ಪ್ರೆಸ್ಕ್ಲಬ್ ವದಂತಿಗಳಿಗೆ ಹೆಚ್ಚು ವಿನಾಶಕಾರಿ ಶಕ್ತಿ ಇದೆಯೋ? ಬ್ಲಾಗುಗಳಿಗೋ?
Well, ನನ್ನ ಪ್ರಕಾರ ಬ್ಲಾಗುಗಳಿಗೆ ಭಯಂಕರ ಶಕ್ತಿ ಇದೆ.
ಕಳೆದ ಸುಮಾರು 20 ದಿನದಿಂದ ನನ್ನ ಹಾಗೂ ಕನ್ನಡಪ್ರಭ ಸಂಪಾದಕ ರಂಗನಾಥ್ ಅವರ ರಾಜೀನಾಮೆಯ ಸುತ್ತ ನೂರಾರು ರೀತಿಯ ವದಂತಿ. ಟೀಕೆ. ನಮ್ಮನ್ನು ಕನ್ನಡಪ್ರಭದಿಂದ ಕಿತ್ತು ಹಾಕಿದರಂತೆ, ನಾವೇ ಆಡಳಿತ ಮಂಡಳಿ ಜೊತೆ ಜಗಳ ಮಾಡಿಕೊಂಡು ಬಿಟ್ಟೆವಂತೆ, ಇವತ್ತು ರಾಜೀನಾಮೆ ಕೊಟ್ಟರಂತೆ, ನಾಳೆ ಸಂಸ್ಥೆಯ ಮಾಲೀಕರು ಬಂದು ಕನ್ನಡಪ್ರಭದ ಹೊಸ ಸಂಪಾದಕರನ್ನು ಘೋಷಿಸುತ್ತಾರಂತೆ, 15 ಜನರ ದೊಡ್ಡ ತಂಡ ರಂಗನಾಥ್ ಅವರ ಜೊತೆ ಹೋಗುತ್ತಂತೆ, ಇಲ್ಲ ನಾಲ್ಕೇ ಜನ ಹೋಗುತ್ತಾರಂತೆ, ಸಿಇಒ ಅಂತೆ, ಹೊಸ ಪೇಪರ್ ಸಂಪಾದಕರಂತೆ, ಲಕ್ಷ ರುಪಾಯಿ ಸಂಬಳವಂತೆ, ಅಲ್ಲ 2 ಲಕ್ಷ ರುಪಾಯಿ ಸಂಬಳವಂತೆ, ಸುಳ್ಳು ಕೇವಲ 60-70 ಸಾವಿರ ರುಪಾಯಿ ಸಂಬಳವಂತೆ... ಇತ್ಯಾದಿ ಇತ್ಯಾದಿ...
ದಿನ ಬೆಳಗಾದರೆ, ರಾತ್ರಿಯಾದರೆ, ಇವೆಲ್ಲಾ ಮಾತು ಕೇಳೀ ಕೇಳಿ, ಎಸ್.ಎಂ.ಎಸ್. ಓದಿ ಓದಿ, ಈ-ಮೇಲ್ ನೋಡಿ ನೋಡಿ... ಕಿರಿಕಿರಿಯಾದರೂ ತೆಪ್ಪಗಿದ್ದೆ. ಇದೆಲ್ಲಾ ಸಾರ್ವಜನಿಕ ಜೀವನದಲ್ಲಿ ಸಹಜ ಅಂತ. ನಾವು ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಈ ಎಲ್ಲ ವದಂತಿಗಳಿಗೆ ಹೇಗೆ ಉತ್ತರಿಸುವುದು! ಅಥವಾ ಎಷ್ಟು ವದಂತಿಗಳಿಗೆ, ಎಷ್ಟು ಮಂದಿಗೆ ಅಂತ ಸಮಜಾಯಿಷಿ ನೀಡುವುದು? ಕ್ರಮೇಣ ಈ ವದಂತಿಗಳು ತಣ್ಣಗಾಗಿಬಿಡುತ್ತವೆ. ಇಂತಹ ವದಂತಿಗಳು ಕೇವಲ ನಮ್ಮ ಸುತ್ತ ಮಾತ್ರ ಅಲ್ಲವಲ್ಲ ಅಂತ ನನ್ನ ಪಾಡಿಗೆ ನಾನಿದ್ದೆ.
ಆದರೆ, ಈ ಬ್ಲಾಗಿದೆಯಲ್ಲ... ಇದೇ ಡೇಂಜರ್. ಇದರಲ್ಲಿ ಯಾರು ಏನು ಬೇಕಾದರೂ ಬರೆಯಬಹುದು. ಎಷ್ಟು ಬೇಕಾದರೂ ಬಯ್ಯಬಹುದು. ಎಂಥ ಆರೋಪವನ್ನಾದರೂ ಮಾಡಬಹುದು. ಹೋಗಲಿ ಅಂತ ಒಂದಕ್ಕೆ ಉತ್ತರ ನೀಡಿದರೆ, ಇನ್ನೂ ಅಪಾಯ. ಬಯ್ಯುವವರು, ಆರೋಪ ಮಾಡುವವರು ಇನ್ನಷ್ಟು ಆವೇಶದಿಂದ ಬರೆಯಲು ಆರಂಭಿಸುತ್ತಾರೆ. ಉತ್ತರ ನೀಡಲಿಲ್ಲವೋ... ಆ ವದಂತಿಗಳು, ಆರೋಪಗಳು ಅಪ್ಪಟ ಸತ್ಯ ಎಂಬಂತೆ ಅಂತರ್ಜಾಲದಲ್ಲಿ ದಾಖಲಾಗುತ್ತವೆ. ಜಗತ್ತಿನಾದ್ಯಂತ ಸುತ್ತುಹಾಕಿ ಮತ್ತೆ ಮತ್ತೆ ಧುತ್ತೆಂದು ಪ್ರತ್ಯಕ್ಷವಾಗಿ ಕಿರಿಕಿರಿ ಉಂಟುಮಾಡುತ್ತವೆ.
ಈಗ ಕೆಲವು ತಿಂಗಳ ಹಿಂದೆ ಎನ್.ಡಿ.ಟಿ.ವಿ. ಗ್ರೂಪ್ ಎಡಿಟರ್ ಬಾರ್ಕಾ ದತ್ಗೂ ಹೀಗೇ ಆಗಿತ್ತು. ಅದ್ಯಾರೋ ಬ್ಲಾಗಿನಲ್ಲಿ ಆಧಾರವಿಲ್ಲದ ಆರೋಪ ಮಾಡಿ, ಆ ಆರೋಪವನ್ನು ಅದ್ಯಾರೋ ಸೈನ್ಯಾಧಿಕಾರಿ ಓದಿ, ಆತ ಅದನ್ನು ಟೀವಿ ಸಂದರ್ಶನದಲ್ಲಿ ಹೇಳಿ, ಅವಾಂತರವಾಗಿತ್ತು. ನಂತರ ಎನ್.ಡಿ.ಟಿ.ವಿ. ಆ ಬ್ಲಾಗಿನ ಮೇಲೆ ಕಾನೂನು ಕ್ರಮ ಜರುಗಿಸಿತು. ಸೈನ್ಯಾಧಿಕಾರಿ ಅಧಿಕೃತವಾಗಿ ಕ್ಷಮೆ ಕೇಳಬೇಕಾಗಿ ಬಂತು.
