Tuesday, December 27, 2005

ಹಿಸ್‌ ನೇಮ್‌ ಈಸ್‌ ಸ್ಟಿಂಗ್‌... ಧರಂ ‘ಸ್ಟಿಂಗ್‌’

‘ಆಪರೇಷನ್‌ ಸುನಾಮಿ’ ಕುರಿತು ಸಂತಾ ಸ್ಟಿಂಗ್‌ಗೆ ಬಂತಾ ಸ್ಟಿಂಗ್‌ ಇಂಟರೆ‘ಸ್ಟಿಂಗ್‌’ ಪತ್ರ


ಸುನಾಮಿಯ೦ತೆ ೨೦ ಸ೦ಸದರ ಮೇಲೆ ಟೀವಿ ಚಾನಲ್ ಗಳ ‘ಸ್ಟಿ೦ಗ್ ಆಪರೇಷನ್’ ಎರಗಿದ್ದೇ ತಡ ‘ಸ್ಟಿ೦ಗ್’ ಅನ್ನೋದು ‘ಬ್ಲಾ-ಸ್ಟಿ೦ಗ್’ ಆಗಿದೆ! ದುರ್ಯೋಧನ, ಚಕ್ರವ್ಯೂಹದ೦ಥ ಸ್ಟಿ೦ಗ್ ಆಪರೇಷನ್ ನೋಡಿದ ಮೇಲೆ ನಮ್ಮ ಸ೦ಸದರ ಬಗ್ಗೆ ನನಗೆ ಗೌರವ ಹೆಚ್ಚಾಗಿದೆ! ಅವರ ಬಗ್ಗೆ ಇಷ್ಟು ದಿನ ತಪ್ಪು ತಿಳಿದುಕೊ೦ಡಿದ್ದೆ ಎ೦ದು ವಿಷಾದವಾಗಿದೆ.

ಓಯೆ... ಸಂತಾ ಸ್ಟಿಂಗ್‌
ನಿನ್ನ ಹೆಸರನ್ನ ಸಿಂಗ್‌ ಬದಲು ಸ್ಟಿಂಗ್‌ ಅಂತ ನಾನ್ಯಾಕೆ ಬದಲಾಯಿಸಿದೆ ಗೊತ್ತಾ? ಈ ಹೆಸರು ಒಂಥರಾ ಇಂಟರೆ-ಸ್ಟಿಂಗ್‌ ಆಗಿದೆ ಅಲ್ವಾ... ಅದಕ್ಕೆ.


ಕಳೆದ ವರ್ಷ ಡಿಸೆಂಬರ್‌ ೨೬ಕ್ಕಿಂತ ಮೊದಲು ಭಾರತ ದೇಶದ ೧೦೦ ಕೋಟಿ ಜನಸಂಖ್ಯೆಯಲ್ಲಿ ೯೯.೯೯ ಕೋಟಿ ಜನರಿಗೆ ಸುನಾಮಿ ಅನ್ನೋ ಶಬ್ದವೇ ಗೊತ್ತಿರಲಿಲ್ಲ... ಗೊತ್ತಾ? ಭಾರತೀಯರು ಸುನಾಮಿಯನ್ನು ಕಂಡಿರಲಿಲ್ಲ. ಕೇಳಿರಲಿಲ್ಲ. ಓದಿರಲಿಲ್ಲ. ಆದರೆ, ಕೇವಲ ಒಂದೇ ವರ್ಷದಲ್ಲಿ ಎಂಥಾ ಬದಲಾವಣೆ ನೋಡು! ಇವತ್ತು ಮತ್ತೆ ಡಿಸೆಂಬರ್‌ ೨೬. ಯಾರನ್ನು ಬೇಕಾದರೂ ಕೇಳು... ಸುನಾಮಿ ಅಂದರೆ ಏನು ಅಂತ ಚಿಕ್ಕ ಭಾಷಣ ಕೊಡುತ್ತಾರೆ. ಜೋರಾಗಿ ಮಳೆ ಬಂದರೆ ‘ಗಗನ ಸುನಾಮಿ’ ಅಂತ ವರ್ಣಿಸುತ್ತಾರೆ. ವಿಪರೀತ ಪ್ರಶ್ನೆ ಕೇಳಿದರೆ ‘ಪ್ರಶ್ನೆ ಸುನಾಮಿ’ ಅಂತ ಛೇಡಿಸುತ್ತಾರೆ. ಪದೇ ಪದೇ ಮನೆಗೆ ಬಂದು ಕಾಟ ಕೊಡುವ ಅತಿಥಿಯನ್ನು ‘ಗೆಸ್ಟ್‌ ಸುನಾಮಿ’ ಅಂತ ಮೂದಲಿಸುತ್ತಾರೆ. ದೇವೇಗೌಡರು ಪದೇ ಪದೇ ಬರೆಯುವ ಪತ್ರಗಳಿಗೆ ‘ಪತ್ರ ಸುನಾಮಿ’ ಅಂತಾರೆ. ಯಡಿಯೂರಪ್ಪ ವಾಗ್ದಾಳಿಗೆ ‘ವಾಗ್ಸುನಾಮಿ’ ಅಂತಾರೆ. ಪದೇ ಪದೇ ಹೃದಯಕ್ಕಪ್ಪಳಿಸುವ ಹುಡುಗಿಗೆ ‘ಪ್ರೀತಿಯ ಸುನಾಮಿ’ ಅಂತಾರೆ. ರಭಸವಾಗಿ ನುಗ್ಗುವ ಧಡಿಯನಿಗೆ ‘ಮಾನವ ಸುನಾಮಿ’ ಅಂತಾರೆ... ಒಂದರ ಹಿಂದೆ ಒಂದರಂತೆ ವಕ್ಕರಿಸುವ ರಕ್ಕಸ ಅಲೆಗಳ ಈ ‘ಸುನಾಮಿ’ ಈಗ ಜನರ ಬಾಯಲ್ಲಿ ಹೇಗೆ ವಿಧ ವಿಧ ರೂಪ ಹಾಗೂ ಅರ್ಥ ಪಡೆದುಕೊಂಡಿದೆ ನೋಡು! ಜನಸಾಮಾನ್ಯರ ಡಿಕ್ಷನರಿಯಲ್ಲಿ ಸುನಾಮಿ ಅನ್ನೋ ಶಬ್ದ ಅಯಾಚಿತವಾಗಿ ಹೇಗೆ ಸೇರಿಕೊಂಡಿತು ನೋಡು!


ಅದೇ ರೀತಿ... ಕಳೆದ ಒಂದು ವರ್ಷದಲ್ಲಿ ಜನಸಾಮಾನ್ಯರ ಡಿಕ್ಷನರಿ ಸೇರಿಕೊಂಡ ಇನ್ನೊಂದು ಪ್ರಮುಖ ಶಬ್ದಾರ್ಥ- ‘ಸ್ಟಿಂಗ್‌ ಆಪರೇಷನ್‌’!


೪ ವರ್ಷಗಳ ಹಿಂದೆ ತೆಹಲ್ಕಾ ಡಾಟ್‌ ಕಾಮ್‌ ಸ್ಟಿಂಗ್‌ ಆಪರೇಷನ್‌ ನಡೆಸಿದರೂ ಜನರ ನಿಘಂಟು ಸೇರದ ಈ ‘ಸ್ಟಿಂಗ್‌’ ಕಳೆದ ಏಳೆಂಟು ತಿಂಗಳಲ್ಲಿ ಜನಮನದಲ್ಲಿ ಎಕ್ಸಿ-ಸ್ಟಿಂಗ್‌. ಬಾಲಿಮಡ್‌ ನಟ ಶಕ್ತಿ ಕಪೂರ್‌ ವಿರುದ್ಧ ‘ಇಂಡಿಯಾ ಟೀವಿ ಚಾನೆಲ್‌’ ಗುಪ್ತ ಕಾರ್ಯಾಚರಣೆ ನಡೆಸಿದ ನಂತರ ಈ ‘ಸ್ಟಿಂಗ್‌ ಪತ್ರಿಕೋದ್ಯಮ’ ನಮ್ಮ ದೇಶದಲ್ಲಿ ಹೆಚ್ಚು ಹೆಚ್ಚು ಪರ್ಸಿ-ಸ್ಟಿಂಗ್‌. ಆದರೆ, ಈ ತಿಂಗಳು, ಸುನಾಮಿಯಂತೆ ೨೦ ಸಂಸದರ ಮೇಲೆ ಟೀವಿ ಚಾನಲ್‌ಗಳ ‘ಸ್ಟಿಂಗ್‌ ಆಪರೇಷನ್‌’ ಎರಗಿದ್ದೇ ತಡ... ‘ಸ್ಟಿಂಗ್‌’ ಅನ್ನೋದು ‘ಬ್ಲಾ-ಸ್ಟಿಂಗ್‌’ ಆಗಿದೆ! ಈ ವರ್ಷ ಹಲವಾರು ಹೊಸ ಸುದ್ದಿ ಚಾನೆಲ್‌ಗಳು ಆರಂಭವಾಗಿವೆ. ಈ ಸ್ಪರ್ಧೆಯಲ್ಲಿ ಜನರ ಮನ ಗೆಲ್ಲಲು ಆ ಚಾನಲ್‌ಗಳೆಲ್ಲ ಅನುಸರಿಸುತ್ತಿರುವ ಪ್ರಮುಖ ವಿಧಾನ ಸ್ಟಿಂಗ್‌ ಆಪರೇಷನ್‌.


