Thursday, August 20, 2009

ಸೋಷಿಯಲ್ ನೆಟ್‌ವರ್ಕಿಂಗ್ : ನಮ್ಮ ಜನ್ಮ ಡಬಲ್!

Life is Short ಅಂತಾರೆ ಕೆಲವರು. ಆದರೆ, ಈಗ ಇಂಟರ್ನೆಟ್ಟಿನ ‘ಸೋಶಿಯಲ್ ನೆಟ್‌ವರ್ಕಿಂಗ್’ನಿಂದಾಗಿ ನಮ್ಮ ಲೈಫು ಡಬಲ್ ಆಗಿದೆ! ಒಂದೇ ಬಾರಿಗೆ ಎರಡೆರಡು ಜನ್ಮ ಸಾಧ್ಯ. ಒಂದು ಭೂಲೋಕದಲ್ಲಿ. ಇನ್ನೊಂದು ಇಂಟರ್‌ರ್ನೆಟ್ ಲೋಕದಲ್ಲಿ! ಅದು ಸತ್ಯವೂ ಅಲ್ಲದ, ಮಿಥ್ಯವೂ ಅಲ್ಲದ, ಕನಸೂ ಅಲ್ಲದ, ನನಸೂ ಅಲ್ಲದ ಜೀವನ. ವರ್ಚುವಲ್ ಲೈಫ್. ನಾನು ಕನ್ನಡಪ್ರಭದ 'ಸಖಿ' ಪಾಕ್ಷಿಕಕ್ಕೆ ಬರೆದ ಸೋಶಿಯಲ್ ನೆಟ್‌ವರ್ಕಿಂಗ್ ಕುರಿತ ಲೇಖನ ಇದು.



Heyyyyy Wassup? ಏನೂ ಸ್ಕ್ರಾಪ್ಸೇ ಇಲ್ಲ?
ಏಯ್... I dumped Orkut. ಆಮ್ ಆನ್ Facebook. Dunno?
wth! (What The Hell)
hmm..
but, y?
that ssssucks
y?
ಅದ್ಯಾರಿಗೋ ನನ್ನ asl (Age, Sex, Location) ಗೊತ್ತಾಯ್ತು. ಸೋ. ಅದನ್ನ ಬಿಟ್ಟೆ.
ಬಟ್ txt ಮಾಡ್ಬೋದಿತ್ತಲ್ಲ?
Status ಅಪ್‌ಡೇಟ್ ಮಾಡಿದ್ನಲ್ಲಾ. Y?, ನನ್ ಟ್ವೀಟೂ ನೋಡಿಲ್ವಾ?
U on Twitter?
ss... follow me @sakhi
k. cusn (OK. See You Soon)

ಆಕೆ ಹೈದರಾಬಾದ್‌ನಲ್ಲಿ. ಈಕೆ ಬೆಂಗಳೂರಲ್ಲಿ. ಈ ಸಂಭಾಷಣೆ ನಡೆದದ್ದು gmail Chatನಲ್ಲಿ. ಅವರಿಬ್ಬರೂ ನೆಟ್‌ಮೇಟ್ಸು. ಎರಡು ವರ್ಷದಿಂದ ಫ್ರೆಂಡ್ಸು. ಒಬ್ಬರನ್ನೊಬ್ಬರು ನೋಡಿಲ್ಲ. ಇಬ್ಬರೂ ಒರಿಜಿನಲ್ ಹುಡುಗೀರಾ? ಅಥವಾ ಆನ್‌ಲೈನಲ್ಲಿನ ಡುಪ್ಲಿಕೇಟ್ ಅವತಾರವಾ! ಗೊತ್ತಿಲ್ಲ. ಬಟ್ ಇಟ್ಸ್ ಓಕೆ. ವರ್ಚುವಲ್ ಲೈಫ್ ಈಸ್ ವೆರೀ ಕೂಲ್.

ಈಗಿನ ಹೊಸ ಪೀಳಿಗೆಯ ಹುಡುಗ ಹುಡುಗಿಯರೇ ಹಾಗೆ. ಅವರಿಗೆ ಒಂದೇ ಬಾರಿಗೆ ಎರಡೆರಡು ಜನ್ಮವಿದೆ. ಒಂದು ಭೂಲೋಕದಲ್ಲಿ. ಇನ್ನೊಂದು ಇಂಟರ್‌ರ್ನೆಟ್ ಲೋಕದಲ್ಲಿ!

ಸುಳ್ಳಲ್ಲ... ಭೂಮಿಯಲ್ಲಿ ಇರೋ ಹುಡುಗ ಅಂತರ್ಜಾಲದಲ್ಲಿ ಹುಡುಗಿಯಾಗಿರಬಹುದು. ನೆಲದಲ್ಲಿ ನಾಚುತ್ತಾ ನಡೆದಾಡೋ ಹುಡುಗಿ ಇಂಟರ್ನೆಟ್ಟಲ್ಲಿ ಸಖತ್ ರೋಮ್ಯಾಂಟಿಕ್ ಆಗಿ ನಲಿದಾಡಬಹುದು. ಕನ್ನಡಿಯ ಮುಂದಿನ ಬ್ಲಾಕ್ ಬ್ಯೂಟಿ, ಕಂಪ್ಯೂಟರ್ ವಿಂಡೋದಲ್ಲಿ ಫೇರ್ ಆಂಡ್ ಲೌವ್ಲಿ ಎನಿಸಿಕೊಳ್ಳಬಹುದು. ಕಾಲೇಜು ಆವರಣದಲ್ಲಿ ಅಂತರ್‌ಮುಖಿ, ಅಂತರ್ಜಾಲದಲ್ಲಿ ವಾಚಾಳಿ ಸಖಿ... ಅಥವಾ ನೋ ಡೋಂಗಿ... ರಕ್ತ ಮಾಂಸದ ವಾಸ್ತವ ಜಗತ್ತಿನಲ್ಲೂ ವೈರು ಸಿಲಿಕಾನಿನ ಭ್ರಾಮಕ ಜಗತ್ತಿನಲ್ಲೂ ಆಕೆಯ ವ್ಯಕ್ತಿತ್ವ ಒಂದೇ ಆಗಿರಬಹುದು.

Life is Short ಅಂತಾರೆ ಕೆಲವರು. ಆದರೆ, ಈಗ ಇಂಟರ್ನೆಟ್ಟಿನ ‘ಸೋಶಿಯಲ್ ನೆಟ್‌ವರ್ಕಿಂಗ್’ನಿಂದಾಗಿ ನಮ್ಮ ಲೈಫು ಡಬಲ್ ಆಗಿದೆ! ಸತ್ತ ಮೇಲೆ ಏನಾಗ್ತೀವೋ, ಯಾವ ಲೋಕಕ್ಕೆ ಹೋಗ್ತೀವೋ ಗೊತ್ತಿಲ್ಲ. ಆದರೆ, ಈಗಿಂದೀಗ ಅಂತರ್ಜಾಲ ಲೋಕದಲ್ಲಿ ನಮಗೆ ಬೇಕಾದಂಥ ಲೈಫು ಪಡೆಯುವುದು ಸಾಧ್ಯ.

ನಿಜ ಜೀವನದಲ್ಲಿ ನಮಗೆ ಹಿತವಾಗಿರುವವರಿಗಿಂತ ಅಲರ್ಜಿಯಾಗುವವರ ಜೊತೆಯೇ ಒಡನಾಟ ಅನಿವಾರ್ಯವಾಗುತ್ತದೆ. ನಮಗೆ ಬೇಕಾದವರು ಇನ್ಯಾರಿಗೋ ಸಿಕ್ಕಿರುತ್ತಾರೆ. ಅಂತರ್ಜಾಲದ ಸೋಷಿಯಲ್ ನೆಟ್‌ವರ್ಕಿಂಗ್‌ನಲ್ಲಿ ಹಾಗಲ್ಲ. ಅಲ್ಲಿ ನಮಗೆ ಇಷ್ಟವಾಗುವಂಥವರ ಗ್ಯಾಂಗ್ ಕಟ್ಟಿಕೊಳ್ಳಬಹುದು. ಅವರ ಜೊತೆ ವಾಸ್ತವ ಜಗತ್ತಿನಷ್ಟೇ ನೈಜವಾದ ಜೀವನ ಸಾಗಿಸಬಹುದು. ನಮಗೆ ಪ್ರೀತಿಯಾಗುವಂಥ ಅಪ್ಪ, ಅಮ್ಮ, ಅಣ್ಣ, ಅಕ್ಕ, ತಮ್ಮ, ತಂಗಿ, ಗಂಡ, ಹೆಂಡತಿ, ನೆರೆಹೊರೆ, ಫ್ರೆಂಡ್ಸ್ ಆಂಡ್ ಫಿಲಾಸಫರ್‌ಗಳ ಹೊಸ ಸೋಷಿಯಲ್ ವ್ಯವಸ್ಥೆಯನ್ನೇ ಸ್ಥಾಪಿಸಿಕೊಳ್ಳಬಹುದು. ಇಂಟರ್ನೆಟ್ಟಿಗೆ ಲಾಗಿನ್ ಆದಾಗಲೆಲ್ಲ ಅವರ ಜೊತೆ ಮಾನಸಿಕ ಜೀವನ ಸಾಗಿಸಬಹುದು. ಅದು ಸತ್ಯವೂ ಅಲ್ಲದ, ಮಿಥ್ಯವೂ ಅಲ್ಲದ, ಕನಸೂ ಅಲ್ಲದ, ನನಸೂ ಅಲ್ಲದ ಜೀವನ. ವರ್ಚುವಲ್ ಲೈಫ್.

Thanks to Social Networking sites, ಇಂಟರ್ನೆಟ್ಟಿನಲ್ಲಿರುವ, ನಮಗಿಷ್ಟವಾಗುವ, ನಿಜವಾದ ವ್ಯಕ್ತಿಗಳ ಜೊತೆ ನಮ್ಮ ಒಡಲಾಳದ ತೊಳಲಾಟವನ್ನು ತೋಡಿಕೊಳ್ಳಬಹುದು. ಅಳು ಉಮ್ಮಳಿಸಿದರೆ ಅತ್ತು ಹಗುರಾಗಬಹುದು. ಸಂತೋಷವಾದಾಗ ಹಂಚಿಕೊಂಡು ಸಂಭ್ರಮಿಸಬಹುದು. ಕೀಟಲೆ ಮಾಡಬೇಕೆನಿಸಿದಾಗ ತುಂಟಾಟ ಆಡಬಹುದು, ದ್ವಂದ್ವ ಎದುರಾದಾಗ, ದಿಕ್ಕು ತೋಚದಾದಾಗ, ಧೈರ್ಯ ಕುಂದಿದಾಗ, ಅವಮಾನವನ್ನು ಎದುರಿಸಬೇಕಾದಾಗ ಯಾರದ್ದಾದರೂ ಸಲಹೆ ಬೇಕೆನಿಸಿದಾಗ... ಆಪ್ತ ಸಮಾಲೋಚನೆ ನಡೆಸಬಹುದು.

ಸೋಷಿಯಲ್ ನೆಟ್‌ವರ್ಕಿನ ಕಾಲೇಜು ಫ್ರೆಂಡಿಂದ ನೋಟ್ಸನ್ನೂ, ನೋಟ್ಸಿನ ಡೌಟಿಗೆ ಪರಿಹಾರವನ್ನೂ, ಅದರ ಜೊತೆಗೇ ಸ್ನೇಹವನ್ನೂ, ಪರಿಣಾಮವಾಗಿ ಪ್ರೀತಿಯನ್ನೂ, ಮುಂದುವರಿದು ರೋಮಾನ್ಸನ್ನೂ... ಥೂ ಪೋಲೀ ಗೀಲೀ ಬೇಡ... ವಿನಾಕಾರಣ ಉಲ್ಲಾಸಗೊಳ್ಳಲು ಒಂದು ಕಾರಣವನ್ನೂ ಇಂಟರ್ನೆಟ್ಟಿನ ಸೋಶಿಯಲ್ ನೆಟ್‌ವರ್ಕ್ ನೀಡುತ್ತದೆ.

ಭಾವನಾತ್ಮಕ ಜೀವನಕ್ಕಷ್ಟೇ ಅಲ್ಲ ಸೋಷಿಯಲ್ ನೆಟ್‌ವರ್ಕ್ ಅಂದರೆ, ಕೇವಲ ಭಾವನಾತ್ಮಕ ಸಾಂತ್ವನ ನೀಡುವ ‘ಇಮೋಷನಲ್ ವೆಬ್‌ತಾಣ’ ಅಂತೇನೂ ಭಾವಿಸಬೇಕಿಲ್ಲ. ಈ ನೆಟ್‌ವರ್ಕು... ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸು, ಉದ್ಯಮಿಗಳಿಗೆ ಮಾರ್ಕೆಟಿಂಗ್ ಚಾನಲ್ಲು, ರಿಟೇಲ್ ವ್ಯಾಪಾರಿಗಳಿಗೆ ಚಿಲ್ಲರೆ ಮಾರಾಟದ ಷೋರೂಮು, ಕಮಿಷನ್ ಬ್ರೋಕರ್‌ಗಳಿಗೆ ಕ್ಲಾಸಿಫೈಡ್ ಪೇಪರ್ರ್ಉಂ, ಸಮೀಕ್ಷೆ-ಸಂಶೋಧಕರಿಗೆ ಜನನಿಬಿಡ ಬಸ್ ಸ್ಟಾಂಡು, ಸಾಮಾನ್ಯ ಜನರಿಗೆ ಯೆಲ್ಲೋ ಪೇಜಸ್ಸು, ಉದ್ಯೋಗ ಹುಡುಕುವವರಿಗೆ ಎಚ್‌ಆರ್ ಕಲ್ಸಲ್ಟೆನ್ಸಿ, ಪತ್ರಕರ್ತರಿಗೆ ಸುದ್ದಿ ಸಿಗುವ ಹಾಟ್ ಸ್ಪಾಟು, ರಾಜಕಾರಣಿಗಳಿಗೆ ವಿಧಾನಸಭಾ ಕ್ಷೇತ್ರ, ಸುಮ್ಮನೆ ತಮಾಷೆ ಬೇಕಾದವರಿಗೆ ಎಂಟರ್‌ಟೈನ್‌ಮೆಂಟು, ಹೀಗೆ... ಸೋಷಿಯಲ್ ನೆಟ್‌ವರ್ಕು



ಅವರವರ ಭಾವಕ್ಕೆ... ಅವರವರರ ಲಾಭಕ್ಕೆ...

೨೦೦೮ರ ಅಮೆರಿಕದ ಚುನಾವಣೆಯ ಸಂದರ್ಭದಲ್ಲಿ ಬರಾಕ್ ಒಬಾಮಾ ಲಕ್ಷಾಂತರ ಜನ ಬೆಂಬಲಿಗರನ್ನೂ ಅವರಿಂದ ಮಿಲಿಯನ್‌ಗಟ್ಟಲೆ ದೇಣಿಗೆಯನ್ನೂ ನಂತರ ಅವರ ವೋಟನ್ನೂ ಪಡೆಯಲು ಸಾಧ್ಯವಾದದ್ದು ಸೋಷಿಯಲ್ ನೆಟ್‌ವರ್ಕಿಂಗ್ ಸೈಟುಗಳಿಂದ. ಇಂದು ವೋಡಾಫೋನ್‌ನ್ ಝೂಝೂ ಜಾಹೀರಾತು ಯೂಟ್ಯೂಬಿನಲ್ಲಿ ಲಭ್ಯ. ಆ ಜಾಹೀರಾತುಗಳಿಗೆ ಹತ್ತಾರು ಸಾವಿರ ಅಭಿಮಾನಿಗಳ ದಂಡು!

ಎರಡು ದಶಕದ ಹಿಂದೆ, ಈ-ಮೇಲ್ ಕ್ರಾಂತಿಯಾದ ಮೇಲೆ ಅಂತರ್ಜಾಲದಲ್ಲಿ ಸೋಷಿಯಲ್ ನೆಟ್‌ವರ್ಕಿಂಗ್ ಎಂಬ ಫಿನಾಮಿನಾ ಕೂಡ ಶುರುವಾಯಿತು. ಜಗತ್ತಿನ ಯಾವ್ಯಾವುದೋ ಭಾಗಗಳಿಂದ ಸಮಾನ ಆಸಕ್ತರು ಈ-ಮೇಲ್ ಮೂಲಕ ಗುಂಪು ಕಟ್ಟಿಕೊಳ್ಳಲಾರಂಭಿಸಿದರು. ಆದರೆ ಆಗ ಯಾರೂ ಅದನ್ನು ಸೋಷಿಯಲ್ ನೆಟ್‌ವರ್ಕಿಂಗ್ ಅಂತ ಕರೆಯುತ್ತಿರಲಿಲ್ಲ. ಸುಮ್ಮನೇ ‘ಈ-ಮೇಲ್ ಲಿಸ್ಟ್’ ಎನ್ನುತ್ತಿದ್ದರು. ನಂತರ, ಇದು ಫೋಟೋ, ಫೈಲು, ಕ್ಯಾಲೆಂಟರ್ ಮುಂತಾದವುಗಳನ್ನು ಹಂಚಿಕೊಳ್ಳುವ ‘ಗ್ರೂಪ್’ ಆಯಿತು. ನಂತರ, ಮದುವೆಗಾಗಿ ಗಂಡು-ಹೆಣ್ಣು ಹುಡುಕುವ ಮೆಟ್ರಿಮೋನಿಯಲ್ ತಾಣವಾಗಿ ಪ್ರವರ್ಧಮಾನಕ್ಕೆ ಬಂತು. ಇದಾದ ಮೇಲೆ, ದೀರ್ಘ ಕಾಲದ ವೈವಾಹಿಕ ಬಂಧನದ ಬದಲು, ತಕ್ಷಣದ ಮೋಜಿನ ಡೇಟಿಂಗಿಗಾಗಿ ವಿಶಾಲ ಮನಸ್ಸಿನ ಹುಡುಗ-ಹುಡುಗಿಯರನ್ನು ಅರಸುವ ಫ್ರೆಂಡ್‌ಫೈಂಡ್ ನೆಟ್‌ವರ್ಕ್‌ಗಳ ಭರಾಟೆ ಆರಂಭವಾಯಿತು. ಆಮೇಲೆ, ಸಜ್ಜನರೂ, ಮರ್ಯಾದಸ್ಥರೂ ತಮ್ಮ ಸಮಾನ ಮನಸ್ಕರ ಮಿತ್ರವೃಂದ ಸ್ಥಾಪಿಸಿಕೊಳ್ಳಲು ಅನುವಾಗುವ ಸೋಷಿಯಲ್ ನೆಟ್‌ವರ್ಕಿಂಗ್ ಸೈಟುಗಳು ಪ್ರಾರಂಭವಾದವು.

-ಹಲವು ವಿಧ

ಈಗ ಇಂಟರ್ನೆಟ್ಟಿನ ತುಂಬಾ ನೂರಾರು ಸೋಷಿಯಲ್ ನೆಟ್‌ವರ್ಕಿಂಗ್ ಸೈಟುಗಳು. Orkut, Myspace, Hi5, Facebookನಂಥ ಗೆಳೆಯರ ಬಳಗವಷ್ಟೇ ಅಲ್ಲ, ಬೇರೆ ಬೇರೆ ರೀತಿಯ ಸೋಷಿಯಲ್ ನೆಟ್‌ವರ್ಕಿಂಗ್ ಸೈಟುಗಳೂ ಆರಂಭವಾಗಿವೆ. Dig, Del.icio.us, Stumbleupon, Yahoo Buzzನಂಥ ಸೋಷಿಯಲ್, ಬುಕ್ ಮಾರ್ಕಿಂಗ್ ಸೈಟುಗಳು, Flickr, Picassaದಂಥ ಸೋಷಿಯಲ್ ಫೋಟೋ ಷೇರಿಂಗ್ ಸೈಟುಗಳು, Youtube, Vimeoದಂಥ ಸೋಷಿಯಲ್ ವಿಡಿಯೋ ಸೈಟುಗಳು, Twitter, Pingನಂಥ ಸೋಷಿಯಲ್ ಮೈಕ್ರೋ ಬ್ಲಾಗಿಂಗ್ ಸೈಟುಗಳು, Identi.caದಂಥ ಪಬ್ಲಿಕ್ ಟೈಮ್‌ಲೈನುಗಳು ಹೀಗೆ... ಹಲವು ವಿಧದ ಸೋಷಿಯಲ್ ನೆಟ್‌ವರ್ಕ್ ಆರಂಭವಾಗಿವೆ.

ಇಂದು ನಿಮ್ಮ ಈ-ಮೇಲ್ ತೆರೆದರೆ ಸಾಕು. ದಿನಕ್ಕೆ ಕನಿಷ್ಠ ಒಂದೆರಡಾದರೂ ಸೋಷಿಯಲ್ ನೆಟ್‌ವರ್ಕಿಗೆ ಸೇರಲು ನಿಮಗೆ ನಿಮ್ಮ ಯಾವುದೋ ಮಿತ್ರರಿಂದ ಆಹ್ವಾನ ಬಂದಿರುತ್ತದೆ. Tagged, Linkedin, Zorpia, Jaiku, Ning, yelp ಹೀಗೆ ಬೇರೆ ಬೇರೆ ವಿಚಿತ್ರ ಹೆಸರಿನ ಸೈಟಿನ ಆಹ್ವಾನಗಳು. ಕೆಲವೊಮ್ಮೆ ಈ ಆಹ್ವಾನಗಳು ಎಷ್ಟು ಕಿರಿಕಿರಿ ಉಂಟುಮಾಡುತ್ತವೆ ಅಂದರೆ, Tagged.comಗೆ ಜಗತ್ತಿನ ಅತ್ಯಂತ ಕಿರಿಕಿರಿಯ ಸೋಷಿಯಲ್ ನೆಟ್‌ವರ್ಕ್ ಅಂತ ಟೈಮ್ ಮ್ಯಾಗ್‌ಝಿನ್ ಬಿರುದು ನೀಡಿದೆ!

ಎಲ್ಲರೂ, ಎಲ್ಲ ಸೋಷಿಯಲ್ ನೆಟ್‌ವರ್ಕನ್ನೂ ಸೇರುವುದಾಗಲೀ, ಎಲ್ಲ ನೆಟ್‌ವರ್ಕ್‌ನಲ್ಲಿ ಇರುತ್ತೇನೆ ಎನ್ನುವುದಾಗಲೀ ಮೂರ್ಖತನ. ಹಾಗೆಯೇ, ಒಂದೂ ಸೋಷಿಯಲ್ ನೆಟ್‌ವರ್ಕ್ ತನಗೆ ಬೇಡ ಎನ್ನುವುದೂ ಜಾಣತನವಲ್ಲ.

ನಿಮ್ಮನ್ಯಾರೋ ಹುಡುಕುತ್ತಿದ್ದಾರೆ!

ಇಂದು ಸೋಷಿಯಲ್ ನೆಟ್‌ವರ್ಕಲ್ಲಿ ಇರುವುದು ಸ್ಟೈಲ್, ಫ್ಯಾಷನ್ ಅಷ್ಟೇ ಅಲ್ಲ ಅಗತ್ಯ ಕೂಡ. ಯಾರೋ ಎಲ್ಲೋ ನಿಮಗೋಸ್ಕರ ಹುಡುಕುತ್ತಿರುತ್ತಾರೆ. ಅವರಿಗೆ ನೀವು ಸಿಗಬೇಕು ಅಂದರೆ ನೀವು ಈ ನೆಟ್‌ವರ್ಕಿನಲ್ಲಿ ಎಲ್ಲೋ ಇರಬೇಕು.

ನಿಮ್ಮ ಬಾಲ್ಯದ ಗೆಳೆಯ, ಗೆಳತಿ, ಯಾವುದೋ ಹಂತದಲ್ಲಿ ನಿಮ್ಮಿಂದ ದೂರವಾದ ನಿಮ್ಮ ಕ್ಲಾಸ್‌ಮೇಟ್, ನಿಮ್ಮ ಪಕ್ಕದ್ಮನೆ ಈನಾ-ಮೀನಾ... ಯಾರೋ ನಿಮಗೋಸ್ಕರ ತಡಕಾಡುತ್ತಿರಬಹುದು. ನಿಮಗೆ ಕೆಲಸ ನೀಡಬೇಕಾದ ಕಂಪನಿ ನಿಮ್ಮ ಬಗ್ಗೆ ಮಾಹಿತಿ ಬೇಕೆಂದರೆ, ಇಂಟರ್‌ನೆಟ್‌ಲ್ಲಿ ಜಾಲಾಡುತ್ತಿರಬಹುದು. ನಿಮ್ಮ ಬಗ್ಗೆ ಲೇಖನ ಬರೆಯಲು ಬರಹಗಾರರು ಮಾಹಿತಿ ಸಂಗ್ರಹಿಸುತ್ತಿರಬಹುದು. ಯಾವುದೋ ಕ್ರಿಮಿನಲ್ ಕೇಸಿಗೆ ಸಂಬಂಧಿಸಿದಂತೆ ಪೊಲೀಸರೂ ನಿಮ್ಮ ಸುಳಿವನ್ನು ಇಂಟರ್‌ನೆಟ್ಟಿನಲ್ಲಿ ಪಡೆಯುತ್ತಿರಬಹುದು! ಯಾರೂ ನಿಮ್ಮ ಬಗ್ಗೆ ಇಂಟರ್‌ನೆಟ್ಟಿನಲ್ಲಿ ಹುಡುಕಾಡುವುದಿಲ್ಲ ಎಂದರೆ, Sorry, ನೀವು ಈ ಜಗತ್ತಿನಲ್ಲಿ ಯಾರಿಗೂ ಬೇಡವಾಗಿದ್ದೀರಿ ಅಂತ ಅರ್ಥ!

ನೀವು ಗುಗ್ಗು ಅಲ್ಲ, ಈ ಜಮಾನದವರು ಅನ್ನಿಸಿಕೊಳ್ಳಬೇಕಾದರೆ ನಿಮಗಿರುವುದು ಎರಡೇ ಆಯ್ಕೆ... ಒಳ್ಳೆಯ ಸೋಷಿಯಲ್ ನೆಟ್‌ವರ್ಕಿನಲ್ಲಿ ಇರುವುದು ಅಥವಾ ಒಳ್ಳೆಯ ನೆಟ್‌ವರ್ಕ್ ಸೇರುವುದು!

ಸೋಷಿಯಲ್ ನೆಟ್‌ವರ್ಕ್ ಅಂದರೆ ಏನು?

ಲಯನ್ಸ್ ಕ್ಲಬ್, ರೋಟರಿ ಕ್ಲಬ್, ರಾಜಕುಮಾರ್ ಅಭಿಮಾನಿಗಳ ಬಳಗ, ಕಟ್ಟೆ ಗೆಳೆಯರ ಬಳಗ, ಯುವಕ ಸಂಘ ... ಹೀಗೆ ನೂರಾರು ಸಂಘ ಸಂಸ್ಥೆಗಳ ಹೆಸರು ಕೇಳಿದ್ದೀರಲ್ಲ. ಇವೆಲ್ಲ ವಾಸ್ತವ ಜಗತ್ತಿನ ಸೋಷಿಯಲ್ ನೆಟ್‌ವರ್ಕ್‌ಗಳು. ಅದೇ ರೀತಿ, ಇಂಟರ್‌ನೆಟ್ಟಿನಲ್ಲೂ ಗೆಳೆಯರ ಬಳಗವಿದೆ. ಈ ಬಳಗದಲ್ಲಿ ಜಗತ್ತಿನ ಬೇರೆ ಬೇರೆ ಪ್ರದೇಶಗಳಿಂದ, ಬೇರೆ ಬೇರೆ ವೃತ್ತಿಯ, ಬೇರೆ ಬೇರೆ ಪ್ರವೃತ್ತಿಯ, ಬೇರೆ ಬೇರೆ ವಯಸ್ಸಿನ ವ್ಯಕ್ತಿಗಳು ಸದಸ್ಯರಾಗಿರುತ್ತಾರೆ. ಈ ಸದಸ್ಯರಲ್ಲಿ ಎಲ್ಲರಿಗೂ ಎಲ್ಲರ ಪರಿಚಯವಿರುವುದಿಲ್ಲ. ಆದರೆ, ಈ ಸದಸ್ಯರು ಸಮಾನ ಆಸಕ್ತಿ ಇರುವ ವ್ಯಕ್ತಿಗಳನ್ನು ಆಯ್ದುಕೊಂಡು ಅವರ ಜೊತೆ ಮಾಹಿತಿ ಅಥವಾ ಸ್ನೇಹ ವಿನಿಮಯ ಮಾಡಿಕೊಳ್ಳುತ್ತಾರೆ. ಇಲ್ಲಿ ಮೋಜು, ಮಸ್ತಿ, ಶಿಕ್ಷಣ, ಬಿಸಿನೆಸ್, ಜಾಹೀರಾತು, ಮಾಹಿತಿ, ಸುದ್ದಿ, ಫೋಟೋಗಳು, ವಿಡಿಯೋಗಳು, ಸಂಗೀತ, ಸ್ಲೈಡ್‌ಷೋ ಎಲ್ಲಾ ಇರುತ್ತದೆ.

ನೆಟ್‌ವರ್ಕ್ ಸೇರುವಾಗ ಜಾಗೃತೆ

ಬಾಳೆಹಣ್ಣು ತಿನ್ನುವಷ್ಟೇ ಸುಲಭ ಕೆಲಸ ಇದು. ಬಹುತೇಕ ನೆಟ್‌ವರ್ಕ್‌ಗಳಿಗೆ ಉಚಿತವಾಗಿ ಸೇರಬಹುದು. ಶುಲ್ಕ ಕೊಟ್ಟರೆ ಹೆಚ್ಚುವರಿ ಸೇವೆಗಳೂ ಲಭ್ಯ. ನೆಟ್‌ವರ್ಕ್ ಸೇರುವಾಗ ನೀವು ಕೆಲವು ಮಾಹಿತಿಯನ್ನು ಕೊಡುತ್ತೀರಿ. ಆಗ ಈ ಟಿಪ್ಸ್ ಗಮನಿಸಿ:

ನಿಮ್ಮ ಬ್ಯಾಂಕಿಂಗ್ ಸಂಬಂಧಿ ಮಾಹಿತಿ, ಈ-ಮೇಲ್ ವಿಳಾಸ, ಪಾಸ್‌ವರ್ಡ್ ನೀಡಲೇ ಬೇಡಿ.

ಸೋಷಿಯಲ್ ನೆಟ್‌ವರ್ಕಿಗೆಂದೇ ಪ್ರತ್ಯೇಕ ಈ-ಮೇಲ್ ಐಡಿ ಇದ್ದರೆ ಒಳ್ಳೆಯದು. ಈ-ಮೇಲ್ ಪಾಸ್‌ವರ್ಡ್ ಹಾಗೂ ನೆಟ್‌ವರ್ಕ್ ಪಾಸ್‌ವರ್ಡ್ ಎಲ್ಲಾ ಬೇರೆಯಾಗಿರಲಿ.

ನಿಜವಾದ ಜನ್ಮ ದಿನ ನೀಡಬೇಡಿ. ಜನ್ಮದಿನ ನಿಮ್ಮ ಹಣಕಾಸು ವಹಿವಾಟಿನಲ್ಲಿ ಪ್ರಮುಖ ಮಾಹಿತಿಗಳಲ್ಲೊಂದು.

ಹೊಸ ಮಿತ್ರರನ್ನು ಮಾಡಿಕೊಳ್ಳುವಾಗ ಅವರ ಹಿನ್ನೆಲೆ ತಿಳಿದುಕೊಳ್ಳಲು ಅವಕಾಶವಿರುತ್ತದೆ. ಓದಿ ನಿಮಗೆ ಒಪ್ಪಿಗೆಯಾದರೆ ಮಾತ್ರ ಸ್ನೇಹಹಸ್ತ ಚಾಚಿ. ಒಂದುವೇಳೆ, ಎಲ್ಲರನ್ನೂ ಮಿತ್ರರನ್ನಾಗಿ ಮಾಡಿಕೊಂಡರೂ ವ್ಯವಹರಿಸುವಾಗ ಎಚ್ಚರ.

ಮಿತ್ರರನ್ನು ಆಹ್ವಾನಿಸಿ ಎಂಬ ಬಟನ್ ಎಲ್ಲಾ ನೆಟ್‌ವರ್ಕ್‌ನಲ್ಲೂ ಇರುತ್ತದೆ. ಅದನ್ನು ಆದಷ್ಟೂ ಕಡಿಮೆ ಬಳಸಿ. ಇಲ್ಲದಿದ್ದರೆ ನಿಮ್ಮ ಆ ರಿಕ್ವೆಸ್ಟ್‌ನಿಂದ ಮಿತ್ರರಿಗೆಲ್ಲ ಕಿರಿಕಿರಿ.



ಇಲ್ಲೂ ಕ್ರಿಮಿನಲ್‌ಗಳಿದ್ದಾರೆ ಎಚ್ಚರ!


ಸೋಷಿಯಲ್ ನೆಟ್‌ವರ್ಕ್ ಅಂದರೆ... ಸುಖದ ಹೊಳೆ, ಸಂತೋಷದ ಮಳೆ ಅಂದುಕೊಳ್ಳುವ ಹಾಗಿಲ್ಲ. ಇದರಲ್ಲೂ ಅನೇಕ ಅಪಾಯಗಳಿವೆ. ಅವುಗಳ ಬಗ್ಗೆ ಜಾಗರೂಕರಾಗಿರಿ.

ಲೈಂಗಿಕ ಕಿರುಕುಳ
ಸೋಷಿಯಲ್ ನೆಟ್‌ವರ್ಕಿನಲ್ಲಿ ಅತ್ಯಂತ ದೊಡ್ಡ ಸಮಸ್ಯೆ ಇದು. ಇಂಟರ್‌ನೆಟ್‌ನಲ್ಲಿ ಗೋಮುಖ ವ್ಯಾಘ್ರಗಳು ಅನೇಕ. ಸಂಭಾವಿತರಂತೆ ಪರಿಚಯವಾಗುವ ಇವರು ಕ್ರಮೇಣ ರೋಮ್ಯಾಂಟಿಕ್ ಆಗುತ್ತಾರೆ. ಆಮೇಲೆ, ಸಾಧುಗಳಂತೆ, ಇಂಟರ್‌ನೆಟ್ಟಿನ ಹೊರಗೆ, ವಾಸ್ತವ ಜಗತ್ತಿನಲ್ಲಿ ಭೇಟಿಯಾಗಲು ಆರಂಭಿಸುತ್ತಾರೆ. ಆ ಭೇಟಿಯನ್ನು ಲೈಂಗಿಕವಾಗಿ ಅಥವಾ ಇನ್ನಾವುದೇ ರೀತಿಯಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಅಪಹರಣ, ಕಳವು ಇತ್ಯಾದಿ
ಇಂಟರ್ನೆಟ್ ಮೂಲಕ ಪರಿಚಯವಾಗುವ ಸೋಗುಧಾರಿಗಳು, ಮಕ್ಕಳು ಹಾಗೂ ಯುವತಿಯರನ್ನು ಅಪಹರಣ ಮಾಡಿ ಒತ್ತೆ ಹಣಕ್ಕಾಗಿ ತಂದೆ ತಾಯಿಯರನ್ನು ಪೀಡಿಸಿದ ಅನೇಕ ಉದಾಹರಣೆಗಳಿವೆ. ಮನೆಯ ವಿಳಾಸ, ಮನೆಯಲ್ಲಿ ಇರುವ ವ್ಯಕ್ತಿಗಳ ಸಂಖ್ಯೆ, ಯಾವಾಗ ಮನೆಯಲ್ಲಿ ವ್ಯಕ್ತಿಗಳಿರುವುದಿಲ್ಲ ಎಂಬುದನ್ನೆಲ್ಲಾ ತಿಳಿದು ಮನೆಯನ್ನು ಕಳವು ಮಾಡಿರುವ ಘಟನೆಗಳೂ ನಡೆದಿವೆ. ನೆಟ್ ಮೂಲಕ ಪರಿಚಯವಾದ ಸ್ನೇಹದ ಮೂಲಕ ಮನೆ ಪ್ರವೇಶಿಸುವ ಕ್ರಿಮಿನಲ್‌ಗಳು ಕೊಲೆ ಮಾಡಿರುವ ಅಪರಾಧಗಳೂ ಜರುಗಿವೆ.