ಅದೆಲ್ಲಾ ಇರಲಿ. ಈಗ ಇಂಥ ಆರೋಪಗಳಿಗೆ ಗುರಿಯಾಗುವ ಸರದಿ ನಮ್ಮದು. ಮೊದ ಮೊದಲು ಈ ಆರೋಪಗಳಿಗೆ ಉತ್ತರಿಸದಿರಲು ನಿರ್ಧರಿಸಿದ್ದೆವು. ಆದರೆ, ಈ ಬ್ಲಾಗುಗಳ ಮಹಿಮೆಯನ್ನು ಹೇಗೆ ಬಣ್ಣಿಸಲಿ? ಅದಕ್ಕೇ ಹೇಳಿದ್ದು ಪ್ರೆಸ್ ಕ್ಲಬ್ ಟಾಕ್ಗಿಂತ ಬ್ಲಾಗ್ಟಾಕ್ ಡೇಂಜರಸ್ ಅಂತ.
ಎಲ್ಲ ಅಂಶಗಳಿಗೂ ಉತ್ತರಿಸುವ ಉದ್ದೇಶವಾಗಲೀ, ಶಕ್ತಿಯಾಗಲೀ ನನಗಿಲ್ಲ. ಆದರೆ, ಸೂಕ್ಷ್ಮ ಅನ್ನಿಸುವ 3-4 ಆರೋಪಗಳಿಗೆ ನಾನಿಲ್ಲಿ ಅಧಿಕೃತ ಸ್ಪಷ್ಟನೆ ನೀಡುತ್ತಿದ್ದೇನೆ.
1. ಕನ್ನಡಪ್ರಭ ಸಂಪಾದಕ ರಂಗನಾಥ್ ಸುಮ್ಮನೆ ರಾಜೀನಾಮೆ ಕೊಟ್ಟು ಹೋಗುವ ಬದಲು ಕಚೇರಿಯ ತಮ್ಮ ಎಲ್ಲ ಪತ್ರವ್ಯವಹಾರ, ಇತ್ಯಾದಿ ಪರ್ಸನಲ್ ಕಡತಗಳನ್ನೆಲ್ಲ ಬೆಂಕಿ ಹಾಕಿ ಸುಟ್ಟುಹಾಕಿದ್ದಾರೆ.
ಈ ಆರೋಪವೊಂದು ದೊಡ್ಡ ಹಗರಣದ ರೂಪ ಪಡೆದಿದೆ. ತಮ್ಮ ಭ್ರಷ್ಟಾಚಾರಗಳನ್ನು ಮುಚ್ಚಿಹಾಕಲು ಯಾರೋ ಸರ್ಕಾರಿ ಕಡತಗಳನ್ನು ಸುಟ್ಟುಹಾಕಿದರಂತೆ ಎಂಬಂತೆ ಹುಯಿಲೆಬ್ಬಿಸಲಾಗಿದೆ. ವಾಸ್ತವ ಅದಲ್ಲ. ಹಲವಾರು ವರ್ಷಗಳ ಅವಧಿಯಲ್ಲಿ ಯಾವುದೇ ಕಚೇರಿಯಲ್ಲಾದರೂ ಪತ್ರವ್ಯವಹಾರಗಳ ದೊಡ್ಡ ಬೆಟ್ಟವೇ ಸೃಷ್ಟಿಯಾಗುತ್ತದೆ. ಅದಕ್ಕೇ ಹಲವು ಕಚೇರಿಯಲ್ಲಿ, ಕಾಲಕಾಲಕ್ಕೆ, ಅವಧಿ ಮೀರಿದ ಕಾಗದ ಪತ್ರಗಳನ್ನು ಹರಿದು ಚಿಂದಿ ಮಾಡಿ ಸುಟ್ಟುಹಾಕಲಾಗುತ್ತದೆ. ನಮ್ಮದೇ ಕಚೇರಿಯಲ್ಲೂ ಸುಮಾರು 6 ತಿಂಗಳಿಗೊಮ್ಮೆ ಈ ರೀತಿ ಅನಗತ್ಯ ಕಾಗದಪತ್ರಗಳನ್ನು ನಾಶಪಡಿಸುವ ಪದ್ಧತಿ ಇದೆ. ಈಗ ಸಂಪಾದಕ ರಂಗನಾಥ್ ತಮ್ಮ ಕಚೇರಿಯನ್ನು ತೆರವುಗೊಳಿಸುತ್ತಿರುವುದರಿಂದ ಅನಗತ್ಯ ಕಾಗದಪತ್ರಗಳನ್ನು ಹರಿದು ರದ್ದಿಗೆ ಎಸೆದದ್ದು ನಿಜ. ಆಗ, ಸಂಸ್ಥೆಯ ಬೆಂಗಳೂರು ಕಚೇರಿಯ ವ್ಯವಸ್ಥಾಪಕರೇ ಈ ಕಾಗದಪತ್ರಗಳನ್ನು ನಾಶಗೊಳಿಸುವ ಸೂಚನೆ ನೀಡಿದರು. ಅದಕ್ಕಾಗಿ ಕಚೇರಿಯ ನಿಯೋಜಿತ ಸಿಬ್ಬಂದಿಯೇ, ಟೈಮ್ ಆಫೀಸಿನ ಅಧಿಕಾರಿಯ ಸಮಕ್ಷಮದಲ್ಲೇ ಸುಟ್ಟುಹಾಕಿದರು. ಆ ಕಾಗದ ಪತ್ರಗಳನ್ನು ಸುಟ್ಟು ಹಾಕಿದ್ದು ಸಂಪಾದಕರಲ್ಲ - ಇದು ಕನ್ನಡಪ್ರಭದ ಕಾರ್ಯನಿರ್ವಾಹಕ ಸಂಪಾದಕನಾಗಿ ನಾನು ನೀಡುತ್ತಿರುವ ಅಧಿಕೃತ ಸ್ಪಷ್ಟನೆ.
(ಇಲ್ಲಿ ಇನ್ನೊಂದು ಮಾಹಿತಿ. ನಾನು ಕಾರ್ಯನಿರ್ವಾಹಕ ಸಂಪಾದಕನಾಗಿ ಅಧಿಕಾರ ಸ್ವೀಕಾರ ಮಾಡಿದಾಗ ನನ್ನ ಛೇಂಬರಿನ ಪಕ್ಕದ ಕಪಾಟಿನ ತುಂಬಾ ಕಾಗದಗಳೋ ಕಾಗದಗಳು. ಆರೆಂಟು ವರ್ಷದ ರದ್ದಿ ಪತ್ರವ್ಯವಹಾರಗಳು. ಯಾವುದು ಅಗತ್ಯ ಯಾವುದು ಅನಗತ್ಯ ಎಂದೂ ನಿರ್ಧರಿಸಲಾಗದ ಪರಿಸ್ಥಿತಿ. ಅದನ್ನೆಲ್ಲಾ ನೋಡಿ ಬೇಡದ್ದನ್ನು ಎಸೆದು ಬೇಕಾದನ್ನು ಆರಿಸಿಕೊಳ್ಳಲು ಹಲವು ವಾರಗಳೇ ಬೇಕಾಗಿತ್ತು ನನಗೆ. ಆಗ ನಾನು ಕಲಿತ ಪಾಠ: ಆಯಾ ಕಾಲಕ್ಕೆ ಸರಿಯಾಗಿ ಅವಧಿ ಮೀರಿದ ಕಾಗದಪತ್ರಗಳನ್ನು ನಾಶಪಡಿಸುವುದು ಒಂದು ಉತ್ತಮ ಆಡಳಿತಾತ್ಮಕ ಕ್ರಮ. ಇದೆಲ್ಲ ವಿವಾದ ಆಗುತ್ತದೆ ಎನ್ನುವುದೇ ನನಗೆ ಸೋಜಿಗ.)