ಹೀಗಾಗಿ... ಸ್ಟಿಂಗ್‌ ಎನ್ನುವ ಲೇಟೆಸ್ಟ್‌ ಫ್ಯಾಷನ್‌ ಟ್ರೆಂಡಿಗೆ ಜನ ಈಗ ತಾನೇ ಅಡ್ಜೆ-ಸ್ಟಿಂಗ್‌. ಸ್ಟಿಂಗ್‌ ಅಂದರೆ ರಾಜಕಾರಣಿಗಳು ಒಮ್ಮೆ ಬೆಚ್ಚಿಬೀಳುತ್ತಾರೆ. ಉಳಿದವರು ಒಮ್ಮೆ ಕಿವಿ ನಿಮಿರಿಸುತ್ತಾರೆ. ಆದರೆ, ಎಲ್ಲರೂ ಒಮ್ಮೆ ಗಮನಹರಿಸುತ್ತಾರೆ. ಅದಕ್ಕೇ ಜನರ ಗಮನ ಸೆಳೆಯಲು ನಾನು ಸಿಂಗ್‌ ಅನ್ನೋ ಹಳೇ ಹೆಸರನ್ನ ಸ್ಟಿಂಗ್‌ ಅಂತ ಮಾಡರ್ನ್‌ ಮಾಡಿದ್ದೇನೆ... ಅರ್ಥವಾಯಿತಾ, ಸಂತಾ ಸ್ಟಿಂಗ್‌?


ಎಕ್ಚುವಲಿ, ಇನ್ನೂ ಅನೇಕರ ಹೆಸರನ್ನು ಬದಲು ಮಾಡೋದಕ್ಕೂ ನಾನೀಗ ಅಸಿ-ಸ್ಟಿಂಗ್‌. ಸದ್ಯಕ್ಕೆ ಕೆಲಮ ಹೆಸರನ್ನು ಟೆ-ಸ್ಟಿಂಗ್‌... ಉದಾಹರಣೆಗೆ ಧರಂ ಸ್ಟಿಂಗ್‌, ಸಂಗ್ರಾಂ ಸ್ಟಿಂಗ್‌, ಅಜಯ್‌ ಕುಮಾರ್‌ ಸ್ಟಿಂಗ್‌, ಮನಮೋಹನ ಸ್ಟಿಂಗ್‌, ನಟ್ವರ್‌ ಸ್ಟಿಂಗ್‌... ಇತ್ಯಾದಿ!


ಬೈ ದ ವೇ, ಇತ್ತೀಚಿನ ಸ್ಟಿಂಗ್‌ ಆಪರೇಷನ್‌ನಲ್ಲಿ ೧೧ ಸಂಸದರು ಉಚ್ಚಾಟನೆಗೊಂಡರಲ್ಲ. ಅವರನ್ನೆಲ್ಲ ನೋಡಿದರೆ, ಪಾಪ ಅನ್ನಿಸುತ್ತದೆ. ಯಾಕೆಂದರೆ, ಅವರು ಪ್ರಶ್ನೆ ಕೇಳೋದಕ್ಕೆ ತಗೊಂಡಿದ್ದ ಹಣವಾದರೂ ಎಷ್ಟು? ಇಪ್ಪತ್ತೋ, ಐವತ್ತೋ ಸಾವಿರ ರುಪಾಯಿ ಮಾತ್ರ. ಇಷ್ಟು ಕಡಿಮೆ ಲಂಚ ಪಡೆದರೆ ಅವರಿಗೆ ಉಚ್ಚಾಟನೆಯಂಥ ಘನ ಘೋರ ಶಿಕ್ಷೆಯೇ? ಮತ್ತೆಂದೂ ಪ್ರಶ್ನೆ ಕೇಳಲು ಲಂಚ ಪಡೆಯಲಾಗದಂಥ ಅವಸ್ಥೆಯೇ! ಅಂತ ಆಡ್ವಾಣಿಯವರು ಕೆಂಡ ಕಾರಿದ್ದಾರೆ.


ನನಗೂ ಆಡ್ವಾಣಿಯವರು ಹೇಳಿದ್ದು ಸರಿ ಅನ್ನಿಸುತ್ತಿದೆ. ಸಂಸದರು ಇಷ್ಟೇ ಇಷ್ಟು ಲಂಚ ತಿಂದರೆ ದೇಶದ ಮಾನ ಎಷ್ಟು ಮಹಾ ಹೋದೀತು! ಸ್ವಲ್ಪ ಮಾನ ಹೋಗಿರಬಹುದು. ಆದರೆ, ಈ ಸಂಸದರನ್ನು ನೋಡಿ ವ್ಯಥೆಯಾಗುತ್ತಿದೆ. ಎಷ್ಟು ಕಡಿಮೆ ಲಂಚಕ್ಕೂ ಕೈಚಾಚುವ ಪರಿಸ್ಥಿತಿ ಅವರಿಗೆ ಇದೆಯಲ್ಲಾ ಎಂದು ಕನಿಕರ ಉಂಟಾಗುತ್ತಿದೆ. ಎಲ್ಲಾ ಬಿಟ್ಟು ಸದನದಲ್ಲಿ ಪ್ರಶ್ನೆ ಕೇಳುಮದಕ್ಕೂ ಲಂಚ ಪಡೆಯುವಂಥ ಹೀನ ಪರಿಸ್ಥಿತಿ ಅವರಿಗೆ ಬಂದೊದಗಿದೆಯಲ್ಲಾ ಎಂದು ದುಃಖವಾಗುತ್ತಿದೆ. ಈ ಸಂಸದರಿಗೆ ಬೇರೆ ಯಾಮದಾದರೂ ರೀತಿಯಲ್ಲಿ ಕೋಟಿಗಟ್ಟಲೆ ಹಣವನ್ನು ಸುಲಭವಾಗಿ ಸಂಪಾದಿಸುವ ಅವಕಾಶ ಸಿಗಲಿಲ್ಲವಲ್ಲಾ ಅಂತ ಖೇದವಾಗುತ್ತಿದೆ. ಅಂಥ ಅವಕಾಶ ಸಿಕ್ಕಿದ್ದರೆ ಇವರೆಲ್ಲ ಈ ಪುಡಿಗಾಸಿಗೆ ಕೈಚಾಚುತ್ತಿದ್ದರೇ... ನೀನೇ ಹೇಳು!


ಒಂದು ದೃಷ್ಟಿಯಲ್ಲಿ ನೋಡಿದರೆ, ಈ ಸ್ಟಿಂಗ್‌ ಆಪರೇಷನ್‌ನಿಂದ ನಮ್ಮ ಸಂಸದರ ಬಗ್ಗೆ ನನಗೆ ಗೌರವ ಹೆಚ್ಚಾಗಿದೆ! ಏಕೆಂದರೆ, ಈ ಸಂಸದರು ಮತ್ತು ರಾಜಕಾರಣಿಗಳು ಹತ್ತಿಪ್ಪತ್ತು ಸಾವಿರಕ್ಕೆಲ್ಲ ಯಾವ ಕೆಲಸವನ್ನೂ ಮಾಡಿಕೊಡುಮದಿಲ್ಲ ಅಂದುಕೊಂಡಿದ್ದೆ. ಲಕ್ಷಾಂತರ, ಕೋಟ್ಯಂತರ ರುಪಾಯಿ ಲಂಚ ಕೊಟ್ಟರೆ ಮಾತ್ರ ಇವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬ ತಪುý್ಪ ಕಲ್ಪನೆ ನನ್ನಲ್ಲಿತ್ತು. ಆದರೆ, ಇಷ್ಟು ಕಡಿಮೆ ಲಂಚಕ್ಕೂ ಇವರು ಸಂಸತ್ತಿನಲ್ಲಿ ತಮ್ಮ ಗಿರಾಕಿಗಳ ಕೆಲಸ ಮಾಡಿಕೊಟ್ಟರು ಎನ್ನುಮದು ನಮ್ಮ ಸಂಸದರ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ. ಲಂಚದ ಬಾಬತ್ತು ಕಡಿಮೆಯಾಯಿತು ಎಂದು ಸಂಸದರು ಪ್ರಶ್ನೆ ಕೇಳದೇ ಇರಲಿಲ್ಲ. ಗಿರಾಕಿಗಳಿಗೆ ಮೋಸ ಮಾಡಲಿಲ್ಲ ಎನ್ನುಮದು ಶ್ಲಾಘನೀಯವೇ ಸರಿ.


ನಮ್ಮ ಕರ್ನಾಟಕದ ಸಂಸದರೂ ಇದ್ದಾರೆ. ವೆರಿಗುಡ್‌ ಪೀಪಲ್‌... ಬಟ್‌ ಗುಡ್‌ ಫಾರ್‌ ನಥಿಂಗ್‌! ಇವರು ಲಂಚ ಪಡೆದಾದರೂ ರಾಜ್ಯದ ಜನತೆಯ ಕೆಲಸ ಮಾಡಬಹುದಿತ್ತು ಅನಿಸುತ್ತಿದೆ ನನಗೆ!