ಮಾನ ಹರಾಜು, ಅವಮಾನ
ಇಂಟರ್‌ನೆಟ್ಟಿನ ಇನ್ನೊಂದು ದೊಡ್ಡ ಅಪಾಯ ಇದು. ಕೆಲವು ದೂರ್ತರು ನಿಮ್ಮ ಮಾನ ಹರಾಜು ಹಾಕಲು ಅಥವಾ ನಿಮಗೆ ಅವಮಾನ ಮಾಡಲು ಸೋಷಿಯಲ್ ನೆಟ್‌ವರ್ಕ್‌ಗಳನ್ನು ಬಳಸಿಕೊಳ್ಳಬಹುದು. ನಿಮ್ಮ ಹೆಸರಿನಲ್ಲಿ ಸುಳ್ಳು ಖಾತೆ ತೆರೆದು, ಕೃತಕವಾಗಿ ಸೃಷ್ಟಿಸಿದ ನಿಮ್ಮ ನಗ್ನ ಚಿತ್ರಗಳನ್ನು ಅಥವಾ ಲೈಂಗಿಕ ಕ್ರಿಯೆಯ ಚಿತ್ರಗಳನ್ನು ನೆಟ್‌ವರ್ಕಿನಲ್ಲಿ ಪ್ರದರ್ಶಿಸಬಹುದು. ನಿಮ್ಮ ಬಗ್ಗೆ ಅವಾಚ್ಯ ಬೈಗುಳಗಳನ್ನೋ ಅಥವಾ ಅವಮಾನ ಮಾಡುವ ಬರಹಗಳನ್ನೋ ಹಾಕಬಹುದು. ಕೆಲವೊಮ್ಮೆ ಈ ವಿಷಯದಲ್ಲಿ ಬ್ಲಾಕ್‌ಮೇಲ್ ಮಾಡುವ ಸಂಭವವೂ ಇದೆ. ಅಥವಾ ಕೇವಲ ಕಿರಿಕಿರಿ ಉಂಟು ಮಾಡಲು ನಿಮ್ಮ ಮೊಬೈಲ್ ಫೋನ್ ಬಹಿರಂಗಪಡಿಸುವುದು, ಫೋನು ಮಾಡುವಂತೆ ಇತರರನ್ನು ಆಹ್ವಾನಿಸುವುದು... ಮುಂತಾದ ಕಿಡಿಗೇಡಿ ಕೆಲಸಗಳನ್ನು ಮಾಡಬಹುದು.

ಹ್ಯಾಕಿಂಗ್, ವೈಯಕ್ತಿಕ ಮಾಹಿತಿ ಕಳವು

ಇದು ಕಂಪ್ಯೂಟರಿನ ದೊಡ್ಡ ಸಮಸ್ಯೆ. ಸೋಶಿಯಲ್ ನೆಟ್‌ವರ್ಕ್‌ಲ್ಲಿ ನಿಮ್ಮ ಸ್ನೇಹ ಬೆಳೆಸಿ, ನಿಮ್ಮ ಕೆಲವು ವೈಯಕ್ತಿಕ ಮಾಹಿತಿ ಪಡೆದು ದುರುಪಯೋಗ ಮಾಡಬಹುದು. ಅಥವಾ, ನಿಮ್ಮ ಖಾತೆಯನ್ನು ಹ್ಯಾಕ್ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಆದ್ದರಿಂದ, ಇಂಟರ್ನೆಟ್ಟಿನಲ್ಲಿ, ಸೋಷಿಯಲ್ ಸೈಟಿನಲ್ಲಿ ಸೂಕ್ಷ್ಮವೆನಿಸುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎಂದೂ ಬಹಿರಂಗ ಮಾಡಬೇಡಿ.

ಮಕ್ಕಳ ದುರ್ಬಳಕೆ

ಸೋಷಿಯಲ್ ನೆಟ್‌ವರ್ಕಿನಲ್ಲಿ ಇತ್ತೀಚೆಗೆ ಚಿಕ್ಕ ಮಕ್ಕಳು, ಹದಿಹರೆಯದವರ ಸಂಖ್ಯೆ ಹೆಚ್ಚುತ್ತಿದೆ. ಕೆಲವು ದೂರ್ತರು ಇಂಥವರ ಮೇಲೆ ಕಣ್ಣಿಟ್ಟಿರುತ್ತಾರೆ. ಚಿಕ್ಕ ಮಕ್ಕಳು ಹಾಗೂ ಹದಿಹರೆಯದವರು ತಮ್ಮ ಮುಗ್ಧತೆಯಿಂದಾಗಿ ಸುಲಭವಾಗಿ ತುತ್ತಾಗುತ್ತಾರೆ. ಈ ಬಗ್ಗೆ ಪಾಲಕರು ಹೆಚ್ಚು ಗಮನಹರಿಸಲೇಬೇಕು.

ಸೈನಿಕರ ಮಾಹಿತಿ

ತಮ್ಮ ಮಿತ್ರರು ಹಾಗೂ ಮನೆಯವರ ಜೊತೆ ಸಂಪರ್ಕದಲ್ಲಿರಲು, ಸುಮಾರು ೩೫೦೦೦ ಭಾರತೀಯ ಸೈನಿಕರು ಫೇಸ್‌ಬುಕ್ ಆರ್ಕುಟ್‌ನಂಥ ಸೋಷಿಯಲ್ ನೆಟ್‌ವರ್ಕ್ ಸೇರಿಕೊಂಡಿದ್ದಾರೆ. ಇವರು ಅಥವಾ ಇವರ ಸಂಬಂಧಿಕರು ಸೋಷಿಯಲ್ ನೆಟ್‌ವರ್ಕಿನಲ್ಲಿ ಸೈನ್ಯ ಅಥವಾ ಸೈನಿಕರ ಸಂಬಂಧಿ ಮಾಹಿತಿ, ಫೋಟೋ, ನಕಾಶೆ ಮುಂತಾದ ಮಾಹಿತಿ ನೀಡುವಾಗ ಬಹಳ ಜಾಗೃತೆ ವಹಿಸಬೇಕು. ಸೂಕ್ಷ್ಮ ವಿಷಯಗಳನ್ನು ನೀಡಲೇ ಬಾರದು ಎಂದು ಇತ್ತೀಚೆಗೆ ಭಾರತೀಯ ಸೇನೆ ಆದೇಶವನ್ನೂ ನೀಡಿದೆ. ನೀವು ಸೈನಿಕರ ಸಂಬಂಧಿಯಾಗಿದ್ದರೆ, ಸೋಷಿಯಲ್ ನೆಟ್‌ವರ್ಕಿನಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚು ಎಂಬುದನ್ನು ಮರೆಯಬೇಡಿ.

ಸಮಯ ಹಾಳು

ಸೋಷಿಯಲ್ ನೆಟ್‌ವರ್ಕ್ ಒಂಥರಾ ಅಡಿಕ್ಟಿವ್. ಇದರಲ್ಲಿ ಒಮ್ಮೆ ಮುಳುಗಿದರೆ, ಸಮಯ ಹೋದದ್ದೇ ತಿಳಿಯುವುದಿಲ್ಲ. ಹಾಗಾಗಿ, ಅನೇಕರ ಸಮಯ ವ್ಯರ್ಥವಾಗುತ್ತದೆ. ಅದಕ್ಕಾಗಿ ಸೋಷಿಯಲ್ ನೆಟ್‌ವರ್ಕ್‌ಗಳ ಬಳಕೆಯ ಮೇಲೆ ಹಿಡಿತ ಹಾಗೂ ಮಿತಿ ಇಟ್ಟುಕೊಳ್ಳುವುದು ಅಗತ್ಯ.



ನಿಮಗೆ ಯಾವ ನೆಟ್‌ವರ್ಕ್ ಸೂಕ್ತ? ಟಾಪ್ ೧೦ ಸಲಹೆ

ಇಂದು ಇಂಟರ್‌ನೆಟ್ಟಿನಲ್ಲಿ ನೂರಾರು ಸೋಷಿಯಲ್ ನೆಟ್‌ವರ್ಕ್‌ಗಳಿವೆ. ಎಲ್ಲವನ್ನೂ ನೀವು ಸೇರುವುದು ಸಾಧ್ಯವೂ ಇಲ್ಲ. ತರವೂ ಅಲ್ಲ.

ಯಾವ್ಯಾವುದೋ ಸೋಷಿಯಲ್ ನೆಟ್‌ವರ್ಕ್ ಸೇರುವಂತೆ ನಿಮಗೆ, ನಿಮ್ಮ ಗೆಳೆಯರ ಹೆಸರಿನಲ್ಲಿ, ಬರುವ ಆಹ್ವಾನಗಳನ್ನೆಲ್ಲ ನೀವು ಮನ್ನಿಸಬೇಡಿ.

ಒಟ್ಟಾರೆ ೩-೪ ನೆಟ್‌ವರ್ಕ್‌ಗಳನ್ನು ನೀವು ಸೇರಿಕೊಂಡರೆ ಸಾಕು. ಅದಕ್ಕಿಂತ ಹೆಚ್ಚು ನೆಟ್‌ವರ್ಕ್ ಸೇರಿಕೊಂಡರೆ, ಯಾವ ನೆಟ್‌ವರ್ಕಿನಲ್ಲೂ ಕ್ವಾಲಿಟಿ ಟೈಮ್ ಕಳೆಯಲು ನಿಮ್ಮಿಂದ ಸಾಧ್ಯವಾಗದು.

ಸಾಮಾನ್ಯ ವಿಷಯಗಳಿಗೆ ಫೇಸ್‌ಬುಕ್ ಅಥವಾ ಆರ್ಕುಟ್, ಸಂದೇಶ ವಿನಿಮಯಕ್ಕಾಗಿ ಟ್ವೀಟರ್ ಹಾಗೂ ವೃತ್ತಿಪರ ವಿಷಯಗಳಿಗೆ ಲಿಂಕ್ಡ್‌ಇನ್ ನೆಟ್‌ವರ್ಕ್ ಸೇರಿದರೆ ಬೇಕಾದಷ್ಟಾಯಿತು. ಈ ಮೂರು ಅಂತಾರಾಷ್ಟ್ರೀಯ ನೆಟ್‌ವರ್ಕ್ ಅಲ್ಲದೇ, ನಿಮ್ಮ ಭಾಷೆ, ಸಮುದಾಯ ಅಥವಾ ಆಸಕ್ತಿಗೆ ಸಂಬಂಧಿಸಿದ ಇನ್ನೊಂದು ಲೋಕಲ್ ನೆಟ್‌ವರ್ಕ್ ಸೇರುವುದು ಒಳ್ಳೆಯದು.

Facebook.com, Orkut.comಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡರೆ ಸಾಕು. ಪ್ರಪಂಚದಲ್ಲಿ ಬೇರೆಡೆ ಅಷ್ಟೇನೂ ಪ್ರಸಿದ್ಧವಲ್ಲದಿದ್ದರೂ, ಆರ್ಕುಟ್ ಭಾರತದಲ್ಲಿ ಅತ್ಯಧಿಕ ಸದಸ್ಯರನ್ನು ಹೊಂದಿರುವ ನೆಟ್‌ವರ್ಕ್. ಫೇಸ್‌ಬುಕ್ ಜಗತ್ತಿನ ಅತ್ಯಂತ ಪ್ರಸಿದ್ಧ ನೆಟ್‌ವರ್ಕ್ ಆದರೆ, ಭಾರತದಲ್ಲಿ ಇದೀಗ ಜನಪ್ರಿಯವಾಗುತ್ತಿದೆ. ಅಷ್ಟು ಇಷ್ಟವಾದರೆ, ಇವೆರಡೂ ನೆಟ್‌ವರ್ಕ್ ಸೇರಿಕೊಂಡರೂ ಪರವಾಗಿಲ್ಲ. ಆದರೆ, ಇನ್ನಷ್ಟು ನೆಟ್‌ವರ್ಕ್ ಸೇರಲು ಹೋಗಬೇಡಿ.

ಈ ನೆಟ್‌ವರ್ಕ್‌ಗಳಲ್ಲಿ ಸಮಾನ ಮನಸ್ಕರನ್ನು ಹುಡುಕಬಹುದು. ಅವರ ಬಗ್ಗೆ ಮಾಹಿತಿ ತಿಳಿದುಕೊಂಡು ಹೊಸ ಮಿತ್ರರನ್ನು ಮಾಡಿಕೊಳ್ಳಬಹುದು. ಅವರೊಡನೆ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಫೋಟೋ, ವಿಡಿಯೋ, ಎಂಪಿಥ್ರೀ ಮುಂತಾದವುಗಳನ್ನು ಹಂಚಿಕೊಳ್ಳಬಹುದು. ಆಟ ಆಡಬಹುದು, ವಿವಿಧ ಮೋಜಿನ ಕ್ವಿಝ್, ಜ್ಯೋತಿಷ್ಯ, ಪರ್ಸ್‌ನಾಲಿಟಿ ಟೆಸ್ಟ್‌ನಲ್ಲಿ ಪಾಲ್ಗೊಳ್ಳಬಹುದು. ವರ್ಚುವಲ್ ಗಿಫ್ಟ್, ಗ್ರೀಟಿಂಗ್ ಕಳಿಸಬಹುದು. ಮಿತ್ರರ ಕಾಲೆಳೆಯಬಹುದು ಅಥವಾ ಇಲ್ಲಿ ಸೀರಿಯಸ್ ಬಿಸಿನೆಸ್ ಕನ್ಸಲ್ಟನ್ಸಿ ನಡೆಸಬಹುದು. ಇವೆರಡೂ ಮೋಸ್ಟ್ ಫ್ಲೆಕ್ಸಿಬಲ್ ಹಾಗೂ ಮೋಸ್ಟ್ ಪವರ್‌ಫುಲ್ ನೆಟ್‌ವರ್ಕ್‌ಗಳು.

Twitter.com ಇದು ಜಗತ್ತಿನ ಹೊಸ ಕ್ರೇಜ್. ನೀವು ಸದ್ಯಕ್ಕೆ ಸೇರಬಹುದಾದ ಇನ್ನೊಂದು ರೀತಿಯ ಅತ್ಯುತ್ತಮ ನೆಟ್‌ವರ್ಕ್. ಎಸ್‌ಎಂಎಸ್ಸನ್ನು ಆನಂದಿಸುವಂಥ ಅನುಭವನ್ನು ಈ ನೆಟ್‌ವರ್ಕ್ ನೀಡುತ್ತದೆ. ಇದು ಅತ್ಯಂತ ವೇಗದ ಸುದ್ದಿ ಪ್ರಸಾರ ಮಾಡಲು ಹಾಗೂ ಸುದ್ದಿ ತಿಳಿಯಲು ಉಪಯುಕ್ತ ಮೈಕ್ರೋ ಬ್ಲಾಗಿಂಗ್ ನೆಟ್‌ವರ್ಕ್. ಒಂದು ಸಂದೇಶದಲ್ಲಿ ೧೪೦ ಅಕ್ಷರಗಳನ್ನು ಮಾತ್ರ ಬರೆಯಲು ಸಾಧ್ಯ.

‘ಬೆಂಗಳೂರಿನಲ್ಲಿ ಗಡ್‌ಬಡ್ ಐಸ್‌ಕ್ರೀಮ್ ಎಲ್ಲಿ ಚೆನ್ನಾಗಿದೆ? ಕಡಿಮೆ ದರದಲ್ಲಿ ಅತ್ಯುತ್ತಮ ಡ್ರೆಸ್ ಮಟೀರಿಯಲ್ ಎಲ್ಲಿ ಸಿಗುತ್ತದೆ? ಐಎಫ್‌ಬಿ ವಾಷಿಂಗ್ ಮಷಿನ್ ಬೆಟರ್ರ್ಓ‌ ಎಲ್ಜಿಯೋ’ -ಇಂಥ ಪ್ರಶ್ನೆಯನ್ನೂ ಈ ಟ್ವೀಟರ್‌ನಲ್ಲಿ ಕೇಳಬಹುದು. ಆಗ, ಟ್ವೀಟರ್ ನೆಟ್‌ವರ್ಕಿನ ಮಿತ್ರರು ಉತ್ತರ ನೀಡುತ್ತಾರೆ. ಬಹಳಷ್ಟು ಜನ ಇಂಥ ಉಪಯೋಗಕ್ಕೆ ಟ್ವೀಟರನ್ನು ಬಳಸುತ್ತಿದ್ದಾರೆ. ನಿಮಗೂ ಉಪಯೋಗವಾದೀತು.

Linkedin.com ವೃತ್ತಿಪರರು ಹಾಗೂ ಉದ್ಯೋಗಸ್ಥರು ಸೇರಬಹುದಾದ ಇನ್ನೊಂದು ಸೋಷಿಯಲ್ ನೆಟ್‌ವರ್ಕ್. ಇದೊಂದು ವೃತ್ತಿಪರರ ಡೈರಕ್ಟರಿ ಅಂದರೂ ಪರವಾಗಿಲ್ಲ. ಇತರ ವೃತ್ತಿಪರರ ಜೊತೆ ಸಂವಹನ ನಡೆಸಲು, ಅವರ ವೃತ್ತಿ ಹಿನ್ನೆಲೆ ತಿಳಿದುಕೊಳ್ಳಲು, ಬಿಸಿನೆಸ್ ಅಥವಾ ವೃತ್ತಿಪರ ಸಂಬಂಧ ಬೆಳೆಸಲು ಈ ನೆಟ್‌ವರ್ಕ್ ಉಪಯುಕ್ತ. ಆದರೆ, ಕೇವಲ ನೌಕರಿ ಹುಡುಕಲು ಆಸಕ್ತರಾಗಿರುವವರು Naukri.com ನೆಟ್‌ವರ್ಕ್ ಸೇರಬಹುದು.

ಈ ಮೇಲಿನ ಮೂರು ಅಂತಾರಾಷ್ಟ್ರೀಯ ನೆಟ್‌ವರ್ಕ್ ಹೊರತಾಗಿ ನೀವು ಸೇರಬಹುದಾದ ಇನ್ನೊಂದು ಲೋಕಲ್ ನೆಟ್‌ವರ್ಕ್ KannadaBlogs.ning.com. ಕನ್ನಡದಲ್ಲಿ ಬ್ಲಾಗಿಂಗ್ ಚಟುವಟಿಕೆ ಸಾಕಷ್ಟು ನಡೆಯುತ್ತಿದೆ. ಆದರೆ, ಅವೆಲ್ಲ ಚದುರಿಹೋಗಿರುವುದರಿಂದ ಯಾರ ಬ್ಲಾಗ್ ಎಲ್ಲಿದೆ? ಯಾವ ಬ್ಲಾಗಿನಲ್ಲಿ ಹೊಸದೇನಿದೆ? ಎಂದು ತಿಳಿಯುವುದು ಕಷ್ಟ. ಈ ಹಿನ್ನೆಲೆಯಲ್ಲಿ, KannadaBlogs.ning.com. ಎಂಬ ಕನ್ನಡ ಬ್ಲಾಗಿಗರ ಕೂಟ ಸೇರಬಹುದು.

ಫೋಟೋ ವಿನಿಮಯಕ್ಕೆ Flickr.comಉತ್ತಮ ನೆಟ್‌ವರ್ಕ್. ಆದರೆ, ಉಚಿತ ಬಳಕೆದಾರರಿಗೆ ಈ ನೆಟ್‌ವರ್ಕಿನಲ್ಲಿ ಕಡಿವಾಣ ಹೆಚ್ಚು. ಅದಕ್ಕಾಗಿ, PicasaWeb.com ನೆಟ್‌ವರ್ಕ್ ಬಳಸಬಹುದು. ವಿಡಿಯೋ ವಿನಿಮಯಕ್ಕಾಗಿ YouTube.com ಉತ್ತಮ ನೆಟ್‌ವರ್ಕ್.

೧೦ ಇದಲ್ಲದೇ, ಸ್ಲೈಡ್ ವಿನಿಮಯಕ್ಕೆ Slide.com ಅಥವಾ SlideShare.net ಸೇರಬಹುದು.

Wednesday, August 19, 2009

ಪುಟ ವಿನ್ಯಾಸ - ಜಿಲ್ಲಾ ಪತ್ರಿಕೆಗಳಿಗೆ ಒಂದು ಕಾರ್ಯಾಗಾರ

ತ್ತೀಚೆಗೆ ಸಂಯುಕ್ತ ಕರ್ನಾಟಕ ಹಾಗೂ ಹೊಸ ದಿಗಂತ ಪತ್ರಿಕೆಗಳು ಹೊಸ ರೂಪ ಪಡೆಯುವುದರೊಂದಿಗೆ ರಾಜ್ಯ ಮಟ್ಟದ ಕನ್ನಡ ಪತ್ರಿಕೆಗಳೆಲ್ಲಾ ಒಂದು ಸುತ್ತು ಮರುವಿನ್ಯಾಸ ಪ್ರಕ್ರಿಯೆಗೆ ಒಳಗಾದಂತಾಗಿದೆ. ಈಗ ಕನ್ನಡಪತ್ರಿಕಾ ಕಚೇರಿಗಳಲ್ಲೆಲ್ಲಾ Newspaper Design ಎನ್ನುವುದು Buzz word. ಮುಂದಿನ ತಯಾರಿ ಗ್ರಾಮೀಣ ಹಾಗೂ ಜಿಲ್ಲಾ ಪತ್ರಿಕೆಗಳದ್ದು. ಕರ್ನಾಟಕ ಮಾಧ್ಯಮ ಅಕಾಡೆಮಿ ಇತ್ತೀಚೆಗೆ ಕೋಲಾರ ಜಿಲ್ಲಾ ಮಟ್ಟದ ಪತ್ರಿಕೆಗಳಿಗಾಗಿ ಒಂದು ಕಾರ್ಯಾಗಾರ ಏರ್ಪಡಿಸಿತ್ತು. ಅಲ್ಲಿ ನಾನು ಪುಟ ವಿನ್ಯಾಸದ ಮೂಲ ತತ್ವಗಳ ಕುರಿತು ನೀಡಿದ ಒಂದೂವರೆಗಂಟೆಯ ಪ್ರಸೆಂಟೇಶನ್ ಇದು. [ ppt ಇಂಗ್ಲೀಷಿನಲ್ಲಿದ್ದರೂ ವಿವರಣೆ ನೀಡಿದ್ದು ಕನ್ನಡದಲ್ಲಿ :-) ]

Wednesday, August 12, 2009

ಸಂಪಾದಕರ ಕಡತಗಳಿಗೆ ಬೆಂಕಿ: ಒಂದು ಅಧಿಕೃತ ಸ್ಪಷ್ಟನೆ

ಪ್ರೆಸ್‌ಕ್ಲಬ್ ವದಂತಿಗಳಿಗೆ ಹೆಚ್ಚು ವಿನಾಶಕಾರಿ ಶಕ್ತಿ ಇದೆಯೋ? ಬ್ಲಾಗುಗಳಿಗೋ?
Well, ನನ್ನ ಪ್ರಕಾರ ಬ್ಲಾಗುಗಳಿಗೆ ಭಯಂಕರ ಶಕ್ತಿ ಇದೆ.

ಕಳೆದ ಸುಮಾರು 20 ದಿನದಿಂದ ನನ್ನ ಹಾಗೂ ಕನ್ನಡಪ್ರಭ ಸಂಪಾದಕ ರಂಗನಾಥ್ ಅವರ ರಾಜೀನಾಮೆಯ ಸುತ್ತ ನೂರಾರು ರೀತಿಯ ವದಂತಿ. ಟೀಕೆ. ನಮ್ಮನ್ನು ಕನ್ನಡಪ್ರಭದಿಂದ ಕಿತ್ತು ಹಾಕಿದರಂತೆ, ನಾವೇ ಆಡಳಿತ ಮಂಡಳಿ ಜೊತೆ ಜಗಳ ಮಾಡಿಕೊಂಡು ಬಿಟ್ಟೆವಂತೆ, ಇವತ್ತು ರಾಜೀನಾಮೆ ಕೊಟ್ಟರಂತೆ, ನಾಳೆ ಸಂಸ್ಥೆಯ ಮಾಲೀಕರು ಬಂದು ಕನ್ನಡಪ್ರಭದ ಹೊಸ ಸಂಪಾದಕರನ್ನು ಘೋಷಿಸುತ್ತಾರಂತೆ, 15 ಜನರ ದೊಡ್ಡ ತಂಡ ರಂಗನಾಥ್ ಅವರ ಜೊತೆ ಹೋಗುತ್ತಂತೆ, ಇಲ್ಲ ನಾಲ್ಕೇ ಜನ ಹೋಗುತ್ತಾರಂತೆ, ಸಿಇಒ ಅಂತೆ, ಹೊಸ ಪೇಪರ್ ಸಂಪಾದಕರಂತೆ, ಲಕ್ಷ ರುಪಾಯಿ ಸಂಬಳವಂತೆ, ಅಲ್ಲ 2 ಲಕ್ಷ ರುಪಾಯಿ ಸಂಬಳವಂತೆ, ಸುಳ್ಳು ಕೇವಲ 60-70 ಸಾವಿರ ರುಪಾಯಿ ಸಂಬಳವಂತೆ... ಇತ್ಯಾದಿ ಇತ್ಯಾದಿ...

ದಿನ ಬೆಳಗಾದರೆ, ರಾತ್ರಿಯಾದರೆ, ಇವೆಲ್ಲಾ ಮಾತು ಕೇಳೀ ಕೇಳಿ, ಎಸ್.ಎಂ.ಎಸ್. ಓದಿ ಓದಿ, ಈ-ಮೇಲ್ ನೋಡಿ ನೋಡಿ... ಕಿರಿಕಿರಿಯಾದರೂ ತೆಪ್ಪಗಿದ್ದೆ. ಇದೆಲ್ಲಾ ಸಾರ್ವಜನಿಕ ಜೀವನದಲ್ಲಿ ಸಹಜ ಅಂತ. ನಾವು ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಈ ಎಲ್ಲ ವದಂತಿಗಳಿಗೆ ಹೇಗೆ ಉತ್ತರಿಸುವುದು! ಅಥವಾ ಎಷ್ಟು ವದಂತಿಗಳಿಗೆ, ಎಷ್ಟು ಮಂದಿಗೆ ಅಂತ ಸಮಜಾಯಿಷಿ ನೀಡುವುದು? ಕ್ರಮೇಣ ಈ ವದಂತಿಗಳು ತಣ್ಣಗಾಗಿಬಿಡುತ್ತವೆ. ಇಂತಹ ವದಂತಿಗಳು ಕೇವಲ ನಮ್ಮ ಸುತ್ತ ಮಾತ್ರ ಅಲ್ಲವಲ್ಲ ಅಂತ ನನ್ನ ಪಾಡಿಗೆ ನಾನಿದ್ದೆ.

ಆದರೆ, ಈ ಬ್ಲಾಗಿದೆಯಲ್ಲ... ಇದೇ ಡೇಂಜರ್. ಇದರಲ್ಲಿ ಯಾರು ಏನು ಬೇಕಾದರೂ ಬರೆಯಬಹುದು. ಎಷ್ಟು ಬೇಕಾದರೂ ಬಯ್ಯಬಹುದು. ಎಂಥ ಆರೋಪವನ್ನಾದರೂ ಮಾಡಬಹುದು. ಹೋಗಲಿ ಅಂತ ಒಂದಕ್ಕೆ ಉತ್ತರ ನೀಡಿದರೆ, ಇನ್ನೂ ಅಪಾಯ. ಬಯ್ಯುವವರು, ಆರೋಪ ಮಾಡುವವರು ಇನ್ನಷ್ಟು ಆವೇಶದಿಂದ ಬರೆಯಲು ಆರಂಭಿಸುತ್ತಾರೆ. ಉತ್ತರ ನೀಡಲಿಲ್ಲವೋ... ಆ ವದಂತಿಗಳು, ಆರೋಪಗಳು ಅಪ್ಪಟ ಸತ್ಯ ಎಂಬಂತೆ ಅಂತರ್ಜಾಲದಲ್ಲಿ ದಾಖಲಾಗುತ್ತವೆ. ಜಗತ್ತಿನಾದ್ಯಂತ ಸುತ್ತುಹಾಕಿ ಮತ್ತೆ ಮತ್ತೆ ಧುತ್ತೆಂದು ಪ್ರತ್ಯಕ್ಷವಾಗಿ ಕಿರಿಕಿರಿ ಉಂಟುಮಾಡುತ್ತವೆ.

ಈಗ ಕೆಲವು ತಿಂಗಳ ಹಿಂದೆ ಎನ್.ಡಿ.ಟಿ.ವಿ. ಗ್ರೂಪ್ ಎಡಿಟರ್ ಬಾರ್ಕಾ ದತ್‌ಗೂ ಹೀಗೇ ಆಗಿತ್ತು. ಅದ್ಯಾರೋ ಬ್ಲಾಗಿನಲ್ಲಿ ಆಧಾರವಿಲ್ಲದ ಆರೋಪ ಮಾಡಿ, ಆ ಆರೋಪವನ್ನು ಅದ್ಯಾರೋ ಸೈನ್ಯಾಧಿಕಾರಿ ಓದಿ, ಆತ ಅದನ್ನು ಟೀವಿ ಸಂದರ್ಶನದಲ್ಲಿ ಹೇಳಿ, ಅವಾಂತರವಾಗಿತ್ತು. ನಂತರ ಎನ್.ಡಿ.ಟಿ.ವಿ. ಆ ಬ್ಲಾಗಿನ ಮೇಲೆ ಕಾನೂನು ಕ್ರಮ ಜರುಗಿಸಿತು. ಸೈನ್ಯಾಧಿಕಾರಿ ಅಧಿಕೃತವಾಗಿ ಕ್ಷಮೆ ಕೇಳಬೇಕಾಗಿ ಬಂತು.

ಅದೆಲ್ಲಾ ಇರಲಿ. ಈಗ ಇಂಥ ಆರೋಪಗಳಿಗೆ ಗುರಿಯಾಗುವ ಸರದಿ ನಮ್ಮದು. ಮೊದ ಮೊದಲು ಈ ಆರೋಪಗಳಿಗೆ ಉತ್ತರಿಸದಿರಲು ನಿರ್ಧರಿಸಿದ್ದೆವು. ಆದರೆ, ಈ ಬ್ಲಾಗುಗಳ ಮಹಿಮೆಯನ್ನು ಹೇಗೆ ಬಣ್ಣಿಸಲಿ? ಅದಕ್ಕೇ ಹೇಳಿದ್ದು ಪ್ರೆಸ್‌ ಕ್ಲಬ್‌ ಟಾಕ್‌ಗಿಂತ ಬ್ಲಾಗ್‌ಟಾಕ್ ಡೇಂಜರಸ್ ಅಂತ.

ಎಲ್ಲ ಅಂಶಗಳಿಗೂ ಉತ್ತರಿಸುವ ಉದ್ದೇಶವಾಗಲೀ, ಶಕ್ತಿಯಾಗಲೀ ನನಗಿಲ್ಲ. ಆದರೆ, ಸೂಕ್ಷ್ಮ ಅನ್ನಿಸುವ 3-4 ಆರೋಪಗಳಿಗೆ ನಾನಿಲ್ಲಿ ಅಧಿಕೃತ ಸ್ಪಷ್ಟನೆ ನೀಡುತ್ತಿದ್ದೇನೆ.

1. ಕನ್ನಡಪ್ರಭ ಸಂಪಾದಕ ರಂಗನಾಥ್ ಸುಮ್ಮನೆ ರಾಜೀನಾಮೆ ಕೊಟ್ಟು ಹೋಗುವ ಬದಲು ಕಚೇರಿಯ ತಮ್ಮ ಎಲ್ಲ ಪತ್ರವ್ಯವಹಾರ, ಇತ್ಯಾದಿ ಪರ್ಸನಲ್ ಕಡತಗಳನ್ನೆಲ್ಲ ಬೆಂಕಿ ಹಾಕಿ ಸುಟ್ಟುಹಾಕಿದ್ದಾರೆ.

ಈ ಆರೋಪವೊಂದು ದೊಡ್ಡ ಹಗರಣದ ರೂಪ ಪಡೆದಿದೆ. ತಮ್ಮ ಭ್ರಷ್ಟಾಚಾರಗಳನ್ನು ಮುಚ್ಚಿಹಾಕಲು ಯಾರೋ ಸರ್ಕಾರಿ ಕಡತಗಳನ್ನು ಸುಟ್ಟುಹಾಕಿದರಂತೆ ಎಂಬಂತೆ ಹುಯಿಲೆಬ್ಬಿಸಲಾಗಿದೆ. ವಾಸ್ತವ ಅದಲ್ಲ. ಹಲವಾರು ವರ್ಷಗಳ ಅವಧಿಯಲ್ಲಿ ಯಾವುದೇ ಕಚೇರಿಯಲ್ಲಾದರೂ ಪತ್ರವ್ಯವಹಾರಗಳ ದೊಡ್ಡ ಬೆಟ್ಟವೇ ಸೃಷ್ಟಿಯಾಗುತ್ತದೆ. ಅದಕ್ಕೇ ಹಲವು ಕಚೇರಿಯಲ್ಲಿ, ಕಾಲಕಾಲಕ್ಕೆ, ಅವಧಿ ಮೀರಿದ ಕಾಗದ ಪತ್ರಗಳನ್ನು ಹರಿದು ಚಿಂದಿ ಮಾಡಿ ಸುಟ್ಟುಹಾಕಲಾಗುತ್ತದೆ. ನಮ್ಮದೇ ಕಚೇರಿಯಲ್ಲೂ ಸುಮಾರು 6 ತಿಂಗಳಿಗೊಮ್ಮೆ ಈ ರೀತಿ ಅನಗತ್ಯ ಕಾಗದಪತ್ರಗಳನ್ನು ನಾಶಪಡಿಸುವ ಪದ್ಧತಿ ಇದೆ. ಈಗ ಸಂಪಾದಕ ರಂಗನಾಥ್ ತಮ್ಮ ಕಚೇರಿಯನ್ನು ತೆರವುಗೊಳಿಸುತ್ತಿರುವುದರಿಂದ ಅನಗತ್ಯ ಕಾಗದಪತ್ರಗಳನ್ನು ಹರಿದು ರದ್ದಿಗೆ ಎಸೆದದ್ದು ನಿಜ. ಆಗ, ಸಂಸ್ಥೆಯ ಬೆಂಗಳೂರು ಕಚೇರಿಯ ವ್ಯವಸ್ಥಾಪಕರೇ ಈ ಕಾಗದಪತ್ರಗಳನ್ನು ನಾಶಗೊಳಿಸುವ ಸೂಚನೆ ನೀಡಿದರು. ಅದಕ್ಕಾಗಿ ಕಚೇರಿಯ ನಿಯೋಜಿತ ಸಿಬ್ಬಂದಿಯೇ, ಟೈಮ್ ಆಫೀಸಿನ ಅಧಿಕಾರಿಯ ಸಮಕ್ಷಮದಲ್ಲೇ ಸುಟ್ಟುಹಾಕಿದರು. ಆ ಕಾಗದ ಪತ್ರಗಳನ್ನು ಸುಟ್ಟು ಹಾಕಿದ್ದು ಸಂಪಾದಕರಲ್ಲ - ಇದು ಕನ್ನಡಪ್ರಭದ ಕಾರ್ಯನಿರ್ವಾಹಕ ಸಂಪಾದಕನಾಗಿ ನಾನು ನೀಡುತ್ತಿರುವ ಅಧಿಕೃತ ಸ್ಪಷ್ಟನೆ.

