Showing posts with label Mahatma Gandhi. Show all posts
Showing posts with label Mahatma Gandhi. Show all posts

Sunday, January 18, 2009

ಇಂಗು ತಿಂದ ಮಾಂಗ್‌ ಹಾಗೂ ಐದು ಅಮೆರಿಕನ್ ತುಣುಕು


ಭಾಗ - 10

೧. ಹಲೋ... ೯೧೧?

What’s the number for 911?
America’s Whackiest 911 Calls.

ಡಿಸ್ನಿ ಲ್ಯಾಂಡ್‌ನಲ್ಲಿ ಮಜ ಉಡಾಯಿಸಿದ ನಂತರ, ಹಾಲಿವುಡ್ ನೋಡಲು ನಾನು ಎನಹ್ಯಾಮ್‌ನಿಂದ ಲಾಸ್ ಏಂಜಲೀಸ್‌ಗೆ ಹೊರಟಿದ್ದೆ. ಆಗ, ಟೂರಿಸ್ಟ್ ಬಸ್ಸಿನಲ್ಲಿ ನನ್ನ ಪಕ್ಕ ಕುಳಿತಿದ್ದವ ಓದುತ್ತಿದ್ದ ಪುಸ್ತಕ ಇದು. ಶೀರ್ಷಿಕೆ ವಿಚಿತ್ರವಾಗಿದೆಯಲ್ಲ... ಎನಿಸಿತು.
೯೧೧, ಅಮೆರಿಕದ ಎಮರ್ಜೆನ್ಸಿ ನಂಬರ್. ಭಾರತದಲ್ಲಿ ಪೊಲೀಸ್ ಸಂಪರ್ಕಿಸಲು, ತುರ್ತು ದೂರವಾಣಿ ಸಂಖ್ಯೆ ೧೦೦ ಹೇಗೋ, ಹಾಗೆ, ಅಮೆರಿಕದಲ್ಲಿ ೯೧೧ ಡಯಲ್ ಮಾಡಬಹುದು. ಜನರು ತುರ್ತು ಸಂದರ್ಭಗಳಲ್ಲಿ ೯೧೧ ಕಾಲ್ ಮಾಡಿದರೆ ಸಾಕು ನೆರವು ಸಿಗುತ್ತದೆ. ಆದರೆ, ಅಲ್ಲಿಗೆ ಬರುವ ಕರೆಗಳು ಒಮ್ಮೊಮ್ಮೆ ಎಷ್ಟು ತಮಾಷೆಯಾಗಿರುತ್ತವೆ ಎಂದರೆ, ಆ ಧ್ವನಿಮುದ್ರಿತ ಕರೆಗಳ ಒಂದು ದೊಡ್ಡ ಜೋಕು ಪುಸ್ತಕವೇ ಪ್ರಕಟವಾಗಿದೆ. ಒಂದು ಪ್ರಸಂಗ ನೋಡಿ:
ಕರೆಗಾರ : ಹಲೋ... ಇದು ೯೧೧?
ಆಪರೇಟರ್ : ಹೌದು. ಹೇಳಿ. ಹೇಗೆ ಸಹಾಯ ಮಾಡಲಿ?
ಕರೆಗಾರ : ನನ್ನ ಹೆಂಡತಿಯನ್ನು ನಾನಾ ರೀತಿಯಲ್ಲಿ ಕತ್ತು ಹಿಚುಕಿ ಸಾಯಿಸಲು ಪ್ರಯತ್ನಿಸುತ್ತಿದ್ದೇನೆ. ದರಿದ್ರದವಳು ಸಾಯುತ್ತಿಲ್ಲ. ಉಸಿರಾಡುತ್ತಿದ್ದಾಳೆ. ಏನು ಮಾಡಲಿ?
ಆಪರೇಟರ್ : ಪಾಪ. ಆಕೆಯನ್ನು ನೀವೇಕೆ ಸಾಯಿಸುತ್ತಿದ್ದೀರಿ?
ಕರೆಗಾರ : ನಂಗೆ ಆಕೆ ಇಷ್ಟವಿಲ್ಲ. ಅದಕ್ಕೆ.
ಆಪರೇಟರ್ : ಸಾಯಿಸುವ ಬದಲು ಆಕೆಗೆ ಡೈವೋರ್ಸ್ ನೀಡಬಹುದಲ್ಲ?
ಕರೆಗಾರ : ಡೈವೋರ್ಸ್ ಕೊಡುವುದು ರಗಳೆಯ ಕೆಲಸ. ಸಾಯಿಸುವುದು ಈಸಿ. ಅದಕ್ಕೆ!

ಇಂಥ ನೂರಾರು ವಿಚಿತ್ರ ಕರೆಗಳನ್ನು ಅಮೆರಿಕದಾದ್ಯಂತ ‘೯೧೧‘ ಆಪರೇಟರುಗಳು ಪ್ರತಿದಿನ ಸಹಿಸಿಕೊಳ್ಳುತ್ತಾರಂತೆ.
ಅಂದ ಹಾಗೆ, ಅಮೆರಿಕದ ಎಮರ್ಜೆನ್ಸಿ ಸಂಖ್ಯೆ ೯೧೧ಕ್ಕೂ ಅಲ್ಲಿನ ಅವಳಿ ಗೋಪುರ ಧ್ವಂಸಗೊಂಡ ಭಯೋತ್ಪಾದನೆಯ ೯-೧೧ಕ್ಕೂ ಏನಾದರೂ ಸಂಬಂಧವಿದೆಯೇ? ಅಂತ ಸರ್ಜ್ ಬ್ಲಡ್ಸ್ ಎಂಬ ಸಾಕ್ಷಚಿತ್ರ ನಿರ್ಮಾಪಕರನ್ನು ಕೇಳಿದೆ. ಈ ಪ್ರಶ್ನೆ ಕೇಳಿ ಆತ ಬೆಚ್ಚಿ ಬಿದ್ದ. ಅರೆ, ಹೌದಲ್ಲ. ನಮ್ಮ ಎಮರ್ಜನ್ಸಿ ನಂಬರ್ ನೈನ್-ಒನ್-ಒನ್ ಹಾಗೂ ಕರಾಳ ದಿನ ನೈನ್-ಇಲೆವನ್ ಒಂದೇ ಆಗಿದೆಯಲ್ಲ! ಇಷ್ಟು ದಿನ ಇದನ್ನು ಗಮನಿಸಿಯೇ ಇರಲಿಲ್ಲ! ಮೈ ಗಾಡ್... ಎಂಥಾ ಕಾಕತಾಳೀಯ ಅಂತ ಅತ ಆರಚಿದ. ಬಹುಶಃ ಲ್ಯಾಡೆನ್ ತನ್ನ ಭಯೋತ್ಪಾದನೆಗೆ ನಮ್ಮ ೯೧೧ ಸಂಖ್ಯೆಯನ್ನೇ ಉದ್ದೇಶಪೂರ್ವಕವಾಗಿ ಮುಹೂರ್ತ ಮಾಡಿಕೊಂಡಿರಬಹುದು ಅಂತ ಆತ ಚಕಿತಗೊಂಡು ಹಲುಬಿದ.