ಹಾಗೆ ನೋಡಿದರೆ, ನಮ್ಮ ಸಂಸದರಿಗಿಂತ ಸರ್ಕಾರಿ ಅಧಿಕಾರಿಗಳೇ ಬೆಟರ್ರು. ಯಾಕೆಂದರೆ, ಲಂಚ ಪಡೆದಾದರೂ ಜನರ ಕೆಲಸ ಮಾಡಿಕೊಡುತ್ತಾರೆ. ಸಂಸದರಿಗಿಂತ ಈ ಅಧಿಕಾರಿಗಳು ಸ್ವಲ್ಪ ದುಬಾರಿ ಎನ್ನಿ. ಉದಾಹರಣೆಗೆ, ಒಂದು ಸೈಟ್‌ ರಜಿಸ್ಟ್ರೇಶನ್‌ ಮಾಡಲು ಈ ಅಧಿಕಾರಿಗಳು ೨೦ ಸಾವಿರದಿಂದ ೧ ಲಕ್ಷ ರುಪಾಯಿ ಲಂಚ ಪಡೆಯುತ್ತಾರೆ. ಆದರೂ ಪರವಾಗಿಲ್ಲ. ಕೆಲಸ ಮಾಡುತ್ತಾರಲ್ಲ ಅದಕ್ಕಿಂತ ಭಾಗ್ಯ ಈ ದೇಶಕ್ಕೆ ಇನ್ನೇನಿದೆ! ಅಂಥವರ ಮೇಲೆ ಸ್ಟಿಂಗ್‌ ಆಪರೇಷನ್‌ ಮಾಡಿ ಅವರು ಕೆಲಸ ಮಾಡದಂತೆ ನಿರುತ್ಸಾಹಗೊಳಿಸುಮದು ಒಳ್ಳೆಯ ಪತ್ರಿಕೋದ್ಯಮದ ಲಕ್ಷಣವಲ್ಲ.


ಈಗಿನ ಕಾಲಕ್ಕೆ ಬೇಕಾದ ಸ್ಟಿಂಗ್‌ ಆಪರೇಷನ್‌ ದುರ್ಯೋಧನ, ಚಕ್ರವ್ಯೂಹ ಥರದ್ದಲ್ಲ. ಲಂಚ ತಿಂದರೂ ಯಾರೂ ಕೆಲಸ ಮಾಡಿಕೊಡುತ್ತಿಲ್ಲ ಹಾಗೂ ಯಾರೂ ಲಂಚವನ್ನೂ ತಿನ್ನೋಲ್ಲ, ಕೆಲಸವನ್ನೂ ಮಾಡೋಲ್ಲ ಎನ್ನುಮದನ್ನು ಬಹಿರಂಗಗೊಳಿಸುವಂಥ ಸ್ಟಿಂಗ್‌ ಆಪರೇಷನ್‌ ಬೇಕಾಗಿದೆ ಈಗ. ಅದಕ್ಕೆ ನಾನು ಒಂದು ಪ್ಲಾನ್‌ ಹಾಕಿದ್ದೇನೆ.


ಕರ್ನಾಟಕ ಸರ್ಕಾರದಲ್ಲಿ ಬಹಳಷ್ಟು ಮಂತ್ರಿಗಳು, ಶಾಸಕರು, ಅಧಿಕಾರಿಗಳು ಲಂಚ ತಿಂದರೂ ಕೆಲಸ ಮಾಡುತ್ತಿಲ್ಲ ಎನ್ನುವ ಆಪಾದನೆಗಳಿವೆ. ರಸ್ತೆ ನಿರ್ಮಾಣ, ನೆರೆ ಪರಿಹಾರ, ಬೆಳೆ ಪರಿಹಾರ, ಗ್ರಾಮೀಣಾಭಿವೃದ್ಧಿ ಮುಂತಾದ ಹೆಸರಿನಲ್ಲಿ ಸರ್ಕಾರದ ಬೊಕ್ಕಸ ಕರಗುತ್ತ ಇದೆ. ಆದರೆ, ಯಾವ ಅಭಿವೃದ್ಧಿಯೂ ಆಗುತ್ತಿಲ್ಲ. ಇದನ್ನು ಕಂಡುಹಿಡಿಯಲು ನಾನು ಸ್ಟಿಂಗ್‌ ಆಪರೇಷನ್‌ ನಡೆಸಬೇಕೆಂದಿದ್ದೇನೆ. ಇದಕ್ಕೆ ನಾನು ‘ಆಪರೇಷನ್‌ ಸುನಾಮಿ’ ಅಂತ ಹೆಸರಿಟ್ಟಿದ್ದೇನೆ. ಈ ಹೆಸರು ಯಾಕೆ ಅಂತ ಕೇಳಬೇಡ. ಏಕೆಂದರೆ, ಆಪರೇಷನ್‌ ದುರ್ಯೋಧನ ಹೆಸರಿಟ್ಟವರಿಗೂ ಆ ಹೆಸರು ಯಾಕಿಟ್ಟಿದ್ದೇವೆ ಅಂತ ಗೊತ್ತಿಲ್ಲ! ಹಾಗಾಗಿ, ನಮಗೂ ನಾವ್ಯಾಕೆ ಸುನಾಮಿ ಹೆಸರಿಟ್ಟಿದ್ದೇವೆ ಅಂತ ಗೊತ್ತಿರಬೇಕಿಲ್ಲ.


ನಾಮ ಆದಷ್ಟು ಬೇಗ ಈ ಸ್ಟಿಂಗ್‌ ಆಪರೇಷನ್‌ ಮಾಡಬೇಕು. ತಡ ಮಾಡಿದರೆ, ಈ ಧರಂಸ್ಟಿಂಗ್‌ ಸರ್ಕಾರ ಬಿದ್ದುಹೋಗಿರುತ್ತದೆ. ಆಮೇಲೆ, ಸ್ಟಿಂಗ್‌ ಆಪರೇಷನ್‌ ಮಾಡಲು ಮುಂದಿನ ಸರ್ಕಾರ ರಚನೆಯಾಗುವವರೆಗೂ ನಾಮ ಕಾಯಬೇಕಾಗುತ್ತದೆ.
ಆದ್ದರಿಂದ, ಟೈಮ್‌ ವೇಸ್ಟಿಂಗ್‌ ಮಾಡದೇ, ನಮ್ಮ ಸ್ಟಿಂಗ್‌ ಆಪರೇಷನ್ನಿಗೆ ಸಿದ್ಧನಾಗು.


ಇಂತಿ ನಿನ್ನ ಪಾರ್ಟ್‌ನರ್‌
ಬಂತಾ ಸ್ಟಿಂಗ್‌



Kannada Prabha issue dated december 26, 20056
His Name is Sting... Dharam Sting!

--

Tuesday, December 20, 2005

ಯೂ ಆರ್‌ ಅನಂತಮೂರ್ತಿ ಹೆಸರು ಬದಲಾವಣೆ!

ಸುವರ್ಣ ಕನ್ನಡ ರಾಜ್ಯೋತ್ಸವ ವರ್ಷದಲ್ಲಿ ಎಲ್ಲ ಕನ್ನಡ ಸಾಹಿತಿಗಳ ಹೆಸರುಗಳ ಕನ್ನಡೀಕರಣ



ಕುತೂಹಲದ ಸಂಗತಿಯೆಂದರೆ, ಅಮೆರಿಕದಲ್ಲಿ ಜಾಹೀರಾತಿಗಾಗಿ ಕೆಲ ಊರುಗಳ ಹೆಸರುಗಳನ್ನು ಕೆಲ ವರ್ಷದ ಮಟ್ಟಿಗೆ ಬದಲಿಸುವ ಬಿಸಿನೆಸ್ಸಿದೆ! ಈ ಸುವರ್ಣ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಬ್ಯಾಂಗಲೋರನ್ನು ಬೆಂಗಳೂರು ಮಾಡುವ ಮೊದಲು ಕನ್ನಡ ಕವಿಗಳು, ಸಾಹಿತಿಗಳ ಹೆಸರುಗಳನ್ನೂ ಬದಲಿಸಬೇಕು. ಆರಂಭದಲ್ಲಿ ಯೂ. ಆರ್‌. ಅನಂತಮೂರ್ತಿ ಹೆಸರನ್ನು ಉ.ರಾ.ಅನಂತುಮೂರ್ತು ಎಂದು ಪರಿವರ್ತಿಸಬೇಕು!



Tuesday, December 13, 2005

ರಾಜಕಾರಣಿಗಳಿಗೆ ಪ್ರತಿವರ್ಷ ಸತ್ಯ ಹರಿಶ್ಚಂದ್ರ ಪ್ರಶಸ್ತಿ!