2. ರಾಜೀನಾಮೆ ಕೊಟ್ಟು ಹೋಗುವ ಬದಲು ರಂಗನಾಥ್ ಮತ್ತು ರವಿ ಹೆಗಡೆ ಕನ್ನಡಪ್ರಭದ ಎಲ್ಲಾ ಶಾಖಾ ಕಚೇರಿಗಳಿಗೂ ಭೇಟಿ ನೀಡಿ ಕನ್ನಡಪ್ರಭದಲ್ಲಿ ಎಲ್ಲಾ ಸರಿ ಇಲ್ಲ ಎಂಬಂತೆ ಅಪಪ್ರಚಾರ ಮಾಡಿ ಕಂಪನಿಯೊಳಗೇ ಬೆಂಕಿ ಹಚ್ಚುವ ಕೆಲಸ ಮಾಡಿದರು.
ನಾವು ಇತ್ತೀಚೆಗೆ ರಾಜ್ಯಾದ್ಯಂತ ಪರ್ಯಟನೆ ಮಾಡಿದ್ದು ಉಪಸಂಪಾದಕರನ್ನು ನೇಮಿಸಿಕೊಳ್ಳುವ ಸಲುವಾಗೇ ವಿನಾ ಕಚೇರಿಯ ಬಗ್ಗೆ ಅಪಪ್ರಚಾರ ಮಾಡಲೆಂದಲ್ಲ. ಬೀದರದಿಂದ ಹಿಡಿದು ಚಾಮರಾಜನಗರದ ತನಕ ದೂರ ದೂರದ ಊರುಗಳಿಂದ ಯುವಕ ಯುವತಿಯರು ಕನ್ನಡಪ್ರಭದಲ್ಲಿ ಉದ್ಯೋಗಾವಕಾಶ ಕೋರಿ ಅರ್ಜಿ ಸಲ್ಲಿಸುತ್ತಾರೆ. ಅವರು ನಮ್ಮ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನಕ್ಕೆ ಹಾಜರಾಗಬೇಕು. ಇದಕ್ಕಾಗಿ, ಕೆಲವು ವರ್ಷಗಳ ಹಿಂದೆ, ಈ ಉದ್ಯೋಗಾಕಾಂಕ್ಷಿಗಳು ಬೆಂಗಳೂರಿಗೇ ಬಂದು ಒಂದು ದಿನ ತಂಗಬೇಕಾಗಿತ್ತು. ಇದಕ್ಕಾಗಿ ಅವರು ಪ್ರಯಾಣ ವೆಚ್ಚದ ಜೊತೆಗೆ ಲಾಡ್ಜಿಂಗ್ ವೆಚ್ಚದ ಹೊರೆಯನ್ನೂ ಹೊರಬೇಕಾಗಿತ್ತು. ಇದನ್ನು ತಪ್ಪಿಸಿ, ದೂರದೂರುಗಳ ಯುವಕ ಯುವತಿಯರಿಗೆ ಅನುಕೂಲವಾಗಲೆಂದು ರಾಜ್ಯದ ಅನೇಕ ಭಾಗಗಳಲ್ಲಿ ಪರೀಕ್ಷೆ ಹಾಗೂ ಸಂದರ್ಶನ ಏರ್ಪಡಿಸುವ ಪರಿಪಾಠವನ್ನು ನಾವು ಆರಂಭಿಸಿದೆವು. ಅದಕ್ಕಾಗಿ ಪ್ರತಿ ಬಾರಿಯೂ ನಾವು ರಾಜ್ಯಾದ್ಯಂತ ಪರ್ಯಟನೆ ನಡೆಸಿದ್ದೇವೆ. ಈ ಬಾರಿಯೂ ನಡೆಸಿದ್ದೇವೆ. ಆದರೆ, ಅಲ್ಲಿ ನಾವು ಕಂಪನಿಯ ಬಗ್ಗೆ ಅಪಪ್ರಚಾರ ನಡೆಸಿದೆವೆಂಬುದು ಅಪ್ಪಟ ನಾನ್ನೆಸ್ಸ್.
3. ಕನ್ನಡಪ್ರಭ ಮಾಲಿಕರನ್ನು, ಆಡಳಿತ ಮಂಡಳಿಯನ್ನು ರಂಗನಾಥ್ ಹಾಗೂ ರವಿ ಹೆಗಡೆ ಹಿಗ್ಗಾಮಗ್ಗ ಬೈದು, ಟೀಕಿಸಿ ರಾಜೀನಾಮೆ ನೀಡಿದ್ದಾರೆ. ಮ್ಯಾನೇಜ್ಮೆಂಟನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
Well, even at this moment, I can say, our Chairman is one of the best newspaper chairmen to work with. ತಾವು ಪತ್ರಿಕೆಯ ಮಾಲಿಕರಾದರೂ, ಸಂಪಾದಕ ಹಾಗೂ ಸಂಪಾದಕೀಯವನ್ನು ಅತ್ಯಂತ ಗೌರವದಿಂದಲೇ ಕಾಣುವ ವ್ಯಕ್ತಿ ಅವರು. ಅವರು ತಮ್ಮ ಈ ನಿಲುವಿನಿಂದ ಸಾಕಷ್ಟು ಜಾಹೀರಾತು ಆದಾಯವನ್ನು ಕಳೆದುಕೊಂಡಿದ್ದಾರೆ. ಆದರೂ, ಸಂಪಾದಕರ ನಿಲವಿಗೆ ಬದ್ಧರಾಗಿ ನಿಲ್ಲುತ್ತಾರೆ. ಇದು ಅನೇಕ ಬಾರಿ ಜಾಹೀರಾತು ವಿಭಾಗದವರ ಅಸಮಾಧಾನಕ್ಕೂ ಕಾರಣವಾಗಿದೆ. ಪರಿಸ್ಥಿತಿ ಹೀಗಿರುತ್ತ, ನಾವು ಅವರನ್ನು ಟೀಕಿಸಿ, ತರಾಟೆಗೆ ತೆಗೆದುಕೊಂಡು, ರಾಜೀನಾಮೆ ನೀಡಿದೆವು ಎಂಬುದು ನಾನ್ಸೆನ್ಸ್. ಕಚೇರಿಯ ಆಂತರಿಕ ವಿಚಾರಗಳ ಕುರಿತು ದೂರು ನೀಡಲು ಚೆನ್ನೈಗೆ ಹೋಗಬೇಕಾದ ದುರ್ಗತಿ ಕನ್ನಡಪ್ರಭದಲ್ಲಿ ಎಂದೂ ಇರಲಿಲ್ಲ. ಈಗಲೂ ಇಲ್ಲ.
ಕಚೇರಿಯಲ್ಲಿ ಸರಿ-ಇಲ್ಲದ ಕೆಲವು ಸೌಲಭ್ಯಗಳು ಸುಧಾರಿಸಬೇಕು ಎಂದು ನಿಷ್ಠುರವಾಗಿ ಎಂದಾದರೂ ಹೇಳಿದ್ದಕ್ಕೂ ಈಗ ರಾಜೀನಾಮೆ ನೀಡಿರುವುದಕ್ಕೂ ತಾಳೆ ಹಾಕುವುದು ಒಂದು ಕುಚೋದ್ಯ.
4. ಕನ್ನಡಪ್ರಭದಂತ ಪುಟುಗೋಸಿ ಸಂಬಳದ ಪತ್ರಿಕೆಯಲ್ಲಿದ್ಕೊಂಡು...
ಕನ್ನಡಪ್ರಭ ಪುಟಗೋಸಿ ಸಂಬಳ ನೀಡುವ ಪತ್ರಿಕೆಯಲ್ಲ. It's one of the best paying Kannada Media organisations. ಇಲ್ಲಿ ಅನೇಕರಿಗೆ ಕನ್ನಡದ ನಂ.1 ಪತ್ರಿಕೆಗಿಂತ ಹೆಚ್ಚಿನ ವೇತನ ದೊರೆಯುತ್ತದೆ.