ಲಾಸ್ ವೇಗಾಸ್, ಡಿಸ್ನಿ ಲ್ಯಾಂಡ್, ಲಾಸ್ ಏಂಜಲೀಸ್‌ಗೆ ಬರುವ ಮೊದಲು ನಾನು, ನ್ಯೂಯಾರ್ಕಲ್ಲಿರುವ ೯-೧೧ ದುರ್ಘಟನಾ ಸ್ಥಳ ‘ಗ್ರೌಂಡ್ ಝೀರೋ’ಕ್ಕೆ ಭೇಟಿ ನೀಡಿದ್ದೆ.


ಅವಳಿ ಗೋಪುರಗಳು ಧ್ವಂಸಗೊಂಡ ಸ್ಥಳವೀಗ ಅಕ್ಷರಶಃ ಪ್ರವಾಸಿ ತಾಣವಾಗಿದೆ. ಅಂದು ಭಯೋತ್ಪಾದನೆಗೆ ಸಾಕ್ಷಿಯಾಗಿದ್ದ ವ್ಯಕ್ತಿಗಳು, ಘಟನೆಯಲ್ಲಿ ಪಾರಾದವರು ಹಾಗೂ ಮಡಿದವರ ಕುಟುಂಬದ ಸದಸ್ಯರು ಮುಂತಾದವರನ್ನೊಳಗೊಂಡ ಪ್ರವಾಸಿ ಗೈಡ್‌ಗಳ ತಂಡ ಅಲ್ಲಿದೆ. ಅವರು ಅಮೆರಿಕನ್ ಎಕ್ಸ್‌ಪ್ರೆಸ್ ಬ್ಯಾಂಕಿನ ಕೇಂದ್ರ ಕಚೇರಿಯ ಒಳಭಾಗವನ್ನೂ ಸೇರಿದಂತೆ, ಅವಘಡ ಸಂಭವಿಸಿದ ಪ್ರದೇಶದ ಸುತ್ತ ಪ್ರವಾಸಿಗಳನ್ನು ಕರೆದೊಯ್ದು ವಿವರಣೆ ನೀಡುತ್ತಾರೆ. ಘಟನೆಯ ಅವಶೇಷಗಳು, ಮೃತರ ಸ್ಮಾರಕಗಳು, ರಕ್ಷಣೆಗೆ ಬಳಕೆಯಾದ ಅಗ್ನಿ ಶಾಮಕ ವಾಹನ ಮತ್ತಿತರ ವಸ್ತುಗಳ ಮ್ಯೂಸಿಯಂ ತೋರಿಸುತ್ತಾರೆ.


ಈಗ ಗ್ರೌಂಡ್ ಝೀರೋದಲ್ಲಿ ೫ ಗೋಪುರಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಈಗಿನ ಯೋಜನೆಯಂತೆ, ಮೊದಲು ಅವಳಿ ಗೋಪುರಗಳಿದ್ದ ಎರಡೂ ಅಡಿಪಾಯಗಳನ್ನು ಚೌಕಾಕಾರದ ದೊಡ್ಡ ಕೊಳಗಳನ್ನಾಗಿ ಪರಿವರ್ತಿಸಲಾಗುತ್ತದೆ. ಅಲ್ಲಿ, ನೀರಿನ ಕೃತಕ ಜಲಪಾತವನ್ನು ನಿರ್ಮಿಸಿ, ೯-೧೧ ಘಟನೆಯಲ್ಲಿ ಮೃತ ವ್ಯಕ್ತಿಗಳ ಹೆಸರುಗಳನ್ನು ಶಿಲೆಯಲ್ಲಿ ಕೆತ್ತಲಾಗುತ್ತದೆ. ಅಲ್ಲೊಂದು ಉದ್ಯಾನವೂ ಹುಟ್ಟಿಕೊಳ್ಳಲಿದೆ. ವಿವರಗಳಿಗೆ ನೋಡಿ www.tributewtc.org : www.national911memorial.org

2. ಅಮೆರಿಕದಲ್ಲಿಲ್ಲ ವಾಯ್ಸ್ ಆಫ್ ಅಮೆರಿಕ!

VOA -ಅಂದರೆ, ವಾಯ್ಸ್ ಆಫ್ ಅಮೆರಿಕ. ಹಾಗಂದರೆ, BBC - ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಶನ್ ಹಾಗೂ
AIR -ಆಲ್ ಇಂಡಿಯಾ ರೇಡಿಯೋ ಥರ ಅಮೆರಿಕದ ಸುಪ್ರಸಿದ್ಧ ರೇಡಿಯೋ... ಅಂತ ನಾನು ಚಿಕ್ಕಂದಿನಿಂದಲೂ ತಿಳಿದಿದ್ದ ಜನರಲ್ ನಾಲೇಜ್. ಆದರೆ, ‘ವಾಯ್ಸ್ ಆಪ್ ಅಮೆರಿಕ’ ಅಮೆರಿಕದಲ್ಲಿ ಎಲ್ಲೂ ಕೇಳಿಸುವುದಿಲ್ಲ. ಬಿತ್ತರಗೊಳ್ಳುವುದಿಲ್ಲ! ಅಂತ ನನಗೆ ಗೊತ್ತಿರಲಿಲ್ಲ. ನನಗಿದು ಗೊತ್ತಾಗಿದ್ದು. ವಾಷಿಂಗ್‌ಟನ್ ಡಿ.ಸಿ.ಯಲ್ಲಿ ವಾಯ್ಸ್ ಆಪ್ ಅಮೆರಿಕಾದ ಕೇಂದ್ರ ಕಚೇರಿಗೆ ಭೇಟಿ ನೀಡಿದಾಗ.