೨೦೦೫ನೇ ಸಾಲಿನ ಪ್ರಶಸ್ತಿ ಕರ್ನಾಟಕದ ಮಂತ್ರಿಗಳಿಗೆ
-ವಿಶ್ವಾಮಿತ್ರರ ಮಾಜಿ ಆಪ್ತ ಸಹಾಯಕ ನಕ್ಷತ್ರಿಕನ ಪ್ರಸ್ತಾವನೆ


‘ತಮಾಷೆ ಸಿನಿಮಾಗಳೇ ಈಗೀಗ ಹೆಚ್ಚು ಬರುತ್ತಿರುವೆ. ಸೂಪರ್‌ ಹಿಟ್‌ ಆಗುತ್ತಿವೆ. ಯಾಕೆ ಗೊತ್ತಾ? ಜನರಿಗೆ ತಮಾಷೆ ಬೇಕಾಗಿದೆ. ಅದಕ್ಕಾಗಿ ಅವರು ದುಡ್ಡು ಕೊಟ್ಟು ತಮಾಷೆ ಸಿನಿಮಾಗಳಿಗೆ ಹೋಗುತ್ತಿದ್ದಾರೆ. ಜನ ತಮಾಷೆಗೂ ದುಡ್ಡು ಕೊಡಬೇಕಾದ ಶೋಚನೀಯ ಪರಿಸ್ಥಿತಿ ನಿವಾರಣೆ ಆಗಬೇಕೆಂದರೆ, ರಾಜಕಾರಣಿಗಳ ಪುಗಸಟ್ಟೆ ಮನರಂಜನೆ ಇನ್ನೂ ಹೆಚ್ಚಾಗಬೇಕಾಗಿದೆ!’


ರಾಜಾ ಹರಿಶ್ಚಂದ್ರಾ,
ಆಯಮ್‌ ವೆರಿ ಸಾರಿ. ಈ ಮೊದಲು ನನ್ನ ಹೈಕಮಾಂಡ್‌ ವಿಶ್ವಾಮಿತ್ರ ಮುನಿಗಳ ಮಾತು ಕೇಳಿ ನಿನಗೆ ಕೊಡಬಾರದ ಕಷ್ಟ ಕೊಟ್ಟೆ. ಆಡಬಾರದ ಮಾತನ್ನಾಡಿದೆ. ಕ್ಷಮಿಸು ರಾಜನ್‌... ಕ್ಷಮಿಸು. ಇದಕ್ಕೆಲ್ಲ ನನ್ನ ಹೈಕಮಾಂಡ್‌ ಕಾರಣವೇ ಹೊರತೂ ನಾನಲ್ಲ. ಹೈಕಮಾಂಡ್‌ ಹೇಳಿದಂತೆ ಮಾಡುಮದು ನನಗೆ ಅನಿವಾರ್ಯವಾಗಿತ್ತು. ಹಾಗಾಗಿ, ಹಿಂದೆ ನಾನು ಹೇಳಿದ ಮಾತನ್ನಾಗಲೀ, ಕೊಟ್ಟ ಕಷ್ಟವನ್ನಾಗಲೀ ದಯವಿಟ್ಟು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಮಹಾರಾಜಾ.

ಬೈ ದ ವೇ ಮಹಾರಾಜಾ, ಈಗ ನಾನು ವಿಶ್ವಾಮಿತ್ರರ ಬಣದಲ್ಲಿಲ್ಲ. ಸಿದ್ದರಾಮಯ್ಯ ಜೆಡಿಎಸ್‌ ಬಿಟ್ಟುಬಂದ ಹಾಗೆ, ಮುತಾಲಿಕ್‌ ಮೊದಲು ವಿಶ್ವ ಹಿಂದೂ ಪರಿಷತ್‌ ತ್ಯಜಿಸಿದ ಹಾಗೆ ನಾನು ವಿಶ್ವಾಮಿತ್ರ ಮುನಿಗಳ ಆಶ್ರಮ ಬಿಟ್ಟು ಬಂದಿದ್ದೇನೆ! ನಾನು ವಿಶ್ವಾಮಿತ್ರರಿಗೆ ಎಷ್ಟೇ ನಿಷ್ಠೆಯಿಂದ ನಡೆದುಕೊಂಡರೂ ಅವರು ನನಗೆ ಪ್ರಮೋಶನ್‌ ನೀಡಲೇ ಇಲ್ಲ. ಎಷ್ಟು ವರ್ಷಾ ಅಂತ ನಾನು ಅಡಿಯಾಳಾಗೇ ಇರುಮದು! ನನಗೂ ಉನ್ನತ ಸ್ಥಾನ, ಮಾನ ಬೇಡವೇ? ಆ ಬಗ್ಗೆ ನಾನು ಹಲಮ ಬಾರಿ ಅಸಮಾಧಾನ ತೋಡಿಕೊಂಡರೂ ಅವರು ಅಚಲರಾಗಿದ್ದಾರೆ. ಹಾಗಾಗಿ, ನಾನು ನಿಮ್ಮ ಆಶ್ರಯ ಕೋರುವ ಪ್ರಯತ್ನದಲ್ಲಿದ್ದೆ. ಇದನ್ನು ಹೇಗೋ ತಿಳಿದುಕೊಂಡ ಸ್ವಾಮಿಗಳು ನನ್ನನ್ನು ಆಶ್ರಮದಿಂದ ಉಚ್ಚಾಟಿಸಿದ್ದಾರೆ.

ಮೊನ್ನೆ ಮೊನ್ನೆ ಉಮಾಭಾರತಿಯವರ ಉಚ್ಚಾಟನೆಯನ್ನೂ ನೋಡಿದ ಮೇಲೆ ಯಾಕೋ ಉಚ್ಚಾಟನೆಗಳು ಈಗ ಬಹಳ ಕಾಮನ್‌ ಆದಂತೆ ತೋರುತ್ತಿವೆ. ಹೀಗೆ ಉಚ್ಚಾಟನೆ ಆದ ನಾವೆಲ್ಲ ನಮ್ಮ ನಮ್ಮ ಭವಿಷ್ಯಕ್ಕೊಂದು ಕಾಯಕಲ್ಪ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದೇವೆ. ಅದರ ಮೊದಲ ಪ್ರಯತ್ನವಾಗಿ ಒಂದೊಂದು ರಾಜಕೀಯೇತರ ವೇದಿಕೆ ರೂಪಿಸಿಕೊಂಡು ನಾಯಕನ ಇಮೇಜ್‌ ಸೃಷ್ಟಿಸಿಕೊಳ್ಳುತ್ತಿದ್ದೇವೆ. ಈ ಹಿನ್ನೆಲೆಯಲ್ಲೇ ನಾನೀಗ ‘ಸತ್ಯ ಹರಿಶ್ಚಂದ್ರ ಪ್ರತಿಷ್ಠಾನ’ ಸ್ಥಾಪಿಸಿದ್ದೇನೆ.

ಪ್ರತಿವರ್ಷ ರಾಜಕಾರಣಿಗಳಿಗೆ ಪ್ರಶಸ್ತಿ ನೀಡುಮದು ಈ ಪ್ರತಿಷ್ಠಾನದ ಮೂಲ ಕೆಲಸ. ಎಲ್ಲಾದರೂ ನೋಡಿ... ಎಂತಾದರೂ ನೋಡಿ. ರಾಜಕಾರಣಿಗಳಿಗೆ ಸದಾ ಪ್ರಶಸ್ತಿ ವಿತರಿಸುವ ಕೆಲಸ. ಒಬ್ಬೊಬ್ಬ ರಾಜಕಾರಣಿಯೂ ತಮ್ಮ ತಮ್ಮ ಅಮೃತಹಸ್ತದಿಂದ ಎಷ್ಟು ಸಾವಿರ ಪ್ರಶಸ್ತಿ ವಿತರಿಸಿರುತ್ತಾನೋ ಲೆಕ್ಕವಿಲ್ಲ. ಆದರೆ, ಅವೇ ಅಮೃತಹಸ್ತಗಳಿಗೆ ಎಷ್ಟು ಪ್ರಶಸ್ತಿ ಪಡೆಯುವ ಯೋಗವಿದೆ ಹೇಳಿ? ರಾಜಕಾರಣಿಗಳು ಪ್ರಶಸ್ತಿ ವಿತರಿಸಿದ ಸುದ್ದಿಯನ್ನು ಪ್ರತಿದಿನ ನಾಮ ಓದುತ್ತೇವೆ. ಆದರೆ, ರಾಜಕಾರಣಿಗೆ ಪ್ರಶಸ್ತಿ ಲಭಿಸಿದ ಸುದ್ದಿ ಬಹಳ ಅಪರೂಪವಲ್ಲವೇ? ಪ್ರಶಸ್ತಿಗಳ ಬದಲಿಗೆ ರಾಜಕಾರಣಿಗಳಿಗೆ ಸನ್ಮಾನಗಳು ಆಗುತ್ತವೆ ನಿಜ. ಆದರೆ, ನೂರು ಸನ್ಮಾನಗಳು ಒಂದು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಗೆ ಸಮವೇ? ಲಕ್ಷ ಸನ್ಮಾನಗಳು ಒಂದು ‘ಪದ್ಮಶ್ರಿ’ ಪ್ರಶಸ್ತಿಗೆ ಸಾಟಿಯೇ! ನೀವೇ ಹೇಳಿ. ಸನ್ಮಾನಗಳ ಇಫೆಕ್ಟೇ ಬೇರೆ. ಪ್ರಶಸ್ತಿಗಳ ಗಮ್ಮತ್ತೇ ಬೇರೆ. ಈ ಕೊರಗು ರಾಜಕಾರಣಿಗಳಿಗೂ ಇದೆ.