---
That's all I would say. ಮಿಕ್ಕಂತೆ ನಾವೇನೂ ಅಜಾತಶತ್ರುಗಳೂ ಅಲ್ಲ. ಟೀಕಾತೀತರೂ ಅಲ್ಲ. ನಮ್ಮ ಬಗ್ಗೆ ಟೀಕೆಗಳು ಮುಂದುವರಿಯುತ್ತವೆ ಎಂಬುದು ಗೊತ್ತು. ನಮ್ಮ ಜನ ಮಾಹಾತ್ಮ ಗಾಂಧಿಯನ್ನೇ ಟೀಕಿಸದೇ, ದ್ವೇಷಿಸದೇ ಬಿಟ್ಟಿಲ್ಲ. ಇನ್ನು ನಾವ್ಯಾವ ಸೀಮೆಯ ಹುಲ್ಲು ಕಡ್ಡಿಗಳು? ಆದರೆ, ಕನ್ನಡಪ್ರಭವನ್ನು ಕಳೆದ ಐದು ವರ್ಷಗಳಲ್ಲಿ ಕಟ್ಟಿ ಬೆಳೆಸಿದ, ಕನ್ನಡ ಪತ್ರಿಕೋದ್ಯಮದಲ್ಲಿ ಅನೇಕ ಹೊಸತನಗಳನ್ನು ರೂಢಿಸಿದ ಹೆಮ್ಮೆ ನಮಗಿದೆ. ನಮ್ಮ ಬಗ್ಗೆ ಕೋಪ ಕಾರುವವರು ಇದ್ದಾರೆ ನಿಜ. ಆದರೆ, ನಮ್ಮನ್ನು ಇಷ್ಟಪಡುವವರು ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂಬ ಸಮಾಧಾನ ನಮಗಿದೆ.
Wednesday, August 12, 2009
ಸಂಪಾದಕರ ಕಡತಗಳಿಗೆ ಬೆಂಕಿ: ಒಂದು ಅಧಿಕೃತ ಸ್ಪಷ್ಟನೆ
Wednesday, July 15, 2009
ಠಳ್ಳನೆ ಒಡೆಯಿತು ಒಬಾಮಾ "ರಹಸ್ಯ ಟೆಲೆಪ್ರಾಂಪ್ಟರ್"

ಬರಾಕ್ ಒಬಾಮಾ ಮಾತಿನ ಮಾಂತ್ರಿಕ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ನಿರರ್ಗಳ ಭಾಷಣ, ಪ್ರಭಾವೀ ಕಂಠ, ಆತ್ಮವಿಶ್ವಾಸದ ಧ್ವನಿ ಕೇಳಿದರೆ ಎಂಥವನೂ ಮರುಳಾಗಲೇ ಬೇಕು. ಅಂಥ ವಿದ್ಯುಚ್ಛಕ್ತಿ ಇದೆ ಅವರ ಮಾತಿನಲ್ಲಿ. ಚರ್ಚುಗಳ ಕಮ್ಯುನಿಟಿ ಸಂಘಟನೆಯಲ್ಲಿ ಪ್ರಚಾರಕನಂತೆ ಕೆಲಸ ಮಾಡುತ್ತಿದ್ದ ಬರಾಕ್ ಒಬಾಮಾ ರಾಜಕೀಯದಲ್ಲಿ ದಿಢೀರ್ ನಾಯಕನಾಗಿ, ಇಲಿನಾನ್ಸ್ ರಾಜ್ಯದ ಸೆನೆಟರ್ ಆಗಿ ನಂತರ ಇಡೀ ಅಮೇರಿಕಕ್ಕೆ ಅಧ್ಯಕ್ಷ ಆಗಿ ದಿಢೀರನೆ ಬೆಳೆದದ್ದು ಒಂದು ಅದ್ಭುತ.
ಒಬಾಮಾ ಇಂಥ ವಾಗ್ಮಿಯಾದರೂ, ಅವರ ಭಾಷಣದ ಹಿಂದೆ ಒಂದು ತಾಂತ್ರಿಕ ಪಡೆಯೇ ಇರುತ್ತದೆ ಎಂದು ನಿಮಗೆ ಗೊತ್ತೇ? ಒಬಾಮಾ ಭಾಷಣ ಮಾಡುವಾಗ "ಟೀವಿ ಸುದ್ದಿ ವಾಚಕರು ವಾರ್ತೆ ಓದುವಾಗ ಬಳಸುವಂಥ ಟೆಲೆಪ್ರಾಂಪ್ಟರ್" ಬಳಸುತ್ತಾರೆ ಎಂದರೆ ನಂಬುತ್ತೀರಾ? ಹೌದು... ಅವರು ಎಲ್ಲರೆದುರೇ, ವೇದಿಕೆಯಲ್ಲೇ ಟೆಲೆಪ್ರಾಂಪ್ಟರ್ ಬಳಸಿದರೂ ಅದು ಯಾರಿಗೂ ಕಾಣುವುದಿಲ್ಲ. ಒಂಥರಾ ರಹಸ್ಯ ಎಂಬಂತಿರುತ್ತದೆ ಅದು.
ಅದು ಟೀವಿ ಸ್ಟೂಡಿಯೋಗಳ ಟೆಲೆಪ್ರಾಂಪ್ಟರಿಗಿಂತ ಹೈಟೆಕ್. ನೋಡಲು ಸಾಮಾನ್ಯ ಪಾರದರ್ಶಕ ಗಾಜಿನಂತೆ ಕಾಣಿಸುವುದರಿಂದ ಪ್ರೇಕ್ಷಕರ ಗಮನಕ್ಕೆ ಬರುವುದಿಲ್ಲ. ಆದರೆ, ಭಾಷಣಕ್ಕೆ ನಿಂತ ಒಬಾಮಾಗೆ ಮಾತ್ರ ಆ ಗಾಜಿನ ಮೇಲೆ ಚೆನ್ನಾಗಿ ಅಕ್ಷರಗಳು ಕಾಣಿಸುತ್ತವೆ. ಈ ಕೆಳಗಿನ ಚಿತ್ರ ನೋಡಿ.
ಆದರೂ, ಇಂಥದ್ದೆಲ್ಲ ಬಹಳ ಕಾಲ ರಹಸ್ಯವಾಗಿ ಉಳಿಯುವುದಿಲ್ಲ. 2008ರ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಅದು ಹೇಗೋ ಪತ್ತೆಯಾದ ಈ ಟೆಲೆಪ್ರಾಂಪ್ಟರ್ ಗುಟ್ಟು, ಅಮೆರಿಕದಲ್ಲಿ ಒಂದಷ್ಟು ಟೀಕೆಗೂ ಒಳಗಾಗಿತ್ತು. ಆದರೆ, ಒಬಾಮಾ ಚರಿಷ್ಮಾ ಎದುರು ಅದು ದೊಡ್ಡ ಸುದ್ದಿಯಾಗಲಿಲ್ಲ ಅಷ್ಟೇ. ಆನಂತರ, ಅಧ್ಯಕ್ಷರಾದ ಮೇಲೂ ಅವರು ಟೆಲೆಪ್ರಾಂಪ್ಟರ್ ಬಳಸುವುದನ್ನು ಬಿಡಲಿಲ್ಲ. ಅವರು ಎಲ್ಲಿಲ್ಲಿಗೆ ಹೋಗಿ ಭಾಷಣ ಮಾಡುತ್ತಿದ್ದರೋ, ಅಲ್ಲಿಗೆಲ್ಲಾ ಅವರ ಟೆಲೆಪ್ರಾಂಪ್ಟರ್ ಕೂಡ ಹೋಗುತ್ತಿತ್ತು.