ವೈಟ್ ಹೌಸ್ ಹಾಗೂ ಅಮೆರಿಕ ಸಂಸತ್ತಿನಿಂದ ಕೆಲ ಹೆಜ್ಜೆ ದೂರದಲ್ಲಿ ವಿಶಾಲ ಕಟ್ಟಡದಲ್ಲಿದೆ ‘ವಾಯ್ಸ್ ಆಫ್ ಅಮೆರಿಕ’ ಕೇಂದ್ರ ಕಚೇರಿ. ಇಲ್ಲಿ ನೂರಾರು ಬಾನುಲಿ ಪತ್ರಕರ್ತರು, ತಂತ್ರಜ್ಞರು ಗಡಿಬಿಡಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆದರೆ, ಅವರ ರೇಡಿಯೋ ಪ್ರಸಾರ ಮಾತ್ರ ಅಮೆರಿಕದಲ್ಲಿ ಕೇಳಿಸದು. ಇದು ಅಲ್ಲಿನ ಶಾಸನ ವಿಧಿಸಿದ ನಿರ್ಬಂಧ.

ವಾಯ್ಸ್ ಆಫ್ ಅಮೆರಿಕ -ಸರ್ಕಾರದ ಬಾನುಲಿ. ಇದು ಸ್ಥಾಪನೆಯಾದದ್ದೇ, ಹೊರದೇಶಗಳಿಗೆ ಅಮೆರಿಕ ಸರ್ಕಾರದ ಮುಖವಾಣಿಯಾಗಿ ತುತ್ತೂರಿ ಊದುವ ಕೆಲಸಕ್ಕೆ. ಆದ್ದರಿಂದ, ಅಮೆರಿಕದ ಭೂವ್ಯಾಪ್ತಿಯಲ್ಲಿ ಈ ‘ತುತ್ತೂರಿ’ಯನ್ನು ಪ್ರಸಾರ ಮಾಡುವಂತಿಲ್ಲ. ಇದು ವಾಯ್ಸ್-ಆಫ್-ಅಮೆರಿಕಾ ಸ್ಥಾಪನೆಯ ಶಾಸನದಲ್ಲೇ ಸ್ಪಷ್ಟವಾಗಿದೆ.

ವಾಯ್ಸ್ ಆಫ್ ಅಮೆರಿಕ ಕೇಂದ್ರ ಕಚೇರಿ ಅಮೆರಿಕದಲ್ಲಿದ್ದರೂ ಅದರ ಪ್ರಸಾರ ಕೇಂದ್ರಗಳಿರುವುದೆಲ್ಲ ವಿದೇಶಗಳಲ್ಲಿ. ಹಿಂದಿಯೂ ಸೇರಿದಂತೆ ವಿಶ್ವದ ೪೩ ಭಾಷೆಗಳಲ್ಲಿ ವಾಯ್ಸ್ ಆಫ್ ಅಮೆರಿಕ ನಿತ್ಯವೂ ಪ್ರಸಾರವಾಗುತ್ತಿದೆ. ನೀವೆಂದಾದರೂ ಈ ಬಾನುಲಿ ಕೇಳಿದ್ದೀರಾ? ನಾನಂತೂ ಕೇಳಿಲ್ಲ. ಅಮೆರಿಕದ ಜನ ಕೇಳುತ್ತಾರೆ ಅಂದುಕೊಂಡಿದ್ದೆ. ಅವರೂ ಕೇಳುತ್ತಿಲ್ಲವಲ್ಲ!

3. ಗಗನದಲ್ಲಿ ವೃದ್ಧ ಸಖಿಯರು!

ಅದ್ಯಾಕೋ ಗೊತ್ತಿಲ್ಲ. ಚಿಕ್ಕಂದಿನಿಂದಲೂ ನನಗೆ, ಗಗನ ಸಖಿಯರೆಂದರೆ, ಸುಂದರ ಮುಖದ, ಅಂದದ ಮೈಮಾಟದ, ಸವಿ ಮಾತಿನ ಯುವತಿಯರ ಕಲ್ಪನೆ ಮೂಡುತ್ತದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಇಂಡಿಯನ್ ಏರ್‌ಲೈನ್ಸ್ ಹಾಗೂ ಡೆಕ್ಕನ್ ವಿಮಾನಗಳಲ್ಲಿ ಪ್ರಯಾಣ ಮಾಡಿದ ಮೇಲೆ ಸುಂದರ ಗಗನ ಸಖಿಯರ ನನ್ನ ಕಲ್ಪನೆ ನುಚ್ಚು ನೂರಾಗಿದೆಯೆನ್ನಿ! ಅದರಲ್ಲೂ ಅಮೆರಿಕ ವಿಮಾನಗಳಲ್ಲಿ ಪ್ರಯಾಣಿಸಿ ಬಂದಮೇಲಂತೂ ಗಗನಸಖಿಯರೆಂದರೆ ಯುವತಿಯರು ಎಂಬ ಕಲ್ಪನೆಯೇ ಚಿಂದಿಯಾಯಿತು! ಅಮೆರಿಕದ ವಿಮಾನಗಳಲ್ಲಿ ಇರುವ ಬಹುತೇಕ ಗಗನಸಖಿಯರು ವೃದ್ಧೆಯರು ಅಥವಾ ಮಧ್ಯ ವಯಸ್ಸಿನವರು.
ಯಾಕೆ, ಹೀಗೆ?

ಅಮೆರಿಕದಲ್ಲಿ ಏರ್ ಹೋಸ್ಟೆಸ್ ವೃತ್ತಿಗೆ ಹೆಚ್ಚು ಸಂಬಳ ಸಿಗುತ್ತಿಲ್ಲ. ಅದರ ಬದಲು, ಉತ್ತಮ ಹೊಟೆಲ್‌ಗಳಲ್ಲಿ ವೇಟರ್ ವೃತ್ತಿಗೇ ಹೆಚ್ಚು ವೇತನ ಹಾಗೂ ಟಿಪ್ಸ್ ಸಿಗುತ್ತದೆ. ಆದ್ದರಿಂದ ಸುಂದರ ಯುವತಿಯರು ಆಗಸದ ವೇಟರ್ ಹುದ್ದೆಗಿಂತ ಭೂಮಿಯ ಮೇಲಿನ ಬಾರ್ ಆಂಡ್ ರೆಸ್ಟಾರೆಂಟ್ ಹುದ್ದೆಯನ್ನೇ ಹೆಚ್ಚಾಗಿ ಆರಿಸಿಕೊಂಡಿದ್ದಾರೆ. ಆದ್ದರಿಂದ, ಅಮೆರಿಕದ ವಿಮಾನದಲ್ಲಿ ‘ಕಿಂಗ್‌ಫಿಷರ್ ಚೆಲುವೆಯರು’ ಕಡಿಮೆ.