ಈ ವೀಕ್‌ನೆಸ್ಸನ್ನು ಕ್ಯಾಶ್‌ ಮಾಡಿಕೊಳ್ಳಲು ನನ್ನ ಈ ಪ್ರತಿಷ್ಠಾನ ಸ್ಥಾಪಿಸಿದ್ದೇನೆ. ಈ ಪ್ರತಿಷ್ಠಾನ ತಮ್ಮ ಹೆಸರಿನಲ್ಲಿ ಸ್ಥಾಪನೆಯಾಗಿರುಮದರಿಂದ ಇದಕ್ಕೆ ತಮ್ಮ ಅನುಮತಿ ಹಾಗೂ ನೈತಿಕ ಬೆಂಬಲ ಪಡೆಯುಮದು ನನ್ನ ಈ ಪತ್ರದ ಉದ್ದೇಶ.

ಮಹಾರಾಜಾ,
ಪ್ರಶಸ್ತಿಯ ಹೆಸರು ‘ಸತ್ಯ ಹರಿಶ್ಚಂದ್ರ ಪ್ರಶಸ್ತಿ’. ಇದನ್ನು ಮಾಮೂಲಿಯಂತೆ ಸುಳ್ಳು ಹೇಳುವ ರಾಜಕಾರಣಿಗೆ ನೀಡುಮದಿಲ್ಲ. ಈ ಪ್ರಶಸ್ತಿಗೆ ಆಯ್ಕೆ ಆಗುಮದು ಸುಲಭವಲ್ಲ.

ರಾಜಕಾರಣಿಗಳು ಎಂದೂ ಸತ್ಯ ಹೇಳುಮದಿಲ್ಲ ಎಂಬ ಸತ್ಯದ ಅರಿಮ ಪ್ರಜೆಗಳಿಗೆಲ್ಲ ಇದೆ. ದೇಖೆಂಗೆ, ಸೋಚೇಂಗೆಯಿಂದ ಹಿಡಿದು... ನೋಡೋಣ್‌ ಬಿಡ್ರಿ, ಮಾಡೋಣ್‌ ಬಿಡ್ರಿ... ವರೆಗೆ, ಕೊಟ್ಟೇ ಕೊಡುತ್ತೇವೆ, ಬಂದೇ ಬರುತ್ತವೆಯಿಂದ ಹಿಡಿದು... ಕಟ್ಟೇ ಕಟ್ಟುತ್ತೇವೆ, ಬೀಳಿಸಿಯೇ ತೀರುತ್ತೇವೆ ತನಕ... ಉಚಿತ, ರಿಯಾಯ್ತಿಯಿಂದ ಹಿಡಿದು ಪ್ಯಾಕೇಜ್‌, ವಿಮೆಯ ತನಕ ಪ್ರಜೆಗಳು ಬಹಳಷ್ಟು ರಾಜಕಾರಣಿಗಳ ಭಾಷಣಗಳನ್ನೂ, ಭರವಸೆಯನ್ನೂ, ಆಶ್ವಾಸನೆಗಳನ್ನೂ, ಘೋಷಣೆಗಳನ್ನೂ ನೋಡಿದ್ದಾರೆ... ಕೇಳಿದ್ದಾರೆ.

ಅವೆಲ್ಲ ಜಾನಿ ಲಿವರ್‌ ಜೋಕಿನಂತೆ, ಮಸೂರಿ ಕೃಷ್ಣಮೂರ್ತಿ ಮಾತಿನಿಂತೆ, ಎನ್‌ ಎಸ್‌ ರಾವ್‌ ನಟನೆಯಂತೆ, ಟೆನ್ನಿಸ್‌ ಕೃಷ್ಣ ತಮಾಷೆಯಂತೆ... ಮಾಮೂಲಾಯಿತು. ಜನ ಚೇಂಜ್‌ ಕೇಳುತ್ತಿದ್ದಾರೆ. ಬೇರೆ ರೀತಿಯ ತಮಾಷೆಗಳನ್ನು ಜನ ಎದುರು ನೋಡುತ್ತಿದ್ದಾರೆ.

ಸಾಕ್ಷಿ ಬೇಕಾ? ನೋಡಿ... ಕುರಿಗಳು ಸಾರ್‌ ಕುರಿಗಳು, ಕೋತಿಗಳು ಸಾರ್‌ ಕೋತಿಗಳು, ಮುನ್ನಾ ಭಾಯಿ ಎಂಬಿಬಿಎಸ್‌, ನೋ ಎಂಟ್ರಿ, ಶಾದಿ ನಂ.೧, ರಾಮ ಶಾಮ ಭಾಮ... ಮುಂತಾದ ತಮಾಷೆ ಸಿನಿಮಾಗಳೇ ಈಗೀಗ ಹೆಚ್ಚು ಬರುತ್ತಿರುವೆ. ಸೂಪರ್‌ ಹಿಟ್‌ ಆಗುತ್ತಿವೆ. ಯಾಕೆ ಗೊತ್ತಾ? ಜನರಿಗೆ ತಮಾಷೆ ಬೇಕಾಗಿದೆ. ಅದಕ್ಕಾಗಿ ಅವರು ದುಡ್ಡು ಕೊಟ್ಟು ತಮಾಷೆ ಸಿನಿಮಾಗಳಿಗೆ ಹೋಗುತ್ತಿದ್ದಾರೆ.

ಜನ ತಮಾಷೆಗಾಗಿಯೂ ದುಡ್ಡು ಕೊಡಬೇಕಾದ ಶೋಚನೀಯ ಪರಿಸ್ಥಿತಿ ನಿವಾರಣೆ ಆಗಬೇಕೆಂದರೆ, ರಾಜಕಾರಣಿಗಳ ಪುಗಸಟ್ಟೆ ಮನರಂಜನೆ ಇನ್ನೂ ಹೆಚ್ಚಾಗಬೇಕಾಗಿದೆ. ರಾಜಕಾರಣಿಗಳ ಕ್ರಿಯೇಟಿವಿಟಿ ಚುರುಕುಗೊಳ್ಳಬೇಕಾಗಿದೆ. ಹೊಸ ತಲೆಮಾರಿನ ಯುವ ಪೀಳಿಗೆಗೆ ಅಪ್ಯಾಯಮಾನವಾಗುವಂಥ ಮನರಂಜನೆಯನ್ನು ಈ ರಾಜಕಾರಣಿಗಳು ನೀಡಬೇಕಾಗಿದೆ. ತಮಾಷೆ ಸಿನಿಮಾಗಳಲ್ಲಿ ಹೀರೋಗಳು ಸುಳ್ಳು ಹೇಳುತ್ತಿರುಮದು ಪ್ರೇಕ್ಷಕರಿಗೆಲ್ಲ ಗೊತ್ತಿರುತ್ತದೆ. ಆದರೂ, ಹೀರೋಗಳು ಅದನ್ನೇ ಸತ್ಯ ಎಂಬಂತೆ ಒಬ್ಬರನ್ನೊಬ್ಬರು ನಂಬಿಸಲು ಪ್ರಯತ್ನಿಸುವ ಪ್ರಸಂಗಗಳನ್ನು ಜನ ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಆಮೇಲೆ ಅತಿ ಹೆಚ್ಚು ನಗಿಸಿದ ಸಿನಿಮಾಕ್ಕೂ, ಅತಿ ಹೆಚ್ಚು ನಗಿಸಿದ ನಟರಿಗೂ, ಇತರ ಕಲಾವಿದರೂ ಪ್ರಶಸ್ತಿಗಳ ಸುರಿಮಳೆಯಾಗುತ್ತದೆ. ಆದರೆ, ಇದೇ ರೀತಿಯ ಕಲಾ ಪ್ರದರ್ಶನ ನೀಡುವ ರಾಜಕಾರಣಿಗಳನ್ನು ಯಾರೂ ಗಮನಿಸುಮದೇ ಇಲ್ಲ. ಇಂಥ ರಾಜಕಾರಣಿಗಳ ಕಲೆಯನ್ನು ಜನತೆ ನಿರ್ಲಕ್ಷಿಸಿದ್ದಾರೆ.

ಈಗ ‘ಸತ್ಯ ಹರಿಶ್ಚಂದ್ರ ಪ್ರತಿಷ್ಠಾನ’ ಅಂಥ ಕಲಾ ಸಂಪನ್ನ ರಾಜಕಾರಣಿಗಳನ್ನು ಮಾತ್ರ ಗುರುತಿಸಿ, ಅವರಿಗೆ ಪ್ರತಿವರ್ಷ ಪ್ರಶಸ್ತಿ ನೀಡುತ್ತದೆ. ಇದರಿಂದ ಇತರ ರಾಜಕಾರಣಿಗಳೂ ಉತ್ತೇಜಿತರಾಗಿ ಮಾಮೂಲಿ ಸುಳ್ಳುಗಳನ್ನು ಬಿಟ್ಟು ಸೃಜನಾತ್ಮಕ ಸುಳ್ಳುಗಳ ಮೂಲಕ ಜನತೆಗೆ ಹೆಚ್ಚು ಮನರಂಜನೆ ನೀಡುತ್ತಾರೆ ಎಂಬುದು ಈ ಪ್ರತಿಷ್ಠಾನದ ಸದುದ್ದೇಶ.

