ, ತನ್ನ ವೈರತ್ವವನ್ನೆಲ್ಲ ಬಿಟ್ಟು ರಾಕಿಗೊಂದು ವಿದಾಯ ಸಂಪಾದಕೀಯ ಬರೆಯಿತು.

Stop the presses.
The Rocky Mountain News, one of America's great, proud newspapers, died Friday morning in Denver after a long, glorious and colorful life. It would have been 150 years old on April 23. The Rocky, as it was known affectionately, leaves a multitude of family and friends, writers and readers, adversaries and advertisers, defenders and detractors, and a dog named Marmaduke. It was not paper. It was indelible ink. Today we mourn the death and celebrate the life of the Rocky. ಪೂರ್ಣ ಪಾಠ ಇಲ್ಲಿದೆ.

Sad to say, wild war between the papers is over - ಎಂದು ಮಾಧ್ಯಮದ ಇತರ ಗಣ್ಯರು ಹಲುಬಿದರು.

ಇದಕ್ಕಿಂತಲೂ, ರಾಕಿ ಮೌಂಟನ್ ನ್ಯೂಸ್ - ಇನ್ನು ಪ್ರಕಟವಾಗುವುದಿಲ್ಲ ಎಂದು ಅದರ ಮಾಲಿಕ ತನ್ನ ಸಿಬ್ಬಂದಿಗೆ ತಿಳಿಸಿದ ಗಳಿಗೆಯನ್ನು ವಿಡಿಯೋದಲ್ಲಿ ನೋಡಿದೆ. "ಇಲ್ಲ. ಇದರಲ್ಲಿ ನಿಮ್ಮ ತಪ್ಪು ಏನೂ ಇಲ್ಲ. ನೀವು ಪತ್ರಕರ್ತರು ಅತ್ಯುತ್ತಮ ಜರ್ನಲಿಸಂ ಮೂಲಕ ಎಲ್ಲ ಪ್ರಯತ್ನ ಮಾಡಿದ್ದೀರಿ. ಆದರೆ, ಮಾರುಕಟ್ಟೆಯ ಹೊಡೆತಕ್ಕೆ ಸಿಕ್ಕು ನಾವು ಈ ಪತ್ರಿಕೆ ನಿಲ್ಲಿಸುವ ನಿರ್ಧಾರ ಮಾಡಲೇ ಬೇಕಾಗಿದೆ. ನಮಗೆ ಬದುಕಲು ಸಾಧ್ಯವೇ ಇಲ್ಲ. " - ಎಂದು ಮಾಲಿಕ ಸುದ್ದಿ ಮನೆಯಲ್ಲಿ ಹೇಳುತ್ತಿರುವಾಗ - ಆ ಪತ್ರಿಕೆಯ ಉದ್ಯೋಗಿಗಳ ಜೊತೆ ನಾನೂ ಕಣ್ಣಲ್ಲಿ ನೀರು ತುಂಬಿಕೊಂಡು ಮೌನವಾಗಿ ಅತ್ತು ಬಿಟ್ಟೆ.



ಈಗ ಮೃತಪತ್ರಿಕೆಯ ಮಾಜಿ ಸಿಬ್ಬಂದಿಗಳಲ್ಲಿ ಹಲವರು ಸೇರಿ ಕೇವಲ ಅಂತರ್ಜಾಲ ಪತ್ರಿಕೆಯನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೆಲ್ಲ ಬರೆದು ಮುಗಿಸುವ ಹೊತ್ತಿಗೆ ಮತ್ತೇಕೋ ನನ್ನ ಕಣ್ಣೆಲ್ಲ ತೇವ. ಮತ್ತೆ, "ಈಜಲು ಬಾರದ ವ್ಯಕ್ತಿ ನದಿಯಲ್ಲಿ ಮುಳುಗುತ್ತಿರುವ, ಆತ ಬದುಕುಳಿಯಲು ಪಟ ಪಟನೆ ಕೈಕಾಲು ಬಡಿಯುತ್ತಿರುವ, ಶ್ವಾಸನಾಳದಲ್ಲಿ ನೀರು ಸೇರಿ ಆತ ಉಸಿರಾಡಲು ಕಷ್ಟ ಪಡುತ್ತಿರುವ..." ದೃಶ್ಯ ಕಣ್ಣ ಮುಂದೆ ಕಾಣಿಸುತ್ತಿದೆ.