(ಇಲ್ಲಿ ಇನ್ನೊಂದು ಮಾಹಿತಿ. ನಾನು ಕಾರ್ಯನಿರ್ವಾಹಕ ಸಂಪಾದಕನಾಗಿ ಅಧಿಕಾರ ಸ್ವೀಕಾರ ಮಾಡಿದಾಗ ನನ್ನ ಛೇಂಬರಿನ ಪಕ್ಕದ ಕಪಾಟಿನ ತುಂಬಾ ಕಾಗದಗಳೋ ಕಾಗದಗಳು. ಆರೆಂಟು ವರ್ಷದ ರದ್ದಿ ಪತ್ರವ್ಯವಹಾರಗಳು. ಯಾವುದು ಅಗತ್ಯ ಯಾವುದು ಅನಗತ್ಯ ಎಂದೂ ನಿರ್ಧರಿಸಲಾಗದ ಪರಿಸ್ಥಿತಿ. ಅದನ್ನೆಲ್ಲಾ ನೋಡಿ ಬೇಡದ್ದನ್ನು ಎಸೆದು ಬೇಕಾದನ್ನು ಆರಿಸಿಕೊಳ್ಳಲು ಹಲವು ವಾರಗಳೇ ಬೇಕಾಗಿತ್ತು ನನಗೆ. ಆಗ ನಾನು ಕಲಿತ ಪಾಠ: ಆಯಾ ಕಾಲಕ್ಕೆ ಸರಿಯಾಗಿ ಅವಧಿ ಮೀರಿದ ಕಾಗದಪತ್ರಗಳನ್ನು ನಾಶಪಡಿಸುವುದು ಒಂದು ಉತ್ತಮ ಆಡಳಿತಾತ್ಮಕ ಕ್ರಮ. ಇದೆಲ್ಲ ವಿವಾದ ಆಗುತ್ತದೆ ಎನ್ನುವುದೇ ನನಗೆ ಸೋಜಿಗ.)

2. ರಾಜೀನಾಮೆ ಕೊಟ್ಟು ಹೋಗುವ ಬದಲು ರಂಗನಾಥ್ ಮತ್ತು ರವಿ ಹೆಗಡೆ ಕನ್ನಡಪ್ರಭದ ಎಲ್ಲಾ ಶಾಖಾ ಕಚೇರಿಗಳಿಗೂ ಭೇಟಿ ನೀಡಿ ಕನ್ನಡಪ್ರಭದಲ್ಲಿ ಎಲ್ಲಾ ಸರಿ ಇಲ್ಲ ಎಂಬಂತೆ ಅಪಪ್ರಚಾರ ಮಾಡಿ ಕಂಪನಿಯೊಳಗೇ ಬೆಂಕಿ ಹಚ್ಚುವ ಕೆಲಸ ಮಾಡಿದರು.

ನಾವು ಇತ್ತೀಚೆಗೆ ರಾಜ್ಯಾದ್ಯಂತ ಪರ್ಯಟನೆ ಮಾಡಿದ್ದು ಉಪಸಂಪಾದಕರನ್ನು ನೇಮಿಸಿಕೊಳ್ಳುವ ಸಲುವಾಗೇ ವಿನಾ ಕಚೇರಿಯ ಬಗ್ಗೆ ಅಪಪ್ರಚಾರ ಮಾಡಲೆಂದಲ್ಲ. ಬೀದರದಿಂದ ಹಿಡಿದು ಚಾಮರಾಜನಗರದ ತನಕ ದೂರ ದೂರದ ಊರುಗಳಿಂದ ಯುವಕ ಯುವತಿಯರು ಕನ್ನಡಪ್ರಭದಲ್ಲಿ ಉದ್ಯೋಗಾವಕಾಶ ಕೋರಿ ಅರ್ಜಿ ಸಲ್ಲಿಸುತ್ತಾರೆ. ಅವರು ನಮ್ಮ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನಕ್ಕೆ ಹಾಜರಾಗಬೇಕು. ಇದಕ್ಕಾಗಿ, ಕೆಲವು ವರ್ಷಗಳ ಹಿಂದೆ, ಈ ಉದ್ಯೋಗಾಕಾಂಕ್ಷಿಗಳು ಬೆಂಗಳೂರಿಗೇ ಬಂದು ಒಂದು ದಿನ ತಂಗಬೇಕಾಗಿತ್ತು. ಇದಕ್ಕಾಗಿ ಅವರು ಪ್ರಯಾಣ ವೆಚ್ಚದ ಜೊತೆಗೆ ಲಾಡ್ಜಿಂಗ್ ವೆಚ್ಚದ ಹೊರೆಯನ್ನೂ ಹೊರಬೇಕಾಗಿತ್ತು. ಇದನ್ನು ತಪ್ಪಿಸಿ, ದೂರದೂರುಗಳ ಯುವಕ ಯುವತಿಯರಿಗೆ ಅನುಕೂಲವಾಗಲೆಂದು ರಾಜ್ಯದ ಅನೇಕ ಭಾಗಗಳಲ್ಲಿ ಪರೀಕ್ಷೆ ಹಾಗೂ ಸಂದರ್ಶನ ಏರ್ಪಡಿಸುವ ಪರಿಪಾಠವನ್ನು ನಾವು ಆರಂಭಿಸಿದೆವು. ಅದಕ್ಕಾಗಿ ಪ್ರತಿ ಬಾರಿಯೂ ನಾವು ರಾಜ್ಯಾದ್ಯಂತ ಪರ್ಯಟನೆ ನಡೆಸಿದ್ದೇವೆ. ಈ ಬಾರಿಯೂ ನಡೆಸಿದ್ದೇವೆ. ಆದರೆ, ಅಲ್ಲಿ ನಾವು ಕಂಪನಿಯ ಬಗ್ಗೆ ಅಪಪ್ರಚಾರ ನಡೆಸಿದೆವೆಂಬುದು ಅಪ್ಪಟ ನಾನ್‌ನೆಸ್ಸ್.

3. ಕನ್ನಡಪ್ರಭ ಮಾಲಿಕರನ್ನು, ಆಡಳಿತ ಮಂಡಳಿಯನ್ನು ರಂಗನಾಥ್ ಹಾಗೂ ರವಿ ಹೆಗಡೆ ಹಿಗ್ಗಾಮಗ್ಗ ಬೈದು, ಟೀಕಿಸಿ ರಾಜೀನಾಮೆ ನೀಡಿದ್ದಾರೆ. ಮ್ಯಾನೇಜ್‌ಮೆಂಟನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

Well, even at this moment, I can say, our Chairman is one of the best newspaper chairmen to work with. ತಾವು ಪತ್ರಿಕೆಯ ಮಾಲಿಕರಾದರೂ, ಸಂಪಾದಕ ಹಾಗೂ ಸಂಪಾದಕೀಯವನ್ನು ಅತ್ಯಂತ ಗೌರವದಿಂದಲೇ ಕಾಣುವ ವ್ಯಕ್ತಿ ಅವರು. ಅವರು ತಮ್ಮ ಈ ನಿಲುವಿನಿಂದ ಸಾಕಷ್ಟು ಜಾಹೀರಾತು ಆದಾಯವನ್ನು ಕಳೆದುಕೊಂಡಿದ್ದಾರೆ. ಆದರೂ, ಸಂಪಾದಕರ ನಿಲವಿಗೆ ಬದ್ಧರಾಗಿ ನಿಲ್ಲುತ್ತಾರೆ. ಇದು ಅನೇಕ ಬಾರಿ ಜಾಹೀರಾತು ವಿಭಾಗದವರ ಅಸಮಾಧಾನಕ್ಕೂ ಕಾರಣವಾಗಿದೆ. ಪರಿಸ್ಥಿತಿ ಹೀಗಿರುತ್ತ, ನಾವು ಅವರನ್ನು ಟೀಕಿಸಿ, ತರಾಟೆಗೆ ತೆಗೆದುಕೊಂಡು, ರಾಜೀನಾಮೆ ನೀಡಿದೆವು ಎಂಬುದು ನಾನ್ಸೆನ್ಸ್. ಕಚೇರಿಯ ಆಂತರಿಕ ವಿಚಾರಗಳ ಕುರಿತು ದೂರು ನೀಡಲು ಚೆನ್ನೈಗೆ ಹೋಗಬೇಕಾದ ದುರ್ಗತಿ ಕನ್ನಡಪ್ರಭದಲ್ಲಿ ಎಂದೂ ಇರಲಿಲ್ಲ. ಈಗಲೂ ಇಲ್ಲ.

ಕಚೇರಿಯಲ್ಲಿ ಸರಿ-ಇಲ್ಲದ ಕೆಲವು ಸೌಲಭ್ಯಗಳು ಸುಧಾರಿಸಬೇಕು ಎಂದು ನಿಷ್ಠುರವಾಗಿ ಎಂದಾದರೂ ಹೇಳಿದ್ದಕ್ಕೂ ಈಗ ರಾಜೀನಾಮೆ ನೀಡಿರುವುದಕ್ಕೂ ತಾಳೆ ಹಾಕುವುದು ಒಂದು ಕುಚೋದ್ಯ.

4. ಕನ್ನಡಪ್ರಭದಂತ ಪುಟುಗೋಸಿ ಸಂಬಳದ ಪತ್ರಿಕೆಯಲ್ಲಿದ್ಕೊಂಡು...

ಕನ್ನಡಪ್ರಭ ಪುಟಗೋಸಿ ಸಂಬಳ ನೀಡುವ ಪತ್ರಿಕೆಯಲ್ಲ. It's one of the best paying Kannada Media organisations. ಇಲ್ಲಿ ಅನೇಕರಿಗೆ ಕನ್ನಡದ ನಂ.1 ಪತ್ರಿಕೆಗಿಂತ ಹೆಚ್ಚಿನ ವೇತನ ದೊರೆಯುತ್ತದೆ.

---

That's all I would say. ಮಿಕ್ಕಂತೆ ನಾವೇನೂ ಅಜಾತಶತ್ರುಗಳೂ ಅಲ್ಲ. ಟೀಕಾತೀತರೂ ಅಲ್ಲ. ನಮ್ಮ ಬಗ್ಗೆ ಟೀಕೆಗಳು ಮುಂದುವರಿಯುತ್ತವೆ ಎಂಬುದು ಗೊತ್ತು. ನಮ್ಮ ಜನ ಮಾಹಾತ್ಮ ಗಾಂಧಿಯನ್ನೇ ಟೀಕಿಸದೇ, ದ್ವೇಷಿಸದೇ ಬಿಟ್ಟಿಲ್ಲ. ಇನ್ನು ನಾವ್ಯಾವ ಸೀಮೆಯ ಹುಲ್ಲು ಕಡ್ಡಿಗಳು? ಆದರೆ, ಕನ್ನಡಪ್ರಭವನ್ನು ಕಳೆದ ಐದು ವರ್ಷಗಳಲ್ಲಿ ಕಟ್ಟಿ ಬೆಳೆಸಿದ, ಕನ್ನಡ ಪತ್ರಿಕೋದ್ಯಮದಲ್ಲಿ ಅನೇಕ ಹೊಸತನಗಳನ್ನು ರೂಢಿಸಿದ ಹೆಮ್ಮೆ ನಮಗಿದೆ. ನಮ್ಮ ಬಗ್ಗೆ ಕೋಪ ಕಾರುವವರು ಇದ್ದಾರೆ ನಿಜ. ಆದರೆ, ನಮ್ಮನ್ನು ಇಷ್ಟಪಡುವವರು ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂಬ ಸಮಾಧಾನ ನಮಗಿದೆ.

Wednesday, July 15, 2009

ಠಳ್ಳನೆ ಒಡೆಯಿತು ಒಬಾಮಾ "ರಹಸ್ಯ ಟೆಲೆಪ್ರಾಂಪ್ಟರ್"



ರಾಕ್ ಒಬಾಮಾ ಮಾತಿನ ಮಾಂತ್ರಿಕ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ನಿರರ್ಗಳ ಭಾಷಣ, ಪ್ರಭಾವೀ ಕಂಠ, ಆತ್ಮವಿಶ್ವಾಸದ ಧ್ವನಿ ಕೇಳಿದರೆ ಎಂಥವನೂ ಮರುಳಾಗಲೇ ಬೇಕು. ಅಂಥ ವಿದ್ಯುಚ್ಛಕ್ತಿ ಇದೆ ಅವರ ಮಾತಿನಲ್ಲಿ. ಚರ್ಚುಗಳ ಕಮ್ಯುನಿಟಿ ಸಂಘಟನೆಯಲ್ಲಿ ಪ್ರಚಾರಕನಂತೆ ಕೆಲಸ ಮಾಡುತ್ತಿದ್ದ ಬರಾಕ್ ಒಬಾಮಾ ರಾಜಕೀಯದಲ್ಲಿ ದಿಢೀರ್ ನಾಯಕನಾಗಿ, ಇಲಿನಾನ್ಸ್ ರಾಜ್ಯದ ಸೆನೆಟರ್ ಆಗಿ ನಂತರ ಇಡೀ ಅಮೇರಿಕಕ್ಕೆ ಅಧ್ಯಕ್ಷ ಆಗಿ ದಿಢೀರನೆ ಬೆಳೆದದ್ದು ಒಂದು ಅದ್ಭುತ.

ಒಬಾಮಾ ಇಂಥ ವಾಗ್ಮಿಯಾದರೂ, ಅವರ ಭಾಷಣದ ಹಿಂದೆ ಒಂದು ತಾಂತ್ರಿಕ ಪಡೆಯೇ ಇರುತ್ತದೆ ಎಂದು ನಿಮಗೆ ಗೊತ್ತೇ? ಒಬಾಮಾ ಭಾಷಣ ಮಾಡುವಾಗ "ಟೀವಿ ಸುದ್ದಿ ವಾಚಕರು ವಾರ್ತೆ ಓದುವಾಗ ಬಳಸುವಂಥ ಟೆಲೆಪ್ರಾಂಪ್ಟರ್" ಬಳಸುತ್ತಾರೆ ಎಂದರೆ ನಂಬುತ್ತೀರಾ? ಹೌದು... ಅವರು ಎಲ್ಲರೆದುರೇ, ವೇದಿಕೆಯಲ್ಲೇ ಟೆಲೆಪ್ರಾಂಪ್ಟರ್ ಬಳಸಿದರೂ ಅದು ಯಾರಿಗೂ ಕಾಣುವುದಿಲ್ಲ. ಒಂಥರಾ ರಹಸ್ಯ ಎಂಬಂತಿರುತ್ತದೆ ಅದು.

ಅದು ಟೀವಿ ಸ್ಟೂಡಿಯೋಗಳ ಟೆಲೆಪ್ರಾಂಪ್ಟರಿಗಿಂತ ಹೈಟೆಕ್. ನೋಡಲು ಸಾಮಾನ್ಯ ಪಾರದರ್ಶಕ ಗಾಜಿನಂತೆ ಕಾಣಿಸುವುದರಿಂದ ಪ್ರೇಕ್ಷಕರ ಗಮನಕ್ಕೆ ಬರುವುದಿಲ್ಲ. ಆದರೆ, ಭಾಷಣಕ್ಕೆ ನಿಂತ ಒಬಾಮಾಗೆ ಮಾತ್ರ ಆ ಗಾಜಿನ ಮೇಲೆ ಚೆನ್ನಾಗಿ ಅಕ್ಷರಗಳು ಕಾಣಿಸುತ್ತವೆ. ಈ ಕೆಳಗಿನ ಚಿತ್ರ ನೋಡಿ.



ಆದರೂ, ಇಂಥದ್ದೆಲ್ಲ ಬಹಳ ಕಾಲ ರಹಸ್ಯವಾಗಿ ಉಳಿಯುವುದಿಲ್ಲ. 2008ರ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಅದು ಹೇಗೋ ಪತ್ತೆಯಾದ ಈ ಟೆಲೆಪ್ರಾಂಪ್ಟರ್ ಗುಟ್ಟು, ಅಮೆರಿಕದಲ್ಲಿ ಒಂದಷ್ಟು ಟೀಕೆಗೂ ಒಳಗಾಗಿತ್ತು. ಆದರೆ, ಒಬಾಮಾ ಚರಿಷ್ಮಾ ಎದುರು ಅದು ದೊಡ್ಡ ಸುದ್ದಿಯಾಗಲಿಲ್ಲ ಅಷ್ಟೇ. ಆನಂತರ, ಅಧ್ಯಕ್ಷರಾದ ಮೇಲೂ ಅವರು ಟೆಲೆಪ್ರಾಂಪ್ಟರ್ ಬಳಸುವುದನ್ನು ಬಿಡಲಿಲ್ಲ. ಅವರು ಎಲ್ಲಿಲ್ಲಿಗೆ ಹೋಗಿ ಭಾಷಣ ಮಾಡುತ್ತಿದ್ದರೋ, ಅಲ್ಲಿಗೆಲ್ಲಾ ಅವರ ಟೆಲೆಪ್ರಾಂಪ್ಟರ್ ಕೂಡ ಹೋಗುತ್ತಿತ್ತು.

ಪರಿಸ್ಥಿತಿ ಹೀಗಿರುತ್ತ, ನಿನ್ನೆ ಮಂಗಳವಾರ ಅವರ ಟೆಲೆಪ್ರಾಂಪ್ಟರ್ ಗುಟ್ಟು ರಟ್ಟಾಯಿತು. ಜಗತ್ತಿನಾದ್ಯಂತ ಸುದ್ದಿಯಾಯಿತು. ಕಾರಣ... ಕಾರ್ಯಕ್ರಮವೊಂದರಲ್ಲಿ ಟೆಲೆಪ್ರಾಂಪ್ಟರ್ ನೋಡಿಕೊಂಡು ಒಬಾಮಾ ಭಾಷಣ ಮಾಡುತ್ತಿರುವಾಗ ಅದು ಎಲ್ಲರೆದುರೇ ಠಳ್ಳಂತ ಬಿದ್ದು ಒಡೆದುಹೋಯಿತು. ಇದರಿಂದ ಒಬಾಮಾ ತುಸು ಗಾಬರಿಗೊಂಡರು. ತಕ್ಷಣವೇ ಸಾವರಿಸಿಕೊಂಡರೂ ಅವರ ಭಾಷಣ ಒಂದಷ್ಟು ತೊದಲಿತು. ಇದು ಟೀವಿಗಳಲ್ಲೂ ಬಿತ್ತರವಾಯಿತು. ಆಗ ಟೀವಿ ಸುದ್ದಿ ವಾಚಕರು ಮುಸಿ ಮುಸಿ ನಗುತ್ತ ಹೇಳಿದರು... "ಅಧ್ಯಕ್ಷರ ಭಾಷಣಕ್ಕೆ ತಾಂತ್ರಿಕ ತೊಡಕಾಗಿದೆ. ಅಡಚಣೆಗಾಗಿ ಕ್ಷಮಿಸಿ. :-)"

ಅಂದಹಾಗೆ ಒಬಾಮಾ ಟೆಲೆಪ್ರಾಂಪ್ಟರ್ ಹೇಗಿತ್ತು? ಇಲ್ಲಿವೆ ಕೆಲ ಚಿತ್ರಗಳು:


ಒಬಾಮಾ ಎದುರಿಗೆ ಇರುವ ಟೆಲೆಪ್ರಾಂಪ್ಟರ್.



ಅಡಿಯಲ್ಲಿರುವ ಕಂಪ್ಯೂಂಟರ್ ತೆರೆಯ ಮೇಲೆ ಮೂಡುವ ಭಾಷಣದ ಅಕ್ಷರಗಳು ಟೆಲೆಪ್ರಾಂಪ್ಟರ್ ಮೂಲಕ ಒಬಾಮಾಗೆ ಕಾಣುವುದು ಹೀಗೆ.


ಟೆಲೆಪ್ರಾಂಪ್ಟರಿನ ಗಾಜು ಎಷ್ಟು ಪಾರದರ್ಶಕ ಎಂದು ಗಮನಿಸಿ.



ಆದರೆ ಎದುರು ಕುಳಿತ ಪ್ರೇಕ್ಷಕರಿಗೆ ಈ ಪಾರದರ್ಶಕ ಟೆಲೆಪ್ರಾಂಪ್ಟರ್ ಮೇಲೆ ಮೂಡುವ ಅಕ್ಷರಗಳು ಕಾಣಿಸುವುದಿಲ್ಲ. ಅಲ್ಲದೇ, ಸಾಧಾರಣ ಗಾಜಿನಂತೇ ಕಾಣುವ ಅದು ಪ್ರೇಕ್ಷಕರ ಗಮನವನ್ನೂ ಸೆಳೆಯುವುದಿಲ್ಲ.



ಒಬಾಮಾ ಅವರ ಸಾರ್ವಜನಿಕ ಕಾರ್ಯಕ್ರಮವೊಂದರ ಈ ಚಿತ್ರ ನೋಡಿ. ಅಲ್ಲಿ ಟೆಲೆಪ್ರಾಂಪ್ಟರ್ ಇದೆ ಎಂದು ಯಾರ ಗಮನಕ್ಕೆ ಬರಲು ಸಾಧ್ಯ ನೀವೇ ಹೇಳಿ.

Saturday, July 04, 2009

ಕನ್ನಡದಲ್ಲಿ Stay Hungry Stay Foolish



ಇತ್ತೀಚೆಗೆ ನನಗೆ ತುಂಬಾ ಇಷ್ಟವಾದ ಎರಡು ಪುಸ್ತಕಗಳಲ್ಲಿ Stay Hungry Stay Foolish ಕೂಡ ಒಂದು. ಬರೆದದ್ದು ರಶ್ಮಿ ಬನ್ಸಾಲ್ ಎಂಬ ಅಹಮದಾಬಾದ್ ಐಐಎಂನ ಹಳೆ ವಿದ್ಯಾರ್ಥಿನಿ. ಈಗ ಜಾಮ್‌ಮ್ಯಾಗ್ ಪತ್ರಿಕೆಯ ಸಂಪಾದಕಿ. ಈ ಪುಸ್ತಕ 1 ಲಕ್ಷ ಪ್ರತಿಗಳ ಮಾರಾಟ ದಾಟಿದೆ. ಇದೀಗ ಈ ಪುಸ್ತಕದ ಕನ್ನಡ ಅವತರಣಿಕೆಯೂ ಬಂದಿದೆ ಅಂತ ಈಗ ಗೊತ್ತಾಯ್ತು. ಸಾಧನೆಗೆ ಮಿತಿ ಇಲ್ಲ ಸಾಧಕರಿಗೆ ಕೊನೆ ಇಲ್ಲ - ಅಂತ ಶಿರ್ಷಿಕೆಯಂತೆ. 325 ಪುಟ, 150 ರುಪಾಯಿ. ಜುಲೈ 2ರಂದು, ಬೆಂಗಳೂರಿನಲ್ಲಿ, ಖುದ್ದು ರಶ್ಮಿ ಬನ್ಸಾಲ್ ಈ ಪುಸ್ತಕವನ್ನು ಬಿಡುಗಡೆ ಮಾಡಿದರಂತೆ.

ಕನ್ನಡ ಭಾಷಾಂತರ ಯಾರು ಮಾಡಿದ್ದಾರೆ, ಹೇಗೆ ಮಾಡಿದ್ದಾರೆ, ಯಾರು ಪ್ರಕಟಿಸಿದ್ದಾರೆ ಅಂತ ಗೊತ್ತಾಗಲಿಲ್ಲ. (ನಾನಾಗಲೀ, ಕನ್ನಡಪ್ರಭ ಸಂಪಾದಕ ಎಚ್. ಆರ್. ರಂಗನಾಥ್ ಅವರಾಗಲೀ ಈ ಪುಸ್ತಕದ ಭಾಷಾಂತರ ಮಾಡಬೇಕು ಅಂದುಕೊಂಡಿದ್ದೆವು. ಪತ್ರಿಕೆಯ ಕೆಲಸದ ಗಡಿಬಿಡಿಯಲ್ಲಿ ಸಾಧ್ಯವಾಗಲಿಲ್ಲ.)

ನೌಕ್ರಿ ಡಾಟ್ ಕಾಮ್, ಮೇಕ್ ಮೈ ಟ್ರಿಪ್ ಡಾಟ್ ಕಾಮ್, ಸುಭಿಕ್ಷಾ, ರೇಣುಕಾ ಶುಗರ್ಸ್, ಎಜುಕಾಂಪ್, ಸಿಂಟೆಕ್ಸ್, ಆರ್ಕಿಡ್ ಹೊಟೆಲ್, ಮುಂತಾದ ಅನೇಕ ಕಂಪನಿಗಳನ್ನು ಸ್ಥಾಪಿಸಿದ ಐಐಎಂಎ ವಿದ್ಯಾರ್ಥಿಗಳ 25 ಸಾಧನೆಯ ಕಥೆಗಳಿವೆ. ಸಂಬಳಕ್ಕೆ ನೌಕರಿ ಮಾಡುವ ಬದಲಿಗೆ ತಾವೇ ಮಾಲಿಕರಾಗುವ ಯುವಕರ ನಿಜ ಘಟನೆಗಳು ಇವು. Very Inspiring.

ರಶ್ಮಿ ಈಗ ಎರಡನೇ ಪುಸ್ತಕವನ್ನು ಬರೆಯುತ್ತಿದ್ದಾರಂತೆ. ಹೊಸ ಪುಸ್ತಕದ ಬಗ್ಗೆ ನಿರೀಕ್ಷೆಯೂ ಹೆಚ್ಚಾಗಿದೆ.

An Update by Mr. Bedre Manjunath : SHSF Kannada Version hss been published by Vassan Publications, Bangalore and the translation has come up nicely. But, don't know who the translator is. It is a recent trend with the publishers that they pay the translator some amount and drop his or her name from the book. It is only Sri Visweswar Bhat who got his name published in You Can Win. All others are not ready to publish the name of the translator. They want the product but they don't want the creator! Great guns! Even in this case the name of the translator has not been published. You can see its Kannada version Cover page on my Blog http://bedrebaraha.blogspot.com

Tuesday, June 30, 2009

ಮಹಾನ್ ಪತ್ರಕರ್ತರಿಂದ ಯೂಟ್ಯೂಬಲ್ಲಿ ವರದಿಗಾರಿಕೆ ಟಿಪ್ಸ್


ತನಿಖಾ ವರದಿಯ 3 ಮೂಲಗಳ ಕುರಿತು ಮಾತನಾಡುತ್ತಿರುವ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಸಹ ಸಂಪಾದಕ ಬಾಬ್ ವುಡ್‌ವರ್ಡ್. ಜಗತ್ಪಸಿದ್ಧ ವಾಟರ್‌ಗೇಟ್ ಹಗರಣ ಬಹಿರಂಗ ಮಾಡಿದ ಇಬ್ಬರು ವರದಿಗಾರರಲ್ಲಿ ಇವರೂ ಒಬ್ಬರು.
---------------------

ನಿಖಾ ವರದಿ ಮಾಡುವುದು ಹೇಗೆ? ಅಂತಾರಾಷ್ಟ್ರೀಯ ವರದಿಗಳನ್ನು ನಿಭಾಯಿಸುವ ಪರಿಯೇನು? ಸಂದರ್ಶನ ತಂತ್ರಗಳು... ಹೀಗೆ ಅನೇಕ ವರದಿಗಾರಿಕೆ ವಿಷಯಗಳ ಕುರಿತು ಅಮೆರಿಕದ ಶ್ರೇಷ್ಠ ಪತ್ರಕರ್ತರು ಪುಟ್ಟ ಪುಟ್ಟ ಟಿಪ್ಸ್ ನೀಡುತ್ತಾರೆ. ಎಲ್ಲಿ?

ಇಂಟರ್ನೆಟ್ಟಿನ ವಿಡಿಯೋ ಸೈಟ್ "ಯೂಟ್ಯೂಬ್" ಜೂನ್ 29ರಿಂದ ವರದಿಗಾರರ ಆನ್‌ಲೈನ್ ಚಾನಲ್ ಆರಂಭಿಸಿದೆ. http://www.youtube.com/reporterscenter ಇಲ್ಲಿ ಪುಟ್ಟ ಪುಟ್ಟ ವಿಡಿಯೋಗಳಿವೆ. ಪರಿಣತ ಪತ್ರಕರ್ತರಿಗೆ ಈ ಟಿಪ್ಸ್ ಹೆಚ್ಚು ಪ್ರಯೋಜನಕ್ಕೆ ಬರಲಾರದೇನೋ! ಆದರೆ, ಉದಯೋನ್ಮುಖ ಪತ್ರಕರ್ತರಿಗೆ ಖಂಡಿತ ಉಪಯುಕ್ತ.

"ಸಿಟಿಝನ್ ಜರ್ನಲಿಸ್ಟ್" ಕಾನ್ಸೆಪ್ಟ್ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಇಂತಹ ಹವ್ಯಾಸಿ ಪತ್ರಕರ್ತರಿಗೆ ಹಾಗೂ ಸಾರ್ವಜನಿಕರಿಗೆ ವರದಿಗಾರಿಕೆಯ ತಂತ್ರಗಳ ಕುರಿತು ಮಾರ್ಗದರ್ಶನ ನೀಡಿ ಸಿಟಿಝನ್ ಜರ್ನಲಿಸಂಗೆ ಉತ್ತೇಜನ ನೀಡುವುದು ಯೂಟ್ಯೂಬಿನ "ರಿಪೋರ್ಟರ್ಸ್ ಸೆಂಟರಿನ" ಉದ್ದೇಶ. ಅಂದರೆ, ಯೂಟ್ಯೂಬಿನಲ್ಲಿ 24 ಗಂಟೆ ಸಿಟಿಝನ್ ಜರ್ನಲಿಸ್ಟ್ ನ್ಯೂಸ್ ಚಾನಲ್ ಆರಂಭಿಸುವ ಉದ್ದೇಶ ಗೂಗಲ್‌ಗೆ ಇದ್ದಿರಬಹುದು.

ಕಪಿಲ್ ಸಿಬಲ್ ಕಪಿ-ಚೇಷ್ಟೆ!

ನಾನು ಸಜೀವ ಗಿನಿ ಪಿಗ್‌ಗಳನ್ನು ಎಂದೂ ನೋಡಿಲ್ಲ. ಆದರೆ, ನಾನು 7ನೇ ತರಗತಿಯಲ್ಲಿದ್ದಾಗ, ವಿಜ್ಞಾನ ಪುಸ್ತಕದಲ್ಲಿ ಆನುವಂಶಿಯತೆ ಕುರಿತ ಪಾಠದಲ್ಲಿ 'ಗಿನಿ ಪಿಗ್' ಎಂಬ ಮೊಲದಂತೆ ಕಾಣುವ, ಹಂದಿಗಳ ಚಿತ್ರ ನೋಡಿದ ನೆನಪು ಇನ್ನೂ ಇದೆ. ಇಲಿಗಳು ಹಾಗೂ ಗಿನಿ ಪಿಗ್‌ಗಳನ್ನು ವಿಜ್ಞಾನಿಗಳು ತಮ್ಮ ಪ್ರಯೋಗಕ್ಕೆ ಬಳಸಿಕೊಳ್ಳುವುದು ವಾಡಿಕೆ. ಆದ್ದರಿಂದ, 'ಗಿನಿ ಪಿಗ್' ಎಂದರೆ 'ಪ್ರಯೋಗ ಪಶು' ಎಂಬ ಅರ್ಥ ಹುಟ್ಟಿಕೊಂಡಿದ್ದು ನಿಮಗೂ ಗೊತ್ತಿರಬಹುದು. ಅದು ಸರಿ... ಈಗ ನನಗೆ ಧಡಕ್ಕಂತ ಗಿನಿ ಪಿಗ್ ನೆನಪಾದದ್ದು ಏಕೆ?

ಏಕೆಂದರೆ, ನನಗೆ ಹತ್ತನೇ ತರಗತಿ ವಿದ್ಯಾರ್ಥಿಗಳೆಲ್ಲ ಈಗ 'ಗಿನಿ ಪಿಗ್ಗುಗಳಂತೆ' ಕಾಣುತ್ತಿದ್ದಾರೆ. ಪಾಪ ಪ್ರಯೋಗ ಪಶುಗಳು!

ಶಿಕ್ಷಣ ಕ್ಷೇತ್ರದಲ್ಲಿ, ನಮ್ಮ ಮಕ್ಕಳ ಮೇಲೆ ನಡೆಯುತ್ತಿರುವ ಪ್ರಯೋಗಗಳನ್ನು ನೋಡಿದಾಗ ನನಗೆ ಅಯ್ಯೋ ಅನ್ನಿಸುತ್ತದೆ. ನಮ್ಮ ದೇಶದಲ್ಲಿ, ನಮ್ಮ ರಾಜ್ಯದಲ್ಲಿ ಅದೆಷ್ಟು ಶಿಕ್ಷಣ ತಜ್ಞರು! ಅದೆಂಥ ಪ್ರಯೋಗಗಳು! ಒಬ್ಬರು ಮಾತೃಭಾಷೆಯಲ್ಲಿ ಶಿಕ್ಷಣ ಅಂದರೆ, ಇನ್ನೊಬ್ಬರು ಆಂಗ್ಲ ಮಾಧ್ಯಮ ಅನ್ನುತ್ತಾರೆ. ಇನ್ನೊಬ್ಬರು ಟ್ರೈಮಿಸ್ಟರ್ ಅಂದರೆ ಇನ್ನೊಬ್ಬರು ಸೆಮಿಸ್ಟರ್ ಅಂತಾರೆ. ಒಬ್ಬರು ಸೆಂಟ್ರಲ್ ಸಿಲಬಸ್ ಅಂದರೆ ಮಗದೊಬ್ಬರು ಸ್ಟೇಟ್ ಸಿಲಬಸ್ ಅಂತಾರೆ. ಸಾಲದೂ ಅಂತ ಈಗ ಈ ತಜ್ಞರ ಪೀಳಿಗೆಗೆ ಹೊಸ ಪಂಡಿತರೊಬ್ಬರ ಸೇರ್ಪಡೆಯಾಗಿದೆ.

ಮೀಟ್ ಮಿಸ್ಟರ್ ಕಪಿ ಸಿಬಲ್.. ಸಾರಿ... ಕಪಿಲ್ ಸಿಬಲ್

ಇವರು ಇದೀಗ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಈ ಕೆಳಗಿನ ಪ್ರಯೋಗ ಮಾಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ.

1. SSLC ಪಬ್ಲಿಕ್ ಪರೀಕ್ಷೆ ರದ್ದು ಮಾಡುವ ಪ್ರಯೋಗ.
2. SSLC, CBSE, ICSE ಮುಂತಾದ ಮಂಡಳಿಗಳನ್ನೆಲ್ಲಾ ವಿಸರ್ಜಿಸಿ ದೇಶಾದ್ಯಂತ ಒಂದೇ ಪ್ರೌಢ ಶಿಕ್ಷಣ ಮಂಡಳಿ ಸ್ಥಾಪಿಸುವ ಪ್ರಯೋಗ.
3. ದಿಲ್ಲಿಯಿಂದ ಹಳ್ಳಿವರೆಗೆ ಏಕರೂಪ ಪಠ್ಯ ತರುವ ಪ್ರಯೋಗ.

ಈಗಿನ ಶಿಕ್ಷಣ ಪದ್ಧತಿಯಲ್ಲಿ, ಪರೀಕ್ಷೆಗಳಿಂದ ವಿದ್ಯಾರ್ಥಿಗಳಿಗೆ ಸಿಕ್ಕಾಪಟ್ಟೆ ಟೆನ್‌ಶನ್ ಇದೆ. ಈ ಟೆನ್‌ಶನ್ನಿಂದ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಲೂ ಮುಂದಾಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಟೆನ್‌ಶನ್ ಕಡಿಮೆ ಮಾಡಲು ಪರೀಕ್ಷೆಗಳನ್ನೇ ರದ್ದು ಮಾಡಬೇಕು ಎಂಬುದು ಅವರ ಆಲೋಚನೆ. ಒಂದುವೇಳೆ, ಕಪಿಲ್ ಸಿಬಲ್ ವೈದ್ಯರಾಗಿದ್ದರೆ ಡೇಂಜರ್ ಆಗಿತ್ತು. ಯಾರಾದರೂ ನೆಗಡಿ ಅಂತ ಅವರ ಬಳಿ ಹೋದರೆ, ಡಾಕ್ಟರ್ ಸಿಬಲ್ ಮೂಗು ಕತ್ತರಿಸುತ್ತಿದ್ದರು! ತಲೆ ನೋವು ಅಂದರೆ, ತಲೆ ತೆಗೆದುಹಾಕುತ್ತಿದ್ದರು!