ಜಿ.ಎಸ್‌.ಶಿವರುದ್ರಪ್ಪ ಹೇಳಿದಂತೆ... ‘ಎಲ್ಲ ಕೇಳಲಿ ಎಂದು ನಾನು ಹೇಳುಮದಿಲ್ಲ, ಹೇಳುಮದು ಅನಿವಾರ್ಯ ಕರ್ಮ ಎನಗೆ’ -ಎಂಬ ಭಾವನೆ ರಾಜಕಾರಣಿಗೆ ಬೇಡ.

ಜನ ಕೇಳಿ ಆನಂದಿಸುವಂತೆ ‘ಮಜ ತುಂಬಿ ಹೇಳುವೆನು ಇಂದು ನಾನು’ ಎಂಬ ಜಾಯಮಾನವನ್ನು ರಾಜಕಾರಣಿಗಳು ಬೆಳೆಸಿಕೊಳ್ಳಲಿ ಎಂಬುದು ಈ ಪ್ರತಿಷ್ಠಾನದ ಆಶಯ.

ಕಳೆದ ವರ್ಷವಾಗಿದ್ದರೆ, ಲಾಲೂ ಪ್ರಸಾದ್‌ ಯಾದವ್‌ಗೆ ಈ ಪ್ರಶಸ್ತಿ ಸಿಗುತ್ತಿತ್ತೇನೋ? ಆದರೆ, ಈ ವರ್ಷ ಅವರ ಕಾಮೆಡಿ ಕಡಿಮೆಯಾಗಿ ಟ್ರಾಜಿಡಿ ಹೆಚ್ಚಾಗಿದೆ. ಅದಕ್ಕಾಗಿ ಅವರಿಗೆ ಈ ಬಾರಿ ಪ್ರಶಸ್ತಿ ನೀಡಲು ಸಾಧ್ಯವಾಗದಿರಬಹುದು. ಆದರೆ, ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಬಂದಮೇಲೆ ಜನತೆಗೆ ಸಾಕಷ್ಟು ಕಾಮೆಡಿ ಮನರಂಜನೆ ಲಭಿಸಿದೆ. ಕೆಲಮ ಮಂತ್ರಿಗಳ ಸುಳ್ಳುಗಳಂತೂ ಸೂಪರ್‌ ಹಿಟ್‌ ಜೋಕ್‌ ಆಗಿವೆ! ಬಹುಶಃ ೨೦೦೫ರ ‘ಸತ್ಯ ಹರಿಶ್ಚಂದ್ರ ಪ್ರಶಸ್ತಿ’ ಕರ್ನಾಟಕದ ಮಂತ್ರಿಗಳಲ್ಲೇ ಒಬ್ಬರಿಗೆ ದೊರಕುವ ಸಾಧ್ಯತೆ ಇದೆ.

ಆದಷ್ಟು ಬೇಗ ಈ ಪ್ರತಿಷ್ಠಾನಕ್ಕೆ ತಮ್ಮ ಹೆಸರಿಡಲು ತಾಮ ‘ನೋ ಅಬ್ಜೆಕ್ಷನ್‌ ಸರ್ಟಿಫಿಕೆಟ್‌’ ನೀಡಿದರೆ ನನಗೆ ಪ್ರಶಸ್ತಿ ಪ್ರದಾನ ಮಾಡಲು ಸಾಧ್ಯವಾಗುತ್ತದೆ. ಬೆಂಗಳೂರು ಮೆಟ್ರೋ ರೈಲು ಹಾಗೂ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹಸಿರು ನಿಶಾನೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಲೆದಾಡಿಸಿದಂತೆ ನೀಮ ನನ್ನನ್ನು ಅಲೆದಾಡಿಸಲಾರಿರಿ ಎಂಬ ನಂಬುಗೆಯೊಡನೆ...

ತಮ್ಮ ಹಾಲಿ ವಿಶ್ವಾಸಿ
ನಕ್ಷತ್ರಿಕ
(ವಿಶ್ವಾಮಿತ್ರರ ಮಾಜಿ ಆಪ್ತ ಸಹಾಯಕ)


Kannada Prabha issue dated December 12, 2005
Satya Harishchandra Annual Award for Politicians!

Tuesday, December 06, 2005

ಯುದ್ಧ ಮಾಡಲೆಂದೇ ಧರ್ಮಗ್ರಂಥ ಬೋಧಿಸಲಾಯಿತು!

ಡಿಸೆಂಬರ್‌ ೬ರ ಮುನ್ನಾದಿನ ಆದಿ ಕವಿ ಪಂಪನಿಗೆ ಜಾತ್ಯತೀತ ಸೈಬರ್‌ ಕವಿ ಗಾಂಪನ ಪತ್ರ

ಧರ್ಮಗ್ರಂಥಗಳಿಂದ ಸಮಾಜದಲ್ಲಿ ಶಾಂತಿಗಿಂತ ಸಮರವೇ ಹೆಚ್ಚಾಗಿದೆ ಎಂಬ ಸಂಶಯ ಮೂಡುತ್ತದೆ. ಧರ್ಮದ ರಕ್ಷಣೆಗೆ ಶ್ರೀಕೃಷ್ಣ ಪವಿತ್ರ ‘ಗೀತೆ’ ಬೋಧಿಸಿ ಅರ್ಜುನ ಯುದ್ಧ ಮಾಡುವಂತೆ ಮಾಡಿದ. ಮಹಾಭಾರತ ಯುದ್ಧವೇ ನಡೆದುಹೋಯಿತು. ಅತ್ತ ಇಸ್ಲಾಂ ಧರ್ಮ ರಕ್ಷಣೆಗೆ ’ಜಿಹಾದ್‌’ ಬೊಧಿಸಲಾಯಿತು. ಈ ಯುದ್ಧಗಳಿಂದ ಇಡೀ ಜಗತ್ತೇ ಅಶಾಂತವಾಯಿತು. ಇದಕ್ಯಾರು ಕಾರಣ?


ಆದರಣೀಯ ಆದಿ ಕವಿ, ಪಂಪನಿಗೆ
ಸೈಬರ್‌ ಕವಿ ಗಾಂಪನ ನಮಸ್ಕಾರಗಳು. ಬಹಳ ದಿನಗಳಿಂದ ಜಾತ್ಯತೀತ ಮಹಾಭಾರತದ ಕುರಿತು ನಾನು ನಿನಗೆ
ಈ-ಮೇಲ್‌ ಬರೆಯಬೇಕು ಅಂದುಕೊಂಡಿದ್ದೆ. ಆದರೆ, ಸಮಯ ಕೂಡಿ ಬಂದಿರಲಿಲ್ಲ. ಈಗ ಸಂದರ್ಭ ಸಿಕ್ಕಿದೆ.
ನಾಳೆ ಡಿಸೆಂಬರ್‌ ೬. ರಾಮ ಜನ್ಮಭೂಮಿಯಲ್ಲಿ ಬಾಬರಿ ಮಸೀದಿ ಧ್ವಂಸವಾದ ದಿನ. ಇದು ಕೋಮುವಾದ ಹಾಗೂ ಜಾತ್ಯತೀತತೆಯ ಉನ್ಮಾದದ ದಿನ. ಧರ್ಮಸಂಘರ್ಷ ಹಾಗೂ ಧರ್ಮರಕ್ಷಣೆಯ ವ್ಯಾಖ್ಯಾನದ ದಿನ. ಭಾರತದ ರಾಷ್ಟ್ರೀಯ ದಿನಾಚರಣೆಗಳಲ್ಲಿ ಇದೂ ಒಂದು! ಬಿಜೆಪಿಗಳು ವಿಜಯೋತ್ಸವ ಎಂದೂ, ಬಿಜೆಪಿ ವಿರೋಧಿಗಳು ಇದನ್ನು ಕರಾಳದಿನ ಎಂದೂ ಆಚರಿಸುತ್ತಾರೆ. ಜನಸಾಮಾನ್ಯರು ಮಾತ್ರ ಕೋಮುಗಲಭೆಯ ಆತಂಕದಲ್ಲೇ ದಿನ ಕಳೆಯುತ್ತಾರೆ.

ಕವಿವರ್ಯಾ,
ನನಗೆ, ಧರ್ಮಗ್ರಂಥಗಳಾದ ಭಗವದ್ಗೀತೆ -ಖುರಾನ್‌ ಮತ್ತು ಮಹಾ ಸಾಫ್ಟ್‌ವೇರ್‌ಗಳಾದ ಮೈಕ್ರೋಸಾಫ್ಟ್‌ ವಿಂಡೋಸ್‌ ಹಾಗೂ ಲೈನಕ್ಸ್‌ ನಡುವೆ ಹಲವಾರು ಸಾಮ್ಯತೆ ಕಾಣುತ್ತಿದೆ.