4. ಬಡವರು ಸಾರ್ ಬಡವರು

ಅಮೆರಿಕ ಎಂದರೆ ಶ್ರೀಮಂತ ರಾಷ್ಟ್ರ. ಅಲ್ಲಿ ಸಿಕ್ಕಾಪಟ್ಟೆ ಹಣ ಗಳಿಸಿ ಶ್ರೀಮಂತರಾಗಲು ಸಾಧ್ಯ ಎಂದು ಕನಸು ಕಾಣುವವರು ಬಹಳಷ್ಟು ಜನ. ಅದಕ್ಕೆ ‘ಅಮೆರಿಕನ್ ಡ್ರೀಮ್ಸ್’ ಎನ್ನೋ ನುಡಿಗಟ್ಟೂ ಇದೆ. ಸಾಲದು ಅನ್ನುವಂತೆ, ಅಮೆರಿಕದ ಚಿತ್ರಣ ಕೊಡುವಾಗ ಯಾರೂ ಅಲ್ಲಿನ ಭಿಕ್ಷುಕರ ಚಿತ್ರ ತೋರಿಸುವುದಿಲ್ಲ. ವಾಸ್ತವ ವೆಂದರೆ, ಅಲ್ಲಿ ಶೇ.೨೬ರಷ್ಟು ಬಡವರಿದ್ದಾರೆ. ಅದರಲ್ಲೂ ಈಗ ಆರ್ಥಿಕ ಹಿಂಜರಿತ. ಹಾಗಾಗಿ, ಕೆಲಸ -ಮನೆ ಕಳೆದುಕೊಂಡ ವರ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ. ೧೯೩೦ರ ದಶಕದಲ್ಲಿ ಅಮೆರಿಕದಲ್ಲಿ ಇದ್ದಂಥ ಬಡತನ ಈಗಲೂ ಕಾಡುವ ಆತಂಕ ಉಂಟಾಗಿದೆ. ಅಮೆರಿಕದಲ್ಲಿ ಭಾರತದಷ್ಟು ಭಿಕ್ಷಕರು ಹಾಗೂ ಕಡು ಬಡವರಿಲ್ಲ, ನಿಜ. ಆದರೆ, ಸಾಕಷ್ಟು ಭಿಕ್ಷುಕರಿದ್ದಾರೆ. ಸ್ಯಾಂಪಲ್‌ಗೆ ಈ ಚಿತ್ರಗಳನ್ನು ನೋಡಿ.



5. ಅಮೆರಿಕಾ ಗಾಂಧಿ

ಅಮೆರಿಕದ ಬಂಡವಾಳಶಾಹಿ ಸಿದ್ಧಾಂತಕ್ಕೂ ಮಹಾತ್ಮಾ ಗಾಂಧಿಯ ‘ಗಾಂಧಿಯನ್’ ಸಿದ್ಧಾಂತಕ್ಕೂ ಹಗಲು -ರಾತ್ರಿಗಿರುವಷ್ಟು ವ್ಯತ್ಯಾಸ. ಆದರೂ, ಮಹಾತ್ಮಾ ಗಾಂಧಿ ಅಮೆರಿಕದಲ್ಲಿ ಫೇಮಸ್. ಎಷ್ಟೆಂದರೆ, ಎನಹ್ಯಾಮ್‌ನ ಒಂದು ರಸ್ತೆಗೆ ಮಹಾತ್ಮಾ ಗಾಂಧಿ ರಸ್ತೆ ಎಂದೇ ಹೆಸರಿಡಲಾಗಿದೆ. ಅಲ್ಲದೇ, ಅಮೆರಿಕದಲ್ಲೂ ಒಂದಷ್ಟು ಗಾಂಧೀಜಿ ಪ್ರತಿಮೆಗಳಿವೆ. ವಾಷಿಂಗ್‌ಟನ್ ಡಿ.ಸಿ.ಯಲ್ಲಿ ಭಾರತೀಯ ರಾಯಭಾರಿ ಕಚೇರಿಯ ಮುಂದೆ ಒಂದು ಗಾಂಧಿ ಪ್ರತಿಮೆ ಹಾಗೂ ಸ್ಯಾನ್‌ಫ್ರಾನ್ಸಿಸ್ಕೋ ಬಂದರಿನಲ್ಲಿ ಒಂದು ಪ್ರತಿಮೆ ನನ್ನ ಕಣ್ಣಿಗೆ ಬಿತ್ತು.

6. ಇಂಗು ತಿಂದ ಮಾಂಗ್‌ರು!

ಭಾರತದಲ್ಲಿ ಅಕ್ರಮ ಬಾಂಗ್ಲಾ ದೇಶೀಯರು, ಟಿಬೇಟಿಯನ್ನರು ಇದ್ದಾರೆ ಎಂಬ ಕೂಗು ಇಂದು ನಿನ್ನೆಯದಲ್ಲ. ಬಾಂಗ್ಲಾ ಯುದ್ಧ ಹಾಗೂ ಟಿಬೆಟ್ ಮೇಲೆ ಚೀನಾ ಆಕ್ರಮಣ ಸಂದರ್ಭದಲ್ಲಿ ಭಾರತ ನಿರಾಶ್ರಿತ ಟಿಬೆಟಿಯನ್ನರು ಹಾಗೂ ಬಾಂಗ್ಲಾ ದೇಶೀಯರಿಗೆ ಆಶ್ರಯ ನೀಡಿತು. ಅದಕ್ಕಾಗಿ ಬಾಂಗ್ಲಾ ಕ್ಯಾಂಪ್ ಹಾಗೂ ಟಿಬೆಟಿಯನ್ನರ ಕ್ಯಾಂಪ್‌ಗಳು ಭಾರತದಲ್ಲಿ ತಲೆ ಎತ್ತಿದವು. ಆದರೆ, ಅಲ್ಲಿ ಈಗಲೂ ಅನೇಕರು ಅಕ್ರಮ ವಲಸಿಗರಾಗೇ ಉಳಿದುಕೊಂಡಿರುವುದು ಸತ್ಯ.