ಆದರೂ, ಪರೀಕ್ಷೆ ರದ್ದು ಮಾಡುವ ಯೋಜನೆ ಪ್ರಕಟಿಸುವಾಗ ಕಪಿಲ್‌ರನ್ನು ಟೀವಿಯಲ್ಲಿ ನೋಡಬೇಕಿತ್ತು! ತಾನೇ ಮಹಾಬುದ್ಧಿವಂತ ಎಂಬಂತೆ ಅವರು ಬೀಗುತ್ತಿದ್ದರು. ಸಾಲದು ಎಂಬಂತೆ, ಅದ್ಯಾರೋ ಪೋದ್ದಾರ್ ಎಂಬ ಮಹರಾಯ್ತಿ ಸಿಬಲ್ ಅವರನ್ನ ಶಿಕ್ಷಣ ಕ್ಷೇತ್ರದ ಸ್ಯಾಮ್ ಪಿತ್ರೋಡಾ ಅಂತಲೂ ಬಣ್ಣಿಸಿದಳು. ಓ ಗಾಡ್!

ಹಾಗಾದರೆ, SSLC ಪರೀಕ್ಷೆ ರದ್ದು ಮಾಡಿದರೆ, ವಿದ್ಯಾರ್ಥಿಗಳ ಮೇಲಿನ ಒತ್ತಡ ನಿಜವಾಗಲೂ ಕಡಿಮೆಯಾಗುತ್ತಾ? ನನ್ನ ಪ್ರಕಾರ ಇಲ್ಲ. ಕಪಿಲ್ ಪ್ರಯೋಗ ಒಂದು ಕಪಿಚೇಷ್ಟೇಯಾಗುತ್ತದೆ ಅಷ್ಟೇ. ಇದಕ್ಕೆ ನನ್ನ 6 ಫಂಡಾ ಇದೆ, ನೋಡಿ.

ಫಂಡಾ 1: SSLC ಪರೀಕ್ಷೆ ರದ್ದಾಗುವುದರಿಂದ ವಿದ್ಯಾರ್ಥಿಗಳ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂಬುದು ಸುಳ್ಳು. ಒತ್ತಡ ಒಂದು ಪಾಯಿಂಟಲ್ಲಿ ಕಡಿಮೆಯಾಗಿ ಇನ್ನೊಂದು ಪಾಯಿಂಟಿಗೆ ಶಿಫ್ಟ್ ಆಗುತ್ತದೆ. ಅಷ್ಟೇ.

ಮೊಟ್ಟ ಮೊದಲನೇಯದಾಗಿ ಮಕ್ಕಳ ಮೇಲೆ ಮಾನಸಿಕ ಒತ್ತಡ ಏಕೆ ಉಂಟಾಗುತ್ತದೆ ಎಂಬುದನ್ನು ಗಮನಿಸಬೇಕು. ಇದಕ್ಕೆ ಶಿಕ್ಷಣದ ಗ್ರಾಫಿನಲ್ಲಿ ಹಿಮ್ಮುಖವಾಗಿ ಯೋಚಿಸಬೇಕು.



a) ಇದು ಶಿಕ್ಷಣದ ಗ್ರಾಫ್. ಎಲ್ಲ ಪಾಲಕ ಪೋಷಕರ ಉದ್ದೇಶವೇನು? ತಮ್ಮ ಮಕ್ಕಳು ಚೆನ್ನಾಗಿ ಓದಿ-ಕಲಿತು ಉತ್ತಮ ಉದ್ಯೋಗ ಪಡೆಯಬೇಕು. ಕೈತುಂಬಾ ಸಂಬಳ ಪಡೆದು ಸುಖವಾಗಿ ಬದುಕಬೇಕು ಎಂಬುದು ತಾನೆ? ಅಂದರೆ, ಈ ಗ್ರಾಫಿನ 5ನೇ ಹಂತ ತಲುಪುವುದು ಎಲ್ಲ ಪಾಲಕ-ಪೋಷಕರ ಗುರಿ. ಈ ಹಂತ ತಲುಪುವ ಸಲುವಾಗಿ ಎಲ್ಲ ಒತ್ತಡ ಇರುತ್ತದೆ. ಒಮ್ಮೆ ಈ ಹಂತ ತಲುಪಿದರೆ ಒತ್ತಡ ನಿವಾರಣೆಯಾಗುತ್ತದೆ ಹಾಗೂ ಪಾಲಕರು ತಮ್ಮ ಜೀವನ ಧನ್ಯವಾಯಿತು ಎಂದುಕೊಳ್ಳುತ್ತಾರೆ. ಅಂದರೆ, ಪಾಲಕರು ತಮ್ಮ ಮಕ್ಕಳ ಮೇಲೆ ಶಿಕ್ಷಣದ ಒತ್ತಡ ಹೇರುವುದು ಈ 5ನೇಯ ಹಂತ ತಲುಪುವ ಸಲುವಾಗಿ. Point to be noted. ಉತ್ತಮ ಉದ್ಯೋಗ ಪಡೆಯುವುದೇ "ಒತ್ತಡದ" ಗಮ್ಯ.

b) ಹಾಗಾದರೆ, 5ನೇ ಹಂತ ತಲುಪುವುದು ಹೇಗೆ? ಐದನೇ ಹಂತ ತಲುಪಲು ಮಕ್ಕಳು ಅತ್ಯುತ್ತಮ ಶಿಕ್ಷಣ ಹಾಗೂ ಕೌಶಲ್ಯವನ್ನು ಪಡೆದಿರಬೇಕಾಗುತ್ತದೆ. ಕೇವಲ ಶಿಕ್ಷಣದ ಪ್ರಮಾಣಪತ್ರ ಪಡೆದಿದ್ದರೆ ಉತ್ತಮ ಉದ್ಯೋಗ ಸಿಗುವುದಿಲ್ಲ. ಉದಾಹರಣೆಗೆ ಬರೀ ಎಂಬಿಎ ಪದವಿ ಪಡೆದರೆ, ಸಾಲದು. ಆ ಪದವಿಯಲ್ಲಿ ಅತ್ಯುತ್ತಮ ಸ್ಕೋರ್ ಮಾಡಿರಬೇಕು. ಕೇವಲ ಉತ್ತಮ ಸ್ಕೋರ್ ಮಾಡಿದರೂ ಸಾಲದು. ಅತ್ಯುತ್ತಮ ಬಿಸಿನೆಸ್ ಸ್ಕೂಲಲ್ಲಿ ಕಲಿತಿರಬೇಕು. ಅತ್ಯುತ್ತಮ ಸಂಸ್ಥೆಯಲ್ಲಿ ಕಲಿತರೆ ಮಾತ್ರ ಅತ್ಯುತ್ತಮ ಉದ್ಯೋಕ್ಕೆ ಅರ್ಹತೆ ದೊರೆಯುತ್ತದೆ. Point to be noted. ಅಂದರೆ, ಇಲ್ಲಿ ಎರಡು ರೀತಿಯ ಒತ್ತಡ ಇರುತ್ತದೆ. ಒಂದು ಉತ್ತಮ ಸ್ಕೋರ್ ಮಾಡುವುದು ಹಾಗೂ ಇನ್ನೊಂದು ಅತ್ಯುತ್ತಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವುದು.

c) ಈ ಎರಡು ರೀತಿಯ ಒತ್ತಡಗಳೂ ಈಗ ಹಿಮ್ಮುಖವಾಗಿ 4, 3, 2ನೇ ಹಂತಕ್ಕೆ ವರ್ಗಾವಣೆಯಾಗುತ್ತವೆ. ಬೆಂಗಳೂರಿನಂಥ ಷಹರಗಳಲ್ಲಾದರೆ, ಈ ಒತ್ತಡ 1ನೇ ಹಂತಕ್ಕೂ ವರ್ಗಾವಣೆಯಾಗುತ್ತದೆ. (ಬೆಂಗಳೂರಿನಲ್ಲಿ ಉತ್ತಮ ಪ್ರಾಥಮಿಕ ಶಾಲೆಯಲ್ಲಿ LKGಗೆ ಪ್ರವೇಶ ಪಡೆಯುವ ಕಷ್ಟ ಪಾಲಕರಿಗೇ ಗೊತ್ತು!)

ಅಂದರೆ, ಅರ್ಥವಿಷ್ಟೇ. ವಿದ್ಯಾರ್ಥಿಗಳ ಮೇಲಿನ ಒತ್ತಡ ಎನ್ನುವುದು ಇಂದಿನ ಪರೀಕ್ಷೆಯ ಒತ್ತಡವಲ್ಲ. ಅದು ಭವಿಷ್ಯದ ಒತ್ತಡ. ಉತ್ತಮ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಹಾಗೂ ಉತ್ತಮ ಉದ್ಯೋಗ ಪಡೆಯುವ ಕುರಿತಾದ ಒತ್ತಡ. ಅದು ಹಿಮ್ಮುಖವಾಗಿ ಬಂದಿದೆ ಅಷ್ಟೇ. Point to be noted. ಹಂತ 5ರಲ್ಲಿರುವ ಭವಿಷ್ಯದ ಒತ್ತಡವನ್ನು ನಿವಾರಿಸದ ಹೊರತೂ ಹಂತ 4, 3, 2 ಹಾಗೂ 1ರ ಮೇಲಿನ ಒತ್ತಡ ನಿವಾರಣೆಯಾಗುವುದಿಲ್ಲ.

ಸಿಬಲ್ ಅವರ ಕ್ರಾಂತಿಕಾರಿ ಶಿಕ್ಷಣ ಪದ್ಧತಿ ಹಂತ 5ರ ಒತ್ತಡವನ್ನು ನಿವಾರಿಸುವುದಿಲ್ಲ.

ಫಂಡಾ 2 : ಕರ್ನಾಟಕದ SSLC ಪ್ರಯೋಗ ಫೇಲಾದ ಕಥೆ

ಓ.ಕೆ. ಒಂದು ವೇಳೆ 10ನೇ ತರಗತಿಯ ಪಬ್ಲಿಕ್ ಪರೀಕ್ಷೆ ರದ್ದಾಯಿತು ಅಂದುಕೊಳ್ಳೋಣ. ಆಗ 10ನೇ ತರಗತಿಯ ವಿದ್ಯಾರ್ಥಿಯ ಮೇಲಿನ ಒತ್ತಡ ತಕ್ಷಣಕ್ಕೆ ಕಡಿಮೆಯಾಗುತ್ತದೆ ಎನ್ನುವುದು ನಿಜ. ಅದರೆ, ಪರಿಣಾಮವೇನು? ಆ ಮಗು ತಾನು ಓದಿದ ಶಾಲೆ ಬಿಟ್ಟು ಪಿಯು ಕಾಲೇಜು ಸೇರಲು ಪ್ರತ್ಯೇಕ ಪ್ರವೇಶ ಪರೀಕ್ಷೆ ಬರೆಯಬೇಕು ಎನ್ನುತ್ತದೆ ಸಿಬಲ್ ನಿಯಮ. ಅಂದರೆ, ಮಗು ಪಬ್ಲಿಕ್ ಪರೀಕ್ಷೆ ಬದಲು ತನ್ನ ಹೈಸ್ಕೂಲಿನಲ್ಲೇ ನಡೆಯುವ ವಾರ್ಷಿಕ ಪರೀಕ್ಷೆ ಬರೆಯುತ್ತದೆ ಹಾಗೂ ಪಿಯೂಸಿ ಪ್ರಥಮ ವರ್ಷಕ್ಕೆ ಸೇರಲು ಇನ್ನೊಂದು ಪ್ರವೇಶ ಪರೀಕ್ಷೆ ಬರೆಯುತ್ತದೆ. ಇದರರ್ಥ ಮಗು 11ನೇ ತರಗತಿ ಸೇರಲು ಎರಡು ಪರೀಕ್ಷೆ ಬರೆಯಬೇಕು! ಇದು extra ಒತ್ತಡವಲ್ಲವೇ?

ಇನ್ನೊಂದು ವಿಷಯ. ಕರ್ನಾಟಕದಲ್ಲಿ ನಡೆದ ಮಹತ್ವದ ಪ್ರಯೋಗವೊಂದನ್ನು ಗಮನಿಸಬೇಕು. ಕಳೆದ 3 ವರ್ಷದ ಹಿಂದೆ SSLC ಪರೀಕ್ಷೆಯ ಒತ್ತಡವನ್ನು ತಡೆಯಲು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಿತು. 100 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ 60 ಅಂಕಗಳಷ್ಟು ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡಿತು. ವಿವರಣಾತ್ಮಕ ಪ್ರಶ್ನೆಗಳನ್ನು ಕಡಿಮೆ ಮಾಡಿತು. ಇದರಿಂದ ಮಕ್ಕಳ ಮೇಲಿನ ಒತ್ತಡ ಕಡಿಮೆಯಾದದ್ದು ನಿಜ. ಆದರೆ, ಇದರ ಪರಿಣಾಮ ಪಿಯುಸಿ ದ್ವಿತೀಯ ಹಂತದಲ್ಲಿ ಕಾಣಿಸಿಕೊಂಡಿತು. ಸುಲಭವಾಗಿ SSLC ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು, ಪ್ರಥಮ ಪಿ.ಯು. ತರಗತಿಯಲ್ಲಿ ಕಷ್ಟ ಅನುಭವಿಸಿದರು ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಫೇಲಾದರು. ದ್ವಿತೀಯ ಪಿಯು ಪಾಸ್ ಫಲಿಂತಾಶ ಎಂದೂ ಇಲ್ಲದಷ್ಟು ಪ್ರಮಾಣದಲ್ಲಿ ಕುಸಿಯಿತು. ಇದೀಗ ರಾಜ್ಯದ ಶಿಕ್ಷಣ ತಜ್ಞರಿಗೆ ಈ ತಪ್ಪಿನ ಅರಿವಾಗಿದೆ. ಆದ್ದರಿಂದ ಮತ್ತೆ SSLC ಹಂತದಲ್ಲಿ ಪರೀಕ್ಷಾ ಪದ್ಧತಿ ಸರಿ ಮಾಡಲು ಈ ವರ್ಷದಿಂದ ಪ್ರಾರಂಭಿಸಿದ್ದಾರೆ. ಪರೀಕ್ಷೆಯನ್ನು ಸುಲಭಗೊಳಿಸಿದ್ದಕ್ಕೇ ಈ ಪರಿ ಫಲಿತಾಂಶ. ಇನ್ನು ಪರೀಕ್ಷೆಯನ್ನು ರದ್ದುಗೊಳಿಸಿದರೆ ಹೇಗಿರಬಹುದು ಪರಿಣಾಮ?

Point to be noted. ಅಡಿಪಾಯ ಗಟ್ಟಿ ಇಲ್ಲದೇ ಮನೆ ಕಟ್ಟಲು ಹೋದರೆ ಕಟ್ಟಡ ಕುಸಿಯದೇ ಇದ್ದೀತೆ? 12ನೇ ತರಗತಿಗೆ 10ನೇ ತರಗತಿಯೇ ಅಡಿಪಾಯ.

ಅಂದರೆ, 10ನೇ ತರಗತಿಯ ಪಬ್ಲಿಕ್ ಪರೀಕ್ಷೆ ರದ್ದು ಮಾಡಿದರೆ, ಅದರ ಒತ್ತಡ ಕೆಲವೇ ದಿನದಲ್ಲಿ ನಡೆಯುವ ಪ್ರವೇಶ ಪರೀಕ್ಷೆಯ ಮೇಲೆ ಅಥವಾ 11ನೇ ತರಗತಿಯ ಮೇಲೆ ಕಾಣಿಸಿಕೊಳ್ಳುತ್ತದೆ. ಅದರ ಪರಿಣಾಮ ವಗುವಿನ ಭವಿಷ್ಯಕ್ಕೆ ನಿರ್ಣಾಯಕವಾದ 12ನೇ ತರಗತಿಯ ಮೇಲೆ ಆಗುತ್ತದೆ.

ಇನ್ನು ಅಂಕಗಳ ಬದಲು ಗ್ರೇಡ್ ನೀಡುವುದಾಗಿ ಹಾಗೂ ಪರ್ಸೆಂಟ್ ಬದಲು ಪರ್ಸೆಂಟೈಲ್ ನೋಡುವುದಾಗಿ ಸಿಬಲ್ ಹೇಳಿದ್ದಾರೆ. ಸಿಬಲ್ ಪ್ರಸ್ತಾವದಲ್ಲಿ ಇದೊಂದೇ ತುಸು ಸಕಾರಾತ್ಮಕ ಅಂಶ. ಇದನ್ನು ಈಗಿನ ಪರೀಕ್ಷಾ ಪದ್ಧತಿಯಲ್ಲೂ ಜಾರಿ ಮಾಡಬಹುದಲ್ಲ!

ಫಂಡಾ 3: ಇದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ನಮ್ಮ ಇಡೀ ಜೀವನ, ಸ್ಪರ್ಧೆಯ ಸುತ್ತ ಗಿರಕಿಹೊಡೆಯುತ್ತದೆ. ಸ್ಪರ್ಧೆಯಲ್ಲಿ ಗೆಲ್ಲುವುದೇ ಮುಖ್ಯವಾಗುತ್ತದೆ. ಈ ಸ್ಪರ್ಧೆಯಲ್ಲಿ ಗೆಲ್ಲುವ ಬಗೆಯನ್ನು ಶಿಕ್ಷಣ ಕಲಿಸಿಕೊಡಬೇಕು. ಸ್ಪರ್ಧೆ ಎದುರಿಸುವ ಮನೋಸ್ಥೈರ್ಯವನ್ನು ಬೆಳೆಸಿಕೊಡಬೇಕು. ಜೀವನದ ವಾಸ್ತವ ಒತ್ತಡಗಳನ್ನು ಸ್ವೀಕರಿಸಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕು. Survival of the Fittest ಎಂಬ ಸತ್ಯದ ದರ್ಶನ ಮಾಡಿಸಬೇಕು. ಅದನ್ನು ಬಿಟ್ಟು ಒತ್ತಡಗಳಿಗೆ ಹೆದರಿ ಓಡಿಹೋಗುವ ಪಲಾಯನವಾದವನ್ನು ಕಲಿಸಬಾರದು. ಈಗ ಕಪಿಲ್ ಸಿಬಲ್ ನಮ್ಮ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ಓಡಿಹೋಗುವ ವಿದ್ಯೆ ಕಲಿಸಲು ಉದ್ದೇಶಿಸಿದ್ದಾರೆ!

ಫಂಡಾ 4 : ಪರೀಕ್ಷೆ ರದ್ದು ಮಾಡುವುದರಿಂದ, "ಹೇಗೂ ಪಾಸಾಗಬೇಕಿಲ್ಲ ಬಿಡು..." ಎಂದು, ಮಕ್ಕಳು ಬೇಜವಾಬ್ದಾರರಾಗುತ್ತಾರೆ. ಪರೀಕ್ಷೆ ಇಲ್ಲದಿದ್ದರೂ ತಾವು ಓದಬೇಕು ಎಂದು ಬಹುತೇಕ ಮಕ್ಕಳು ಅಂದುಕೊಳ್ಳುವುದಿಲ್ಲ. ಏಕೆಂದರೆ, ಓದುವುದು ಮಕ್ಕಳ ಸಹಜ Instinct ಅಲ್ಲ. ಆಡುವುದು ಅವರ ಸಹಜ ಗುಣ. ಆದ್ದರಿಂದ ಮಕ್ಕಳು ಪರೀಕ್ಷೆಯಿಲ್ಲದಿದ್ದರೂ ತಾವೇ ತಾವಾಗಿ ಓದಿಕೊಳ್ಳುತ್ತಾರೆ ಎಂಬುದು ಭ್ರಮೆ. ಮಕ್ಕಳನ್ನು ಓದಿಸುವ ಕಷ್ಟ ಬುದ್ದಿಜೀವಿಗಳಿಗಿಂತ ತಾಯಂದೀರಿಗೆ ಚೆನ್ನಾಗಿ ಗೊತ್ತು! ಅಲ್ಲದೇ, 16ನೇ ವಯಸ್ಸಿನ ಮಕ್ಕಳ ಮನಸ್ಸು ಚಂಚಲ. ಅವರಿಗಿನ್ನೂ ಜವಾಬ್ದಾರಿ ಮೂಡಿರದ ವಯಸ್ಸು ಅದು. ಅದಕ್ಕೇ ಅವರನ್ನು Adult ಎಂದು ಪರಿಗಣಿಸುವುದಿಲ್ಲ. ಆರರಿಂದ ಹದಿನಾರರವರೆಗೆ ಮಕ್ಕಳನ್ನು ಓದಿಸುವ ಜವಾಬ್ದಾರಿ ಹಿರಿಯರದು. ಈ ಹಿನ್ನೆಲೆಯಲ್ಲಿ, ಪರೀಕ್ಷೆ ಎಂಬುದು, ಮಕ್ಕಳಿಗೆ ಓದಲು ಒಂದು ಪ್ರಬಲ ಕಾರಣವಾಗುತ್ತದೆ. ಆದ್ದರಿಂದ, ಪರೀಕ್ಷೆಯನ್ನು ರದ್ದುಗೊಳಿಸುವುದು ತರವಲ್ಲ.

ಫಂಡಾ 5 : ದೇಶಾದ್ಯಂತ 10ನೇ ತರಗತಿಗೆ ಸಮಾನ ಪಠ್ಯಕ್ರಮ ಜಾರಿಯಾದರೆ, ಶೈಕ್ಷಣಿಕ ಗೊಂದಲ ನಿವಾರಣೆಯಾಗುತ್ತದೆ ಎಂದು ಕಪಿಲ್ ಸಿಬಲ್ ವಾದ. ಒಂದು ದೃಷ್ಟಿಯಲ್ಲಿ ಅದು ನಿಜ. ಆದರೆ, ಕೇಂದ್ರ ಪಠ್ಯಕ್ರಮದಲ್ಲಿ, ಆಯಾ ರಾಜ್ಯಗಳ ಭಾಷೆ, ಇತಿಹಾಸ, ಸಂಸ್ಕೃತಿ ಎಲ್ಲಾ ಏನಾಗುತ್ತದೆ? ಶಿಕ್ಷಣ ಎಂದರೆ ಬರೀ ಸೈನ್ಸು, ಮ್ಯಾಥ್ಸು ಅಲ್ಲವಲ್ಲ! ವಿಜ್ಞಾನ ಮತ್ತು ವಾಣಿಜ್ಯದಂಥ ವಿಷಯದಲ್ಲಿ ಸಮಾನ ಪಠ್ಯ ತರಬಹುದು. ಆದರೆ, ಇತಿಹಾಸ, ಸಂಸ್ಕೃತಿ, ಸಮಾಜ ಶಾಸ್ತ್ರ, ಭಾಷೆಯಂಥ ಸೂಕ್ಷ್ಮ ವಿಷಯದಲ್ಲಿ ಸಮಾನ ಪಠ್ಯಕ್ರಮ ತರವಲ್ಲ. ಅಲ್ಲದೇ, ಹಳ್ಳಿ ಮಕ್ಕಳಿಗೂ ದಿಲ್ಲಿ ಮಕ್ಕಳಿಗೂ ಒಂದೇ ಶಿಕ್ಷಣ ನೀಡಬೇಕು ಎಂದರೆ ಹೇಗೆ ಸರಿ. ದಿಲ್ಲಿ ಮಕ್ಕಳ ಠಸ್ ಪುಸ್ ಇಂಗ್ಲೀಷಿನ ಮುಂದೆ ನಮ್ಮ ಹಳ್ಳಿ ಮಕ್ಕಳ ಇಂಗ್ಲೀಷು ಹೇಗೆ ಸಮವಾದೀತು? ಕೇಂದ್ರ ಪಠ್ಯಕ್ರಮದಲ್ಲೂ ಕನ್ನಡಮಾಧ್ಯಮ ಶಿಕ್ಷಣ ಇರುವುದೇ? ಹಾಗೇನಾದರೂ ಇದ್ದರೂ, ಸಮಾನ ಪಠ್ಯಕ್ರಮಕ್ಕೆ ನಾವು ಒಪ್ಪಿಕೊಂಡರೆ, ಉತ್ತರ ಭಾರತದ ಝಾನ್ಸಿರಾಣಿ ಎಂದರೆ ನಮ್ಮ ಮಕ್ಕಳಿಗೆ ಗೊತ್ತಿರುತ್ತದೆ. ಕಿತ್ತೂರು ಚೆನ್ನಮ್ಮ ಎಂದರೆ ಅದ್ಯಾರು ಅಂತಾರೆ? ಏಕೆಂದರೆ, ಕೇಂದ್ರ ಪಠ್ಯಕ್ರಮ ಉತ್ತರ ಭಾರತದಲ್ಲಿ ಸಿದ್ಧವಾಗುತ್ತದೆ! ಇದೆಲ್ಲಾ ಹೊಸ ಟೆನ್‌ಶನ್ನಿಗೆ ಕಾರಣವಾಗುತ್ತದೆ.

ಫಂಡಾ 6: ಹೋಗಲಿ, ಸಿಬಲ್ ಹೇಳಿದ್ದನ್ನು ಒಪ್ಪಿಕೊಂಡು ಬಿಡೋಣ. ಪರೀಕ್ಷಾ ಒತ್ತಡದಿಂದ ಮಕ್ಕಳನ್ನೂ, ಪಾಲಕರನ್ನೂ ಪಾರುಮಾಡಬೇಕು ಎಂಬುದು ಅವರ ಸದುದ್ದೇಶ. ಪರೀಕ್ಷಾ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂಥ ಸ್ಥಿತಿ ಹೋಗಲಾಡಿಸಬೇಕು ಎಂಬುದು ಸರಿ. ಆದರೆ, ಈ ಪರೀಕ್ಷಾ ಒತ್ತಡ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ 12ನೇ ತರಗತಿಯಲ್ಲೂ ಇದೆಯಲ್ಲಾ! ಡಿಗ್ರಿ ಕ್ಲಾಸಿನಲ್ಲೂ ಇದೆಯಲ್ಲಾ? ಅವರನ್ನೆಲ್ಲಾ ಏಕೆ ಸಿಬಲ್ ಪರೀಕ್ಷಾ ಟ್ರಾಮಾದಿಂದ ಪಾರು ಮಾಡುವುದಿಲ್ಲ? ಭಾರತದಲ್ಲಿರುವ ಎಲ್ಲ ಕ್ಲಾಸಿನ ವಿದ್ಯಾರ್ಥಿಗಳನ್ನೂ ಪರೀಕ್ಷಾ ಟ್ರಾಮಾದಿಂದ ಪಾರುಮಾಡಿ ಎಲ್ಲರಿಗೂ ಸರ್ಟಿಫಿಕೆಟ್ ದಯಪಾಲಿಸಬಹುದಲ್ಲ? ಅದಕ್ಕಿಂತ ದೊಡ್ಡ ಶಿಕ್ಷಣ ಕ್ರಾಂತಿ ಇನ್ಯಾವುದಿದೆ!

ಪ್ಲೀಸ್ ಥಿಂಕ್ ಎಬೌಟ್ ಇಟ್ ಮಿಸ್ಟರ್ ಕಪಿ ಸಿಬಲ್.

Tuesday, June 09, 2009

ಯಂಗಿಸ್ತಾನಿಗಳಿಗೆ ಉಚಿತ ಟಾಕ್ ಟೈಮ್, SMS ಸೇವೆ

ಇದು ಪೆಪ್ಸಿ ಜಾಹೀರಾತಲ್ಲ. ವರ್ಜಿನ್ ಮೊಬೈಲ್ ಕಂಪನಿಯ ಮಾರ್ಕೆಟಿಂಗ್ ಗಿಮಿಕ್ಕೂ ಅಲ್ಲ. "ಪುಗಸಟ್ಟೆ ಟಾಕ್ ಟೈಮ್ ಹಾಗೂ ಉಚಿತ ಎಸ್.ಎಂ.ಎಸ್." ಎನ್ನುವುದು ಬ್ಲಿಕ್ ಎಂಬ ಮೊಬೈಲ್ ಕಂಪನಿಯ ಬಿಸಿನೆಸ್ ಮಾಡೆಲ್ಲು. ಲಂಡನ್ ಮೂಲದ ಈ ಕಂಪನಿ ಶೀಘ್ರ ಭಾರತದಲ್ಲೂ ತನ್ನ ಸೇವೆ ಆರಂಭಿಸಲಿದೆ. ಯುವಕ-ಯುವತಿಯರಿಗೆ ಉಚಿತ ಮೊಬೈಲ್ ಸಂಪರ್ಕ ನೀಡಲಿದೆ.

ಹಾಗಾದರೆ, ಕಂಪನಿಗೇನು ಆದಾಯ?

ಬ್ಲಿಕ್ - ಒಂದು ಜಾಹೀರಾತು ಆಧಾರಿತ ಮೊಬೈಲ್ ಸೇವಾ ಕಂಪನಿ. ಮಹಾನಗರಗಳಲ್ಲಿ ವಾಸಿಸುವ, 16ರಿಂದ 24 ವರ್ಷ ವಯೋಮಿತಿಯೊಳಗಿನ ಯುವಕ ಯುವತಿಯರಿಗೆ ಉಚಿತ ಟಾಕ್ ಟೈಮ್ ರಿಫಿಲ್ ಕೂಪನ್ನುಗಳನ್ನು ನೀಡುತ್ತದೆ. ಈ ಕಂಪನಿ ಜಾಹೀರಾತುಗಳನ್ನು ಸಂಗ್ರಹಿಸಿ ಈ ಚಂದಾದಾರರ ಮೊಬೈಲ್ ಫೋನಿಗೆ ಬಿತ್ತರಿಸುತ್ತದೆ. ಮೊಬೈಲ್ ಸೇವೆ ಪಡೆಯುವ ಯುವಕ-ಯುವತಿಯರು ಈ ಜಾಹೀರಾತುಗಳನ್ನು ಓದುತ್ತಾರೆ ಇಲ್ಲವೇ ಕೇಳುತ್ತಾರೆ ಅಥವಾ ಎಂಎಂಎಸ್ ಜಾಹೀರಾತುಗಳನ್ನು ನೋಡುತ್ತಾರೆ. ಬ್ಲಿಕ್ ಕಂಪನಿಗೆ ಈ ಜಾಹೀರಾತುಗಳೇ ಆದಾಯ. ಯುವಕ-ಯುವತಿಯರಿಗೆ ಪುಕ್ಕಟೆ ಮೊಬೈಲ್ ಸೇವೆ. ಹಾಗೂ ಜಾಹೀರಾತುದಾರರಿಗೆ ಯುವಗ್ರಾಹಕರನ್ನು ತಲುಪುವ ಅವಕಾಶ. - Win-Win Situation for all.

ಮೊಬೈಲ್ ಫೋನ್ ಇಂದು ಕೇವಲ ಫೋನಾಗಿ ಉಳಿದಿಲ್ಲ. ಇದೊಂದು ಪ್ರಭಾವೀ ಮಾಧ್ಯಮವಾಗಿ ಬದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆ, ಟೀವಿ, ಹಾಗೂ ಇಂಟರ್ನೆಟ್ಟಿನಂತೆ ಮೊಬೈಲ್ ಸೇವೆಗೂ ಜಾಹೀರಾತು ಪ್ರಮಾಣ ಹೆಚ್ಚಾಗುತ್ತದೆ ಎಂಬುದು ಬ್ಲಿಕ್ ಲೆಕ್ಕಾಚಾರ.

ಈ ಬಿಸಿನೆಸ್ ಮಾಡೆಲ್ ಭಾರತದಲ್ಲಿ ಯಶಸ್ವಿಯಾಗುವುದೇ? ಗೊತ್ತಿಲ್ಲ.

ಈಗ ಹತ್ತು ವರ್ಷದ ಹಿಂದೆ, ಬೆಂಗಳೂರು ಸೇರಿದಂತೆ ದೇಶದ ಅನೇಕ ಭಾಗದಲ್ಲಿ, ಇದೇ ಬಿಸಿನೆಸ್ ಮಾಡೆಲ್ಲಿನ, ಜಾಹೀರಾತು ಆಧಾರಿತ, ಉಚಿತ ಇಂಟರ್ನೆಟ್ ಸೇವೆ ಆರಂಭವಾಗಿತ್ತು. ಕ್ಯಾಲ್-ಟೈಗರ್ ಎಂಬ ಕಂಪನಿ ಉಚಿತ ಇಂಟರ್ನೆಟ್ ಸಂಪರ್ಕ ನೀಡಿತ್ತು. ಇಂಟರ್ನೆಟ್ ಕನೆಕ್ಟ್ ಆದಾಗ ಕಂಪ್ಯೂಟರಿನ ತೆರೆಯ ಅಡಿ-ಭಾಗದಲ್ಲಿ ಜಾಹೀರಾತು ಬ್ಯಾನರ್ ಕಾಣಿಸುತ್ತಿದ್ದವು. ಆದರೆ, ಕಂಪನಿಗೆ ಸಾಕಷ್ಟು ಜಾಹೀರಾತು ಸಿಗದೇ, ಕಂಪನಿ ಲಾಸ್ ಆಗಿ, ಕ್ಯಾಲ್-ಟೈಗರ್ ಉಚಿತ ಇಂಟರ್ನೆಟ್ ಸೇವೆ ಬಂದಾಯಿತು.

ಅದೇ ವೇಳೆ, ಚೆಕ್-ಮೇಲ್ ಎಂಬ ಇನ್ನೊಂದು ಸೇವೆಯೂ ಆರಂಭವಾಗಿತ್ತು. ಯಾಹೂ ಥರದ ಇ-ಮೇಲ್ ಸೇವೆ ಇದಾಗಿತ್ತು. ಆದರೆ, ವಿಶೇಷವೆಂದರೆ, ಈ ಇ-ಮೇಲ್ ಸೇವೆ ಬಳಸಿದರೆ, ಕಂಪನಿ ಪ್ರತಿ ತಿಂಗಳೂ ಹಣ ಕೊಡುತ್ತಿತ್ತು... ಚೆಕ್ ರೂಪದಲ್ಲಿ. ಅದಕ್ಕೇ ಚೆಕ್ ಮೇಲ್ ಎಂಬ ಹೆಸರಿತ್ತು. ಕಂಪನಿಗೆ ಜಾಹೀರಾತುಗಳಿಂದ ಆದಾಯ ಬರುತ್ತಿತ್ತು. ಆದರೆ, ಸಾಕಷ್ಟು ಜಾಹೀರಾತು ಸಿಗದೇ ಕಂಪನಿ ನಷ್ಟ ಹೊಂದಿ ಸೇವೆ ಬಂದಾಯಿತು.

ಅದೇ ರೀತಿ... ಜಾಹೀರಾತು ಮೇಲ್ ಓದಿ ಹಣ ಗಳಿಸಿ ಎಂಬ ಇನ್ನೊಂದಿಷ್ಟು ಸೇವೆ ಇತ್ತು. ನಾನು ಇದೆಲ್ಲಾ ಸೇವೆಗೂ ಸದಸ್ಯನಾಗಿದ್ದೆ. ಆರಂಭದಲ್ಲಿ ಉಚಿತ ಇಂಟರ್ನೆಟ್, ಕೆಲವಷ್ಟು ಚೆಕ್ ಎಲ್ಲಾ ಬಂದಿದ್ದು ನಿಜ. ಆದರೆ, ಆ ಕಂಪನಿಗಳ ಬಿಸಿನೆಸ್ ಯಶಸ್ವಿಯಾಗಲಿಲ್ಲ.