ಪರಿಸ್ಥಿತಿ ಹೀಗಿರುತ್ತ, ನಿನ್ನೆ ಮಂಗಳವಾರ ಅವರ ಟೆಲೆಪ್ರಾಂಪ್ಟರ್ ಗುಟ್ಟು ರಟ್ಟಾಯಿತು. ಜಗತ್ತಿನಾದ್ಯಂತ ಸುದ್ದಿಯಾಯಿತು. ಕಾರಣ... ಕಾರ್ಯಕ್ರಮವೊಂದರಲ್ಲಿ ಟೆಲೆಪ್ರಾಂಪ್ಟರ್ ನೋಡಿಕೊಂಡು ಒಬಾಮಾ ಭಾಷಣ ಮಾಡುತ್ತಿರುವಾಗ ಅದು ಎಲ್ಲರೆದುರೇ ಠಳ್ಳಂತ ಬಿದ್ದು ಒಡೆದುಹೋಯಿತು. ಇದರಿಂದ ಒಬಾಮಾ ತುಸು ಗಾಬರಿಗೊಂಡರು. ತಕ್ಷಣವೇ ಸಾವರಿಸಿಕೊಂಡರೂ ಅವರ ಭಾಷಣ ಒಂದಷ್ಟು ತೊದಲಿತು. ಇದು ಟೀವಿಗಳಲ್ಲೂ ಬಿತ್ತರವಾಯಿತು. ಆಗ ಟೀವಿ ಸುದ್ದಿ ವಾಚಕರು ಮುಸಿ ಮುಸಿ ನಗುತ್ತ ಹೇಳಿದರು... "ಅಧ್ಯಕ್ಷರ ಭಾಷಣಕ್ಕೆ ತಾಂತ್ರಿಕ ತೊಡಕಾಗಿದೆ. ಅಡಚಣೆಗಾಗಿ ಕ್ಷಮಿಸಿ. :-)"
ಅಂದಹಾಗೆ ಒಬಾಮಾ ಟೆಲೆಪ್ರಾಂಪ್ಟರ್ ಹೇಗಿತ್ತು? ಇಲ್ಲಿವೆ ಕೆಲ ಚಿತ್ರಗಳು:
ಒಬಾಮಾ ಎದುರಿಗೆ ಇರುವ ಟೆಲೆಪ್ರಾಂಪ್ಟರ್.
ಅಡಿಯಲ್ಲಿರುವ ಕಂಪ್ಯೂಂಟರ್ ತೆರೆಯ ಮೇಲೆ ಮೂಡುವ ಭಾಷಣದ ಅಕ್ಷರಗಳು ಟೆಲೆಪ್ರಾಂಪ್ಟರ್ ಮೂಲಕ ಒಬಾಮಾಗೆ ಕಾಣುವುದು ಹೀಗೆ.
ಟೆಲೆಪ್ರಾಂಪ್ಟರಿನ ಗಾಜು ಎಷ್ಟು ಪಾರದರ್ಶಕ ಎಂದು ಗಮನಿಸಿ.
ಆದರೆ ಎದುರು ಕುಳಿತ ಪ್ರೇಕ್ಷಕರಿಗೆ ಈ ಪಾರದರ್ಶಕ ಟೆಲೆಪ್ರಾಂಪ್ಟರ್ ಮೇಲೆ ಮೂಡುವ ಅಕ್ಷರಗಳು ಕಾಣಿಸುವುದಿಲ್ಲ. ಅಲ್ಲದೇ, ಸಾಧಾರಣ ಗಾಜಿನಂತೇ ಕಾಣುವ ಅದು ಪ್ರೇಕ್ಷಕರ ಗಮನವನ್ನೂ ಸೆಳೆಯುವುದಿಲ್ಲ.
ಒಬಾಮಾ ಅವರ ಸಾರ್ವಜನಿಕ ಕಾರ್ಯಕ್ರಮವೊಂದರ ಈ ಚಿತ್ರ ನೋಡಿ. ಅಲ್ಲಿ ಟೆಲೆಪ್ರಾಂಪ್ಟರ್ ಇದೆ ಎಂದು ಯಾರ ಗಮನಕ್ಕೆ ಬರಲು ಸಾಧ್ಯ ನೀವೇ ಹೇಳಿ.
Saturday, July 04, 2009
ಕನ್ನಡದಲ್ಲಿ Stay Hungry Stay Foolish

ಇತ್ತೀಚೆಗೆ ನನಗೆ ತುಂಬಾ ಇಷ್ಟವಾದ ಎರಡು ಪುಸ್ತಕಗಳಲ್ಲಿ Stay Hungry Stay Foolish ಕೂಡ ಒಂದು. ಬರೆದದ್ದು ರಶ್ಮಿ ಬನ್ಸಾಲ್ ಎಂಬ ಅಹಮದಾಬಾದ್ ಐಐಎಂನ ಹಳೆ ವಿದ್ಯಾರ್ಥಿನಿ. ಈಗ ಜಾಮ್ಮ್ಯಾಗ್ ಪತ್ರಿಕೆಯ ಸಂಪಾದಕಿ. ಈ ಪುಸ್ತಕ 1 ಲಕ್ಷ ಪ್ರತಿಗಳ ಮಾರಾಟ ದಾಟಿದೆ. ಇದೀಗ ಈ ಪುಸ್ತಕದ ಕನ್ನಡ ಅವತರಣಿಕೆಯೂ ಬಂದಿದೆ ಅಂತ ಈಗ ಗೊತ್ತಾಯ್ತು. ಸಾಧನೆಗೆ ಮಿತಿ ಇಲ್ಲ ಸಾಧಕರಿಗೆ ಕೊನೆ ಇಲ್ಲ - ಅಂತ ಶಿರ್ಷಿಕೆಯಂತೆ. 325 ಪುಟ, 150 ರುಪಾಯಿ. ಜುಲೈ 2ರಂದು, ಬೆಂಗಳೂರಿನಲ್ಲಿ, ಖುದ್ದು ರಶ್ಮಿ ಬನ್ಸಾಲ್ ಈ ಪುಸ್ತಕವನ್ನು ಬಿಡುಗಡೆ ಮಾಡಿದರಂತೆ.
ಕನ್ನಡ ಭಾಷಾಂತರ ಯಾರು ಮಾಡಿದ್ದಾರೆ, ಹೇಗೆ ಮಾಡಿದ್ದಾರೆ, ಯಾರು ಪ್ರಕಟಿಸಿದ್ದಾರೆ ಅಂತ ಗೊತ್ತಾಗಲಿಲ್ಲ. (ನಾನಾಗಲೀ, ಕನ್ನಡಪ್ರಭ ಸಂಪಾದಕ ಎಚ್. ಆರ್. ರಂಗನಾಥ್ ಅವರಾಗಲೀ ಈ ಪುಸ್ತಕದ ಭಾಷಾಂತರ ಮಾಡಬೇಕು ಅಂದುಕೊಂಡಿದ್ದೆವು. ಪತ್ರಿಕೆಯ ಕೆಲಸದ ಗಡಿಬಿಡಿಯಲ್ಲಿ ಸಾಧ್ಯವಾಗಲಿಲ್ಲ.)
ನೌಕ್ರಿ ಡಾಟ್ ಕಾಮ್, ಮೇಕ್ ಮೈ ಟ್ರಿಪ್ ಡಾಟ್ ಕಾಮ್, ಸುಭಿಕ್ಷಾ, ರೇಣುಕಾ ಶುಗರ್ಸ್, ಎಜುಕಾಂಪ್, ಸಿಂಟೆಕ್ಸ್, ಆರ್ಕಿಡ್ ಹೊಟೆಲ್, ಮುಂತಾದ ಅನೇಕ ಕಂಪನಿಗಳನ್ನು ಸ್ಥಾಪಿಸಿದ ಐಐಎಂಎ ವಿದ್ಯಾರ್ಥಿಗಳ 25 ಸಾಧನೆಯ ಕಥೆಗಳಿವೆ. ಸಂಬಳಕ್ಕೆ ನೌಕರಿ ಮಾಡುವ ಬದಲಿಗೆ ತಾವೇ ಮಾಲಿಕರಾಗುವ ಯುವಕರ ನಿಜ ಘಟನೆಗಳು ಇವು. Very Inspiring.