Thursday, April 02, 2009

ಬ್ರೇಕಿಂಗ್ ನ್ಯೂಸ್. ಬರಹ 8.0 ಬಿಡುಗಡೆಯಾಗಿದೆ

ಈಗ ಸುಮಾರು ಒಂದು ದಶಕದ ಹಿಂದೆ, ಭಾರತೀಯ ಭಾಷೆಗಳನ್ನು ಬಳಸಬೇಕೆಂದರೆ, ನಾವು ಶ್ರೀಲಿಪಿ, ಪ್ರಕಾಶಕ್ ಅಥವಾ ಐಲೀಪ್ ಸಾಫ್ಟ್ ವೇರ್ ಕೊಂಡುಕೊಳ್ಳಬೇಕಿತ್ತು. ಅಂತಹ ಕಾಲದಲ್ಲಿ ನನಗೆ ಬರಹ - ಎಂಬ ಪುಟ್ಟ ಸಾಫ್ಟ್ ವೇರ್ ಪರಿಚಯವಾಯಿತು. ಅದು ಉಚಿತ ತಂತ್ರಾಂಶ. ಅದರಲ್ಲೂ ಮೆನು ಎಲ್ಲಾ ಕನ್ನಡದಲ್ಲಿ ಕಾಣುತ್ತೆ ಎನ್ನುವುದು ನನಗೆ ವಿಚಿತ್ರವಾಗಿ ಕಂಡಿತ್ತು. ನಂತರ 'ಕಲಿತ' ಎಂಬ ತಂತ್ರಾಂಶವನ್ನು ಕನ್ನಡ ಗಣಕ ಪರಿಷತ್ ಅಭಿವೃದ್ಧಿಪಡಿಸಿತು. ಅದೇ ಮುಂದೆ 'ನುಡಿ' ಎಂದು ನಾಮಕರಣಗೊಂಡಿತು. ಈ ನಡುವೆ, ಪ್ರಕಾಶಕ್ ಹೇಳ ಹೆಸರಿಲ್ಲದೇ ಕಾಣೆಯಾಯಿತು. 3-4 ವರ್ಷಗಳ ಹಿಂದೆ ವಿಂಡೋಸ್ ಎಕ್ಸ್.ಪಿ.ಯಲ್ಲಿ ಕನ್ನಡವೂ ಸೇರಿಕೊಂಡು ಬಂತು. ಇದೀಗ 'ಕುವೆಂಪು' ಸೇರಿದಂತೆ ಅನೇಕ ಉಚಿತ ಕನ್ನಡ ಸಾಫ್ಟ್ ವೇರ್ ಇದ್ದರೂ ಬರಹ ಮಾತ್ರ ಎಂದಿನಂತೆ ವಲ್ಡ್ ಫೇಮಸ್!



ಈ ಸಾಫ್ಟ್ ವೇರಿನ ಹೊಸ ವರ್ಷನ್ ಬರಹ 8.0 ಇಂದು (ಅಮೆರಿಕಾ ಲೆಕ್ಕದಲ್ಲಿ ಏಪ್ರಿಲ್ ಒಂದರಂದು!) ಬಿಡುಗಡೆಯಾಗಿದೆ. http://www.baraha.com/download.htm ಭಾರತೀಯ ಭಾಷೆಯ ಹೊಸ ಯೂನಿಕೋಡ್ ಎಡಿಟರ್ BarahaPad ಈ ವರ್ಷನ್ನಿನಲ್ಲಿದೆ. ಯೂನಿಕೋಡ್ ಫಾಂಟುಗಳನ್ನು ಉಚಿತವಾಗಿ ( under GPL ) ನೀಡಲಾಗಿದೆ. ಶೇಷಾದ್ರಿ ವಾಸುಗೊಂದು ದೊಡ್ಡ ಥ್ಯಾಂಕ್ಸ್.