ಈಗ ಬ್ಲಿಕ್ ಬಂದಿದೆ. ಬಿಸಿನೆಸ್ ಮಾಡೆಲ್ ಅದೇ. ಪ್ರಾಡಕ್ಟ್ ಮಾತ್ರ ಬೇರೆ.... ಆದ್ದರಿಂದ ಬ್ಲಿಕ್ ಕ್ಲಿಕ್ ಆಗುವುದೋ ಬ್ಲಿಂಕ್ ಆಗುವುದೋ ಎನ್ನುವ ಕುತೂಹಲ ನನಗಿದೆ.

Saturday, June 06, 2009

ಕನ್ನಡ ಟೈಪಿಸಲು ಗೂಗಲ್ ಹೊಸ ತಂತ್ರ - Bookmarklet

ಎಲ್ಲಾದರೂ ಇರಿ. ಎಂತಾದರೂ ಇರಿ. ಆನ್ ಲೈನಲ್ಲಿ ಕನ್ನಡ ಟೈಪ್ ಮಾಡುತ್ತಿರಿ.

ವೆಬ್ ಸೈಟುಗಳಲ್ಲಿ ಕನ್ನಡ ಟೈಪ್ ಮಾಡಲು ಅನೇಕ ವಿಧಾನಗಳಿವೆ ಅಂತ ನನ್ನ ಈ ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಈಗ ಅದೆಲ್ಲಕ್ಕಿಂತ ಇನ್ನೂ ಸುಲಭದ ವಿದ್ಯೆಯನ್ನು ಕಲಿಸಿಕೊಡುತ್ತೇನೆ. Thanks to Google's Newest Bookmarklet!

ಭಾರತೀಯ ಭಾಷಾ ಟೂಲ್ ಅಭಿವೃದ್ಧಿಯಲ್ಲಿ ಗೂಗಲ್ ಇನ್ನೂ ಒಂದು ಹೆಜ್ಜೆ ಮುಂದೆ ಬಂದಿದೆ. ಮೂರು ತಿಂಗಳ ಹಿಂದೆ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಗೆ ಗೂಗಲ್ ಲಿಪ್ಯಂತರ (Transliteration) ಟೂಲ್ ನೀಡಿತ್ತು ತಾನೇ?. ಆದರೆ, ಆ ಟೂಲ್ ಗೂಗಲ್ ಒಡೆತನದ ಜಿಮೇಲ್, ಬ್ಲಾಗರ್ ಮುಂತಾದ ಸೈಟುಗಳಲ್ಲಿ ಮಾತ್ರ ಕೆಲಸ ಮಾಡುತ್ತಿತ್ತು. ಇದೀಗ, ಜೂನ್ 4ರಂದು, ಕನ್ನಡ ಬುಕ್ಮಾರ್ಕ್-ಲೆಟ್ ಎಂಬ ವಿನೂತನ ಟೂಲನ್ನು ಗೂಗಲ್ ಬಿಡುಗಡೆ ಮಾಡಿದೆ. ಈ ಟೂಲಿಂದ ಯಾವುದೇ ಸೈಟಿನಲ್ಲಿ ಬೇಕಾದರೂ ಕನ್ನಡ ಅಥವಾ ಇತರ ಭಾರತೀಯ ಭಾಷೆಯನ್ನು ಸುಲಭವಾಗಿ ಟೈಪ್ ಮಾಡಬಹುದು. ಕನ್ನಡ ಟೈಪ್ ಮಾಡಲು ಹೆಣಗಾಡುವ ಎಲ್ಲರಿಗೂ ಈ ಟೂಲ್ ನಿಜಕ್ಕೂ ಒಂದು ವರ.

ಅಂದಹಾಗೆ, ಬುಕ್ಮಾರ್ಕ್-ಲೆಟ್ ಅಂದರೆ ಏನು ಅಂತ ನೀವು ಕೇಳಬಹುದು. Bookmark + Applet ಸೇರಿ Bookmarklet ಆಗಿದೆ. ಇದೊಂದು ಅತ್ಯಂತ ಪುಟಾಣಿ ತಂತ್ರಾಂಶ. ಕೆಲವಾರು ಸಾಲುಗಳ ಜಾವಾಸ್ಕ್ರಿಪ್ಟ್ ಅಷ್ಟೇ. ನಿಮ್ಮ ಬ್ರೌಸರಿನಲ್ಲಿ ಇದನ್ನು ಫೇವರಿಟ್ ಲಿಂಕ್ ಆಗಿ ಸೇರಿಸಿಕೊಂಡರೆ ಸಾಕು.



ಕನ್ನಡ ಟೈಪ್ ಮಾಡಬೇಕು ಅನ್ನಿಸಿದಾಗ ಈ ಲಿಂಕ್ ಒತ್ತಬೇಕು. ಕನ್ನಡ ಲಿಪ್ಯಂತರ ಕ್ರಿಯೆ ಚಾಲೂ ಆಗುತ್ತದೆ. ಕನ್ನಡ ಟೈಪಿಂಗ್ ಬೇಡ ಅನ್ನಿಸಿದಾಗ ಮತ್ತೆ ಈ ಲಿಂಕ್ ಒತ್ತಿದರೆ ಲಿಪ್ಯಂತಕ ಕ್ರಿಯೆ ಸ್ಥಗಿತಗೊಳ್ಳುತ್ತದೆ.



ಇದು ಸಹ "ಫೊನೆಟಿಕ್ ಕೀಬೋರ್ಡ ವಿನ್ಯಾಸ" ಆಧಾರಿತ ಟೂಲ್. ಅಂದರೆ, "Baruttane ಅಂತ ಟೈಪ್ ಮಾಡಿ ಒಂದು ಸ್ಪೇಸ್ ನೀಡಿದರೆ "ಬರುತ್ತಾನೆ" ಅಂತ ತಂತಾನೆ ಲಿಪ್ಯಂತರವಾಗುತ್ತದೆ.

ಈ ಟೂಲನ್ನು ಫೇವರಿಟ್ ಲಿಂಕ್ ಆಗಿ ನಿಮ್ಮ ಬ್ರೌಸರಿಗೆ ಸೇರಿಸಿಕೊಳ್ಳುವುದು ಹೇಗೆ?

1. ಮೊದಲು ಈ ಲಿಂಕಿನ ಮೇಲೆ ರೈಟ್ ಕ್ಲಿಕ್ ಮಾಡಿ. [ಅ Type in Kannada]

2. ಈಗ "Add to Favorites" ಕ್ಲಿಕ್ ಮಾಡಿ.



3. ಈಗ ಈ ಕೆಳಗಿನ ಎಚ್ಚರಿಕೆಯ ಸಂದೇಶ ಮೂಡುತ್ತದೆ. ಹೆದರ ಬೇಡಿ. Yes ಬಟನ್ ಒತ್ತಿ. ಏಕೆಂದರೆ, ಈ ಲಿಂಕ್ ಏನೇನೂ ಅಪಾಯಕಾರಿಯಲ್ಲ.



4. ಈಗ Links ಡೈರಕ್ಟರಿಯಲ್ಲಿ ಈ ಲಿಂಕನ್ನು ಸೇರಿಸಲು Add ಬಟನ್ ಒತ್ತಿ. ಅಷ್ಟೇ.



5. ನಿಮ್ಮ ಕನ್ನಡ ಲಿಪ್ಯಂತರ ಲಿಂಕ್ ಸಿದ್ಧ.



6. ಬ್ರೌಸರಿನ ಮೇಲಿರುವ [ಅ Type in Kannada] ಬಟನ್ ಒತ್ತಿ. ಕನ್ನಡ ಲಿಪ್ಯಂತರ ಕ್ರಿಯೆ ಆರಂಭವಾಗುತ್ತದೆ. ಈಗ ವೈಬ್ ಪೇಜಿನಲ್ಲಿ ಎಲ್ಲಿ ಕನ್ನಡ ಟೈಪ್ ಮಾಡಬೇಕೋ ಅಲ್ಲಿ ನಿಮ್ಮ ಮೌಸಿನ ಕರ್ಸರ್ ಇಟ್ಟು ಟೈಪಿಂಗ್ ಆರಂಭಿಸಿ. ಉದಾಹರಣೆಗೆ Sedina Hakki ಅಂತ ಟೈಪ್ ಮಾಡಿ. ಅದು ಸೇಡಿನ ಹಕ್ಕಿ ಅಂತ ಬದಲಾಗುತ್ತದೆ.

ಈ ರೀತಿ ನೀವು ಸುಲಭವಾಗಿ ಯಾವುದೇ ವೆಬ್ ಪೇಜಿನಲ್ಲೂ ಕನ್ನಡ ಟೈಪ್ ಮಾಡಬಹುದು.

ಪ್ರೇಮಲೋಕ - ಸೆಲ್ ಸಿನೆಮಾ!


ಹಂಸಲೇಖಾ ಹಾಗೂ ರವಿಚಂದ್ರನ್ ಜೋಡಿಗೆ ಕನ್ನಡ ಸಿನಿಮಾ ಲೋಕದಲ್ಲಿ ಬ್ರೇಕ್ ನೀಡಿದ ಚಲನಚಿತ್ರ ಪ್ರೇಮಲೋಕ. ಸುಮಾರು ಎರಡು ದಶಕದ ಹಿಂದಿನ ಈ ಸೂಪರ್ ಹಿಟ್ ಚಿತ್ರ ಇದೀಗ ಮೊಬೈಲ್ ಫೋನಿನ ಆಡಿಯೋ ಸಿನಿಮಾ ರೂಪ ತಳೆದಿದೆ. ವೋಡಾಫೋನ್, ಐಡಿಯಾ, ಏರ್ ಟೆಲ್ ಹಾಗೂ ರಿಲಯನ್ಸ್ ಮೊಬೈಲ್ ಫೋನಿನಲ್ಲಿ ಲಭ್ಯವಾಗುತ್ತಿದೆ. ಈ ಚಿತ್ರ ಬೇಡವೆಂದರೆ, ಶೋಲೆ ಹಾಗೂ ಫ್ಯಾಷನ್ ಬಾಲಿವುಡ್ ಚಿತ್ರಗಳೂ ಸೇರಿದಂತೆ ತಮಿಳು, ತೆಲುಗಿನ ಒಟ್ಟೂ 208 ಆಡಿಯೋ ಸಿನಿಮಾಗಳಿವೆ. ಇನ್ನಷ್ಟು ಸಿನಿಮಾಗಳು ಬರಲಿವೆ.

ಇದು ಯು.ಟಿ.ವಿ. ನ್ಯೂ ಮಿಡಿಯಾ ಕಂಪನಿಯ ಹೊಸ ಮನರಂಜನೆ ವ್ಯವಹಾರ. ಮೊನ್ನೆ, ಜೂನ್ 3ರಿಂದ ಮೊಬೈಲ್ ಫೋನುಗಳಿಗೆ ಆಡಿಯೋ ಸಿನೆಮಾ ಎಂಬ ಹೊಸ ಸೇವೆಯನ್ನು ಯು.ಟಿ.ವಿ. ಆರಂಭಿಸಿದೆ. ಇಡೀ ಸಿನಿಮಾದ ಸಂಕ್ಷಿಪ್ತ ಧ್ವನಿ ರೂಪವನ್ನು ಮೊಬೈಲ್ ಫೋನಿನ ಜಾಲದ ಮೂಲಕ ವಿತರಿಸುವುದು ಯು.ಟಿ.ವಿ. ಐಡಿಯಾ. ಈ ಸಿನಿಮಾ ಕೇಳಲು ವೋಡಾಫೋನ್ ಹಾಗೂ ಏರ್ ಟೆಲ್ ನಿಮಿಷಕ್ಕೆ 6 ರುಪಾಯಿ, ಐಡಿಯಾ ಸೆಲ್ಯೂಲಾರ್ 7 ರುಪಾಯಿ ಶುಲ್ಕ ವಿಧಿಸಿದರೆ, ರಿಲಯನ್ಸ್ ತಿಂಗಳಿಗೆ 30 ರುಪಾಯಿ ಚಂದಾಹಣ ಕೇಳುತ್ತದೆ.

ಆಡಿಯೋ ಸಿನಿಮಾ ತುಂಬಾ ಹೊಸ ಕಲ್ಪನೆಯೇನೂ ಅಲ್ಲ. ಹಿಂದೆ, ನಾನು ಚಿಕ್ಕವನಿದ್ದಾಗ ಸಿನೆಮಾಗಳು ಆಡಿಯೋ ಕ್ಯಾಸೆಟ್ ರೂಪದಲ್ಲೂ ಬರುತ್ತಿತ್ತು. ಡೈಲಾಗು ಹಾಗೂ ಹಾಡುಗಳು ಸೇರಿ ಇಡಿ ಸಿನಿಮಾವನ್ನು ಒಂದು ಗಂಟೆಯ ಧ್ವನಿಸುರುಳಿಗೆ ಸರಿಹೋಗುವಂತೆ ಸಂಕ್ಷಿಪ್ತಗೊಳಿಸಿರಲಾಗುತ್ತಿತ್ತು. ಅಲ್ಲದೇ, ಆಕಾಶವಾಣಿಯಲ್ಲೂ ಆಡಿಯೋ ಸಿನೆಮಾ ಧಾರಾವಾಹಿಯಾಗಿ ಬಿತ್ತರವಾಗುತ್ತಿತ್ತು.

ಇದೀಗ ಆಡಿಯೋ ಸಿನಿಮಾ ಮೊಬೈಲ್ ಜಾಲಕ್ಕೆ ಸೇರ್ಪಡೆಯಾಗಿದೆ. ಸೆಲ್ ಫೋನಲ್ಲಿ ಲಭ್ಯವಾಗುವ ಈ ಸಿನಿಮಾವನ್ನು ಸೆಲ್ ಸಿನಿಮಾ ಎನ್ನಬಹುದೇನೋ! ಮೊಬೈಲ್ ಫೋನಿನಲ್ಲಿ ಎಫ್ ಎಂ ರೇಡಿಯೋ ಕೇಳುಗರು ಇರುವಂತೆ ಆಡಿಯೋ ಸಿನಿಮಾಕ್ಕೂ ಕೇಳುಗರು ಸಿಗುವ ಸಾಧ್ಯತೆ ಇಲ್ಲದಿಲ್ಲ.

Friday, May 22, 2009

ಮುಂಬಯೀ - ಟ್ಯಾಕ್ಸಿ ಪತ್ರಿಕೆ !

ವಿಮಾನಗಳಲ್ಲಿ in-flights ಮ್ಯಾಗಝಿನ್ ಇರುವುದು ಗೊತ್ತು ತಾನೆ? ಅದೇ ಥರ... ಮೊನ್ನೆ ಮಂಗಳವಾರದಿಂದ, ಮುಂಬೈ ಮಹಾಶಹರದ ಟ್ಯಾಕ್ಸಿಗಳಲ್ಲಿ in-Taxi ಮ್ಯಾಗಝಿನ್ “ಮುಂಬಯೀ” Mumbaee ಕಾಣಿಸಿಕೊಳ್ಳ ತೊಡಗಿದೆಯಂತೆ. ಇಂಥ ‘ಟ್ಯಾಕ್ಸಿ ಪತ್ರಿಕೆ’ ಭಾರತದಲ್ಲೇ ಪ್ರಥಮ. (…ಅಲ್ಲ ಜಗತ್ತಿನಲ್ಲೇ ಪ್ರಥಮ ಅಂತಲೂ ಕೆಲವರು ಹೇಳುತ್ತಾರೆ. ಗೊತ್ತಿಲ್ಲ.)

ಇಂಗ್ಲೀಷ್ ಭಾಷೆಯ ಈ ಪಾಕ್ಷಿಕ ಆರಂಭಿಸಿರುವುದು ಮುಂಬೈ ಟ್ಯಾಕ್ಸಿಮನ್ಸ್ ಯೂನಿಯನ್. ಟ್ಯಾಕ್ಸಿಯಲ್ಲಿ ಕುಳಿತ ಗಿರಾಕಿಗೆ, ಚಾಲಕ ಈ ಪತ್ರಿಕೆಯನ್ನು ಉಚಿತವಾಗಿ ಓದಲು ನೀಡುತ್ತಾನೆ ಹಾಗೂ ಗಿರಾಕಿ ಟ್ಯಾಕ್ಸಿಯಿಂದ ಇಳಿಯುವಾಗ ಪತ್ರಿಕೆಯನ್ನು ಚಾಲಕನಿಗೆ ವಾಪಸ್ ನೀಡುತ್ತಾನೆ. ಮುಂಬೈಯಲ್ಲಿ ಸುಮಾರು 65000 ಟ್ಯಾಕ್ಸಿಗಳಿವೆಯಂತೆ. ಅಲ್ಲದೇ, ಮುಂಬೈ-ಪುಣೆ, ಮುಂಬೈ-ನಾಸಿಕ್ ಮಾರ್ಗಗಳಲ್ಲೂ ಸಾವಿರಾರು ಟ್ಯಾಕ್ಸಿಗಳಿವೆ. ಅವುಗಳಲ್ಲೆಲ್ಲ ಈ ಮ್ಯಾಗಝಿನ್ ಇಡಲಾಗುತ್ತದಂತೆ.

ಮುಂಬೈನ ಟ್ಯಾಕ್ಸಿಗಳಲ್ಲಿ ವಾರಕ್ಕೆ ಏನಿಲ್ಲವೆಂದರೂ 35 ಲಕ್ಷ ಜನ ಸಂಚರಿಸುತ್ತಾರೆ. ಅವರೆಲ್ಲ ಬಹುತೇಕ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ವ್ಯಕ್ತಿಗಳು ಹಾಗೂ ಸಹಜವಾಗಿ, ಜಾಹೀರಾತುದಾರರ ಟಾರ್ಗೆಟ್. ಆದ್ದರಿಂದ, ಈ ಟ್ಯಾಕ್ಸಿ ಪತ್ರಿಕೆಗೆ ಜಾಹೀರಾತುದಾರರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆಯಂತೆ.

"ಮುಂದಿನ 6 ತಿಂಗಳಿಗಂತೂ ಜಾಹೀರಾತುಗಳು ಬುಕ್ ಆಗಿವೆ. ಪ್ರತಿವಾರ, 50000 ಪ್ರತಿಗಳ ಮುದ್ರಣ ವೆಚ್ಚ ಸುಮಾರು 5 ಲಕ್ಷ ರುಪಾಯಿ. ಈ ವೆಚ್ಚವನ್ನು ಜಾಹೀರಾತುಗಳಿಂದಲೇ ಭರಿಸಬೇಕಾಗುತ್ತದೆ. ಆರಂಭದಲ್ಲಿ 30000 ಪ್ರತಿಗಳನ್ನು ಟ್ಯಾಕ್ಸಿಗಳಿಗೆ ನೀಡಲಾಗಿದೆ. ಜೂನ್-ಜುಲೈ ವೇಳೆಗೆ 60000 ಪ್ರತಿಗಳನ್ನು ಟ್ಯಾಕ್ಸಿಗಳಿಗೆ ವಿತರಿಸಲಾಗುತ್ತದೆ" ಎನ್ನುತ್ತಾರೆ ಪತ್ರಿಕೆಯ ಸಂಪಾದಕ - ವಿಷ್ಣು ಕದಂ.

ಭಾರತದ ಪತ್ರಿಕೋದ್ಯಮಕ್ಕೆ ಈ ಟ್ಯಾಕ್ಸಿ ಪತ್ರಿಕೆಯ ಕಲ್ಪನೆ ಹೊಸತು. ಈ ಯತ್ನ ಯಶಸ್ವಿಯಾದರೆ, ಬೆಂಗಳೂರಿನಲ್ಲಿ ರಿಕ್ಷಾ ಪತ್ರಿಕೆ ಆರಂಭಿಸಬಹುದು.

Saturday, May 02, 2009

ಇಂಟರ್ನೆಟ್ಟಲ್ಲಿ ಕನ್ನಡ ಟೈಪ್ ಮಾಡುವುದು ಹೇಗಯ್ಯಾ?

ದೊಂದು ದೊಡ್ಡ ಸಮಸ್ಯೆ ಅಂತ ಈಗ ಗೊತ್ತಾಯಿತು. ತುಂಬ ಜನರಿಗೆ ಕನ್ನಡದಲ್ಲಿ ಬರೆಯಲು ಬರುತ್ತೆ. ಆದರೆ ಕಂಪ್ಯೂಟರಿನಲ್ಲಿ ಟೈಪ್ ಮಾಡಲು ಕಷ್ಟವಾಗುತ್ತಿದೆ. ಅನೇಕರು ಈ-ಮೇಲಲ್ಲಿ ಈ ಕುರಿತು ಪ್ರಶ್ನೆ ಕೇಳಿದ್ದಾರೆ. ಅಂಥವರಿಗೆ ಕೆಲ ಸರಳ ಮಾಹಿತಿ ಇಲ್ಲಿದೆ.

A. ಯೂನಿಕೋಡ್ ಹಾಗೂ ಇಂಟರ್ನೆಟ್ಟಿನಲ್ಲಿ ಕನ್ನಡ ಅಕ್ಷರ ಕುರಿತ ಮೂಲಜ್ಞಾನ.
B. ಕನ್ನಡ ಟೈಪಿಸುವ 6 ವಿಧಾನಗಳು. ಸುಲಭವಾದದ್ದನ್ನು ಆರಿಸಿಕೊಳ್ಳಬಹುದು.
C. ಕನ್ನಡ ಟೈಪಿಸುವ 4 ಕೀಬೋರ್ಡ್ ವಿನ್ಯಾಸಗಳ ಪುಟ್ಟ ಮಾಹಿತಿ.

A. ಯೂನಿಕೋಡ್ ಹಾಗೂ ಇಂಟರ್ನೆಟ್ಟಿನಲ್ಲಿ ಕನ್ನಡ ಅಕ್ಷರ ಕುರಿತ ಮೂಲಜ್ಞಾನ.

ಕನ್ನಡ ಯೂನಿಕೋಡ್: ತೀರಾ ಟೆಕ್ನಾಲಜಿ ಕೊರೆತ ಬೇಡ. ಕೇವಲ ಎರಡು-ಮೂರು ವಾಕ್ಯಗಳಲ್ಲಿ ಯೂನಿಕೋಡಿನ ಸ್ಥೂಲ ಪರಿಚಯ ಇದ್ದರೆ ಸಾಕು. ಯುನಿಕೋಡ್ ಅಂದರೆ, ಇಂಟರ್ನೆಟ್ಟಿನಲ್ಲಿ ಬಳಸುವ ಅಕ್ಷರಗಳ ಒಂದು ಶಿಷ್ಟಪದ್ಧತಿ. ಜಗತ್ತಿನ ನೂರಾರು ಭಾಷೆಯ ಅಕ್ಷರಗಳನ್ನು ಇದೊಂದೇ ನಮೂನಿಯಲ್ಲಿ ಬರೆಯಬಹುದು ಹಾಗೂ ಓದಬಹುದು. ಇದರಿಂದಾಗಿ, ಬೇರೆ ಬೇರೆ ಭಾಷೆಯವರು ಬೇರೆ ಬೇರೆ ಭಾಷೆಯ ಫಾಂಟುಗಳನ್ನು ಸಿಕ್ಕ ಸಿಕ್ಕ ಕಂಪ್ಯೂಟರಿನಲ್ಲೆಲ್ಲಾ Install ಮಾಡಿಕೊಳ್ಳಬೇಕೆಂಬ ತಾಪತ್ರಯವಿಲ್ಲ. ಕಂಪ್ಯೂಟರಿನಲ್ಲಿ ಯೂನಿಕೋಡ್ ಹಾಗೂ ಸ್ಥಳೀಯ ಭಾಷೆಯನ್ನು Enable ಮಾಡಿದರೆ ಸಾಕು. UTF ಅಥವಾ UTF8 ಮಾದರಿಯಲ್ಲಿ ಯೂನಿಕೋಡ್ ಬರಹಗಳನ್ನು ಸೇವ್ ಮಾಡಲಾಗಿರುತ್ತದೆ. ಈಗ ಇಂಟರ್ನೆಟ್ಟಿನಲ್ಲಿ, ಕನ್ನಡ ಸೇರಿದಂತೆ ಬಹುತೇಕ ಭಾಷೆಗಳ ಬ್ಲಾಗುಗಳು ಹಾಗೂ ವೆಬ್ ಸೈಟುಗಳು ಬಳಸುವುದು ಯೂನಿಕೋಡ್ ಮಾದರಿಯ ಅಕ್ಷರಗಳನ್ನು. (ಯೂನಿಕೋಡ್ ಕುರಿತು ಹೆಚ್ಚು ತಿಳಿಯಲು ಇಲ್ಲಿ ನೋಡಿ.)

B. ಕನ್ನಡ ಟೈಪಿಸುವ 6ವಿಧಾನಗಳು.

ಯೂನಿಕೋಡ್ ಆಧರಿಸಿ ಇಂಟರ್ನೆಟ್ಟಿನಲ್ಲಿ ಕನ್ನಡ ಟೈಪ್ ಮಾಡುವುದು ತೀರಾ ಸುಲಭ. ಆದರೆ, ಮೊದಲು, ನಿಮ್ಮ ಕಂಪ್ಯೂಟರ್ ಹಾಗೂ ಬ್ರೌಸರ್, ಕನ್ನಡ ಯೂನಿಕೋಡನ್ನು ಅರ್ಥ ಮಾಡಿಕೊಳ್ಳುತ್ತಿದೆಯೇ - ಎಂದು ಮೊದಲು ಅರಿತುಕೊಳ್ಳಿ. ನಿಮ್ಮ ಕಂಪ್ಯೂಟರಿನಲ್ಲಿ Windows 2003 ಅಥವಾ XP ಇದ್ದರೆ, ಸಾಮಾನ್ಯವಾಗಿ ಕನ್ನಡ ಯೂನಿಕೋಡ್ ಅಕ್ಷರಗಳು ಕಾಣಿಸುತ್ತವೆ. ಆದರೆ, ಎಲ್ಲ ಬ್ರೌಸರುಗಳಲ್ಲಿ ಹಾಗೂ ಸಾಫ್ಟ್ ವೇರುಗಳಲ್ಲಿ ಯೂನಿಕೋಡ್ ಅಕ್ಷರ ಕಾಣಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಕ್ಷರಗಳಿದ್ದ ಜಾಗದಲ್ಲಿ ಅಥವಾ ಕಾಣಿಸಿದರೆ, ಆ ಸಾಫ್ಟ್ ವೇರ್ ಅಥವಾ ಬ್ರೌಸರ್ ಯೂನಿಕೋಡ್ ಅಕ್ಷರಗಳನ್ನು ಬೆಂಬಲಿಸುತ್ತಿಲ್ಲ ಎಂದು ಅರ್ಥ. Windows 95 ಹಾಗೂ 98, ಕನ್ನಡ ಯೂನಿಕೋಡನ್ನು ಬೆಂಬಲಿಸುವುದಿಲ್ಲ.

ಕನ್ನಡ ಯೂನಿಕೋಡ್ ಅಕ್ಷರಗಳನ್ನು ಬರೆಯಲು ಬೇಕಾದ ಟೂಲ್.
ಈ ಕೆಳಗಿನ ಆರು ಟೂಲ್ ಬಳಸಿ ಸುಲಭವಾಗಿ ಕನ್ನಡ ಅಕ್ಷರಗಳನ್ನು ಟೈಪ್ ಮಾಡಬಹುದು.
1. ಬರಹ IME
2. ಬರಹ ಪ್ಯಾಡ್
3. ಗೂಗಲ್ ಇಂಡಿಕ್ ಟ್ರಾನ್ಲ್ ಲಿಟರೇಶನ್ ಟೂಲ್
4. ಕ್ವಿಲ್ ಪ್ಯಾಡ್ ಆನ್ ಲೈನ್ ಕನ್ನಡ ಟೂಲ್
5. ವಿಂಡೋಸ್ XP ಲಾಂಗ್ವೇಜ್ ಟೂಲ್ / ವಿಂಡೋಸ್ ಕನ್ನಡ IME
6. ಗೂಗಲ್ಲಿನ ಸರಳ ಕನ್ನಡ Bookmarklet

1. ಬರಹ IME : ಬರಹ - ಕನ್ನಡದ ಒಂದು ಅದ್ಭುತ, ಉಚಿತ ಸಾಫ್ಟ್ ವೇರ್. ಕಂಪ್ಯೂಟರ್ ಹಾಗೂ ಇಂಟರ್ನೆಟ್ಟಿನಲ್ಲಿ ಕನ್ನಡ ಬಳಸಲು ಬೇಕಾದ ಬಹುತೇಕ ಎಲ್ಲ Toolಗಳನ್ನೂ "ಬರಹ" ಒಳಗೊಂಡಿದೆ. ಹವ್ಯಾಸಿ ಕನ್ನಡ ಬರಹಗಾರರಿಗೆ, ಅಂತರ್ಜಾಲದಲ್ಲಿ ಕನ್ನಡ ಟೈಪಿಸಲು "ಬರಹ-IME" ಉತ್ತಮ ಟೂಲ್. IME ಅಂದರೆ Input Method Editor. ಇದೊಂದು ಒಂದು ಚಿಕ್ಕ ಪ್ರೋಗ್ರಾಂ.



BarahaIME is a transliteration based software, which can be used to type Indian language Unicode text directly into applications such as Internet Explorer, MS Word, Notepad, e.t.c. It also provides functions for sorting/converting Indian language text. When BarahaIME program is started, it shows as an icon in the system tray at the bottom-right portion of the screen. BarahaIME Supports Kannada, Hindi, Marathi, Sanskrit, Tamil, Telugu, Malayalam, Gujarati, Gurumukhi, Bengali, Assamese, Manipuri and Oriya languages.

ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

2. ಬರಹ ಪ್ಯಾಡ್: ಇತ್ತೀಚೆಗೆ ಬರಹ 8.0 ಹೊಸ ವರ್ಷನ್ ಬಿಡುಗಡೆಯಾಗಿದೆ. ಇದರೊಂದಿಗೆ ಬರಹ ಪ್ಯಾಡ್ ಎಂಬ ಟೂಲ್ ಕೂಡ ಇದೆ. ಇದು ವಿಂಡೋಸ್ ನೋಟ್ ಪ್ಯಾಡಿನಂಥ ಒಂದು ಟೂಲ್. ಇದರಲ್ಲಿ ಕನ್ನಡ ಅಕ್ಷರಗಳನ್ನು ಸುಲಭವಾಗಿ ಟೈಪ್ ಮಾಡಬಹುದು. ಅದನ್ನು ಯೂನಿಕೋಡ್ ನೂಮೂನೆಯಲ್ಲೇ ಸೇವ್ ಮಾಡಬಹುದು ಅಥವಾ ಅದರಲ್ಲಿ ಟೈಪ್ ಮಾಡಿದ ಅಕ್ಷರಗಳನ್ನು ಕಾಪಿ ಮಾಡಿ, ಬ್ಲಾಗುಗಳಲ್ಲಿ ಅಥವಾ ಈಮೇಲುಗಳಲ್ಲಿ ಅಥವಾ ಇನ್ನೆಲ್ಲಾದರೂ ಪೇಸ್ಟ್ ಮಾಡಬಹುದು.

3. ಗೂಗಲ್ ಇಂಡಿಕ್ ಟ್ರಾನ್ಲ್ ಲಿಟರೇಶನ್ ಟೂಲ್ : ಇಂಗ್ಲಿಷ್ ಟೈಪಿಂಗ್ ಮೂಲಕ, ಭಾರತೀಯ ಭಾಷಾ ಅಕ್ಷರಗಳು ಇಂಟರ್ನೆಟ್ಟಿನಲ್ಲಿ ಸುಲಭವಾಗಿ ಕಾಣುವಂತೆ ಮಾಡಲು ಗೂಗಲ್ - ಆನ್ ಲೈನ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ಬಿಡುಗಡೆ ಮಾಡಿದೆ. "ಫೊನೆಟಿಕ್ ವಿನ್ಯಾಸ" ಆಧಾರಿತ ಈ ಟೂಲ್ ಕನ್ನಡದ ಹವ್ಯಾಸಿ ಬಳಕೆದಾರರಿಗೆ ಯೋಗ್ಯ. ಜಿಮೇಲ್, ಬ್ಲಾಗರ್ ಮುಂತಾದ ಗೂಗಲ್ ಸೇವೆಗಳಲ್ಲಿ ಈ ಟೂಲನ್ನು ನೇರವಾಗಿ ಬಳಸಬಹುದು ಅಥವಾ ಈ ಟೂಲ್ ಬಳಸಿ ಕನ್ನಡಲ್ಲಿ ಟೈಪ್ ಮಾಡಿ ಅದನ್ನು ಕಟ್ ಮಾಡಿ ಬೇಕಾದಲ್ಲಿ ಪೇಸ್ಟ್ ಮಾಡಬಹುದು.

Google Indic Transliteration offers an option for converting Roman characters to the Indian Language characters used in Hindi, Kannada, Tamil etc.. This lets you type Indian Language words phonetically in English script and still have them appear in their correct alphabet. Note that this is not the same as translation -- it is the sound of the words that are converted from one alphabet to the other, not their meaning. For example, typing "Baruttane" transliterates into kannada as: ಬರುತ್ತಾನೆ.

Transliteration is now available in Bengali, Gujarati, Hindi, Kannada, Malayalam, Marathi, Nepali, Tamil, and Telugu. The transliteration feature is available in GMail, Knol, Orkut scraps, Blogger, as part of the Google Language API, and as an iGoogle gadget.

ಈ ಟೂಲ್ ಬಳಸಲು ಇಲ್ಲಿ ಕ್ಲಿಕ್ ಮಾಡಿ. ಅಥವಾ ವಿವರಗಳು ಬೇಕಾದರೆ ಇಲ್ಲಿ ನೋಡಿ.

ಇದೇ ಟೂಲ್ ಆದಾರಿತ ಹೊಸ ಸರಳ ಕನ್ನಡ Bookmarklet ಎಂಬ ಇನ್ನೊಂದು ಟೂಲ್ ಇದೆ. ಆ ಕುರಿತ ಮಾಹಿತಿ ಇಲ್ಲಿದೆ.

4. ಕ್ವಿಲ್ ಪ್ಯಾಡ್ ಆನ್ ಲೈನ್ ಕನ್ನಡ ಟೂಲ್ : ಗೂಗಲ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ಬಿಡುಗಡೆ ಆಗುವುದಕ್ಕೂ ಮೊದಲೇ ಬೆಂಗಳೂರಿನ Tachyon Technologies ಕಂಪನಿ ಕ್ವಿಲ್ ಪ್ಯಾಡ್ ಎಂಬ ಆನ್ ಲೈನ್ ಕನ್ನಡ ಟ್ರಾನ್ಲ್ ಲಿಟರೇಶನ್ ಟೂಲ್ ಬಿಡುಗಡೆ ಮಾಡಿತ್ತು. ಈ ಟೂಲನ್ನು ಕೆಲವು ಮೊಬೈಲ್ ಫೋನ್ ಕಂಪನಿಗಳೂ ಹ್ಯಾಂಡ್ ಸೆಟ್ಟಿನಲ್ಲಿ ಅಳವಡಿಸಿವೆ. ಇದನ್ನು ಕೂಡ ಗೂಗಲ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ರೀತಿಯೇ ಬಳಸಬಹುದು.

ಹೆಚ್ಚಿನ ಮಾಹಿತಿಗೆ ಹಾಗೂ ಟೂಲ್ ಬಳಸಲು ಇಲ್ಲಿ ಕ್ಲಿಕ್ ಮಾಡಿ.