ರಶ್ಮಿ ಈಗ ಎರಡನೇ ಪುಸ್ತಕವನ್ನು ಬರೆಯುತ್ತಿದ್ದಾರಂತೆ. ಹೊಸ ಪುಸ್ತಕದ ಬಗ್ಗೆ ನಿರೀಕ್ಷೆಯೂ ಹೆಚ್ಚಾಗಿದೆ.
An Update by Mr. Bedre Manjunath : SHSF Kannada Version hss been published by Vassan Publications, Bangalore and the translation has come up nicely. But, don't know who the translator is. It is a recent trend with the publishers that they pay the translator some amount and drop his or her name from the book. It is only Sri Visweswar Bhat who got his name published in You Can Win. All others are not ready to publish the name of the translator. They want the product but they don't want the creator! Great guns! Even in this case the name of the translator has not been published. You can see its Kannada version Cover page on my Blog http://bedrebaraha.blogspot.com
Tuesday, June 30, 2009
ಮಹಾನ್ ಪತ್ರಕರ್ತರಿಂದ ಯೂಟ್ಯೂಬಲ್ಲಿ ವರದಿಗಾರಿಕೆ ಟಿಪ್ಸ್

ತನಿಖಾ ವರದಿಯ 3 ಮೂಲಗಳ ಕುರಿತು ಮಾತನಾಡುತ್ತಿರುವ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಸಹ ಸಂಪಾದಕ ಬಾಬ್ ವುಡ್ವರ್ಡ್. ಜಗತ್ಪಸಿದ್ಧ ವಾಟರ್ಗೇಟ್ ಹಗರಣ ಬಹಿರಂಗ ಮಾಡಿದ ಇಬ್ಬರು ವರದಿಗಾರರಲ್ಲಿ ಇವರೂ ಒಬ್ಬರು.
---------------------
ತನಿಖಾ ವರದಿ ಮಾಡುವುದು ಹೇಗೆ? ಅಂತಾರಾಷ್ಟ್ರೀಯ ವರದಿಗಳನ್ನು ನಿಭಾಯಿಸುವ ಪರಿಯೇನು? ಸಂದರ್ಶನ ತಂತ್ರಗಳು... ಹೀಗೆ ಅನೇಕ ವರದಿಗಾರಿಕೆ ವಿಷಯಗಳ ಕುರಿತು ಅಮೆರಿಕದ ಶ್ರೇಷ್ಠ ಪತ್ರಕರ್ತರು ಪುಟ್ಟ ಪುಟ್ಟ ಟಿಪ್ಸ್ ನೀಡುತ್ತಾರೆ. ಎಲ್ಲಿ?
ಇಂಟರ್ನೆಟ್ಟಿನ ವಿಡಿಯೋ ಸೈಟ್ "ಯೂಟ್ಯೂಬ್" ಜೂನ್ 29ರಿಂದ ವರದಿಗಾರರ ಆನ್ಲೈನ್ ಚಾನಲ್ ಆರಂಭಿಸಿದೆ. http://www.youtube.com/reporterscenter ಇಲ್ಲಿ ಪುಟ್ಟ ಪುಟ್ಟ ವಿಡಿಯೋಗಳಿವೆ. ಪರಿಣತ ಪತ್ರಕರ್ತರಿಗೆ ಈ ಟಿಪ್ಸ್ ಹೆಚ್ಚು ಪ್ರಯೋಜನಕ್ಕೆ ಬರಲಾರದೇನೋ! ಆದರೆ, ಉದಯೋನ್ಮುಖ ಪತ್ರಕರ್ತರಿಗೆ ಖಂಡಿತ ಉಪಯುಕ್ತ.
"ಸಿಟಿಝನ್ ಜರ್ನಲಿಸ್ಟ್" ಕಾನ್ಸೆಪ್ಟ್ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಇಂತಹ ಹವ್ಯಾಸಿ ಪತ್ರಕರ್ತರಿಗೆ ಹಾಗೂ ಸಾರ್ವಜನಿಕರಿಗೆ ವರದಿಗಾರಿಕೆಯ ತಂತ್ರಗಳ ಕುರಿತು ಮಾರ್ಗದರ್ಶನ ನೀಡಿ ಸಿಟಿಝನ್ ಜರ್ನಲಿಸಂಗೆ ಉತ್ತೇಜನ ನೀಡುವುದು ಯೂಟ್ಯೂಬಿನ "ರಿಪೋರ್ಟರ್ಸ್ ಸೆಂಟರಿನ" ಉದ್ದೇಶ. ಅಂದರೆ, ಯೂಟ್ಯೂಬಿನಲ್ಲಿ 24 ಗಂಟೆ ಸಿಟಿಝನ್ ಜರ್ನಲಿಸ್ಟ್ ನ್ಯೂಸ್ ಚಾನಲ್ ಆರಂಭಿಸುವ ಉದ್ದೇಶ ಗೂಗಲ್ಗೆ ಇದ್ದಿರಬಹುದು.
ಕಪಿಲ್ ಸಿಬಲ್ ಕಪಿ-ಚೇಷ್ಟೆ!
ನಾನು ಸಜೀವ ಗಿನಿ ಪಿಗ್ಗಳನ್ನು ಎಂದೂ ನೋಡಿಲ್ಲ. ಆದರೆ, ನಾನು 7ನೇ ತರಗತಿಯಲ್ಲಿದ್ದಾಗ, ವಿಜ್ಞಾನ ಪುಸ್ತಕದಲ್ಲಿ ಆನುವಂಶಿಯತೆ ಕುರಿತ ಪಾಠದಲ್ಲಿ 'ಗಿನಿ ಪಿಗ್' ಎಂಬ ಮೊಲದಂತೆ ಕಾಣುವ, ಹಂದಿಗಳ ಚಿತ್ರ ನೋಡಿದ ನೆನಪು ಇನ್ನೂ ಇದೆ. ಇಲಿಗಳು ಹಾಗೂ ಗಿನಿ ಪಿಗ್ಗಳನ್ನು ವಿಜ್ಞಾನಿಗಳು ತಮ್ಮ ಪ್ರಯೋಗಕ್ಕೆ ಬಳಸಿಕೊಳ್ಳುವುದು ವಾಡಿಕೆ. ಆದ್ದರಿಂದ, 'ಗಿನಿ ಪಿಗ್' ಎಂದರೆ 'ಪ್ರಯೋಗ ಪಶು' ಎಂಬ ಅರ್ಥ ಹುಟ್ಟಿಕೊಂಡಿದ್ದು ನಿಮಗೂ ಗೊತ್ತಿರಬಹುದು. ಅದು ಸರಿ... ಈಗ ನನಗೆ ಧಡಕ್ಕಂತ ಗಿನಿ ಪಿಗ್ ನೆನಪಾದದ್ದು ಏಕೆ?
ಏಕೆಂದರೆ, ನನಗೆ ಹತ್ತನೇ ತರಗತಿ ವಿದ್ಯಾರ್ಥಿಗಳೆಲ್ಲ ಈಗ 'ಗಿನಿ ಪಿಗ್ಗುಗಳಂತೆ' ಕಾಣುತ್ತಿದ್ದಾರೆ. ಪಾಪ ಪ್ರಯೋಗ ಪಶುಗಳು!