ಜಗತ್ತಿನಲ್ಲೇ ಅತ್ಯಂತ ಬಿಗಿ ಇಮಿಗ್ರೇಶನ್ ವ್ಯವಸ್ಥೆ ಹಾಗೂ ವಿಸಾ ಪದ್ಧತಿಯನ್ನು ಹೊಂದಿರುವ ಅಮೆರಿಕದಲ್ಲೂ ಇಂತಹ ಅಕ್ರಮ ವಲಸಿಗರ ಸಮಸ್ಯೆ ಇದೆ ಎಂದರೆ ನಂಬುತ್ತೀರಾ?

ಒಂದು ಕಡೆ, ಲ್ಯಾಟಿನ್ ಅಮೆರಿಕನ್ ಬಡವರು ಹಾಗೂ ಕರಿಯರು ಅಮೆರಿಕದ ಬಿಗಿ ಭದ್ರತೆಯನ್ನೂ ಭೇದಿಸಿಕೊಂಡು ಸಮುದ್ರ ಹಾಗೂ ಮೆಕ್ಸಿಕೋ ಭೂಭಾಗದ ಮೂಲಕ ಅಮೆರಿಕದ ಒಳಗೆ ನುಸುಳಿ ಅಕ್ರಮ ವಲಸಿಗರಾಗಿ ನೆಲೆಸಿದ್ದರೆ, ಇನ್ನೊಂದೆಡೆ, ಅಮೆರಿಕವೇ ಈ ಹಿಂದೆ ಆಶ್ರಯ ನೀಡಿದ್ದ ಚೀನೀ ಹಾಗೂ ಮಾಂಗ್ ಜನರು ಈಗಲೂ ಅಕ್ರಮ ವಲಸಿಗರಾಗೇ ಉಳಿದುಕೊಂಡಿದ್ದಾರೆ. ಮಿಲ್‌ವಾಕಿಯಲ್ಲಿ ಸಿಕ್ಕ ಮಾಂಗ್ ಸಮುದಾಯದ ಹೋರಾಟಗಾರ ಕೆವಿನ್ ಹರ್ ತಮ್ಮ ಜನರ ತ್ರಿಶಂಕು ಸ್ಥಿತಿಯನ್ನು ಹೇಳಿಕೊಂಡು ಗೋಳಿಟ್ಟ.

ವಿಯೆಟ್ನಾಂ ಯುದ್ಧ ನಡೆದಾಗ ಅಲ್ಲಿನ ಮಾಂಗ್ ಜನಾಂಗ ಅಮೆರಿಕಕ್ಕೆ ನೆರವು ನೀಡಿತು. ಪರಿಣಾಮವಾಗಿ ಸ್ಥಳೀಯರಿಂದ ಮಾಂಗ್ ಜನಾಂಗ ತೀವ್ರ ಹಲ್ಲೆಗೊಳಗಾಯಿತು. ಆಗ, ಅಮೆರಿಕ, ಈ ಮಾಂಗ್ ನಿರಾಶ್ರಿತರನ್ನು ಅಮೆರಿಕಕ್ಕೆ ಕರೆತಂದು ವಸತಿ ಕ್ಯಾಂಪ್ ನಿರ್ಮಿಸಿಕೊಟ್ಟಿತು. ಆದರೆ, ಅವರಿಗೆ, ಪೌರತ್ವ ನೀಡಲೇ ಇಲ್ಲ. ಹಲ ದಶಕಗಳ ಬಳಿಕವೂ ಮಾಂಗ್‌ರು ಅಮೆರಿಕದಲ್ಲಿ ಅಕ್ರಮ ವಲಸಿಗರು ಎಂಬ ಪಟ್ಟ ಹೊತ್ತುಕೊಂಡೇ ಬದುಕುತ್ತಿದ್ದಾರೆ. ಈ ಮಾಂಗ್‌ರು ಇಂದೂ ಅಮೆರಿಕದಲ್ಲಿ ಯಾವುದೇ ಗೌರವಾನ್ವಿತ ಉದ್ಯೋಗಕ್ಕೆ ಸೇರಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಅಮೆರಿಕದಲ್ಲಿ ಸೋಷಿಯಲ್ ಸೆಕ್ಯುರಿಟಿ ನಂಬರ್ ಇಲ್ಲದ ವ್ಯಕ್ತಿಗೆ ಕಾನೂನು ಬದ್ಧ ಉದ್ಯೋಗ ಸಿಗುವುದಿಲ್ಲ. ಹೀಗಾಗಿ, ಅಮೆರಿಕ ನಂಬಿ ಬಂದ ಮಾಂಗರು ಈಗ ಇಂಗು ತಿಂದ ಮಂಗನಂತಾಗಿದ್ದಾರೆ!

(ಇಲ್ಲಿಗೆ ‘ಸ್ಟೇಟ್ ಅಫೇರ್’ ಸರಣಿ ಮುಕ್ತಾಯ)

Tuesday, October 04, 2005

ಇನ್ನಷ್ಟು ಗಾಂಧಿ ಪ್ರತಿಮೆಗಳಿಗೆ ಆಗ್ರಹಿಸಿ ಧರಣಿ!

ಈ ದೇಶದಲ್ಲಿ ಗಾಂಧಿ ಜಯಂತಿ ಬಿಟ್ಟರೆ ನಂತರದ ಅತ್ಯಂತ ಫೇಮಸ್‌ ಜಯಂತಿ ಅಂಬೇಡ್ಕರ್‌ ಜಯಂತಿ ಮಾತ್ರ. ನೆಹರೂಗೆ ಅಂತ ಒಂದು ರಸ್ತೆಯಿಲ್ಲ. ಅಂಥ ರಸ್ತೆ ಇದ್ದರೂ ಗಾಂಧಿ ರಸ್ತೆಯಷ್ಟು ಫೇಮಸ್ಸಂತೂ ಅಲ್ಲವೇ ಅಲ್ಲ. ಶಿವಲಿಂಗ ಹಾಗೂ ಗಣೇಶ ವಿಗ್ರಹಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ಪ್ರತಿಮೆಗಳಿರುಮದು ನಿನ್ನದೆ! ಆದರೂ ಭಾರತಕ್ಕೆ ಇನ್ನಷ್ಟು ಗಾಂಧಿ ಪ್ರತಿಮೆಗಳು ಬೇಕು. ಯಾಕೆ ಗೊತ್ತಾ?