5. ವಿಂಡೋಸ್ XP ಲಾಂಗ್ವೇಜ್ ಟೂಲ್: ಇದು ವಿಂಡೋಸ್ ಬಳಕೆದಾರರಿಗೆ ವರದಾನ. ವಿಂಡೋಸ್ XP ಹಾಗೂ ಆನಂತರದ ವಿಂಡೋಸ್ ಸಾಫ್ಟ್ ವೇರ್ ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳನ್ನು ನೇರವಾಗಿ ಟೈಪ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದು ನಾಲ್ಕು ರೀತಿಯ ಕಿಬೋರ್ಡ್ ವಿನ್ಯಾಸವನ್ನು ಹೊಂದಿದೆ. ಫೊನೆಟಿಕ್ ಟ್ರಾನ್ಸ್ ಲಿಟರೇಷನ್ ಕೀಬೋರ್ಡ್, ಬಳಕೆದಾರರ ಸ್ನೇಹಿ ಕಗಪ ಕೀಬೋರ್ಡ್, ವೇಗದ ಬಳಕೆದಾರರಿಗೆ ಬೇಕಾದ ಇನ್ ಸ್ಕ್ರಿಪ್ಟ್ ಕೀಬೋರ್ಡ್, ಕನ್ನಡ ಟೈಪ್ ರೈಟಿಂಗ್ ಗೊತ್ತಿರುವವರಿಗೆ ಟೈಪ್ ರೈಟರ್ ಕೀಬೋರ್ಡ್. ಅದರಲ್ಲಿ ಕನ್ನಡ (ತುಂಗಾ) ಫಾಂಟ್ ಡಿಫಾಲ್ಟ್ ಆಗಿ ಲಭ್ಯವಿದೆ. ಭಾರತೀಯ ಭಾಷೆ ಟೈಪ್ ಮಾಡುವ ಮೊದಲು ಆ ಸೇವೆಯನ್ನು Enable ಮಾಡಬೇಕು ಅಷ್ಟೇ. ಅದಕ್ಕೆ ಈ ಕೆಳಗಿನಂತೆ ಮಾಡಿ.

1. ನಿಮ್ಮ ಬಳಿ XP ಸೀಡಿ ಇದ್ದರೆ, ಅದನ್ನು ಸೀಡಿ ಡ್ರೈವ್ ಗೆ ಹಾಕಿ ಅಥವಾ ಇಲ್ಲಿಂದ ಕನ್ನಡ ಭಾಷಾ IMEಯನ್ನು ಡೌನ್ ಲೋಡ್ ಮಾಡಿಕೊಳ್ಳಿ.

2. Start button ಕ್ಲಿಕ್ ಮಾಡಿ, Control panel ತೆರೆಯಿರಿ.

3. ಅದರಲ್ಲಿ Regional and language options ಎಂಬ ಐಕಾನ್ ಸಿಗುತ್ತದೆ. ಅದನ್ನು ಡಬಲ್ ಕ್ಲಿಕ್ ಮಾಡಿ.

4. ಆಗ ತೆರೆಯುವ ಪಾಪ್ ಅಪ್ ಬಾಕ್ಸ್ ನಲ್ಲಿ Languages ಎಂಬ ಟ್ಯಾಬ್ ಇದೆ. ಅದನ್ನು ಕ್ಲಿಕ್ ಮಾಡಿ.

5. ಅದರಲ್ಲಿ Install files for complex script and right-to-left languages (including Thai) ಎಂಬ ಆಯ್ಕೆಯನ್ನು select ಮಾಡಿ.

6. ಇಷ್ಟಾದ ಮೇಲೆ ಅದೇ ಟ್ಯಾಬ್ ನಲ್ಲಿರುವ Details ಎಂಬ ಬಟನ್ ಕ್ಲಿಕ್ ಮಾಡಿ. Text services and input languages ಎಂಬ ಪಾಪ್ ಅಪ್ ತೆರೆದುಕೊಳ್ಳುತ್ತದೆ.

7. ಅಲ್ಲಿ Add ಬಟನ್ ಕ್ಲಿಕ್ ಮಾಡಿ. Add input language ಎಂಬ ಪಾಪ್ ಅಪ್ ತೆರೆದುಕೊಳ್ಳುತ್ತದೆ. ಅದರಲ್ಲಿ Input language ಎಂಬ ಆಯ್ಕೆಯಿದ್ದು, ಅದನ್ನು ಕ್ಲಿಕ್ ಮಾಡಿದರೆ, ಕನ್ನಡ ಎಂಬ option ಸಿಗುತ್ತದೆ. ಸೆಲೆಕ್ಟ್ ಮಾಡಿ.

8. ಕಡೆಯದಾಗಿ, ಎಲ್ಲಾ ಪಾಪ್ ಅಪ್ ಗಳಿಗೂ ok ಆದೇಶ ನೀಡುತ್ತಾ ಬನ್ನಿ. ಒಂದು ಹಂತದಲ್ಲಿ ನಿಮ್ಮ ಎಕ್ಸ್ ಪಿ ಸೀಡಿಯಿಂದ ಅಥವಾ ನೀವು ಡೌನ್ ಲೋಡ್ ಮಾಡಿಕೊಂಡ ವಿಂಡೋಸ್ ಕನ್ನಡ IME ಫೈಲಿಂದ ಕಂಪ್ಯೂಟರ್ ತನಗೆ ಅಗತ್ಯವಿರುವ ಫೈಲ್ ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುತ್ತದೆ. ಇನ್ನು ನೀವು ಟೈಪ್ ಮಾಡುವುದಷ್ಟೇ ಬಾಕಿ.

9. ಇಷ್ಟಾದ ಮೇಲೆ ಬ್ರೌಸರ್ ಅಥವಾ ನೋಟ್ ಪ್ಯಾಡ್ ಅಥವಾ ವರ್ಡ್ ಪ್ಯಾಡ್ ತೆರೆಯಿರಿ.

10. ಅಲ್ಲಿ Alt ಕೀ ಒತ್ತಿ ಹಿಡಿದು Shift ಕೀ ಒತ್ತಿದರೆ, ಕನ್ನಡ ಟೈಪ್ ಮಾಡಬಹುದು. ಮತ್ತೊಮ್ಮೆ ಇದೇ ರೀತಿ ಮಾಡಿದರೆ english ಟೈಪ್ ಮಾಡಬಹುದು. ಇದು toggle option. ನಿಮ್ಮ ಕಪ್ಯೂಟರ್ ವಿಂಡೋದ ಕೆಳ-ಬಲ-ತುದಿಯ ಸಿಸ್ಟಂ ಟ್ರೇ ಪಕ್ಕ EN ಅಥವಾ KN ಎಂಬ ಲಾಂಗ್ವೇಜ್ ಬಾರ್ ಕಾಣಿಸುತ್ತದೆ. EN ಟಾಗಲ್ ಆದಾಗ ಇಂಗ್ಲೀಷ್ ಅಕ್ಷರವೂ, KN ಟಾಗಲ್ ಆದಾಗ ಕನ್ನಡ ಅಕ್ಷರವೂ ಮೂಡುತ್ತದೆ.

11. ಈ ಪದ್ಧತಿ ಬಳಸಿ ನೀವು ಯಾವುದೇ ವೆಬ್ ಪುಟದಲ್ಲಿ, ಬ್ಲಾಗಿನಲ್ಲಿ, ಪ್ರತಿಕ್ರಿಯೆ ನೀಡುವಲ್ಲಿ ಅಥವಾ ಬಹುತೇಕ ವಿಂಡೋಸ್ ಸಾಫ್ಟ್ ವೇರುಗಳಲ್ಲಿ ನೇರವಾಗಿ ಕನ್ನಡ ಟೈಪ್ ಮಾಡಬಹುದು. ಅಥವಾ ನೀವು ಟೈಪ್ ಮಾಡಿದ್ದನ್ನು ಬೇಕಾದಲ್ಲಿಗೆ ಕಾಪಿ-ಪೇಸ್ಟ್ ಮಾಡಬಹುದು.

ಒಮ್ಮೆ ವಿಂಡೋಸ್ XPಯಲ್ಲಿ ಯುನಿಕೋಡ್ ಇನ್ಸ್ಟಾಲ್ ಮಾಡಿದರೆ, ನೀವು toggle ಮಾಡುವುದಷ್ಟೇ ಕೆಲಸ.

ಸಚಿತ್ರ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

6. ಗೂಗಲ್ಲಿನ ಸರಳ ಕನ್ನಡ Bookmarklet : ಭಾರತೀಯ ಭಾಷಾ ಟೂಲ್ ಅಭಿವೃದ್ಧಿಯಲ್ಲಿ ಗೂಗಲ್ ಇನ್ನೂ ಒಂದು ಹೆಜ್ಜೆ ಮುಂದೆ ಬಂದಿದೆ. ಕೆಲ ತಿಂಗಳ ಹಿಂದೆ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಗೆ ಗೂಗಲ್ ಲಿಪ್ಯಂತರ (Transliteration) ಟೂಲ್ ನೀಡಿತ್ತು ತಾನೇ? ಆದರೆ, ಆ ಟೂಲ್ ಗೂಗಲ್ ಒಡೆತನದ ಜಿಮೇಲ್, ಬ್ಲಾಗರ್ ಮುಂತಾದ ಸೈಟುಗಳಲ್ಲಿ ಮಾತ್ರ ಕೆಲಸ ಮಾಡುತ್ತಿತ್ತು. ಇದೀಗ, ಕನ್ನಡ ಬುಕ್ಮಾರ್ಕ್-ಲೆಟ್ ಎಂಬ ವಿನೂತನ ಟೂಲನ್ನು ಗೂಗಲ್ ಬಿಡುಗಡೆ ಮಾಡಿದೆ. ಈ ಟೂಲಿಂದ ಯಾವುದೇ ಸೈಟಿನಲ್ಲಿ ಬೇಕಾದರೂ ಕನ್ನಡ ಅಥವಾ ಇತರ ಭಾರತೀಯ ಭಾಷೆಯನ್ನು ಸುಲಭವಾಗಿ ಟೈಪ್ ಮಾಡಬಹುದು. ಕನ್ನಡ ಟೈಪ್ ಮಾಡಲು ಹೆಣಗಾಡುವ ಎಲ್ಲರಿಗೂ ಈ ಟೂಲ್ ನಿಜಕ್ಕೂ ಒಂದು ವರ. ಮಾಹಿತಿ ಇಲ್ಲಿದೆ.

C. ಕನ್ನಡ ಟೈಪಿಸುವ 4 ಕೀಬೋರ್ಡ್ ವಿನ್ಯಾಸಗಳ ಪುಟ್ಟ ಮಾಹಿತಿ.

ಕನ್ನಡ ಟೈಪಿಸಲು ಹಲವಾರು ರೀತಿಯ ಕೀಬೋರ್ಡ್ ವಿನ್ಯಾಸಗಳಿವೆ. ನಿಮ್ಮ ಮಟ್ಟಕ್ಕೆ ಸರಿಯಾಗಿ ಯಾವುದನ್ನು ಬೇಕಾದರೂ ಬಳಸಬಹುದು. ಈ ಕೆಳಗಿನ 4 ಕೀಬೋರ್ಡ್ ವಿನ್ಯಾಸದಲ್ಲಿ ಒಂದು ನಿಮಗೆ ಸೂಕ್ತ ಎನಿಸಬಹುದು. ಆಯ್ದುಕೊಳ್ಳಿ.

ಬರಹ ಕೀಬೋರ್ಡ್ ವಿನ್ಯಾಸ:
ಬಹಳ ಜನರಿಗೆ ಗೊತ್ತಿರುವ ಸುಲಭದ ಕೀಬೋರ್ಡ್ ವಿನ್ಯಾಸ ಇದು. ಇದನ್ನು ಬರಹ IME ಹಾಗೂ ಬರಹಪ್ಯಾಡ್ ಟೂಲಲ್ಲಿ ಬಳಸಬಹುದು.

ಕಗಪ ಕೀಬೋರ್ಡ್:
ಇದು ನುಡಿ ಸಾಫ್ಟ್ ವೇರಿನ ಕೀಬೋರ್ಡ್. "ನುಡಿ" ಬಳಸುವವರಿಗೆ ಇದು ಅನುಕೂಲ.

ಗೂಗಲ್ ಟ್ರಾನ್ಸ್ ಲಿಟರೇಶನ್ ಕೀಬೋರ್ಡ್ ವಿನ್ಯಾಸ
Using phonetic typing, the user can type his message in Roman using the Standard English keyboard, which is transliterated on-the-fly to Kannada. It works on the logic of phonetics and is most effective when you spell the word the way it is spoken. ಗೂಗಲ್ ಈಮೇಲ್, ಬ್ಲಾಗರ್ ಮುಂತಾದ ಗೂಗಲ್ ಸೇವೆಯಲ್ಲಿ, ಗೂಗಲ್ ಟ್ರಾನ್ಸ್ ಲಿಟರೇಶನ್ ಟೂಲ್ ಹಾಗೂ ಕ್ವಿಲ್ ಪ್ಯಾಡ್-ನಲ್ಲಿ ಇದನ್ನು ಬಳಸಬಹುದು.

ಇನ್ ಸ್ಕ್ರಿಪ್ಟ್ ಕೀಬೋರ್ಡ ಲೇ ಔಟ್ :
ಭಾರತೀಯ ಭಾಷೆಯ ಸಾಫ್ಟ್ ವೇರುಗಳನ್ನು ಅಭಿವೃದ್ಧಿ ಪಡಿಸಿದ ಸಿಡಾಕ್ ಸರ್ಕಾರಿ ಸಂಸ್ಥೆ ಅಭಿವೃದ್ಧಿ ಪಡಿಸಿದ ಕೀಬೋರ್ಡ ಇದು. A Kannada Keyboard where the user types the basic characters in sequence and an underlying logic determines that which of these characters have to be combined and substituted to form a glyph. ಕೀಬೋರ್ಡ್ ವಿನ್ಯಾಸ ಹೀಗಿದೆ ನೋಡಿ. ಇದನ್ನು ಒಂದೆರಡು ದಿನ ಪ್ರಾಕ್ಟಿಸ್ ಮಾಡಿದರೆ, ವೇಗವಾಗಿ ಟೈಪ್ ಮಾಡಬಹುದು.

ಟೈಪ್ ರೈಟರ್ ಕೀಬೋರ್ಡ್ ಲೇಔಟ್:
ಕನ್ನಡ ಟೈಪ್ ರೈಟಿಂಗ್ ಯಂತ್ರದ ಕೀಬೋರ್ಡ್ ಲೇ ಔಟ್ ಇದು. ಟೈಪ್ ಟೈರಿಂಗ್ ಶಾಲೆಯಲ್ಲಿ ಕಲಿತ ಬೆರಳಚ್ಚು ವಿಧಾನಕ್ಕೆ ಇದು ಸೂಕ್ತ.

Sunday, April 19, 2009

ಇಂಟರ್ನೆಟ್ ಮೂಲಕ ಮತ ಹಾಕಿ!

ನನ್ನ ಅರ್ಧ ಜೀವನ ಇಂಟರ್ನೆಟ್ ಮೂಲಕ ನಡೆಯುತ್ತಿದೆ. ಬ್ಯಾಂಕು, ಮನೆಯ ಎಲ್ಲಾ ಬಿಲ್ ಪೇಮೆಂಟು, ಪ್ರಯಾಣ ಟಿಕೆಟ್ ಬುಕಿಂಗು, ಹೊಟೆಲ್ ಬುಕಿಂಗು, ಸಿನೆಮಾ ಟಿಕೆಟ್ ಬುಕಿಂಗು ಸೇರಿದಂತೆ ಎಲ್ಲಾ ಇಂಟರ್ನೆಟ್ಟಲ್ಲೇ.... ಇಂಥ `ಹೈಟೆಕ್ ನಾನು' ಈಗ ನಾಲಾಯಕ್ ಒಬ್ಬರಿಗೆ ಮತ ಹಾಕಲು ಯಾವುದೋ ಮತಗಟ್ಟೆ ಹುಡುಕಿಕೊಂಡು ಹೋಗಿ ಕ್ಯೂ ನಿಲ್ಲುವುದೇ? ಛೆ.. ಛೆ..

ಈ ಯೋಚನೆ ಬಂದಾಗಲೆಲ್ಲ, ಮತ ಹಾಕಲೂ ಇಂಟರ್ನೆಟ್ ವ್ಯವಸ್ಥೆಯಿದ್ದರೆ, ಮನೆಯಲ್ಲೋ, ಆಫೀಸಿನಲ್ಲೋ ಕುಳಿತು ಮತ ಚಲಾಯಿಸಬಹುದಿತ್ತು ಅಂತ ನನಗೆ ಅನೇಕ ಬಾರಿ ಅನಿಸಿದೆ. ನಿಮಗೂ ಅನಿಸಿರಬಹುದು. ನನಗೆ ಇಂಟರ್ನೆಟ್ ಆಧಾರಿತ ಮತದಾನ ವ್ಯವಸ್ಥೆ ಕುರಿತು ಅಪಾರ ಭರವಸೆಯಿದೆ. ಇವತ್ತಲ್ಲಾ ನಾಳೆ ಈ ವ್ಯವಸ್ಥೆ ಜಾರಿಗೆ ಬಂದೇ ಬರುತ್ತದೆ ಎಂದು ಬಲವಾಗಿ ನಂಬಿರುವವನು ನಾನು.

ಈ ವ್ಯವಸ್ಥೆ ಜಾರಿಗೆ ಬಂದರೆ, ಒಟ್ಟಾರೆ ಮತದಾನ ಪ್ರಮಾಣ, ಅದರಲ್ಲೂ ನಗರ ಪ್ರದೇಶಗಳಲ್ಲಿ ಗಣನೀಯವಾಗಿ ಹೆಚ್ಚಾಗುತ್ತದೆ. ಈಗಿನ ಮತದಾನ ಪ್ರಕ್ರಿಯೆಯಿಂದ ಸುಶಿಕ್ಷಿತರು ದೂರ ಉಳಿಯುತ್ತಿದ್ದಾರೆ. ಒಂದು ಸಮೀಕ್ಷೆಯ ಪ್ರಕಾರ, ಮತಗಟ್ಟೆಗೆ ಖುದ್ದಾಗಿ ಬಂದು ಮತ ಹಾಕುವುದಕ್ಕಿಂತ ಇಂಟರ್ನೆಟ್ಟಿನಲ್ಲಿ ಮತ ಹಾಕಲು ಇಷ್ಟ ಪಟ್ಟವರ ಸಂಖ್ಯೆ ಶೇ.66. (ನನ್ನನ್ನೂ ಸೇರಿದಂತೆ!) ಅಂದರೆ, ಅವರೆಲ್ಲ ಇಂಟರ್ನೆಟ್ ಮೂಲಕ ಮತದಾನದಲ್ಲಿ ಪಾಲ್ಗೊಳ್ಳುವುದರಿಂದ ಚುನಾವಣೆಯಲ್ಲಿ ಸುಶಿಕ್ಷಿತರ ಪಾತ್ರ ಹೆಚ್ಚುತ್ತದೆ. ಆಗ, ಉತ್ತಮ ಅಭ್ಯರ್ಥಿಯ ಆಯ್ಕೆ ಸಾಧ್ಯವಾಗುತ್ತದೆ. ಜಾತಿ ಆಧಾರಿತ ಚುನಾವಣಾ ಫಲಿತಾಂಶ ಬರುವುದಿಲ್ಲ. ಸಾವಿರ ರುಪಾಯಿ ನೋಟು ಕೊಟ್ಟು ವೋಟು ಖರೀದಿಸುವ ಆಟ ಕಡಿಮೆಯಾಗುತ್ತದೆ. ಇದರಿಂದ ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ - ಎಂದು ನನ್ನ ವಾದ.

ಈಗ ದೊಡ್ಡ ಪ್ರಶ್ನೆ, ಇಂಟರ್ನೆಟ್ ಆಧಾರಿತ ಮತದಾನ ಮಾಡುವುದು ಹೇಗೆ? ಇಂಟರ್ನೆಟ್ ಮೂಲಕ ಬೋಗಸ್ ವೋಟಿಂಗ್, ಮಾಸ್ ವೋಟಿಂಗ್ ಹಾಗೂ ಸೈಬರ್ ಫ್ರಾಡ್ ಸಮಸ್ಯೆಯಿದೆಯಲ್ಲ! ಅದನ್ನು ಬಗೆಹರಿಸುವುದು ಹೇಗೆ? ಇದಕ್ಕೆ ತಕ್ಷಣ ಸಿದ್ಧ ಉತ್ತರ ಇಲ್ಲ. ಆದರೆ, ಈ ಕುರಿತು ಅಧ್ಯಯನ ಹಾಗೂ ಸಂಶೋಧನೆಗಳು ನಡೆಯುತ್ತಿರುವುದು ನಿಜ.

ಅಮೆರಿಕದ ಕೆಲವು ರಾಜ್ಯಗಳಲ್ಲಿ ರೆಫರೆಂಡಮ್ಮಿಗೆ, ಕೆನಡಾದ ಕೆಲವು ಮುನಸಿಪಾಲಿಟಿಗೆ ಹಾಗೂ ಇನ್ನೂ ಕೆಲವು ಯೂರೋಪ್ ದೇಶಗಳಲ್ಲಿ ಇಂಟರ್ನೆಟ್ ಆಧಾರಿತ ವೋಟಿಂಗ್ ವ್ಯವಸ್ಥೆಯನ್ನು ಈಗಾಗಲೇ ಪ್ರಯೋಗಿಕವಾಗಿ ಬಳಸಲಾಗುತ್ತಿದೆ. ಅದಕ್ಕೆ ಸೈಬರ್ ವೋಟಿಂಗ್ ಅಂತಲೂ ಹೆಸರಿದೆ. VOI - Voting Over Internet ಅಂತಲೂ ಹೇಳುತ್ತಾರೆ. ಇಷ್ಟೇ ಅಲ್ಲದೇ, ಇನ್ನೂ ಹಲವಾರು ರೀತಿಯ ಪ್ರಯೋಗಗಳು ನಡೆಯುತ್ತಿವೆ. HTML, XML, ಥರ EML - Election Markup Language ಅನ್ನೋ ತಾಂತ್ರಿಕ ಪ್ರೋಟೋಕಾಲನ್ನೇ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಯಾವ ಪಕ್ಕಾ ವ್ಯವಸ್ಥೆಯೂ ಇನ್ನೂ ಸಿದ್ಧವಾಗಿಲ್ಲ.

ಕಾಗದದ ವೋಟಿನಂತೆ, ಡಿಜಿಟಲ್ ವೋಟಿಗೂ ಕಾನೂನಿನ ಸಮ್ಮತಿ ಇರಬೇಕಾಗುತ್ತದೆ. ಭಾರತದಲ್ಲಿ, EVMನಲ್ಲಿ ವೋಟ್ ಹಾಕಿದರೂ, ಮತದಾರ ಖುದ್ದಾಗಿ ತಾನು ವೋಟು ಚಲಾಯಿಸಿದ್ದಕ್ಕಾಗಿ ಸಹಿ ಅಥವಾ ಹೆಬ್ಬೆಟ್ಟು ಗುರುತು ಹಾಕಿರುತ್ತಾನೆ. ಸೈಬರ್ ವೋಟಿನಲ್ಲಿ ಈ ವೆರಿಫಿಕೇಶನ್ ಮಾಡುವುದು ಹಾಗೂ ಸಾಂವಿಧಾನಿಕ ಸಾಕ್ಷಿಪತ್ರ ಪಡೆಯುವುದು ಹೇಗೆ ಎಂಬ ಪ್ರಶ್ನೆ ಇನ್ನೂ ಬಗೆಹರಿದಿಲ್ಲ. ಅದಕ್ಕೆ, ಬಯೋಮೆಟ್ರಿಕ್ ವೆರಿಫಿಕೇಶನ್, ರಜಿಸ್ಟರ್ಡ್ ಡಿಜಿಟಲ್ ಸಿಗ್ನೇಚರ್ ಅಥವಾ PKI - Public Key Infrastructure ತಂತ್ರಜ್ಞಾನ ಪರಿಹಾರ ಎಂದುಕೊಳ್ಳಲಾಗುತ್ತಿದೆ. ನನಗೆ ಈ ವಿಷಯ ತಿಳಿಸಿದ್ದು ಅಮೆರಿಕ ಸಂವಿಧಾನದ ಪರಿಣತ ಅಕ್ರಂ ಎಲಿಯಾಸ್.


ಎನಿವೇ, ಈ ನಡುವೆ ಲೈಟಾಗಿ ನನ್ನದೆರಡು ಫಂಡಾ :-)

ಫಂಡಾ 1.

ಇಂಟರ್ನೆಟ್ ವೋಟಿಂಗ್ ವ್ಯವಸ್ಥೆ ಇರಬೇಕು ಅಂತ ನನ್ನ ಒತ್ತಾಯ. ಆದರೆ, ಸುರಕ್ಷತಾ ಕಾರಣಕ್ಕಾಗಿ ಈ ಸೌಕರ್ಯ ಎಲ್ಲರಿಗೂ ಸಿಗಬಾರದು. ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆದಿರುವ ಹಾಗೂ ಕನಿಷ್ಠ 10 ಸಾವಿರ ರುಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇರುವ ನೌಕರರಿಗೆ ಅಥವಾ ಕನಿಷ್ಠ 3 ವರ್ಷ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿರುವ ವೃತ್ತಿಪರರಿಗೆ/ಬಿಸಿನೆಸ್ ವ್ಯಕ್ತಿಗಳಿಗೆ ಮಾತ್ರ ಅಂತರ್ಜಾಲದ ಮೂಲಕ ವೋಟ್ ಹಾಕಲು ಅನುವು ಮಾಡಿಕೊಡಬೇಕು. (ಇವೆರಡೂ ಇಲ್ಲದವರಿಗೆ ಮಾಮೂಲಿ ಮಾದರಿ ಹಾಗೂ 2ನೇ ಅಂತರ್ಜಾಲ ಮಾದರಿಯಿದೆ.)

ಇಂಥ ಅರ್ಹ ಮತದಾರರು, ತಮ್ಮ ಬ್ಯಾಂಕ್ ಖಾತೆಗೆ ಲಾಗಿನ್ ಆಗಿ, ಅಲ್ಲಿ, ತಮ್ಮ ವೋಟರ್ ಐಡಿ ನಂಬರ್ ತುಂಬಿ ಮತ ಚಲಾಯಿಸಬೇಕು. ಹೀಗೆ ಮತ ಚಲಾಯಿಸುವಾಗ ಮತದಾರನ ಬ್ಯಾಂಕ್ ಖಾತೆಯಿಂದ 1 ರುಪಾಯಿ ಡಿಡಕ್ಟ್ ಆಗಬೇಕು. ಅಂದರೆ, ಮತದಾರ ಮತ ಚಲಾಯಿಸಲು ತನ್ನ ಇಂಟರ್ನೆಟ್ ಬ್ಯಾಂಕಿಂಗಿನ ಟ್ರಾನ್ಸಾಕ್ಷನ್ ಪಾಸವರ್ಡನ್ನೇ ಬಳಸಬೇಕು.

ಇದರಿಂದ - ಲಾಭವೇನು?


  • ಈ ಪದ್ಧತಿಯಲ್ಲಿ ಮತದಾರನ ವೆರಿಫಿಕೇಶನ್ ಪಕ್ಕಾ ಆಗುತ್ತದೆ. ಬೋಗಸ್ ವ್ಯಕ್ತಿಗಳು ಮತಹಾಕಲು ಆಗುವುದಿಲ್ಲ. ಏಕೆಂದರೆ, ತಲೆ ಇರುವ ಯಾವುದೇ ವ್ಯಕ್ತಿ ತನ್ನ ಬ್ಯಾಂಕಿಂಗ್ ಟ್ರಾನ್ಸಾಕ್ಷನ್ ಪಾಸವರ್ಡನ್ನು ಬೇರೆಯವರಿಗೆ ಹೇಳಲಾರ. ಅಥವಾ 500 ರುಪಾಯಿಗೆ ಮಾರಿಕೊಳ್ಳಲಾರ.

  • ಈಗಿನಂತೆ, ಬೋಗಸ್ ಮತದಾರರನ್ನು ಸೃಷ್ಟಿಸಲು ಸಾಧ್ಯವಿಲ್ಲ ಏಕೆಂದರೆ, ಪ್ರತಿ ಬ್ಯಾಂಕ್ ಅಕೌಂಟ್ ತೆರೆಯಲು ಆರ್.ಬಿ.ಐ ಮಾರ್ಗದರ್ಶಿ ಸೂತ್ರಗಳು ತುಂಬಾ ಕಟ್ಟುನಿಟ್ಟಾಗಿವೆ. ವೋಟರ್ಸ ಐಡಿಗಿಂತ ಬ್ಯಾಂಕ್ ಐಡಿ ಉತ್ತಮ.

  • ಆದರೂ, ಗಣಿಧಣಿಗಳಂಥ ಶ್ರೀಮಂತ ಅಭ್ಯರ್ಥಿಗಳು ತಮ್ಮ ಪರಿಚಯದ ಬ್ಯಾಂಕಲ್ಲೆಲ್ಲ 'ಅಕ್ಷರಶಃ ಮತ ಬ್ಯಾಂಕ್' ಸ್ಥಾಪಿಸಿಕೊಳ್ಳುವ ಸಲುವಾಗಿ, ಕೊಳಚೆ ಪ್ರದೇಶಗಳ ಮತದಾರರ ಹೆಸರಿನಲ್ಲೂ ಬ್ಯಾಂಕ್ ಅಕೌಂಟ್ ತೆರೆದು ಅದರ ಇಂಟರ್ನೆಟ್ ಕಂಟ್ರೋಲನ್ನು ತಾವು ಇಟ್ಟುಕೊಳ್ಳುವ ಸಾದ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ, "ಪ್ರತಿ ಅಕೌಂಟಿನಲ್ಲಿ 10000 ರುಪಾಯಿ ಕನಿಷ್ಠ ಇರಬೇಕು ಹಾಗೂ ಇಂಟರ್ನೆಟ್ ಮತ ಹಾಕುವವರು ಯಾವುದಾದರೂ ಪ್ರತಿಷ್ಠಿತ ಕಂಪನಿ ಅಥವಾ ಸರ್ಕಾರಿ ನೌಕರರಾಗಿರಬೇಕು. ಇಲ್ಲವೇ, ಕನಿಷ್ಠ 3 ವರ್ಷ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿರಬೇಕು" ಎಂಬ ಅಂಶವನ್ನು ಗಮನಿಸಿ. ಈ ಷರತ್ತಿನಿಂದಾಗಿ, ಬೋಗಸ್ ಮತದಾರರನ್ನು ಸೃಷ್ಟಿಸುವುದು ಎಂಥ ಶ್ರೀಮಂತರಿಗೂ ಕಷ್ಟ ಹಾಗೂ ಬಲು ದುಬಾರಿ.

ಆದರೆ, ನನ್ನ-ನಿಮ್ಮಂಥ ಸಾಚಾ ಮತದಾರರಿಗೆ ಈ ಪದ್ಧತಿ ಬಹಳ ಅನುಕೂಲ ತಾನೇ?

ಫಂಡಾ 2

ಇದು ಈಗಿನ ಕೋರ್ ಬ್ಯಾಂಕಿಂಗ್ ಮಾದರಿಯ, ಕೋರ್ ವೋಟಿಂಗ್ ವ್ಯವಸ್ಥೆ. ಅಂದರೆ, ನೋಂದಾಯಿತ ಮತದಾರ ದೇಶದ ಯಾವುದೇ ಮತಗಟ್ಟೆ ಅಥವಾ ಬ್ಯಾಂಕಿಗೆ ಹೋಗಿ ಮತ ಚಲಾಯಿಸಲು ಅವಕಾಶವಿರಬೇಕು. ಉತ್ತರ ಪ್ರದೇಶದ ಮತದಾರ ಬೆಂಗಳೂರಿನ ಶಿವಾಜಿನಗರದ ಮತಗಟ್ಟೆಗೆ ಹೋಗಿ ಉತ್ತರ ಪ್ರದೇಶದ ತನ್ನ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸುವಂತಿರಬೇಕು. ಅಥವಾ ಬೆಂಗಳೂರಿನ ಮತದಾರ ಹೈದರಾಬಾದಿನ ಬ್ಯಾಂಕ್ ಶಾಖೆಯೊಂದರಲ್ಲಿ ತನ್ನೂರಿನ ಅಭ್ಯರ್ಥಿಗೆ ಮತದಾನ ಮಾಡುವಂತಿರಬೇಕು. ಮತದಾರರ ಗುರುತಿನ ಚೀಟಿ, ಸಹಿ ಅಥವಾ ಹೆಬ್ಬೆಟ್ಟು ಗುರುತುಗಳನ್ನು ಮತಗಟ್ಟೆ ಅಥವಾ ಬ್ಯಾಂಕ್ ಅಧಿಕಾರಿ, ಆನ್ ಲೈನಲ್ಲಿ ಪರಿಶೀಲಿಸಿ ಆ ಮತದಾರನಿಗೆ ಆನ್ ಲೈನಲ್ಲೇ ಮತಹಾಕಲು ಅವಕಾಶ ನೀಡಬೇಕು. ಈ ಮತ ಉದ್ದೇಶಿತ ಕ್ಷೇತ್ರದ ಅಭ್ಯರ್ಥಿಯ ಲೆಕ್ಕಕ್ಕೆ ಜಮಾ ಆಗಬೇಕು

ಲಕ್ಷಾಂತರ ರುಪಾಯಿಯನ್ನೇ ಹೀಗೆ ದೇಶದ ಎಲ್ಲೆಂದರಲ್ಲಿ ಜಮಾ ಮಾಡಲು ಅವಕಾಶವಿರುವಾಗ ಒಂದು 'ಜುಜುಬಿ' ವೋಟನ್ನು 'ಕೋರ್ ವೋಟಿಂಗ್' ಪದ್ಧತಿಯಲ್ಲಿ ಜಮಾ ಮಾಡಲು ಸಾಧ್ಯವಿಲ್ಲವೇ?

ಇದರಿಂದ ಆಗುವ ಲಾಭಗಳು:


  • ನಾವು ಭಾರತದಲ್ಲಿ ಯಾವುದೇ ಊರಿಗೆ ಹೋದರೂ, ಮತದಾನದಿಂದ ವಂಚಿತರಾಗಬೇಕಿಲ್ಲ.
  • ಮತದಾರರ ವೆರಿಫಿಕೇಶನ್ ಪಕ್ಕಾ. ಏಕೆಂದರೆ, ಈಗಿನ ಮತದಾನ ಪದ್ಧತಿಯೇ ಇಲ್ಲೂ ಅನ್ವಯವಾಗುತ್ತದೆ.
  • ತಾಂತ್ರಿಕವಾಗಿ ಜಾರಿಗೊಳಿಸುವುದು ಸುಲಭ.

ಚುನಾವಣಾ ಆಯೋಗ ಈ ಬ್ಲಾಗ್ ಓದುವುದಿಲ್ಲ ಅಂತ ನನಗೆ ಗೊತ್ತು. ಆದರೆ, ಈ 2 ಫಂಡಾಗೆ ನೀವೇನಂತೀರಿ?