ಶಿಕ್ಷಣ ಕ್ಷೇತ್ರದಲ್ಲಿ, ನಮ್ಮ ಮಕ್ಕಳ ಮೇಲೆ ನಡೆಯುತ್ತಿರುವ ಪ್ರಯೋಗಗಳನ್ನು ನೋಡಿದಾಗ ನನಗೆ ಅಯ್ಯೋ ಅನ್ನಿಸುತ್ತದೆ. ನಮ್ಮ ದೇಶದಲ್ಲಿ, ನಮ್ಮ ರಾಜ್ಯದಲ್ಲಿ ಅದೆಷ್ಟು ಶಿಕ್ಷಣ ತಜ್ಞರು! ಅದೆಂಥ ಪ್ರಯೋಗಗಳು! ಒಬ್ಬರು ಮಾತೃಭಾಷೆಯಲ್ಲಿ ಶಿಕ್ಷಣ ಅಂದರೆ, ಇನ್ನೊಬ್ಬರು ಆಂಗ್ಲ ಮಾಧ್ಯಮ ಅನ್ನುತ್ತಾರೆ. ಇನ್ನೊಬ್ಬರು ಟ್ರೈಮಿಸ್ಟರ್ ಅಂದರೆ ಇನ್ನೊಬ್ಬರು ಸೆಮಿಸ್ಟರ್ ಅಂತಾರೆ. ಒಬ್ಬರು ಸೆಂಟ್ರಲ್ ಸಿಲಬಸ್ ಅಂದರೆ ಮಗದೊಬ್ಬರು ಸ್ಟೇಟ್ ಸಿಲಬಸ್ ಅಂತಾರೆ. ಸಾಲದೂ ಅಂತ ಈಗ ಈ ತಜ್ಞರ ಪೀಳಿಗೆಗೆ ಹೊಸ ಪಂಡಿತರೊಬ್ಬರ ಸೇರ್ಪಡೆಯಾಗಿದೆ.
ಮೀಟ್ ಮಿಸ್ಟರ್ ಕಪಿ ಸಿಬಲ್.. ಸಾರಿ... ಕಪಿಲ್ ಸಿಬಲ್
ಇವರು ಇದೀಗ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಈ ಕೆಳಗಿನ ಪ್ರಯೋಗ ಮಾಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ.
1. SSLC ಪಬ್ಲಿಕ್ ಪರೀಕ್ಷೆ ರದ್ದು ಮಾಡುವ ಪ್ರಯೋಗ.
2. SSLC, CBSE, ICSE ಮುಂತಾದ ಮಂಡಳಿಗಳನ್ನೆಲ್ಲಾ ವಿಸರ್ಜಿಸಿ ದೇಶಾದ್ಯಂತ ಒಂದೇ ಪ್ರೌಢ ಶಿಕ್ಷಣ ಮಂಡಳಿ ಸ್ಥಾಪಿಸುವ ಪ್ರಯೋಗ.
3. ದಿಲ್ಲಿಯಿಂದ ಹಳ್ಳಿವರೆಗೆ ಏಕರೂಪ ಪಠ್ಯ ತರುವ ಪ್ರಯೋಗ.
ಈಗಿನ ಶಿಕ್ಷಣ ಪದ್ಧತಿಯಲ್ಲಿ, ಪರೀಕ್ಷೆಗಳಿಂದ ವಿದ್ಯಾರ್ಥಿಗಳಿಗೆ ಸಿಕ್ಕಾಪಟ್ಟೆ ಟೆನ್ಶನ್ ಇದೆ. ಈ ಟೆನ್ಶನ್ನಿಂದ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಲೂ ಮುಂದಾಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಟೆನ್ಶನ್ ಕಡಿಮೆ ಮಾಡಲು ಪರೀಕ್ಷೆಗಳನ್ನೇ ರದ್ದು ಮಾಡಬೇಕು ಎಂಬುದು ಅವರ ಆಲೋಚನೆ. ಒಂದುವೇಳೆ, ಕಪಿಲ್ ಸಿಬಲ್ ವೈದ್ಯರಾಗಿದ್ದರೆ ಡೇಂಜರ್ ಆಗಿತ್ತು. ಯಾರಾದರೂ ನೆಗಡಿ ಅಂತ ಅವರ ಬಳಿ ಹೋದರೆ, ಡಾಕ್ಟರ್ ಸಿಬಲ್ ಮೂಗು ಕತ್ತರಿಸುತ್ತಿದ್ದರು! ತಲೆ ನೋವು ಅಂದರೆ, ತಲೆ ತೆಗೆದುಹಾಕುತ್ತಿದ್ದರು!
ಆದರೂ, ಪರೀಕ್ಷೆ ರದ್ದು ಮಾಡುವ ಯೋಜನೆ ಪ್ರಕಟಿಸುವಾಗ ಕಪಿಲ್ರನ್ನು ಟೀವಿಯಲ್ಲಿ ನೋಡಬೇಕಿತ್ತು! ತಾನೇ ಮಹಾಬುದ್ಧಿವಂತ ಎಂಬಂತೆ ಅವರು ಬೀಗುತ್ತಿದ್ದರು. ಸಾಲದು ಎಂಬಂತೆ, ಅದ್ಯಾರೋ ಪೋದ್ದಾರ್ ಎಂಬ ಮಹರಾಯ್ತಿ ಸಿಬಲ್ ಅವರನ್ನ ಶಿಕ್ಷಣ ಕ್ಷೇತ್ರದ ಸ್ಯಾಮ್ ಪಿತ್ರೋಡಾ ಅಂತಲೂ ಬಣ್ಣಿಸಿದಳು. ಓ ಗಾಡ್!
ಹಾಗಾದರೆ, SSLC ಪರೀಕ್ಷೆ ರದ್ದು ಮಾಡಿದರೆ, ವಿದ್ಯಾರ್ಥಿಗಳ ಮೇಲಿನ ಒತ್ತಡ ನಿಜವಾಗಲೂ ಕಡಿಮೆಯಾಗುತ್ತಾ? ನನ್ನ ಪ್ರಕಾರ ಇಲ್ಲ. ಕಪಿಲ್ ಪ್ರಯೋಗ ಒಂದು ಕಪಿಚೇಷ್ಟೇಯಾಗುತ್ತದೆ ಅಷ್ಟೇ. ಇದಕ್ಕೆ ನನ್ನ 6 ಫಂಡಾ ಇದೆ, ನೋಡಿ.
ಫಂಡಾ 1: SSLC ಪರೀಕ್ಷೆ ರದ್ದಾಗುವುದರಿಂದ ವಿದ್ಯಾರ್ಥಿಗಳ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂಬುದು ಸುಳ್ಳು. ಒತ್ತಡ ಒಂದು ಪಾಯಿಂಟಲ್ಲಿ ಕಡಿಮೆಯಾಗಿ ಇನ್ನೊಂದು ಪಾಯಿಂಟಿಗೆ ಶಿಫ್ಟ್ ಆಗುತ್ತದೆ. ಅಷ್ಟೇ.