ಮಹಾಭಾರತದ ಭಗವದ್ಗೀತೆ ಹಿಂದುಗಳಿಗೆ ಹೇಗೆ ಧರ್ಮಗ್ರಂಥವೋ ಹಾಗೆ ಮುಸ್ಲಿಮರಿಗೆ ಖುರಾನ್‌ ಧರ್ಮಗ್ರಂಥ. ಇವೆರಡೂ ಬೇರೆ ಬೇರೆ ಗ್ರಂಥಗಳಾದರೂ, ಉದ್ದೇಶ ಹಾಗೂ ಉಪಯೋಗ ಮಾತ್ರ ಒಂದೇ ತಾನೆ? ಅದರೆ, ಈ ಗ್ರಂಥಗಳ ಆರಾಧಕರು ಯಾಕೋ ತಾಮ ಪರಸ್ಪರ ವಿರೋಧಿಗಳು ಎಂಬಂತೆ ಹೋರಾಡುತ್ತಾರೆ.

ಈಗಿನ ನಮ್ಮ ಸೈಬರ್‌ಲೋಕದಲ್ಲೂ ಇದೇ ಹಣೆಬರಹ. ಒಂದು ಪಂಥದ ಗಣಕಿಗಳಿಗೆ ಮೈಕ್ರೋಸಾಫ್ಟ್‌ ವಿಂಡೋಸ್‌ ‘ಧರ್ಮತಂತ್ರಾಂಶ’ವಾದರೆ ಇನ್ನೊಂದು ವಿರೋಧಿ ಪಂಥಕ್ಕೆ ’ಲೈನಕ್ಸ್‌’ ಎಂಬುದು ಧರ್ಮತಂತ್ರಾಂಶ’. ಇವೆರಡೂ ತಂತ್ರಾಂಶಗಳ ಉದ್ದೇಶ ಹಾಗೂ ಉಪಯೋಗ ಒಂದೇ ಆದರೂ, ಉಭಯ ಪಂಥಗಳ ನಡುವೆ ಹಿಂದೂ-ಮುಸ್ಲಿಂ ಥರ ಶೀತಲ ಸಮರ ಇದೆ.

ಅಷ್ಟೇ ಅಲ್ಲ, ಮೈಕ್ರೋಸಾಫ್ಟಿನ ವಿಂಡೋಸ್‌ಗೂ ಮಹಾಭಾರತಕ್ಕೂ ಇನ್ನೊಂದು ಪ್ರಮುಖ ಸಾಮ್ಯತೆ ಇದೆ. ಅತ್ಯಂತ ಹೆಚ್ಚು ವರ್ಶನ್‌ಗಳಿರುವ ಮಹಾಸಾಫ್ಟ್‌ವೇರ್‌ ಎಂಬ ಖ್ಯಾತಿ ವಿಂಡೋಸ್‌ಗಾದರೆ, ಅತ್ಯಂತ ಹೆಚ್ಚು ಆವೃತ್ತಿಗಳಿರುವ ಮಹಾಗ್ರಂಥ ಎಂಬ ಖ್ಯಾತಿ ಮಹಾಭಾರತಕ್ಕೆ!

ಆದರೆ, ಕವೀಶ
ಒಂದು ಖೇದದ ವಿಷಯವೆಂದರೆ, ವಿಂಡೋಸ್‌ನ ಹೊಸ ವರ್ಷನ್‌ಗಳು ಈಗಲೂ ಬಿಡುಗಡೆಯಾಗುತ್ತಿವೆ. ಅದೇಕೋ ಮಹಾಭಾರತದ ಹೊಸ ಆವೃತ್ತಿಗಳು ಮಾತ್ರ ನಿಂತುಹೋಗಿವೆ! ನಿನ್ನಂಥ ಮಹಾಕವಿಗಳೂ ಮಹಾಭಾರತದ ಹೊಸ ವರ್ಶನ್‌ ಬರೆಯುವ ಸಾಹಸಕ್ಕೆ ಕೈಹಾಕುತ್ತಿಲ್ಲ. ನೀನೂ ಅಷ್ಟೇ, ಮೂಲ ಕೃತಿಯ ‘ಪಂಪಭಾರತ -ವರ್ಶನ್‌ ೧.೦’ ಬಿಡುಗಡೆ ಮಾಡಿದ ಮೇಲೆ ಯಾಕೆ ಪರಿಷ್ಕಾರಕ್ಕೆ ಕೈಹಾಕಿಲ್ಲ. ಈಗ ನೀನು ‘ಪಂಪಭಾರತ ವರ್ಶನ್‌ ೨.೧’ ಬರೆಯಬೇಕು. ಇದು ಸೂಪರ್‌ ಹಿಟ್‌ ಆಗುಮದು ಗ್ಯಾರಂಟಿ. ಪುಸ್ತಕ ಪ್ರಪಂಚದಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ’ಹ್ಯಾರಿ ಪಾಟರ್‌’ ಎಂಬ ಇಂಗ್ಲೀಷ್‌ ಕಾದಂಬರಿ ಸರಣಿಗಿಂತ ನಿನ್ನ ಕೃತಿಯೇ ಅತ್ಯಧಿಕ ಬೇಡಿಕೆ ಪಡೆಯುವ ಸಾಧ್ಯತೆಯಿದೆ.

ಅಂದು ನೀನು ಸುಲಭವಾಗಿ ‘ಪಂಪಭಾರತ’ ಬರೆದಿರಬಹುದು. ಆದರೆ, ಈಗ ಮಹಾಭಾರತ ಬರೆಯುಮದು ಸುಲಭದ ಮಾತಲ್ಲ ಎಂಬುದು ನೆನಪಿರಲಿ. ಅದಕ್ಕಾಗಿ ನೀನು ಈ ಕೆಳಗಿನ ಎರಡು ಜಾಗ್ರತೆ ವಹಿಸಬೇಕಾಗುತ್ತದೆ:

೧. ನೀನು ಬರೆದ ಪಂಪಭಾರತದಲ್ಲಿ, ರಾಜ ಅರಿಕೇಸರಿಯನ್ನೇ ಅರ್ಜುನ ಎಂಬಂತೆ ಬಿಂಬಿಸಿದ್ದಿ. ದ್ರೌಪದಿ ಕೇವಲ ಅರ್ಜುನನ ಹೆಂಡತಿ ಎಂದೂ, ದುರ್ಯೋಧನನು ಅತ್ಯಂತ ಛಲವಂತ ಎಂದೂ ವೈಭವೀಕರಿಸಿದ್ದಿ. ಇದು, ವ್ಯಾಸ ಮಹಾಮುನಿಗಳ ಮೂಲಕಥೆಗೆ ನೀನು ಮಾಡಿದ ಬದಲಾವಣೆ. ಇಂತಹ ಬದಲಾವಣೆಗೆ ಆಗ ಯಾರೂ ಪ್ರತಿಭಟಿಸಲಿಲ್ಲ. ಈಗ ಈ ರೀತಿಯ ತಪುý್ಪ ಮಾಡಬೇಡ. ಈಗಿನ ಕಾಲ ಹಿಂದೆಂದಿಗಿಂತ ಅತ್ಯಂತ ಹೆಚ್ಚು ’ಧರ್ಮ ಸೂಕ್ಷ್ಮವೂ’, ಜನರು ಹಿಂದೆಂದಿಗಿಂತ ಧರ್ಮಪ್ರಿಯರೂ ಆಗಿದ್ದಾರೆ. ಈಗಿನ ಜನರು ತಮ್ಮ ಧರ್ಮದ ವಿಷಯದಲ್ಲಿ ಸುಮ್ಮನೆ ಕುಳಿತುಕೊಳ್ಳುಮದಿಲ್ಲ. ಹಾಗಾಗಿ, ಇಂತಹ ಬದಲಾವಣೆ ಮಾಡುಮದಾದರೆ ಒಮ್ಮೆ ಹಿಂದೂ ರಕ್ಷಣಾ ವೇದಿಕೆ ಮತ್ತು ಜಾತ್ಯತೀತ ಸೌಹಾರ್ದ ಪರಿಷತ್ತಿನ ಪರವಾನಿಗೆ ಪಡೆದುಕೊಳ್ಳುಮದು ಒಳಿತು! ಇಲ್ಲವಾದರೆ, ನಿನ್ನ ವಿರುದ್ಧ ಅನೇಕ ಹೋರಾಟಗಳು ನಡೆಯಬಹುದು. ನಿನ್ನ ’ಭೂತ ದಹನ’ವಂತೂ ಗ್ಯಾರಂಟಿ. ಮೋರೆಗೆ ಮಸಿ ಬಳಿಯುವ ಅಪಾಯವೂ ಇದೆ.