Wednesday, April 15, 2009

ಚುನಾವಣಾ ಸಮೀಕ್ಷೆ ಎಷ್ಟು ಸತ್ಯ? - ಒಂದು ಖಾಸ್ ಬಾತ್

ದೀಗ ಚುನಾವಣಾ ಸಮಯ ಎನ್ನುವುದಕ್ಕಿಂತಲೂ ಚುನಾವಣಾ ಸಮೀಕ್ಷೆಗಳ ಸಮಯ ಎಂದರೇ ಹೆಚ್ಚು ಸರಿ. ಎಲ್ಲಾ ಟೀವಿ ಚಾನಲ್ಲುಗಳೂ ಚುನಾವಣಾ ಸಮೀಕ್ಷೆ ನಡೆಸುತ್ತಿವೆ. ತೆರೆಯ ಮೇಲೆ ಗ್ರಾಫ್ ತೋರಿಸುವುದೂ, ಮೂರು ನಾಲ್ಕು ರಾಜಕಾರಣಿಗಳ ಜೊತೆ ಚರ್ಚೆ ನಡೆಸುವುದೂ ಮಾಮೂಲಿಯಾಗಿದೆ. ಆದರೆ, ದೊಡ್ಡ ವಿವಾದ ಮಾತ್ರ ಹಾಗೇ ಇದೆ. ಚುನಾವಣಾ ಸಮೀಕ್ಷೆಗಳು ಎಷ್ಟು ವಿಶ್ವಾಸಾರ್ಹ? ಹಿಂದಿನ ಚುನಾವಣಾ ಸಮೀಕ್ಷೆಗಳು ಹೇಳಿದ ಸೀಟುಗಳ ಸಂಖ್ಯೆಗಳೆಲ್ಲಾ ಸರಿಹೋಗಿಲ್ಲವಲ್ಲ? ಮಾಧ್ಯಮಗಳು ಇಂಥ ಬೋಗಸ್ ಪದ್ಧತಿಯನ್ನು ಬಳಸಿಕೊಳ್ಳಬೇಕೇ? ಮೂರು-ನಾಲ್ಕು ಚುನಾವಣಾ ಸಮೀಕ್ಷೆಯಲ್ಲಿ ಪಾಲ್ಗೊಂಡ ಅನುಭವದಲ್ಲಿ ನನ್ನ ಅಭಿಪ್ರಾಯವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

1. ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಬೇಕೇ ಬೇಕು. (ಆದರೆ, Exit Poll - ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶವನ್ನು ಮಾತ್ರ ಎಲ್ಲ ಹಂತದ ಮತದಾನ ಮುಗಿದ ನಂತರವೇ ಪ್ರಕಟಿಸಬೇಕು. ಅಭಿವೃದ್ಧಿಹೊಂದಿದ ದೇಶದಲ್ಲೂ ಇದೇ ವ್ಯವಸ್ಥೆಯಿದೆ. ಈ ವರ್ಷದಿಂದ ಭಾರತದಲ್ಲೂ ಈ ಷರತ್ತನ್ನು ಚುನಾವಣಾ ಆಯೋಗ ಜಾರಿಗೊಳಿಸಿದೆ.)

2. ಈ ಸಮೀಕ್ಷೆಗಳನ್ನು ರಾಜಕೀಯ ಪಕ್ಷಗಳು ಟೀಕಿಸುವುದು ಅಥವಾ ವಿರೋಧಿಸುವುದು ಸಹಜ. ಆದರೆ, ವಾಸ್ತವ ಏನೂ ಅಂದರೆ, ಚುನಾವಣೆಗೆ ಮೊದಲು ಬಹುತೇಕ ರಾಜಕೀಯ ಪಕ್ಷಗಳು ರಹಸ್ಯವಾಗಿ ತಮ್ಮದೇ ಸಮೀಕ್ಷೆ ನಡೆಸುತ್ತವೆ. ಆ ಸಮೀಕ್ಷೆಗಳಿಗೆ ಅನುಗುಣವಾಗಿ ತಮ್ಮ ಚುನಾವಣಾ ಯೋಜನೆಯನ್ನು ರೂಪಿಸುತ್ತವೆ. ಕಳೆದ ವರ್ಷದಂತೆ ಈ ವರ್ಷವೂ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮದೇ ಸಮೀಕ್ಷೆ ನಡೆಸಿವೆ. ಬಹಿರಂಗವಾಗಿ ಏನೇ ಹೇಳಲಿ,ಅಂತರಂಗದಲ್ಲಿ ತಮ್ಮ ಸಮೀಕ್ಷೆಗಳ ಫಲಿತಾಂಶದ ಸತ್ಯ ಏನು ಎಂದು ಎರಡೂ ಪಕ್ಷದ ವರಿಷ್ಠರಿಗೆ ಗೊತ್ತು!

3. ಈಗ ಪತ್ರಿಕೋದ್ಯಮವನ್ನೇ ತೆಗೆದುಕೊಂಡರೆ, ನಮ್ಮ ವರದಿಗಾರರು ತಮ್ಮ ಕ್ಷೇತ್ರದಲ್ಲಿ ಸಂಚರಿಸಿ 25-30 ಜನರನ್ನು ಮಾತನಾಡಿಸಿ ಬರೆಯುವ ಕ್ಷೇತ್ರ ಸಮೀಕ್ಷೆಗಳಿಗಿಂತ Large Samples ಇರುವ ಸಮೀಕ್ಷೆಗಳೇ ಹೆಚ್ಚು ನಿಖರ ಹಾಗೂ ವಿಶ್ವಾಸಾರ್ಹ. ಆ ದೃಷ್ಟಿಯಲ್ಲಿ ಈ ಸಮೀಕ್ಷೆಗಳು ಆಧುನಿಕ ಪತ್ರಿಕೋದ್ಯಮಕ್ಕೆ ಒಂದು ವರ ಎಂದು ನನ್ನ ಅಭಿಪ್ರಾಯ.

4. ಈ ಸಮೀಕ್ಷೆಗಳು ಹಲವು ಬಾರಿ ವಿಫಲವಾಗುತ್ತವೆ. ಕೆಲವು ಬಾರಿ ಸಂಪೂರ್ಣ ಉಲ್ಟಾ ಆಗುತ್ತವೆ (ಕಳೆದ ವರ್ಷದ CNN-IBN ಸಮೀಕ್ಷೆ ಥರ). ಈ ಸಮೀಕ್ಷೆಗಳು ಯಶಸ್ವಿಯಾಗುವುದು ಬಿಡುವುದು ಆರು ಅಂಶಗಳನ್ನು ಅವಲಂಬಿಸಿವೆ:

a) ಉತ್ತಮ ಸಮೀಕ್ಷಾ ಗಣದ ಆಯ್ಕೆ
b) ಉತ್ತಮ ಸಮೀಕ್ಷಾ ಗಣದ ಗಾತ್ರ
c) ಸೂಕ್ತ ಪ್ರಶ್ನಾವಳಿ
d) ಸಮೀಕ್ಷೆ ನಡೆಸುವ ಸಮಯ
e) ಉತ್ತಮ ಹಾಗೂ ಪ್ರಾಮಾಣಿಕ ಕ್ಷೇತ್ರ ಕಾರ್ಯ ಹಾಗೂ
f) ಮಾಹಿತಿಯ ಉತ್ತಮ ಸಂಸ್ಕರಣೆ ಮತ್ತು ವಿಶ್ಲೇಷಣೆ

ಈ ಆರು ಹಂತಗಳಲ್ಲಿ ಒಂದರಲ್ಲಿ ಎಡವಿದರೂ ಸಮೀಕ್ಷೆ ದಾರಿ ತಪ್ಪುತ್ತದೆ.

5. ಇನ್ನೊಂದು ಪ್ರಮುಖ ಅಂಶವನ್ನು ಎಲ್ಲರೂ ಗಮನಿಸಲೇ ಬೇಕು. ಸಮೀಕ್ಷೆ ಅಂದರೆ, ಪ್ರತಿ ಪಕ್ಷ ಗೆಲ್ಲಬಹುದಾದ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಎಂಬ ಅಭಿಪ್ರಾಯವಿದೆ. ಇದು ತಪ್ಪು. ಸಮೀಕ್ಷೆಗಳು ಎಂದರೆ ಒಟ್ಟಾರೆ ಟ್ರೆಂಡ್ ಸೂಚಿಸುವ ದಿಗ್ದರ್ಶಕಗಳು ಮಾತ್ರ. Numbersಗಿಂತ Inference ಮುಖ್ಯ.

ಉದಾಹರಣೆಗೆ ಕಳೆದ ಲೋಕಸಭಾ ಚುನಾವಣೆಯ ಸಮೀಕ್ಷೆಗಳನ್ನು ನೋಡಿ. ಕಳೆದ 4-5 ವರ್ಷಗಳವರೆಗೂ ಕನ್ನಡ ಪತ್ರಿಕೋದ್ಯಮದಲ್ಲಿ ಈ ಸಮೀಕ್ಷೆಗಳ ಭರಾಟೆ ಅಷ್ಟಾಗಿ ಇರಲಿಲ್ಲ. ಪ್ರಕಟಿಸಿದರೂ ಈ ಸಮೀಕ್ಷೆಗಳನ್ನು 2-3-4 ಕಾಲಮ್ಮಿನ ಒಂದು ಸುದ್ದಿಯಾಗಿ ಪ್ರಕಟಿಸುವ ವಾಡಿಕೆಯಿತ್ತು. ಈ ಹಂತದಲ್ಲಿ ಕನ್ನಡಪ್ರಭದಲ್ಲಿ NDTV Indian Express - AC Nielsen ಸಮೀಕ್ಷೆಯನ್ನು ವಿವರವಾಗಿ ಪ್ರಕಟಿಸುವ ಹಾಗೂ Over Play ಮಾಡುವ ನಿರ್ಧಾರ ಕೈಗೊಂಡಾಗ ನನಗೂ ಈ ಸಮೀಕ್ಷೆಗಳ ಕುರಿತು ಅಳುಕಿತ್ತು. ಆದರೆ, ಈ ಕಾರ್ಯದಲ್ಲಿ ನಾನು ನಿಕಟವಾಗಿ ತೊಡಗಿಸಿಕೊಂಡ ನಂತರ ನನಗೆ ಈ ಸಮೀಕ್ಷೆಗಳ ಕುರಿತು ಧೈರ್ಯ ಹಾಗೂ ನಂಬಿಕೆ ಬಂತು.

ನಮ್ಮ ಆರಂಭದ ಸುತ್ತಿನ ಸಮೀಕ್ಷೆಯಲ್ಲಿ "ಎನ್.ಡಿ.ಎ ಪ್ರಕಾಶಿಸುತ್ತಿದೆ - ಬಿಜೆಪಿ ಮೈತ್ರಿ ಕೂಟಕ್ಕೇ ಮತ್ತೆ ಅಧಿಕಾರ ಸಂಭವ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅದನ್ನೇ ಕನ್ನಡಪ್ರಭದಲ್ಲಿ ಬ್ಯಾನರ್ ಶೀರ್ಷೀಕೆಯಾಗಿ ಪ್ರಕಟಿಸಿದೆವು. ಆದರೆ, ಎರಡು ಮತ್ತು ಮೂರನೇ ಸುತ್ತಿನ ಚುನಾವಣಾ ಪೂರ್ವ ಸಮೀಕ್ಷೆಗಳು ಮುಗಿಯುವ ಹೊತ್ತಿಗೆ ಕಾಂಗ್ರೆಸ್ ಮೈತ್ರಿ ಕೂಟದ ಅಲೆ ಹೆಚ್ಚು ಕಂಡುಬಂತು. ಬಿಜೆಪಿ ಮೈತ್ರಿಕೂಟಕ್ಕೆ ಅಧಿಕಾರ ಸಿಗುವುದು ಕಷ್ಟ ಎಂದು ಸಮೀಕ್ಷೆಗಳು ತಿಳಿಸಿದವು. ಆಗ ನಾವು "ಎನ್.ಡಿ.ಎ ಮಂಕಾಗುತ್ತಿದೆ" ಎಂದು ಬ್ಯಾನರ್ ಶೀರ್ಷಿಕೆಯಲ್ಲಿ ಸಮೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದೂ ಅಷ್ಟೇ ನಿಜ. Exit Poll ಸಮೀಕ್ಷೆಯ ನಂತರವಂತೂ ಬಿಜೆಪಿಗೆ ಅಧಿಕಾರ ದೂರದ ಮಾತು ಎಂಬ ಅಂಶ ಗೊತ್ತಾಯಿತು. ಸಮೀಕ್ಷೆಗಳು ಅಂದಾಜು ಮಾಡಿದ್ದ ಸಂಖ್ಯೆ ಸರಿ ಇಲ್ಲದಿದ್ದರೂ ಸಮೀಕ್ಷೆ ತೋರಿಸಿದ ಒಟ್ಟಾರೆ ದಿಕ್ಕು ಸರಿಯಾಗೇ ಇತ್ತು. ಎನ್.ಡಿ.ಎ. ಶೈನ್ ಆಗಲಿಲ್ಲ.

ಕರ್ನಾಟಕದಲ್ಲೂ ಅಷ್ಟೇ ಬಿಜೆಪಿಗೆ 15-19 ಸೀಟು ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದರೆ ಯಾರೂ ನಂಬಲಿಲ್ಲ. ಆಗ ಕನ್ನಡಪ್ರಭವನ್ನು ಟೀಕಿಸಿದವರು ಹಲವರು. ಈ ಟೀಕೆಗಳಿಂದ ನಾನು ತುಸು ಡಿಪ್ರೆಸ್ ಆದದ್ದು ನಿಜ. ಆದರೆ, ಫಲಿತಾಂಶ ಬಂದಾಗ ಬಿಜೆಪಿಗೆ 18 ಸೀಟು ಸಿಕ್ಕಿತ್ತು. ಅಂದರೆ, ಕರ್ನಾಟಕದಲ್ಲಿ ಬಿಜೆಪಿ ಬಲಗೊಂಡಿದ್ದನ್ನು ಸಮೀಕ್ಷೆ ಸರಿಯಾಗೇ ಪತ್ತೆ ಹಚ್ಚಿತ್ತು.

ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತೂ ಸಮೀಕ್ಷೆ ನಡೆಸಿದ್ದೆವು. ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ಸಿಗೆ ಮತ್ತೆ ಅಧಿಕಾರ ಕಷ್ಟ. ಬಿಜೆಪಿ ಹಾಗೂ ಜೆಡಿಎಸ್ ಬಲಗೊಂಡಿವೆ. ಆದರೆ, ಯಾವ ಪಕ್ಷಕ್ಕೆ ಅಧಿಕಾರ ಎಂದು ಹೇಳಲು ಆಗುತ್ತಿಲ್ಲ. Too Close to Call - ಎಂದು ಸಮೀಕ್ಷೆ ತಿಳಿಸಿತ್ತು. (That's the exact four-words the survey said.) ಕೊನೆಗೆ ಬಂದ ಫಲಿತಾಂಶ ಎಷ್ಟು Close ಆಗಿತ್ತು ಅಂದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಅದಿಕಾರಕ್ಕೆ ಕೂದಲೆಳೆ ಅಂತರದಲ್ಲಿ ಇದ್ದವು. ಜೆಡಿಎಸ್ ಅತ್ತ ಬಲ ಕೊಟ್ಟರೆ ಆ ಸರ್ಕಾರ ಇತ್ತ ಬಲ ಕೊಟ್ಟರೆ ಈ ಸರ್ಕಾರ ಎಂಬ ಪರಿಸ್ಥಿತಿ ನಿರ್ಮಾಣವಾಗಲಿಲ್ಲವೇ? ಅಷ್ಟೇ ಅಲ್ಲ, ಚಂದ್ರಬಾಬು ನಾಯ್ಡುಗೆ ಅಧಿಕಾರ ಗಗನಕುಸುಮ ಎಂದೂ ಸಮೀಕ್ಷೆ ತಿಳಿಸಿತ್ತು. ಸಂಖ್ಯೆ ಸರಿ ಇಲ್ಲದಿದ್ದರೂ ಸಮೀಕ್ಷೆ ತೋರಿಸಿದ್ದ ದಿಕ್ಕು ಸುಳ್ಳಾಗಲಿಲ್ಲವಲ್ಲ!

ಬಹಿರಂಗವಾಗಿ, ರಾಜಕೀಯ ಪಕ್ಷಗಳು ಈ ಸಮೀಕ್ಷೆಯೆಲ್ಲ ಬೋಗಸ್ ಎಂದೇ ಹೇಳಿದವು. ಆದರೆ, ಕಾಂಗ್ರೆಸ್ ಗಾಳಿ ಬಲವಾಗುತ್ತಿದೆ ಎಂದು ನಮ್ಮ ಸಮೀಕ್ಷೆ ಪ್ರಕಟವಾದಾಗ ಕಾಂಗ್ರೆಸ್ 1.5 ಲಕ್ಷ ಪ್ರತಿಗಳನ್ನು ಪ್ರೀಮಿಯಂ ಬೆಲೆಗೆ ಕೊಂಡುಕೊಂಡು ಮತಕ್ಷೇತ್ರಗಳಲ್ಲಿ ಹಂಚಿದರೆ, ಜೆಡಿಎಸ್ 2.5 ಲಕ್ಷ ಪ್ರತಿಗಳನ್ನು ಕೊಂಡುಕೊಂಡಿತು. ಜೆಡಿಎಸ್ ಸಂತೋಷಕ್ಕೆ ಕಾರಣವೆಂದರೆ, - ಆಗಿನ ಪರಿಸ್ಥಿತಿಯಲ್ಲಿ ಜನತಾದಳ ಸಂಪೂರ್ಣ ಅವಶೇಷವಾಗಿತ್ತು. ದೇವೇಗೌಡರು ಹೊಸತಾಗಿ ಜೆಡಿಎಸ್ ಪಕ್ಷ ಪಟ್ಟಿದ್ದರು. ಆದರೆ, ಯಾವ ಸಮೀಕ್ಷೆಯೂ ಜೆಡಿಎಸ್ ಇರುವನ್ನು ಗುರುತಿಸಿರಲಿಲ್ಲ. ಇತರೆ ಎಂಬ ಕಾಲಂ ಅಡಿ ಜೆಡಿಎಸ್ ಸ್ಥಾನಗಳನ್ನು ತೋರಿಸಲಾಗುತ್ತಿತ್ತು. ಆದರೆ, ನಮ್ಮ ಸಮೀಕ್ಷೆಯಲ್ಲಿ ಜೆಡಿಎಸ್ ಎಂದು ಪ್ರತ್ಯೇಕವಾಗಿ ಗುರುತಿಸಿ ಅದು ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಹೇಳಿದ್ದೆವು.

ಇದನ್ನೆಲ್ಲ ಸಮೀಕ್ಷೆ ಸ್ಪಷ್ಟವಾಗಿ ಕಂಡುಕೊಂಡಿತ್ತು. ಇದನ್ನು ಬಿಟ್ಟು ಕೆಲವರು, ಕೇವಲ ಸಮೀಕ್ಷೆಯ ಸಂಖ್ಯೆಗೆ ಮಹತ್ವ ಕೊಟ್ಟು, ಸಮೀಕ್ಷೆಗಳೆಲ್ಲಾ ಬೋಗಸ್ ಎಂದು ಅಪಪ್ರಚಾರ ಮಾಡಿದರು.

2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಅಷ್ಟೇ. ಸುವರ್ಣ ನ್ಯೂಸ್ - ಕನ್ನಡಪ್ರಭ - ಸಿಫೋರ್ ಸಮೀಕ್ಷೆ ಅದ್ಭುತ ಯಶಸ್ಸು ಕಂಡಿತು. ಕೇವಲ ಟ್ರೆಂಡ್ ಅಷ್ಟೇ ಅಲ್ಲ, ಸಂಖ್ಯೆ ಸಹ ಶೇ.98ರಷ್ಟು ನಿಖರವಾಗಿತ್ತು. This is the only survey that has hit the bulls-eye ಎಂದು Times of India ಮುಖಪುಟದಲ್ಲಿ ಬರೆದಿತ್ತು.

ಹಾಗಂತ ಎಲ್ಲ ಬಾರಿಯೂ ಸಮೀಕ್ಷೆಯ ಸಂಖ್ಯೆ ಇಷ್ಟೊಂದು ನಿಖರವಾಗಿರುತ್ತದೆ ಎಂದು ನಾನೇನೂ ಹೇಳುವುದಿಲ್ಲ. ಆದರೆ, ಸಮೀಕ್ಷೆಗಳಿಂದ ಮತದಾರರ ನಿಖರ ನಾಡಿ ಮಿಡಿತವಂತೂ ಖಂಡಿತವಾಗಿ ತಿಳಿಯುತ್ತದೆ.

In last October, I had a rare chance of being at the thick of the American Elections. ಇದು ನನ್ನ ಪತ್ರಿಕೋದ್ಯಮ ಜೀವನದ ಅತ್ಯದ್ಭುತ ಅನುಭವವೂ ಹೌದು. ಆಗ ಅಲ್ಲಿನ ಅನೇಕ ಪತ್ರಕರ್ತರ ಜೊತೆ ನಿಕಟವಾಗಿ ಒಡನಾಡುವ ಅವಕಾಶ ನನ್ನದಾಯಿತು. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ 'ಡೈರೆಕ್ಟರ್ ಆಫ್ ಪೋಲಿಂಗ್ ' ಜಾನ್ ಕೊಹೆನ್ ಅವರ ಜೊತೆ ನಾನು ಈ ಚುನಾವಣಾ ಪೂರ್ವ ಸಮೀಕ್ಷೆ ಹಾಗೂ ಚುನಾವಣೋತ್ತರ ಸಮೀಕ್ಷೆಯ ಕುರಿತು ಒಂದರ್ಧ ಗಂಟೆ ಮಾತನಾಡಿದ್ದೆ. ಅವರ ಅನುಭವದಲ್ಲಿ, ಸಮೀಕ್ಷೆಗಳು ಎಡವಿದರೆ ಅದಕ್ಕೆ ಆ ಸಮೀಕ್ಷೆ ನಡೆಸುವ ಸಂಸ್ಥೆ ಕಾರಣ. ಸಮೀಕ್ಷೆ ತಪ್ಪಾಯಿತು ಎಂಬ ಕಾರಣಕ್ಕೆ Psephology - ಸಮೀಕ್ಷಾ ವಿಜ್ಞಾನವೇ ಸುಳ್ಳು ಎನ್ನುವಂತಿಲ್ಲ. The methods and executions are very important ಎನ್ನುತ್ತಾರೆ ಅವರು.

ಶಿಕಾಗೋ ಟ್ರಿಬ್ಯೂನ್ನಿನ ಖ್ಯಾತ ರಾಜಕೀಯ ಅಂಕಣಕಾರ ಕ್ಲಾರೆನ್ಸ್ ಪೇಜ್ ಜೊತೆ ಚುನಾವಣಾ ಸಮೀಕ್ಷೆಗಳ ಕುರಿತು ಮಾತನಾಡಿದಾಗ ಅವರು ಹೇಳಿದ್ದೂ ಅದನ್ನೇ. "ಸಮೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ರೂಪಿಸಲಾಗಿದೆ, ಯಾವ ರೀತಿಯ ಸಮೀಕ್ಷಾ ಗಣವನ್ನು ಆಯ್ದುಕೊಳ್ಳಲಾಗಿದೆ ಹಾಗೂ ಯಾವ ಸಂದರ್ಭದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ ಎಂಬುದು ಬಹಳ ಮುಖ್ಯ. ಇದರಲ್ಲಿ ಎಡವಿದರೆ ಸಮೀಕ್ಷೆಯೂ ಎಡವುತ್ತದೆ. ಇಲ್ಲವಾದಲ್ಲಿ, ಸಮೀಕ್ಷೆ ಎಡವಲು ಅವಕಾಶವೇ ಇಲ್ಲ."

ಎಬಿಸಿ ನ್ಯೂಸಿನ ವೈಟ್ ಹೌಸ್ ವರದಿಗಾರ್ತಿ ಆನ್ ಕಾಂಪ್ಟನ್ ಹೇಳಿದ್ದು - "ಈ ಸಮೀಕ್ಷೆಗಳನ್ನು ಕೇವಲ ನಂಬರ್ ಗೇಮ್ ಅಂತ ತಿಳಿಯಬಾರದು. We should use the pre-poll and exit poll statistics to find the reasons for the results."

ಹಾಗಾಗಿ, ಸಮೀಕ್ಷೆಗಳು ಆದುನಿಕ ಪತ್ರಿಕೊದ್ಯಮಕ್ಕೆ ಬೇಕೇ ಬೇಕು. ಆದರೆ, ನಾವು ಸರಿಯಾಗಿ ಸಮೀಕ್ಷೆ ನಡೆಸಬೇಕು ಅಷ್ಟೇ.

Sunday, April 12, 2009

ಟ್ವೀಟರ್.. ಟ್ವೀಟರ್.. ವಾಟ್ ಯು ಆರ್ !

ನಿಮಗಿನ್ನೂ ಹಿಡಿದಿಲ್ಲವೇ ಈ ಹುಚ್ಚು!

‘ನಾನು ಏನೂ ಮಾಡುತ್ತಿಲ್ಲ’ ಎಂಬ ಅತ್ಯಂತ ಸಿಲ್ಲಿ ಸಂದೇಶದಿಂದ ಹಿಡಿದು ‘ನ್ಯೂಯಾರ್ಕಿನ ಕಟ್ಟಡವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹುಚ್ಚುಚ್ಚಾಗಿ ಗುಂಡುಹಾರಿಸಿ ಹತ್ತಾರು ಜನರನ್ನು ಸಾಯಿಸುತ್ತಿದ್ದಾನೆ’ ಎಂಬ ಬ್ರೇಕಿಂಗ್ ನ್ಯೂಸ್‌ವರೆಗೆ... ಟ್ವೀಟರ್ ಸೈಟಿನಲ್ಲಿ ಕೋಟಿ ಕೋಟಿ ಸಂದೇಶಗಳು ಲಭ್ಯ.



೧. ನಾನೀಗ ಕಾಫಿ ಕುಡಿಯಲು ಹೋಗ್ತಿದ್ದೇನೆ.
೨. ರಾತ್ರಿಗೆ ಏನು ಅಡಿಗೆ ಮಾಡೋಣ ಅಂತ ಯೋಚಿಸ್ತಿದ್ದೇನೆ.
೩. ಲಂಡನ್‌ನಲ್ಲೂ ಲುಂಗಿ ಉಡೋವ್ರು ಇದ್ದಾರಾ? ಯಾರಾದ್ರೂ ಹೇಳಿ ಪ್ಲೀಸ್.
೪. ಅಯ್ಯೋ... ಹೊಸೂರು ರಸ್ತೆಯತ್ತ ಈಗ ಯಾರೂ ಬರಬೇಡಿ. ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್.
೫. ಮೈ ಗಾಡ್. ಹೊಸೂರು ರಸ್ತೆಯಲ್ಲಿ ಬಾಂಬ್ ಸ್ಫೋಟಿಸಿದೆ. ನಾಲ್ಕೈದು ಜನಾನಾದ್ರೂ ಸತ್ತಿದ್ದಾರೆ ಅಂತ ಹೇಳ್ತಿದ್ದಾರೆ.
೬. ಕಾಪಾಡಿ... ಕಾಪಾಡಿ... ಪೊಲೀಸರು ನನ್ನನ್ನು ಅನ್ಯಾಯವಾಗಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕಿದ್ದಾರೆ.

ಮೇಲಿನ ಅರ್ಧ ಡಜನ್ ವಾಕ್ಯಗಳನ್ನು ಓದಿದಾಗ ನಿಮಗೆ ಏನೆನ್ನಿಸಿತು?

  • ನಿಮಗೆ ಏನೂ ಅನ್ನಿಸದಿದ್ದರೆ ‘ನಿಮಗೆ ವಯಸ್ಸಾಯಿತು. ಜೀವನದಲ್ಲಿ ಆಸಕ್ತಿ ಹೊರಟುಹೋಗಿದೆ’ ಅಂತ ಅರ್ಥ.
  • ‘ಸ್ನಾನಾ ಮಾಡ್ಕೊಳೋ, ಪೌಡರ್ ಹಚ್ಕೋಳೋ, ಹಲ್ ಉಜ್ಕೊಳೋ’ ಎನ್ನುವ ಅಸಂಬದ್ಧ ಸಿನಿಮಾ ಹಾಡಿನಂತಿದೆ ಪಕ್ಕದ ಆರು ಸಾಲುಗಳು ಅಂತ ಅನ್ನಿಸಿದರೆ ನೀವು ಕನ್ನಡ ಸಿನೆಮಾಗೆ ಸಂಗೀತ ಸಾಹಿತ್ಯ ನೀಡಲು ಯೋಗ್ಯ ಕವಿ ಅಂತ ಅರ್ಥ.
  • ಇವೆಲ್ಲ ಎಸ್‌ಎಂಎಸ್ ಸಂದೇಶ ಇರಬಹುದು ಅಂತ ನಿಮಗನ್ನಿಸಿದರೆ, ನೀವು ಮೊಬೈಲ್ ಎಕ್ಸ್ ಪರ್ಟ್ ಎಂದು ತಿಳಿಯಬಹುದು.
  • ಈ ವಾಕ್ಯಗಳು ‘ಟ್ವೀಟರ್ ಸಂಭಾಷಣೆ’ ಅಂತ ನಿಮಗನ್ನಿಸಿದರೆ -ವಾರೆ ವ್ಹಾ... ನಿಮಗೆ ೨೧ನೇ ಶತಮಾನದ ಸರ್ವಜ್ಞ ಅಂತ ಬಿರುದು ನೀಡಬಹುದು!
ಇಷ್ಟಕ್ಕೂ ಏನಿದು ಟ್ವೀಟರ್?...

ಟ್ವೀಟರ್ -ಸದ್ಯ ಜಗತ್ತಿಗೆ ಹುಚ್ಚು ಹಿಡಿಸಿರುವ ಇಂಟರ್‌ನೆಟ್ಟಿನ ಹೊಸ ಸೆನ್‌ಸೇಷನ್. ಜನರು-ಜನರೊಡನೆ ‘ಮಿನಿ-ಸಂದೇಶ’ಗಳನ್ನು ವಿನಿಮಯ ಮಾಡಿಕೊಳ್ಳುವ ಒಂದು ಇಂಟರ್‌ನೆಟ್ ತಾಣ. ಅಂತರ್ಜಾಲದ ಭಾಷೆಯಲ್ಲೇ ಹೇಳುವುದಾದರೆ, ‘ಮೈಕ್ರೋ ಬ್ಲಾಗಿಂಗ್’ ವೆಬ್‌ಸೈಟ್. ಒಬ್ಬರು ಇನ್ನೊಬ್ಬರೊಡನೆ ಅಥವಾ ಲಕ್ಷಾಂತರ ಜನರೊಜನೆ ಸಂಪರ್ಕ ಸಾಧಿಸಿ ಮಾಹಿತಿ ಹಂಚಿಕೊಳ್ಳುವ ಸೋಶಿಯಲ್ ನೆಟ್‌ವರ್ಕ್.

‘ನಾನು ಏನೂ ಮಾಡುತ್ತಿಲ್ಲ’ ಎಂಬ ಅತ್ಯಂತ ಸಿಲ್ಲಿ ಸಂದೇಶದಿಂದ ಹಿಡಿದು ‘ನ್ಯೂಯಾರ್ಕಿನ ಕಟ್ಟಡವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹುಚ್ಚುಚ್ಚಾಗಿ ಗುಂಡುಹಾರಿಸಿ ಹತ್ತಾರು ಜನರನ್ನು ಸಾಯಿಸುತ್ತಿದ್ದಾನೆ’ ಎಂಬ ಬ್ರೇಕಿಂಗ್ ನ್ಯೂಸ್‌ವರೆಗೆ... ಟ್ವೀಟರ್ ಸೈಟಿನಲ್ಲಿ ಕೋಟಿ ಕೋಟಿ ಸಂದೇಶಗಳು ಲಭ್ಯ.

ಟ್ವೀಟರ್ ಒಂದು ಇಂಟರ್‌ನೆಟ್ ತಾಣವಾದರೂ, ಇದಕ್ಕೆ ಮಾಹಿತಿಯನ್ನು ಮೊಬೈಲ್ ಫೋನಿನ ಮೂಲಕವೂ ಕಳಿಸಬಹುದು ಹಾಗೂ ತನಗೆ ಬಂದ ಮಾಹಿತಿಯನ್ನು ಮೊಬೈಲ್ ಫೋನಿನ ಎಸ್‌ಎಂಎಸ್ ರೂಪದಲ್ಲೂ ಪಡೆಯಬಹುದು. ಆದ್ದರಿಂದಲೇ, ಟ್ವೀಟರ್ ಸರ್ವಾಂತರ್ಮಯಿ.

ಇಂಟರ್‌ನೆಟ್ಟಿನಲ್ಲಿ ಇಂತಹ ಮಾಹಿತಿ ಮೊದಲೂ ದೊರೆಯುತ್ತಿತ್ತಲ್ಲ. ಈಗ ಟ್ವೀಟರಿನದೇನು ಮಹಾ?

ಟ್ವೀಟರ್ ಆರಂಭ ಆಗುವುದಕ್ಕಿಂತಲೂ ಮೊದಲೂ, ಇಂಟರ್‌ನೆಟ್‌ಲ್ಲಿ ಇಂತಹ ಮಾಹಿತಿ ದೊರೆಯುತ್ತಿದ್ದವು ಎನ್ನುವುದು ನಿಜ. ಆದರೆ, ಆ ಮಾಹಿತಿ ಟ್ವೀಟರ್ ಸಂದೇಶಗಳಷ್ಟು ‘ಲೈವ್’ (ನೇರ ಪ್ರಸಾರ) ಆಗಿರಲಿಲ್ಲ. ಜಗತ್ತಿನ ಯಾವುದೇ ಮಾಹಿತಿ ವ್ಯವಸ್ಥೆಗಿಂತಲೂ ಟ್ವೀಟರ್ ಹೆಚ್ಚು ಲೈವ್ ಎನ್ನೋದು ವಿಶೇಷ.
...ಒಂದು ಉದಾಹರಣೆ ನೋಡಿ:
ಕೆಲವು ತಿಂಗಳ ಹಿಂದೆ, ನ್ಯೂಯಾರ್ಕಿನ ಹಡ್ಸನ್ ನದಿಯಲ್ಲಿ ವಿಮಾನವೊಂದು ‘ಇಳಿದ’ ವಿಚಾರ ಗೊತ್ತಲ್ಲ. ಆ ಸುದ್ದಿಯನ್ನು ಮೊಟ್ಟ ಮೊದಲು ವಿಶ್ವಕ್ಕೆ ವರದಿ ಮಾಡಿದ್ದು, ಪತ್ರಿಕೆಯಲ್ಲ, ರೇಡಿಯೋ ಅಲ್ಲ, ಟೀವಿಯಲ್ಲ, ಇಂಟರ್‌ನೆಟ್ ಸೈಟುಗಳೂ ಅಲ್ಲ. ಅದೇ ನದಿಯಲ್ಲಿ ದೋಣಿ ವಿಹಾರ ಮಾಡುತ್ತಿದ್ದ ವ್ಯಕ್ತಿಯೊಬ್ಬ, ತನ್ನ ಕಣ್ಣೆದುರೇ ವಿಮಾನ ನದಿಗೆ ಇಳಿಯುತ್ತಿರುವುದನ್ನು ನೋಡಿದ. ಅರರೇ... ಇದೇನಿದು ನದಿಗೆ ವಿಮಾನ ಎಂದು ಅಚ್ಚರಿಗೊಂಡ. ತಕ್ಷಣ ಆ ಸಂದೇಶ ಹಾಗೂ ಚಿತ್ರವನ್ನು ಟ್ವೀಟರ್‌ಗೆ ಕಳಿಸಿದ. ಈ ಸುದ್ದಿಯನ್ನು ಅದೆಷ್ಟೋ ಸಾವಿರ ಜನರು ಟ್ವೀಟರಿನಲ್ಲಿ ನೋಡಿದ ಆನಂತರವಷ್ಟೇ, ರೇಡಿಯೋ, ಟೀವಿಗಳಲ್ಲಿ ಈ ಸುದ್ದಿ ಪ್ರಸಾರವಾಯಿತು. ಅದೇ ರೀತಿ, ಮುಂಬೈ ಮೇಲಿನ ಉಗ್ರರ ದಾಳಿ ಕೂಡ ಟ್ವೀಟರಿನ ಮೂಲಕ ಜಗತ್ತನ್ನು ತ್ವರಿತವಾಗಿ ತಲುಪಿತು.

ಅಂದರೆ ಇದೊಂದು ಸುದ್ದಿ ಮಾಧ್ಯಮವೇ?