ಮುಷ್ಕರ್‌ ದಾಸ್‌ ಧರಣ್‌ಚಂದ್‌ ಗಾಂಧಿಯವರು ಮೋಹನದಾಸ್‌ ಕರಮಚಂದ್‌ ಗಾಂಧಿಗೆ ಬರೆದ ಈಮೇಲ್‌

ಪ್ರೀತಿಯ ಗಾಂಧಿ ತಾತಾ,
ನಿನ್ನೆ ತಾನೇ ನಿನ್ನ ಹುಟ್ಟುಹಬ್ಬ ಆಚರಿಸಿ ಮುಗಿಸಿದ್ದೇವೆ. ನೀನು ಕಲಿಸಿದ ಮೌಲ್ಯಗಳ ಪ್ರಕಾರವೇ ನಿನ್ನ ಬರ್ತ್‌ಡೇಯನ್ನು ಸರಳವಾಗಿ ಆಚರಿಸಿದ್ದೇವೆ. ಯಾರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರೂ ನಿನ್ನ ಬರ್ತ್‌ಡೇಯನ್ನು ಮಾತ್ರ ವಿಜೃಂಭಣೆಯಿಂದ ನಡೆಸಿ ನಿನಗೆ ಅವಮಾನ ಮಾಡುಮದಿಲ್ಲ!

ಅದ್ಧೂರಿ ಬರ್ತ್‌ಡೇಗಳನ್ನು ಏನಿದ್ದರೂ, ಈಗಿನ ರಾಜಕಾರಣಿಗಳಿಗೆ ಮತ್ತು ಮರಿ ಪುಡಾರಿಗಳಿಗೇ ಮೀಸಲಿಟ್ಟಿದ್ದೇವೆ. ಅವರ ಬರ್ತ್‌ಡೇ, ಒಂಥರಾ ದರಿದ್ರನಾರಾಯಣ ಸಮಾವೇಶದಷ್ಟು ದೊಡ್ಡದೂ ಅಹಿಂದಾ ಸಮಾವೇಶದಷ್ಟೂ ವಿಶಾಲವೂ ಆಗಿರುತ್ತದೆ. ರಸ್ತೆಗಳ ತುಂಬಾ ಅವರ ಕಟೌಟು, ಊರತುಂಬಾ ಶುಭಾಶಯ ಕೋರುವ ಪೋಸ್ಟರುಗಳು, ಬ್ಯಾನರುಗಳು, ಪತ್ರಿಕೆಗಳಲ್ಲಿ ಜಾಹೀರಾತುಗಳು, ದೊಡ್ಡ ಸಾರ್ವಜನಿಕ ಸಮಾರಂಭ, ಕ್ವಿಂಟಾಲ್‌ ಭಾರದ ಹೂವಿನ ಹಾರ, ಕೇಕ್‌ ಕಟಿಂಗ್‌, ಗಿಫ್ಟ್‌ ಗಿವಿಂಗ್‌, ಹೊಗಳಿ ಹೊಗಳಿ, ಭಾಷಣಗಳು, ಓಟು-ಸೀಟಿಗೆ ಪೀಠಿಕೆಗಳು... ಆಸ್ಪತ್ರೆಯಲ್ಲಿ ಹಾಲು, ಬ್ರೆಡ್ಡು, ಬನ್ನು, ಹಣ್ಣು ವಿತರಣೆ... ವಿಶೇಷ ಅತಿಥಿಗಳಿಗೆ ಅಬಕಾರಿ ಸಚಿವ ಚೆನ್ನಿಗಪ್ಪ ಸರ್ಟಿಫೈಡ್‌ ಕ್ವಾಲಿಟಿ ಡ್ರಿಂಕ್‌... ಹೀಗೆ ನಡೆಯುತ್ತೆ ಅವರ ಬರ್ತ್‌ಡೇ ರ್ಯಾಲಿ.

ಆದರೆ, ನಿನ್ನ ಹುಟ್ಟುಹಬ್ಬ ವೆರಿ ಸಿಂಪಲ್‌. ನಿನ್ನ ಪ್ರತಿಮೆ ಅಥವಾ ಫೋಟೊ ಮುಂದೆ ಕೆಲವೇ ಕೆಲಮ ವೃದ್ಧರು ಸೇರಿ, ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಂ ಅಂತ... ನಾಕು ಸಾಲು ಗುನುಗಿ ಮನೆಗೆ ಹೋಗುತ್ತಾರೆ. ಇಷ್ಟೇ ಸಿಂಪಲ್‌ ಸಾಕಾ. ಇಲ್ಲಾ ಇನ್ನೂ ಸಿಂಪಲ್‌ ಬೇಕಾ?

ಅಂದಹಾಗೆ, ಈ ದೇಶದಲ್ಲಿ ಗಾಂಧಿ ಜಯಂತಿ ಬಿಟ್ಟರೆ ನಂತರದ ಅತ್ಯಂತ ಫೇಮಸ್‌ ಜಯಂತಿ ಅಂಬೇಡ್ಕರ್‌ ಜಯಂತಿ ಮಾತ್ರ. ಚಾಚಾ ನೆಹರೂ ದಿನವನ್ನು ಮಕ್ಕಳ ದಿನಾಚರಣೆ ಅಂತ ಕರೆದಿರುಮದರಿಂದ ನೆಹರೂ ಜಯಂತಿ ಅಂತ ಯಾವ ಕ್ಯಾಲೆಂಡರ್‌ನಲ್ಲೂ ನಾಮ ಪ್ರಕಟಿಸುಮದಿಲ್ಲ. ಹಾಗಾಗಿ, ನೀನು ನಂಬಿದರೆ ನಂಬು ಬಿಟ್ಟರೆ ಬಿಡು... ನೆಹರೂ ಚಾಚಾನನ್ನು ಹೆಚ್ಚು ಕಡಿಮೆ ನಾಮ ಮರೆತೇ ಬಿಡುತ್ತಿದ್ದೇವೆ.