೨. ನೀನು ಬರೆದ ‘ಭಾರತದಲ್ಲಿ’ ಭಗವದ್ಗೀತೆ ಚಿಕ್ಕ ಪ್ರಸ್ತಾಪದೊಂದಿಗೆ ಮುಗಿದುಹೋಗುತ್ತದೆ. ಈ ವಿಷಯದಲ್ಲಿ ನೀನು ಎಚ್ಚರವಾಗಿ ಇರುಮದು ಒಳ್ಳೆಯದು. ನಿನ್ನ ಹೊಸ ಗ್ರಂಥದಲ್ಲಿ ಭಗವದ್ಗೀತೆಯನ್ನು ಚಿಕ್ಕದಾಗಿ ಮುಗಿಸಿದರೆ, ಹಿಂದೂ ಧರ್ಮಗ್ರಂಥವನ್ನು ನಿರ್ಲಕ್ಷಿಸಿದ ‘ಹಿಂದೂ ವಿರೋಧಿ’ ಎಂಬ ಆರೋಪ ನಿನ್ನ ಮೇಲೆ ಬರುತ್ತದೆ. ಅಥವಾ ಯಥಾವತ್‌ ಭಗವದ್ಗೀತೆಯನ್ನು ಅಳವಡಿಸಿದರೆ ನೀನು ‘ಕೋಮುವಾದಿ’ ಎನಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ, ಭಗವದ್ಗೀತೆಗೆ ಅಲ್ಲಲ್ಲಿ, ತಿದ್ದುಪಡಿ ಮಾಡಿ ನೀನು ಕೋಮುಸೌಹಾರ್ದ, ಜಾತ್ಯತೀತ ಭಗವದ್ಗೀತೆಯನ್ನು ಬರೆದುಬಿಡುಮದು ಒಳ್ಳೆಯದು. ರಾಷ್ಟ್ರಕವಿ ಕುವೆಂಪು ಎಷ್ಟೋ ವರ್ಷಗಳ ಹಿಂದೆ ಬರೆದಿಟ್ಟು ಹೋಗಿದ್ದ ಕರ್ನಾಟಕದ ನಾಡಗೀತೆಯೇ ಇಂಥ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು ಎಂಬುದನ್ನು ಮರೆಯಬೇಡ.

ಇಷ್ಟಕ್ಕೂ ಹಿಂದುತ್ವ, ಕೋಮುವಾದ, ಜಾತ್ಯತೀತತೆ ಅಂದರೆ ಏನು ಎಂದು ನೀನು ಕೇಳಬಹುದು. ನಿಜವಾಗಿ ಹೇಳಬೇಕೆಂದರೆ, ಅದೆಲ್ಲ ನಮ್ಮಂಥ ಜನಸಾಮಾನ್ಯರಿಗೆ ಅರ್ಥವಾಗುಮದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ವಾದ ಮಂಡಿಸಿ ನಮ್ಮನ್ನು ಬೆಚ್ಚಿಬೀಳಿಸುತ್ತಾರೆ. ಆಮೇಲೆ ಅವರೆಲ್ಲರೂ ಹೇಳಿದ್ದು ನಿಜ ಅನಿಸುತ್ತದೆ. ನಮಗೆ ಗೊಂದಲವಾಗುತ್ತದೆ.
ಈ ದೊಡ್ಡ ಶಬ್ಧಗಳು ನಮ್ಮಂಥ ಹುಲುಮಾನವರಿಗೆ ಅರ್ಥವಾಗಿರುಮದು ಹೀಗೆ:

ಹಿಂದುತ್ವ: ಬಿಜೆಪಿಯ ರಾಜಕೀಯ ತಳಪಾಯ ಇದು. ವಿಶ್ವ ಹಿಂದೂ ಪರಿಷತ್‌, ಆರ್‌ಎಸ್‌ಎಸ್‌ ಮತ್ತಿತರ ಸಂಘಟನೆಗಳು ಹಿಂದುತ್ವದ ಪವರ್‌ ಆಫ್‌ ಅಟಾರ್ನಿ ಹೊಂದಿವೆ!

ಕೋಮುವಾದ: ಬಿಜೆಪಿ ಹಾಗೂ ಇದರ ಅಂಗ ಸಂಘಗಳ ಯಾಮದೇ ಮಾತುಗಳನ್ನು ಟೀಕಿಸಲು ವಿರೋಧಿ ಪಕ್ಷಗಳು ಬಳಸುವ ಶಬ್ದ ಇದು. ಬಿಜೆಪಿಯ ಅನುಯಾಯಿಗಳೆಲ್ಲ ಕೋಮುವಾದಿಗಳು ಎಂಬುದು ಮಿಕ್ಕೆಲ್ಲ ಪಕ್ಷಗಳ ವ್ಯಾಖ್ಯೆ. ಭಾರತದ ಪುರಾತನ ಸಂಸ್ಕೃತಿ, ಪುರಾಣ, ವೇದ, ಆಚರಣೆಗಳನ್ನು ಸಮರ್ಥಿಸುವವರೆಲ್ಲರೂ ಕೋಮುವಾದಿಗಳೆಂಬ ವಾದವೂ ಇದೆ. ಬ್ರಾಹ್ಮಣರನ್ನು ಸಹ ಕೋಮುವಾದಿಗಳು ಎನ್ನಲಾಗುತ್ತದೆ. ಆದರೆ, ಕಟ್ಟಾ ಮುಸ್ಲಿಮರು ಜಾತ್ಯತೀತ ಪಕ್ಷಗಳ ವೋಟ್‌ ಬ್ಯಾಂಕುಗಳು!

ಜಾತ್ಯತೀತತೆ: ಸಾಮಾನ್ಯವಾಗಿ ಮುಸ್ಲಿಂ ಬಾಂಧವರಿಗೆ ಉತ್ತೇಜನ ನೀಡುಮದು ಹಾಗೂ ಬಿಜೆಪಿ ಅನುಯಾಯಿಗಳನ್ನು ದೂರ ಇಡುಮದೇ ಜಾತ್ಯತೀತತೆ! ಜಾತಿ, ಒಳಜಾತಿಗಳನ್ನು ಬೇರೆ ಬೇರೆ ಮಾಡಿ ಎಲ್ಲರಲ್ಲೂ ಕೋಮು ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ತಮ್ಮ ತಮ್ಮ ಜಾತಿಗಾಗಿ ಹೋರಾಡುವಂತೆ ಮಾಡುಮದನ್ನೂ ಜಾತ್ಯತೀತತೆ ಎನ್ನಲಾಗುತ್ತದೆ! ಅದೇ ರೀತಿ ಮೇಲ್ಜಾತಿಯವರೆಲ್ಲರೂ ಸಮಾಜ ಶೋಷಕರು ಎಂದು ಬಿಂಬಿಸಿದರೂ ಅದು ಜಾತ್ಯತೀತತೆ. ಬಿಜೆಪಿಯ ವಿರೋಧಿ ಪಕ್ಷಗಳ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳು ತಮ್ಮನ್ನು ಜಾತ್ಯತೀತರು ಎಂದು ಕರೆದುಕೊಳ್ಳುತ್ತಾರೆ.

ಈ ಧರ್ಮ ವ್ಯಾಖ್ಯಾನ ನೋಡಿ, ನೀನು ಧರ್ಮಸಂಕಟಕ್ಕೆ ಒಳಗಾಗಬಹುದು. ನಮ್ಮ ಧರ್ಮಗ್ರಂಥಗಳಿಂದ ಸಮಾಜದಲ್ಲಿ ಶಾಂತಿಗಿಂತ ಸಮರವೇ ಹೆಚ್ಚಾಗಿದೆ ಎಂಬ ಸಂಶಯ ನಿನಗೆ ಮೂಡಬಹುದು. ಅದು ನಿಜ ಪಂಪ. ಅರ್ಜುನ ತಾನು ತನ್ನ ಬಂಧುಗಳ ಜೊತೆ ಯುದ್ಧ ಮಾಡಲಾರೆ ಎಂದು ಹೇಳಿದಾಗ ಧರ್ಮದ ರಕ್ಷಣೆಗೆ ಶ್ರೀಕೃಷ್ಣ ಪವಿತ್ರ ’ಗೀತೆ’ ಬೋಧಿಸಿ ಅರ್ಜುನ ಯುದ್ಧ ಮಾಡುವಂತೆ ಮಾಡಿದ. ಮಹಾಯುದ್ಧವೇ ನಡೆದುಹೋಯಿತು. ಅತ್ತ ಇಸ್ಲಾಂ ಧರ್ಮ ರಕ್ಷಣೆಗೆ ’ಜಿಹಾದ್‌’ ನಡೆಸುವಂತೆ ಬೊಧಿಸಲಾಯಿತು. ಇಡೀ ಜಗತ್ತೇ ಅಶಾಂತವಾಯಿತು. ಈ ರೀತಿ ಧರ್ಮಗ್ರಂಥಗಳೇ ಯುದ್ಧಗಳಿಗೆ ಕಾರಣವಾಗಿರುಮದಕ್ಕೆ ಯಾರು ಕಾರಣರೋ ಗೊತ್ತಿಲ್ಲ.

ಈ ಧರ್ಮಸೂಕ್ಷ್ಮವನ್ನು ಗಮನದಲ್ಲಿಟ್ಟುಕೊಂಡು ನೀನು ಒಂದು ಕೋಮುಸೌಹಾರ್ದ, ಜಾತ್ಯತೀತ ಭಗವದ್ಗೀತೆಯುಳ್ಳ ಮಹಾಭಾರತವನ್ನು ಬರೆಯುತ್ತೀ ಎಂಬ ನಿರೀಕ್ಷೆಯಲ್ಲಿ...

ಸೈಬರ್‌ ಕವಿ
ಗಾಂಪ



Kannada Prabha issue dated December 5, 2005
Holy Books of Religions were preached to do War!

-