ಇದನ್ನು ಖಂಡಿತ ಸುದ್ದಿ ಮಾಧ್ಯಮ ಎಂದು ಕರೆಯಬಹುದು. ಆದರೆ, ಇದು ಜನಿಸಿದಾಗ ಇದೊಂದು ಸುದ್ದಿ ಮಾಧ್ಯಮವಾಗಬಹುದು, ಕೋಟ್ಯಂತರ ಜನ ಈ ಸೇವೆಗೆ ಮುಗಿ ಬೀಳಬಹುದು ಎಂಬ ಕಲ್ಪನೆ ಇರಲಿಲ್ಲ.

ವ್ಯಕ್ತಿಯೊಬ್ಬ, ತನ್ನ ಕಚೇರಿಯಿಂದ, ಕಾರಿಂದ, ಸ್ವದೇಶದಿಂದ, ವಿದೇಶದಿಂದ, ಕಂಪ್ಯೂಟರಿಂದ, ಮೊಬೈಲ್ ಫೋನಿಂದ ಎಲ್ಲೆಂದರಲ್ಲಿಂದ ತನ್ನ ಹಾಲಿ ಸ್ಥಿತಿಯನ್ನು ಮಿತ್ರರಿಗೆ ತಿಳಿಸಲು ಅವಕಾಶ ಕಲ್ಪಿಸುವುದಷ್ಟೇ ಟ್ವೀಟರಿನ ಉದ್ದೇಶವಾಗಿತ್ತು. ‘ನಾನು ಈ ಕ್ಷಣದಲ್ಲಿ ಏನು ಮಾಡುತ್ತಿದ್ದೇನೆ? ಎಲ್ಲಿದ್ದೇನೆ? ಏನು ಚಿಂತಿಸುತ್ತಿದ್ದೇನೆ?’ -ಎಂಬ ಪುಟಾಣಿ ಮಾಹಿತಿಯನ್ನು ಗೆಳೆಯರ ಬಳಿ ಹಂಚಿಕೊಳ್ಳಲು ವೇದಿಕೆ ನೀಡುವುದಷ್ಟೇ ಟ್ವೀಟರಿನ ಯೋಜನೆಯಾಗಿತ್ತು. ಆದರೆ, ಇಂದು ಬಳಕೆದಾರರು, ತಾವೇ, ಹಲವಾರು ಉಪಯೋಗಗಳನ್ನು ಕಂಡುಕೊಂಡಿದ್ದಾರೆ.

ಟ್ವೀಟರಿನ ಉಪಯೋಗವೇನು?

೧. ಒಬಾಮಾ ಮಾದರಿ : ಅಮೆರಿಕ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ಲಕ್ಷಾಂತರ ಯುವಕರ ಸೇನೆ ಕಟ್ಟಲು, ಅವರೊಡನೆ ಸದಾ ಸಂಪರ್ಕದಲ್ಲಿರಲು, ಬರಾಕ್ ಒಬಾಮಾ ಈ ಸೇವೆ ಬಳಸಿಕೊಂಡಾಗಿನಿಂದ ‘ಟ್ವೀಟರ್’ ಅಮೆರಿಕದಲ್ಲಿ ಮಾತ್ರವಲ್ಲ ಜಗತ್ತಿನ ಇತರೆಡೆಯೂ ಪ್ರಸಿದ್ಧವಾಗಿದೆ. ಅಂದರೆ, ಜನನಾಯಕನೊಬ್ಬ ತನ್ನ ಬೆಂಬಲಿಗರನ್ನು ಒಟ್ಟುಗೂಡಿಸಲು ಹಾಗೂ ಅವರೊಡನೆ ಸಂಪರ್ಕದಲ್ಲಿರಲು ಟ್ವೀಟರ್ ಉಪಯೋಗವಾಗುತ್ತಿದೆ. ಒಬಾಮಾ, ಈಗ ಅಧ್ಯಕ್ಷರಾದ ಮೇಲೂ ಟ್ವೀಟರನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಅವರ ಸಂದೇಶ ಪಡೆಯಲು, ಅವರೊಡನೆ ಸಂಪರ್ಕದಲ್ಲಿ ಇರಲು ೭ ಲಕ್ಷ ಜನ ಸದಸ್ಯರಾಗಿದ್ದಾರೆ.
ಮೊನ್ನೆ ಮೊನ್ನೆ, ಕರ್ನಾಟಕದಲ್ಲಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ರಾಜ್ಯ ಬಿಜೆಪಿ ಘಟಕದವರು, ಟ್ವೀಟರ್ ಬಳಕೆ ಆರಂಭಿಸಿದ್ದಾರೆ. ಇದಕ್ಕಿನ್ನೂ ಹೆಚ್ಚು ಸದಸ್ಯರಿಲ್ಲ ಎನ್ನಿ. ಸಿನಿಮಾ ತಾರೆಯರು, ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಟ್ವೀಟರ್‌ಗಿಂತ ಉತ್ತಮ ಮಾರ್ಗ ಬೇರೊಂದಿಲ್ಲ.

೨. ಪತ್ರಿಕೆಗಳ ಮಾದರಿ : ಪತ್ರಿಕೆ, ಟೀವಿ ಚಾನಲ್‌ಗಳು ಹಾಗೂ ಇಂಟರ್‌ನೆಟ್ ಸೈಟುಗಳು ಬ್ರೆಕಿಂಗ್ ಸುದ್ದಿಗಳನ್ನು ಟ್ವೀಟರ್ ಮೂಲಕ ನೀಡಲು ಆರಂಭಿಸಿವೆ. ಓದುಗರು ಈ ಸುದ್ದಿಯನ್ನು ಇಂಟರ್‌ನೆಟ್ ಮೂಲಕ ಅಥವಾ ಮೊಬೈಲ್ ಫೋನ್ ಮೂಲಕ ಉಚಿತವಾಗಿ ಪಡೆಯಬಹುದು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಉಚಿತ ಟ್ವೀಟರ್ ಸೇವೆಗೆ ೪.೫ ಲಕ್ಷ ಚಂದಾದಾರರಿದ್ದಾರೆ. ಅದೇ ರೀತಿ, ಭಾರತದಲ್ಲಿ ಸಿಎನ್‌ಎನ್ ಐಬಿಎನ್, ಡಿಎನ್‌ಎ, ಇಂಡಿಯಾ ಟುಡೇಯಂಥ ಅನೇಕ ಪತ್ರಿಕೆಗಳು ಟ್ವೀಟರ್ ಸೇವೆ ಆರಂಭಿಸಿವೆ. ಅಲ್ಲದೇ, ಅನೇಕ ಪತ್ರಿಕೆಗಳು ಹಾಗೂ ಚಾನೆಲ್‌ಗಳು ಟ್ವೀಟರಿನ ಮೂಲಕ ಸಿಗುವ ಮಾಹಿತಿಯನ್ನು ತಮ್ಮ ವರದಿಗೆ ಪೂರಕವಾಗಿ ಬಳಸಿಕೊಳ್ಳುತ್ತಿವೆ.

೩. ಕಂಪನಿ ಗ್ರಾಹಕ ಸಂಪರ್ಕ ಮಾದರಿ : ಒಂದು ಕಂಪನಿ, ತನ್ನ ಗ್ರಾಹಕರೊಡನೆ ಸಂಪರ್ಕದಲ್ಲಿರಲು ಟ್ವೀಟರನ್ನು ಬಳಸಿಕೊಳ್ಳುತ್ತಿದೆ. ಉದಾಹರಣೆಗೆ ಗ್ರಾಹಕರು ಟ್ವೀಟರ್ ಮೂಲಕ ನೋಕಿಯಾ ಕಂಪನಿಯನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಅಥವಾ ಮಾಹಿತಿ ತರಿಸಿಕೊಳ್ಳಬಹುದು. ಗೂಗಲ್ ಕಂಪನಿಯ ಟ್ವೀಟರ್ ಸೇವೆಗೆ ೩-೪ ಲಕ್ಷ ಜನ ಸದಸ್ಯರಿದ್ದಾರೆ.

೪. ಸುಮ್ಮನೆ ಹರಟೆ ಮಾದರಿ : ಇದಲ್ಲದೇ, ಶೇ.೭೦ರಷ್ಟು ಜನ, ಟ್ವೀಟರನ್ನು ಚಾಟ್ ರೂಮಿನಂತೆ ಸುಮ್ ಸುಮ್‌ನೇ ಹರಟೆಗೆ ಬಳಸಿಕೊಳ್ಳುತ್ತಾರೆ.

೫. ಮಾಹಿತಿ ಕೇಳುವ ಮಾದರಿ : ಲಂಡನ್‌ನಲ್ಲಿ ಲುಂಗಿ ಉಡುವವರು ಇದ್ದಾರಾ ಎಂಬ ಸಿಲ್ಲಿ ಪ್ರಶ್ನೆಯಿಂದ ಹಿಡಿದು ಅತ್ಯುತ್ತಮ ವಾಷಿಂಗ್ ಮಷಿನ್ ಯಾವುದು ಎಂಬ ಗ್ರಾಹಕ ಪ್ರಶ್ನೆಯ ತನಕ ಯಾವ ಪ್ರಶ್ನೆಯನ್ನು ಬೇಕಾದರೂ ಟ್ವೀಟರ್ ಮೂಲಕ ಕೇಳಬಹುದು. ನಿಮ್ಮ ಪ್ರಶ್ನೆ ನೋಡುವ ಟ್ವೀಟಿಗರು ಉತ್ತರ ನೀಡುತ್ತಾರೆ.

ನಾವೂ ಟ್ವೀಟರ್ ಬಳಸಬೇಕೆಂದರೆ... ಹೇಗೆ? ಎಲ್ಲಿ?

ಮೊದಲು http://www.twitter.com/ ಸೈಟಿಗೆ ಹೋಗಿ. ಅಲ್ಲಿ ಹೊಸ ಸದಸ್ಯರಾಗಿ. ನಿಮ್ಮದೊಂದು ಟ್ವೀಟರ್ ಪುಟ ತಯಾರಾಗುತ್ತದೆ. ಇಲ್ಲಿ ನೀವು ಟ್ವೀಟರ್ ಸಂದೇಶ ಬರೆದರೆ, ಅವು ಒಂದರ ಕೆಳಗೆ ಒಂದರಂತೆ ದಾಖಲಾಗುತ್ತಾ ಹೋಗುತ್ತವೆ. ಹಾಗೂ ನಿಮ್ಮ ಮಿತ್ರರ ಸಂದೇಶಗಳೂ ಇಲ್ಲಿ ಕಾಣಿಸುತ್ತವೆ. ನೀವಿಲ್ಲಿ, ಹೊಸ ಹೊಸ ಮಿತ್ರರನ್ನು ಹುಡುಕಿಕೊಳ್ಳಬಹುದು. ಅವರ ಸಂದೇಶಗಳನ್ನು ನೀವು ಪಡೆಯಬಹುದು ಅಥವಾ ಇತರರು ನಿಮ್ಮ ಸಂದೇಶಗಳಿಗೆ ಚಂದಾದಾರರಾಗಬಹುದು.



ಇದು ಪುಗಸಟ್ಟೆ ಸೇವೆ. ನಿಮಗೆ ಈ ಮೇಲ್ ವಿಳಾಸ ಇದ್ದರೆ ಸಾಕು. ಫಾರಂ ತುಂಬಿದ ೨ ನಿಮಿಷದ ಒಳಗಾಗಿ ನೀವು ಟ್ವೀಟರ್ ಬಳಸಲು ಆರಂಭಿಸಬಹುದು. ನಿಮ್ಮ ಮೊಬೈಲ್ ಫೋನಿನ ಮೂಲಕವೂ ನೀವು ಟ್ವೀಟರ್ ಬಳಸಬಹುದು. ಮೊಬೈಲ್ ಬಳಸಿದರೆ, ಮೊಬೈಲ್ ಸೇವಾ ಕಂಪನಿಯ ಶುಲ್ಕವನ್ನು ಮಾತ್ರ ನೀವು ತೆರಬೇಕಾಗುತ್ತದೆ.

ಆದರೆ, ನೆನಪಿರಲಿ. ಟ್ವೀಟರ್ ಸಂದೇಶ ಚಿಕ್ಕದಾಗಿರಬೇಕು. ಈ ಸಂದೇಶದಲ್ಲಿ ೧೪೦ ಅಕ್ಷರಗಳು ಮಾತ್ರ ಇರಬಹುದು. ಆದ್ದರಿಂದ ಗಾತ್ರದಲ್ಲಿ ಚಿಕ್ಕದಾದ ಟ್ವೀಟರ್ ಸಂದೇಶವನ್ನು ಇಂಟರ್‌ನೆಟ್ಟಿನ ಎಸ್‌ಎಂಎಸ್ ರೂಪ ಅಂತ ಬೇಕಾದರೂ ಬಣ್ಣಿಸಬಹುದು.
ಟ್ವೀಟರಿನ ಒಂದು ಸಂದೇಶಕ್ಕೆ ‘ಟ್ವೀಟ್’ ಎಂದು ಹೆಸರು. ಟ್ವೀಟರ್ ಸಂದೇಶ ಕಳಿಸುವ ಕ್ರಿಯೆಗೆ ‘ಟ್ವೀಟಿಂಗ್’, ‘ಟ್ವೀಟ್ ಮಾಡುವುದು’ ಎಂದು ಹೇಳುತ್ತಾರೆ.

ಇದೆಲ್ಲಾ ಕೇಳಿದ ಮೇಲೆ, ಟ್ವೀಟರಿನಲ್ಲಿ ಅದ್ಭುತವೇನೂ ಇಲ್ಲ. ಈಮೇಲ್, ಬ್ಲಾಗಿಂಗ್ ಥರ ಇದಿನ್ನೊಂದು ಇಂಟರ್‌ನೆಟ್ ಸೇವೆ ಅಷ್ಟೇ, ಅನ್ನಿಸುತ್ತದೆ. ಆದರೆ, ಯಾಕೆ ಜಗತ್ತಿಗೆ ಟ್ವೀಟರಿನ ಹುಚ್ಚು ಹಿಡಿದಿದೆ?

ಅದೇ ಯಾರಿಗೂ ಅರ್ಥವಾಗುತ್ತಿಲ್ಲ. ಟ್ವೀಟರ್ ಕಂಪನಿಯ ಸ್ಥಾಪಕರಿಗೂ ತಮ್ಮ ಕಂಪನಿ ಇಷ್ಟು ಪ್ರಮಾಣದಲ್ಲಿ ಬೆಳೆಯುತ್ತದೆ ಎಂದು ಗೊತ್ತಿರಲಿಲ್ಲ. ಕೇವಲ ೨ ವರ್ಷದಲ್ಲಿ ಟ್ವೀಟರಿಗೆ ೭೦-೮೦ ಲಕ್ಷ ಸದಸ್ಯರಾಗಿಬಿಟ್ಟಿದ್ದಾರೆ. ಎರಡು ವರ್ಷದಲ್ಲಿ ಕಂಪನಿ ಶೇ.೧೪೦೦ರಷ್ಟು ಬೆಳವಣಿಗೆ ಸಾಧಿಸಿದೆ. ಇಷ್ಟು ಕಡಿಮೆ ಅವಧಿಯಲ್ಲಿ, ಇಷ್ಟು ವೇಗದಲ್ಲಿ ಜನಪ್ರಿಯವಾದ ಇಂಟರ್‌ನೆಟ್ ಸೇವೆ ಬೇರೊಂದಿಲ್ಲ.
ಟ್ವೀಟರ್ ಯಶಸ್ಸಿನ ನಂತರ ಅಂತಹ ಇನ್ನೂ ಅನೇಕ ಮೈಕ್ರೋ ಬ್ಲಾಗಿಂಗ್ ಸೇವೆ ಆರಂಭವಾದವು. ಆದರೆ, ಯಾವುದೂ ಟ್ವೀಟರಂತೆ ಜನಪ್ರಿಯವಾಗಿಲ್ಲ. (ಚೀನಾದಲ್ಲಿ ಮಾತ್ರ ಅಸಲಿ ಟ್ವೀಟರ್‌ಗಿಂತ ಮೇಡ್-ಇನ್-ಚೈನಾ ಟ್ವೀಟರ್ರ್‍ಏ ಜನಪ್ರಿಯ. ಇದು ಅವರ ದೇಶಪ್ರೇಮಕ್ಕೆ ಸಾಕ್ಷಿ.)

ವಿಚಿತ್ರವೆಂದರೆ, ಟ್ವೀಟರಿಗೆ ಸದ್ಯ ಒಂದು ನಯಾಪೈಸೆ ಆದಾಯವೂ ಇಲ್ಲ. ಪ್ರತಿ ವರ್ಷ ಕೋಟ್ಯಂತರ ಡಾಲರ್ ಖರ್ಚಾಗುತ್ತಿದೆ. ಟ್ವೀಟರ್ ಇನ್ನು ಮುಂದಾದರೂ ಹೇಗೆ ಲಾಭ ಮಾಡುತ್ತದೆ ಎಂದು ಯಾರಿಗೂ ಅರ್ಥವಾಗುತ್ತಿಲ್ಲ.

ಈ ನಡುವೆ, ಜನಪ್ರಿಯತೆ ನೋಡಿ, ೫೦ ಕೋಟಿ ಡಾಲರಿಗೆ ಟ್ವೀಟರನ್ನು ಕೊಳ್ಳಲು ಫೇಸ್‌ಬುಕ್ ಕಂಪನಿ ಮುಂದಾಯಿತು. ಆದರೆ, ಟ್ವೀಟರ್ ಒಪ್ಪಲಿಲ್ಲ. ಬ್ಲಾಗರ್, ಗೂಗಲ್ ಅರ್ಥ್ (ಕೀಹೋಲ್), ಪಿಕಾಸಾ ಮುಂತಾದ ಕಂಪನಿಗಳನ್ನು ಈಗಾಗಲೇ ಗುಳುಂ ಮಾಡಿರುವ ದೈತ್ಯ ಕಂಪನಿ ಗೂಗಲ್, ಈಗ ಟ್ವೀಟರನ್ನು ಕೊಳ್ಳಲು ಆಸೆಪಟ್ಟಿದೆಯೆಂಬ ಸುದ್ದಿಯಿದೆ. ಆದರೆ, ಕಂಪನಿಯನ್ನು ಮಾರಲು ಟ್ವೀಟರ್ ಇನ್ನೂ ಮನಸ್ಸು ಮಾಡಿಲ್ಲ. ಆ ಬ್ರೇಕಿಂಗ್ ನ್ಯೂಸ್ ಬೇಕೆಂದರೆ ಟ್ವೀಟರಿಗೆ ಸದಸ್ಯರಾಗಿ.
ಹ್ಯಾಪಿ ಟ್ವೀಟಿಂಗ್.

Follow Me on www.Twitter.com/RaviHegde

Wednesday, April 08, 2009

ಗೂಗಲ್ ಮತ್ತು ಪತ್ರಿಕೆಗಳ ನಡುವೆ ಯುದ್ಧಾರಂಭ

ಹೀಗಾಗುತ್ತೆ ಅಂತ ನನಗೆ ಅನಿಸಿತ್ತು. ಒಂದಲ್ಲಾ ಒಂದು ದಿನ ಪತ್ರಿಕೆಗಳು ಹಾಗೂ ಗೂಗಲ್ ನಡುವೆ ಯುದ್ಧವಾಗುತ್ತದೆ ಅಂತ ನನಗೆ ಯಾಕೋ ತೀವ್ರ ಅನುಮಾನ ಶುರುವಾಗಿತ್ತು. ಅದೀಗ ನಿಜವಾಗಿದೆ. ಗೂಗಲ್ ಹಾಗೂ ಅಮೆರಿಕದ ಪತ್ರಿಕೆಗಳ ನಡುವೆ ಕಳೆದ 3-4 ವರ್ಷಗಳಿಂದ ಶೀತಲ ಸಮರ ನಡೆಯುತ್ತಿತ್ತು. ಆದರೆ, ಗೂಗಲ್, ಅಮೆರಿಕದಲ್ಲಿ, ಕಳೆದ ವಾರದಿಂದ ತನ್ನ ನ್ಯೂಸ್ ಸೈಟಿನಲ್ಲಿ ಜಾಹೀರಾತು ಪ್ರಕಟಿಸಲು ಶುರು ಮಾಡಿದ್ದೇ ತಡ, ಬಹಿರಂಗ ಸಮರ ಆರಂಭವಾಗಿದೆ.

1. ವಿಶ್ವದ ಮಾಧ್ಯಮ ಸಾಮ್ರಾಟ ರೂಪರ್ಟ್ ಮರ್ಡೋಕ್, ಕಳೆದ ವಾರ, ಗೂಗಲ್ ವಿರುದ್ಧ ಕೆಂಡ ಕಾರಿದ್ದ. "ಅಂತರ್ಜಾಲದ ಸುದ್ದಿ ಓದುಗರು ಇನ್ನು ದುಡ್ಡು ಕೊಡಬೇಕು. ಗೂಗಲ್ಲಿನಂಥ ಪರಾವಲಂಬಿಗಳು ಪುಗಸಟ್ಟೆ ನಮ್ಮ ಶ್ರಮವನ್ನು ಬಳಸಿಕೊಂಡು ತಾವು ಲಾಭ ಮಾಡಿಕೊಳ್ಳಲು ಅನುವು ಮಾಡಿಕೊಡಬಾರದು. ಅಮೆರಿಕದ ಪತ್ರಿಕೆಗಳೆಲ್ಲ ಧೈರ್ಯ ಮಾಡಬೇಕು. ಮಾಧ್ಯಮಗಳ ಸುದ್ದಿ ಕದಿಯದಂತೆ ಗೂಗಲ್ಲಿಗೆ ಕಡಿವಾಣ ಹಾಕಬೇಕು." ಎಂದು ಆತ ಕಟುವಾಗೇ ಅಬ್ಬರಿಸಿದ್ದ.

"ಗೂಗಲ್ ನ್ಯೂಸ್ ಜೀವಿಸಿರುವುದೇ ನಮ್ಮಂಥ ಪತ್ರಿಕೆಗಳಿಂದ. ಆದರೆ, ಇಂದು ಗೂಗಲ್ ಎಷ್ಟು ದೊಡ್ಡ ರಾಕ್ಷಸ ಆಗಿದೆ ಎಂದರೆ, ಪತ್ರಿಕೆಗಳನ್ನೇ ನುಂಗಿಹಾಕುತ್ತಿದೆ. ಈಗಾಗಲೂ, ಪತ್ರಿಕೆಗಳು ಒಗ್ಗಟ್ಟಾಗಿ ಗೂಗಲ್ಲನ್ನು ಎದುರಿಸಬೇಕು." ಎಂದು ಆತ ಕರೆ ಕೊಟ್ಟಿದ್ದ.

"ಗೂಗಲ್ ನ್ಯೂಸ್ ತನ್ನ ಸರ್ಚ್ ಲಿಂಕ್ ಮೂಲಕ ನಮ್ಮ ಅಂತರ್ಜಾಲ ಸುದ್ದಿ ತಾಣಕ್ಕೆ ಓದುಗರನ್ನು ಕಳಿಸುತ್ತದೆ ನಿಜ. ಆದರೆ, ಆ ಓದುಗರು ನಮ್ಮ ತಾಣಕ್ಕೆ ಹೊರೆಯಾಗುತ್ತರೆಯೇ ಹೊರತು ಅವರಿಂದ ನಯಾ ಪೈಸೆ ಲಾಭವಿಲ್ಲ."

If a user can’t find the content that’s most relevant to them from a search engine, that search engine is useless. Relevance is everything – and that works both ways. Taking their content out of Google would hurt a newspaper (unless they’re making nothing from the page view), but it would hurt Google too.

"ನೆನಪಿರಲಿ, ನಮಗೆ ಗೂಗಲ್ ಎಷ್ಟು ಅನಿವಾರ್ಯ ಎಂದು ಅನಿಸುತ್ತಿದೆಯೋ ಗೂಗಲ್ಲಿಗೂ ನಾವು ಅಷ್ಟೇ ಅನಿವಾರ್ಯ. ನಮ್ಮಂಥವರ ವಿಶ್ವಾಸಾರ್ಹ ಕಾಂಟೆಂಟ್ ಇಲ್ಲದಿದ್ದರೆ ಗೂಗಲ್ ನ್ಯೂಸ್ ಸೈಟಿಗೂ ಜನಹೋಗುವುದಿಲ್ಲ. ಚಿಲ್ಲರೆ ಸೈಟುಗಳ ಸುದ್ದಿಯಿಂದ ಗೂಗಲ್ ನ್ಯೂಸ್ ನಡೆಯುವುದಿಲ್ಲ. ಆದ್ದರಿಂದ, ಅಮೆರಿಕದ ಪತ್ರಿಕೆಗಳು ಗೂಗಲ್ಲನ್ನು ಎದುರಿಸಲು ಇದು ಸಕಾಲ" ಎಂದು ಮರ್ಡೋಕ್ ಯುದ್ಧದ ಪಾಂಚಜನ್ಯ ಮೊಳಗಿಸಿದ್ದಾನೆ.

2. ಮಂಗಳವಾರ ಗೂಗಲ್ ಮೇಲೆ ಇನ್ನೊಂದು ನೇರ ಆಕ್ರಮಣ. ಈಗ ಅಮೆರಿಕದ ಅತಿ ದೊಡ್ಡ ಸುದ್ದಿ ಸಂಸ್ಥೆ AP - ಅಸೋಸಿಯೇಟೆಡ್ ಪ್ರೆಸ್ಸಿಂದ.

ಈ ಸಂಸ್ಥೆ ಪತ್ರಿಕಾ ಹೇಳಿಕೆ ನೀಡಿ ತನ್ನ ಇಂಟರ್ನೆಟ್ ಕಾಂಟೆಂಟಿನ ಹಕ್ಕು ಸ್ವಾಮ್ಯ ರಕ್ಷಣೆಗೆ ಏನು ಬೇಕೋ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುವುದಾಗಿ ತಿಳಿಸಿದೆ. ಹೇಳಿಕೆಯಲ್ಲಿ ಗೂಗಲ್ಲನ್ನು ನೇರವಾಗಿ ಹೆಸರಿಸಿಲ್ಲ. ಆದರೆ, ಅಂಥ ನ್ಯೂಸ್ ಅಗ್ರಿಗೇಟರುಗಳು, ಪುಗಸಟ್ಟೆಯಾಗಿ ತಮ್ಮ ಸುದ್ದಿಯನ್ನು ಬಳಸಿಕೊಳ್ಳುವುದನ್ನು ತಡೆಯುವುದಾಗಿ ಹೇಳಿದೆ. ತನ್ನ ಪ್ರಯತ್ನದಲ್ಲಿ ಪಾಲ್ಗೊಳ್ಳಲು ಇತರ ಪತ್ರಿಕೆಗಳೂ ಮುಂದಾಗಬೇಕು ಎಂದು ಎಪಿ ಕರೆ ನೀಡಿದೆ.

The board also unanimously agreed to work with portals and other partners who legally license our content and who reward the cooperative for its vast newsgathering efforts — and to seek legal and legislative remedies against those who don't. We believe all of your newspapers will join our battle to protect our content and receive appropriate compensation for it.

(ಪತ್ರಿಕಾ ಪ್ರಕಟಣೆ ಇಲ್ಲಿದೆ.)

3. ಇತ್ತ, ಗೂಗಲ್ ಸುಮ್ಮನೆ ಕುಳಿತಿಲ್ಲ. ಎಪಿ ಹೇಳಿಕೆಗೆ ತೀಕ್ಷ್ಣವಾಗಿ ಮರು ಹೇಳಿಕೆ ನೀಡಿದೆ. "ನಾವು ಕಾಪಿರೈಟ್ ಉಲ್ಲಂಘಿಸುತ್ತಿಲ್ಲ. ಅಮೆರಿಕದ ಕಾಪಿರೈಟ್ ಕಾನೂನಿನ ಪ್ರಕಾರ, ಯಾವುದೇ ಸುದ್ದಿಯ ತುಣುಕನ್ನು ಹಾಗೂ ಲಿಂಕನ್ನು ಪ್ರಕಟಿಸಲು ಗೂಗಲ್ಲಿಗೆ ಅವಕಾಶವಿದೆ. ಇದನ್ನು ತಡೆಯುವ ವಿಟೋ ಹಕ್ಕು ಮಾಧ್ಯಮಗಳಿಗೆ ಇಲ್ಲ. ಆದರೂ, ಅಮೆರಿಕದ ಯಾವುದೇ ಪತ್ರಿಕೆಯೂ ತನ್ನ ಕಾಂಟೆಂಟನ್ನು ಗೂಗಲ್ಲಿನಿಂದ ತೆಗೆದುಹಾಕಬಹುದಾದ ಅವಕಾಶವನ್ನು ನಾವು ಕಲ್ಪಿಸಿದ್ದೇವೆ. ಸುಮ್ಮನೇ, robot.txt ಬಳಸಿದರೆ ಸಾಕು. ನಾವು ಅಂತಹ ಪತ್ರಿಕೆಯ ತಂಟೆಗೆ ಹೋಗುವುದಿಲ್ಲ." ಎಂದು ಗೂಗಲ್ ತನ್ನ ಎದುರಾಳಿಗಳನ್ನು ಚಿವುಟಿದೆ. (ಯೂ ಕ್ಯಾನ್ ಗೆಟ್ ಔಟ್. ವಿ ಡೋಂಟ್ ಕೇರ್ ಎಂಬ ವಾಕ್ಯ ಮಾತ್ರ ಇಲ್ಲ.)

"ಈಗ ನೀವೇನೂ ಮಾಡಲಾಗುವುದಿಲ್ಲ. ಏಕೆಂದರೆ ಟಿಕೆಟ್ಸ್ ಆರ್ ಸೋಲ್ಡ್ ಔಟ್ !" - ಎಂಬ ಪರೋಕ್ಷ ಉದಾಹರಣೆಯ ಮೂಲಕ "ದೊಡ್ಡ ಪತ್ರಿಕೆಗಳು ಹಾಗೂ ದೊಡ್ಡ ಸುದ್ದಿಸಂಸ್ಥೆಗಳು ಇಲ್ಲದಿದ್ದರೆ ನಾವು ಸ್ಥಳೀಯ ಪತ್ರಿಕೆಗಳು ಹಾಗೂ ಸ್ಥಳೀಯ ಸುದ್ದಿ ಮೂಲಗಳನ್ನು ಬಳಸಿಕೊಳ್ಳುತ್ತೇವೆ ಎಂಬ ಇಂಗಿತವನ್ನು ಗೂಗಲ್ ವ್ಯಕ್ತಪಡಿಸಿದೆ. (ಯಥಾ ಪ್ರತಿ ಇಲ್ಲಿ ನೋಡಿ)

4. ಅಮೆರಿಕದ ಎಲ್ಲ ಪತ್ರಿಕೆಗಳು ಹಾಗೂ ಸುದ್ದಿ ಸಂಸ್ಥೆಗಳು ಒಂದಾದರೆ ಗೂಗಲ್ ನ್ಯೂಸನ್ನು ಮಣಿಸುವುದು ಹಾಗೂ ಮುದ್ರಣ ಮಾಧ್ಯವನ್ನು ಸಾಯದಂತೆ ತಡೆಯುವುದು ಕಷ್ಟವೇನಲ್ಲ. ಆದರೆ, ಅಂತಹ ಒಗ್ಗಟ್ಟು ಅಮೆರಿಕದಂಥ ದೇಶದಲ್ಲಿ ಬರುವುದು ಕಷ್ಟ. ಏಕೆಂದರೆ, ಅದೊಂದು ಕ್ಯಾಪಿಟಲಿಸ್ಟಿಕ್ ಇಕಾನಮಿಯ ದೇಶ. ಆ ಆರ್ಥಿಕ ಪದ್ಧತಿಯಲ್ಲಿ ಒಂದು ಮೀನನ್ನು ಇನ್ನೊಂದು ಮೀನು ತಿಂದು ಬದುಕುತ್ತಿರುತ್ತದೆ. ಹಾಗಾಗಿ, 10 ಪತ್ರಿಕೆಗಳು ಗೂಗಲ್ಲಿನಿಂದ ಹೊರ ಹೋದರೆ, ಆ ಸ್ಥಾನವನ್ನು ಇನ್ನು 10 ಪತ್ರಿಕೆಗಳು ಆಕ್ರಮಿಸಿಕೊಳ್ಳಲು ಗೂಗಲ್ ಜೊತೆ ಕೈಜೋಡಿಸುತ್ತವೆ. ರೂಪರ್ಟ್ ಮರ್ಡೋಕ್ ಹಾಗೂ ಎಪಿಗೆ ಗೂಗಲ್ ಹೇಳಿದ್ದು ಇದನ್ನೇ - ನೀವು ಬೇಕಾದರೆ ಗೂಗಲ್ ಬಿಟ್ಟು ತೊಲಗಿ. ನಮಗೆ ಇನ್ನೂ ಬೇಕಾದಷ್ಟು ಪತ್ರಿಕೆ ಹಾಗೂ ಸುದ್ದಿ ಮೂಲಗಳು ಇವೆ - ಅಂತ.

ಈ ಸಮರ ಎಲ್ಲಿಗೆ ಹೋಗಿ ಮಟ್ಟುತ್ತದೆ?

ಪ್ರಕರಣ ಅಮೆರಿಕದ ಸುಪ್ರೀಂ ಕೋರ್ಟಿಗೆ ಹೋಗುತ್ತದೆ. ನ್ಯೂಯಾರ್ಕ್ ಟೈಮ್ಸಿನಂಥ ಪತ್ರಿಕೆಗೆ ಅಲ್ಲಿ ಸೋಲಾಗುತ್ತದೆ. ಆ ಪತ್ರಿಕೆ ಇಂಟರ್ನೆಟ್ ಆವೃತ್ತಿಯನ್ನೇ ಸ್ಥಗಿತಗೊಳಿಸುತ್ತದೆ. ಗೂಗಲ್ ಇನ್ನೂ ಬಲಗೊಂಡು EPICಎಂಬ ಸೇವೆ ಆರಂಭಿಸುತ್ತದೆ.... ಇದನ್ನೆಲ್ಲಾ ಭವಿಷ್ಯ ಹೇಳಿರುವ ಹಳೆಯ ಇಂಟರ್ನೆಟ್ ವಿಡಿಯೋ ಒಂದು ನೆನಪಾಗುತ್ತಿದೆ. Future of Media - Googlezon / EPIC 2015 ಎಂಬ 10 ನಿಮಿಷದ ವಿಡಿಯೋ ಅದು. ಮುಂದೇನಾಗಬಹುದು ಎಂಬುದನ್ನು ಕಲ್ಪನೆ ಮಾಡಿಕೊಂಡು 2004ರಲ್ಲೇ ಸಿದ್ಧಗೊಳಿಸಿದ (EPIC 2014) ಅದ್ಭುತ ವಿಡಿಯೋ. 2007ರಲ್ಲಿ ಅಪ್ಡೇಟ್ ಆಗಿದೆ. ಅಕ್ಷರಃ ಭವಿಷ್ಯ ನಿಜ ಆಗುತ್ತೆ ಅಂತಲ್ಲ. ಆದರೆ, ಸದ್ಯ ಅಮೆರಿಕದ ಪತ್ರಿಕೋದ್ಯಮ ಘಟನೆಗಳು ಅದರ ದಿಕ್ಕಿನಲ್ಲೇ ಸಾಗುತ್ತಿದೆ ಅನ್ನುವುದಂತೂ ನಿಜ. ಪತ್ರಿಕೋದ್ಯಮದಲ್ಲಿ ಇರುವ ನಾವು ನೋಡಲೇಬೇಕಾದ ವಿಡಿಯೋ ಇದು. (ನಿಮಗೆ ಯೂಟ್ಯೂಬ್ ನಿಷೇಧವಿದ್ದರೆ ಈ ಲಿಂಕ್ ನೋಡಿ)