ನಿನ್ನನ್ನು ಮಾತ್ರ ನಾಮ ಮರೆಯುವ ಹಾಗೇ ಇಲ್ಲ. ಏಕೆಂದರೆ, ನೀನು ಮಹಾತ್ಮ. ಎಷ್ಟು ಮಹಾತ್ಮ ಎಂದರೆ, ನೆಹರೂ ಈ ದೇಶವನ್ನು ಅಷ್ಟು ವರ್ಷ ಆಳಿದರೂ, ’ನೆಹರೂ ವಂಶ’ಕ್ಕಿಂತ ’ಗಾಂಧಿ ಸಂತಾನ’ವೇ ದೇಶಾದ್ಯಂತ ಫೇಮಸ್ಸು. ಇಂದಿರಾಗಾಂಧಿ, ರಾಜೀವ ಗಾಂಧಿ ಈಗಲೂ ದೇಶಕ್ಕೆ ನಾಯಕರು. ಅವರ ಕೃಪಾಕಟಾಕ್ಷದಲ್ಲೇ ಈ ದೇಶದ ಸೊಸೆ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಗಾಂಧಿ ಹೆಸರನ್ನು ಚಿರಾಯುಗೊಳಿಸುತ್ತಿದ್ದಾರೆ. ಈ ದಿಸೆಯಲ್ಲಿ ಸಂಜಯಗಾಂಧಿ ಪತ್ನಿ ಮೇನಕಾ ಗಾಂಧಿ ಅಳಿಲು ಸೇವೆ ಸಲ್ಲಿಸಿದರೆ, ಮೇನಕಾ ಪುತ್ರ ವರುಣ್‌ ಗಾಂಧಿ ಇದೀಗ ತಾನೇ ರಂಗಕ್ಕೆ ಇಳಿದಿದ್ದಾರೆ. ಈ ನಡುವೆ ನಿನ್ನ ಸ್ವಂತ ಮಕ್ಕಳಾದ ಹರಿಲಾಲ್‌ ಗಾಂಧಿ, ಮಣಿಲಾಲ್‌ ಗಾಂಧಿ, ರಾಮದಾಸ್‌ ಗಾಂಧಿ ಮತ್ತು ದೇವದಾಸ್‌ ಗಾಂಧಿ ಮಾತ್ರ ನಾಪತ್ತೆ... ಈಗಲೂ ಜೀವಂತ ಇರುವ ನಿನ್ನ ಮೊಮ್ಮೊಗ ವರುಣ್‌ ಗಾಂಧಿ ಎಂದರೆ ಯಾರಾತ ಅಂತ ಕೇಳುತ್ತಾರೆ ಜನ. ಹಾಗಾಗಿ ನಿನ್ನ ಮನೆಮಂದಿಗಿಂತ ಸೋನಿಯಾ ಗಾಂಧಿ ಎಷ್ಟೋ ವಾಸಿ!

ದೇಶದಲ್ಲಿ ಜನರು ಈಗಲೂ ನಿನ್ನ ದಾರಿಯಲ್ಲಿ ತಪ್ಪದೇ ನಡೆಯುತ್ತಿದ್ದಾರೆ. ದೇಶದ ಯಾಮದೇ ಪಟ್ಟಣವನ್ನು ಬೇಕಾದರೂ ನೋಡು... ಕನಿಷ್ಠ ಒಂದಾದರೂ ಮಹಾತ್ಮಾ ಗಾಂಧಿ ರಸ್ತೆಯಿರುತ್ತದೆ. ಅಲ್ಲಿ ಜನ ಬಹಳ ಬ್ಯೂಸಿಯಾಗಿ ನಡೆದಾಡುತ್ತಿರುತ್ತಾರೆ! ಅದನ್ನು ನೋಡಿದಾಗಲೆಲ್ಲ, ಜನ ಈಗಲೂ ಗಾಂಧಿ ಮಾರ್ಗ ಬಿಟ್ಟಿಲ್ಲ ಅಂತ ನಿನ್ನ ಹೃದಯ ತುಂಬಿಬರುತ್ತಿರಬೇಕಲ್ಲವೇ? ಇಷ್ಟಕ್ಕೂ ನೆಹರು ರಸ್ತೆ ಅಂತ ನೀನು ಎಲ್ಲಾದರೂ ಕೇಳಿದ್ದು ನೆನಪಿದೆಯೇ? ಅಂಥ ರಸ್ತೆ ಇದ್ದರೂ ಎಲ್ಲೋ ಇದ್ದಿರಬಹುದು. ಆದರೆ ಆ ರಸ್ತೆ ಗಾಂಧಿ ರಸ್ತೆಯಷ್ಟು ಫೇಮಸ್ಸಂತೂ ಅಲ್ಲವೇ ಅಲ್ಲ. ಇದು ವಿಚಿತ್ರವಾದರೂ ಸತ್ಯ.

ಅಷ್ಟೇ ಅಲ್ಲ, ಭಾರತದಲ್ಲಿ ಶಿವಲಿಂಗ ಹಾಗೂ ಗಣೇಶ ವಿಗ್ರಹಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ಪ್ರತಿಮೆಗಳಿರುಮದು ನಿನ್ನದೆ! ಹಳ್ಳಿ ಹಳ್ಳಿ, ಪೇಟೆ ಪಟ್ಟಣ, ನಗರ ಮಹಾನಗರಗಳನ್ನು ನೋಡು... ಕನಿಷ್ಠ ಒಂದಾದರೂ ಗಾಂಧಿ ಪ್ರತಿಮೆ ಇದ್ದೇ ಇರುತ್ತದೆ. ಪ್ರತಿ ಊರಿಗೆ ಅಂಬೇಡ್ಕರ್‌ ಬಡಾವಣೆಯ ಕಿರುತಿ ಹೇಗೋ ನಿನ್ನ ಮೂರುತಿ ಹಾಗೆ! ಒಂದು ಗಾಂಧಿ ಪಾರ್ಕು, ಒಂದು ಗಾಂಧಿ ಸರ್ಕಲ್ಲು, ಒಂದು ಗಾಂಧಿ ಭವನ, ಒಂದು ಗಾಂಧಿ ರಸ್ತೆ ಮತ್ತು ಒಂದು ಗಾಂಧಿ ಪ್ರತಿಮೆ ಪ್ರತಿ ಊರಿಗೂ ಕಡ್ಡಾಯ. ಊರಿನಲ್ಲಿ ಕುಡಿಯಲು ನೀರಿಲ್ಲದಿದ್ದರೂ, ಓಡಾಡಲು ರಸ್ತೆಯಿಲ್ಲದಿದ್ದರೂ ಇವೆಲ್ಲ ಇದ್ದೇ ಇರುವಂತೆ ನಮ್ಮ ಘನ ಸರ್ಕಾರ ವ್ಯವಸ್ಥೆ ಮಾಡಿದೆ.

ದೇಶದಲ್ಲಿ ಬೇರೆ ಬೇರೆ ನಾಯಕರ ಎಷ್ಟೋ ಪ್ರತಿಮೆಗಳಿವೆ. ಆದರೆ ಅವೆಲ್ಲಕ್ಕಿಂತ ಹೆಚ್ಚಿನ ಡಿಮಾಂಡು ನಿನ್ನ ಪ್ರತಿಮೆಗಳಿಗೆ ಇದೆ. ನೀನು ಕಲಿಸಿಕೊಟ್ಟ ಸತ್ಯಾಗ್ರಹ, ಧರಣಿ, ಮುಷ್ಕರ, ಚಳವಳಿ ನಡೆಸಲು ಗಾಂಧಿ ಪ್ರತಿಮೆ ಬೇಕೇ ಬೇಕಲ್ಲ. ಹಾಗಾಗಿ ನಿನ್ನ ಪ್ರತಿಮೆ ಧರಣಿ, ಸತ್ಯಾಗ್ರಹದ ಹೆಗ್ಗುರುತೇ ಆಗಿದೆ!

ಗಾಂಧಿ ತಾತಾ,
ನೀನೂ ಗಮನಿಸಿರಬಹುದು. ಕೆಲವರು ದಾರಿಯಲ್ಲಿ ಹೋಗುವಾಗ ಅಕಸ್ಮಾತ್‌ ದೇವಾಲಯ ಕಂಡರೆ, ಒಂದು ಕ್ಷಣ ನಿಂತು ನಮಸ್ಕಾರ ಮಾಡಿ ಮುಂದೆ ಹೋಗುತ್ತಾರಲ್ಲ. ಅದೇ ರೀತಿ, ಕೆಲವರು ನಿನ್ನ ಪ್ರತಿಮೆ ಕಂಡರೆ ಸಾಕು ಒಂದು ಕ್ಷಣ ಧರಣಿ ಕುಳಿತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಮುನ್ನಡೆಯುತ್ತಾರೆ! ಕೆಲವರು ಅಷ್ಟರ ಮಟ್ಟಿಗೆ ನೀನು ಕಲಿಸಿದ ಸತ್ಯಾಗ್ರಹ ಪಾಠವನ್ನು ಪಾಲಿಸುತ್ತಾರೆ.

ಧರಣಿ ಸತ್ಯಾಗ್ರಹ ತತ್ವವನ್ನು ಜನರು ಎಷ್ಟು ಪಾಲಿಸುತ್ತಾರೆ ಅಂದರೆ, ಮಾತೆತ್ತಿದರೆ ಧರಣಿ ಎನ್ನುತ್ತಾ ನಿನ್ನ ಪ್ರತಿಮೆ ಹುಡುಕಿಕೊಂಡು ಹೋಗುತ್ತಿದ್ದಾರೆ. ಗಂಡನ ವಿರುದ್ಧ ಹೆಂಡತಿಯೇ ಧರಣಿ ಕುಳಿತ ಸುದ್ದಿ ಪತ್ರಿಕೆಯಲ್ಲಿ ಬಂದಿತ್ತು. ಗಾಂಧಿ ಪ್ರತಿಮೆಯೆದುರು ಆಮರಣಾಂತ ಉಪವಾಸ, ಗಾಂಧಿ ಪ್ರತಿಮೆಯಿಂದ ತಾಲೂಕಾ ಕಚೇರಿವರೆಗೆ ಮೆರವಣಿಗೆ ಇತ್ಯಾದಿ ಸುದ್ದಿಗಳನ್ನು ಪ್ರತಿದಿನವೂ ನಾಮ ಓದುತ್ತಲೇ ಇರುತ್ತೇವೆ.

ಈಗೀಗ ಒಂದೇ ದಿನ ೬-೮ ಧರಣಿ ಸತ್ಯಾಗ್ರಹಗಳು ನಡೆಯುವ ಕಾಲ ಬಂದಿದೆ. ಒಂದು ಗುಂಪು ಗಾಂಧಿ ಪ್ರತಿಮೆಯ ಎದರೂ, ಇನ್ನೊಂದು ಗುಂಪು ಗಾಂಧಿ ಮೈದಾನದಲ್ಲೂ, ಮತ್ತೊಂದು ಗುಂಪು ಗಾಂಧಿ ಪಾರ್ಕಿನಲ್ಲೂ... ಹೀಗೆ ವಿವಿಧ ಗಾಂಧಿ ಕ್ಷೇತ್ರಗಳನ್ನು ಆ ಗುಂಪುಗಳು ಪಾಲುಮಾಡಿಕೊಂಡಿವೆ. ಆದರೂ, ಇನ್ನಷ್ಟು ಧರಣಿ, ಸತ್ಯಾಗ್ರಹಕ್ಕೆ ಜಾಗ ಸಾಲುತ್ತಿಲ್ಲ. ಅದಕ್ಕೇ ಮತ್ತಷ್ಟು ಗಾಂಧಿ ಕ್ಷೇತ್ರಗಳನ್ನು ಸ್ಥಾಪಿಸಬೇಕಾಗಿದೆ. ಪಾರ್ಕು, ಭವನ, ಮೈದಾನ ನಿರ್ಮಾಣಮಾಡುಮದು ಕಷ್ಟದ ಕೆಲಸ. ಪ್ರತಿಮೆ ಸ್ಥಾಪಿಸುಮದು ಇದ್ದುದರಲ್ಲಿ ಸುಲಭ. ಹೀಗಾಗಿ ದೇಶದಲ್ಲಿ ಇನ್ನಷ್ಟು ಗಾಂಧಿಪ್ರತಿಮೆಗಳನ್ನಾದರೂ ಸರ್ಕಾರ ಪ್ರತಿಷ್ಠಾಪಸಲೇ ಬೇಕಾಗಿದೆ. ಆದ್ದರಿಂದ, ಆದಷ್ಟು ಬೇಗ ಹೆಚ್ಚಿನ ಗಾಂಧಿ ಪ್ರತಿಮೆಗಳನ್ನು ಸ್ಥಾಪಿಸುವಂತೆ ಸರ್ಕಾರವನ್ನು ಆಗ್ರಹಿಸಿ ನಾನು ಧರಣಿ ಕೂರಲು ತೀರ್ಮಾನಿಸಿದ್ದೇನೆ. ಇದಕ್ಕೆ ನಿನ್ನ ಆಶೀರ್ವಾದ ಇದೆ ಎಂದು ನಂಬಿದ್ದೇನೆ.

ಇಂತಿ ವಿಧೇಯ
ಮುಷ್ಕರದಾಸ್‌ ಧರಣ್‌ಚಂದ್‌ ಗಾಂಧಿ


Kannada Prabha Issue Dated - October 3, 2005
An Odd (not ode) to Mahatma Gandhi on his Jayanthi

-