ಮೊಟ್ಟ ಮೊದಲನೇಯದಾಗಿ ಮಕ್ಕಳ ಮೇಲೆ ಮಾನಸಿಕ ಒತ್ತಡ ಏಕೆ ಉಂಟಾಗುತ್ತದೆ ಎಂಬುದನ್ನು ಗಮನಿಸಬೇಕು. ಇದಕ್ಕೆ ಶಿಕ್ಷಣದ ಗ್ರಾಫಿನಲ್ಲಿ ಹಿಮ್ಮುಖವಾಗಿ ಯೋಚಿಸಬೇಕು.
a) ಇದು ಶಿಕ್ಷಣದ ಗ್ರಾಫ್. ಎಲ್ಲ ಪಾಲಕ ಪೋಷಕರ ಉದ್ದೇಶವೇನು? ತಮ್ಮ ಮಕ್ಕಳು ಚೆನ್ನಾಗಿ ಓದಿ-ಕಲಿತು ಉತ್ತಮ ಉದ್ಯೋಗ ಪಡೆಯಬೇಕು. ಕೈತುಂಬಾ ಸಂಬಳ ಪಡೆದು ಸುಖವಾಗಿ ಬದುಕಬೇಕು ಎಂಬುದು ತಾನೆ? ಅಂದರೆ, ಈ ಗ್ರಾಫಿನ 5ನೇ ಹಂತ ತಲುಪುವುದು ಎಲ್ಲ ಪಾಲಕ-ಪೋಷಕರ ಗುರಿ. ಈ ಹಂತ ತಲುಪುವ ಸಲುವಾಗಿ ಎಲ್ಲ ಒತ್ತಡ ಇರುತ್ತದೆ. ಒಮ್ಮೆ ಈ ಹಂತ ತಲುಪಿದರೆ ಒತ್ತಡ ನಿವಾರಣೆಯಾಗುತ್ತದೆ ಹಾಗೂ ಪಾಲಕರು ತಮ್ಮ ಜೀವನ ಧನ್ಯವಾಯಿತು ಎಂದುಕೊಳ್ಳುತ್ತಾರೆ. ಅಂದರೆ, ಪಾಲಕರು ತಮ್ಮ ಮಕ್ಕಳ ಮೇಲೆ ಶಿಕ್ಷಣದ ಒತ್ತಡ ಹೇರುವುದು ಈ 5ನೇಯ ಹಂತ ತಲುಪುವ ಸಲುವಾಗಿ. Point to be noted. ಉತ್ತಮ ಉದ್ಯೋಗ ಪಡೆಯುವುದೇ "ಒತ್ತಡದ" ಗಮ್ಯ.
b) ಹಾಗಾದರೆ, 5ನೇ ಹಂತ ತಲುಪುವುದು ಹೇಗೆ? ಐದನೇ ಹಂತ ತಲುಪಲು ಮಕ್ಕಳು ಅತ್ಯುತ್ತಮ ಶಿಕ್ಷಣ ಹಾಗೂ ಕೌಶಲ್ಯವನ್ನು ಪಡೆದಿರಬೇಕಾಗುತ್ತದೆ. ಕೇವಲ ಶಿಕ್ಷಣದ ಪ್ರಮಾಣಪತ್ರ ಪಡೆದಿದ್ದರೆ ಉತ್ತಮ ಉದ್ಯೋಗ ಸಿಗುವುದಿಲ್ಲ. ಉದಾಹರಣೆಗೆ ಬರೀ ಎಂಬಿಎ ಪದವಿ ಪಡೆದರೆ, ಸಾಲದು. ಆ ಪದವಿಯಲ್ಲಿ ಅತ್ಯುತ್ತಮ ಸ್ಕೋರ್ ಮಾಡಿರಬೇಕು. ಕೇವಲ ಉತ್ತಮ ಸ್ಕೋರ್ ಮಾಡಿದರೂ ಸಾಲದು. ಅತ್ಯುತ್ತಮ ಬಿಸಿನೆಸ್ ಸ್ಕೂಲಲ್ಲಿ ಕಲಿತಿರಬೇಕು. ಅತ್ಯುತ್ತಮ ಸಂಸ್ಥೆಯಲ್ಲಿ ಕಲಿತರೆ ಮಾತ್ರ ಅತ್ಯುತ್ತಮ ಉದ್ಯೋಕ್ಕೆ ಅರ್ಹತೆ ದೊರೆಯುತ್ತದೆ. Point to be noted. ಅಂದರೆ, ಇಲ್ಲಿ ಎರಡು ರೀತಿಯ ಒತ್ತಡ ಇರುತ್ತದೆ. ಒಂದು ಉತ್ತಮ ಸ್ಕೋರ್ ಮಾಡುವುದು ಹಾಗೂ ಇನ್ನೊಂದು ಅತ್ಯುತ್ತಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವುದು.
c) ಈ ಎರಡು ರೀತಿಯ ಒತ್ತಡಗಳೂ ಈಗ ಹಿಮ್ಮುಖವಾಗಿ 4, 3, 2ನೇ ಹಂತಕ್ಕೆ ವರ್ಗಾವಣೆಯಾಗುತ್ತವೆ. ಬೆಂಗಳೂರಿನಂಥ ಷಹರಗಳಲ್ಲಾದರೆ, ಈ ಒತ್ತಡ 1ನೇ ಹಂತಕ್ಕೂ ವರ್ಗಾವಣೆಯಾಗುತ್ತದೆ. (ಬೆಂಗಳೂರಿನಲ್ಲಿ ಉತ್ತಮ ಪ್ರಾಥಮಿಕ ಶಾಲೆಯಲ್ಲಿ LKGಗೆ ಪ್ರವೇಶ ಪಡೆಯುವ ಕಷ್ಟ ಪಾಲಕರಿಗೇ ಗೊತ್ತು!)
ಅಂದರೆ, ಅರ್ಥವಿಷ್ಟೇ. ವಿದ್ಯಾರ್ಥಿಗಳ ಮೇಲಿನ ಒತ್ತಡ ಎನ್ನುವುದು ಇಂದಿನ ಪರೀಕ್ಷೆಯ ಒತ್ತಡವಲ್ಲ. ಅದು ಭವಿಷ್ಯದ ಒತ್ತಡ. ಉತ್ತಮ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಹಾಗೂ ಉತ್ತಮ ಉದ್ಯೋಗ ಪಡೆಯುವ ಕುರಿತಾದ ಒತ್ತಡ. ಅದು ಹಿಮ್ಮುಖವಾಗಿ ಬಂದಿದೆ ಅಷ್ಟೇ. Point to be noted. ಹಂತ 5ರಲ್ಲಿರುವ ಭವಿಷ್ಯದ ಒತ್ತಡವನ್ನು ನಿವಾರಿಸದ ಹೊರತೂ ಹಂತ 4, 3, 2 ಹಾಗೂ 1ರ ಮೇಲಿನ ಒತ್ತಡ ನಿವಾರಣೆಯಾಗುವುದಿಲ್ಲ.
ಸಿಬಲ್ ಅವರ ಕ್ರಾಂತಿಕಾರಿ ಶಿಕ್ಷಣ ಪದ್ಧತಿ ಹಂತ 5ರ ಒತ್ತಡವನ್ನು ನಿವಾರಿಸುವುದಿಲ್ಲ.
ಫಂಡಾ 2 : ಕರ್ನಾಟಕದ SSLC ಪ್ರಯೋಗ ಫೇಲಾದ ಕಥೆ
ಓ.ಕೆ. ಒಂದು ವೇಳೆ 10ನೇ ತರಗತಿಯ ಪಬ್ಲಿಕ್ ಪರೀಕ್ಷೆ ರದ್ದಾಯಿತು ಅಂದುಕೊಳ್ಳೋಣ. ಆಗ 10ನೇ ತರಗತಿಯ ವಿದ್ಯಾರ್ಥಿಯ ಮೇಲಿನ ಒತ್ತಡ ತಕ್ಷಣಕ್ಕೆ ಕಡಿಮೆಯಾಗುತ್ತದೆ ಎನ್ನುವುದು ನಿಜ. ಅದರೆ, ಪರಿಣಾಮವೇನು? ಆ ಮಗು ತಾನು ಓದಿದ ಶಾಲೆ ಬಿಟ್ಟು ಪಿಯು ಕಾಲೇಜು ಸೇರಲು ಪ್ರತ್ಯೇಕ ಪ್ರವೇಶ ಪರೀಕ್ಷೆ ಬರೆಯಬೇಕು ಎನ್ನುತ್ತದೆ ಸಿಬಲ್ ನಿಯಮ. ಅಂದರೆ, ಮಗು ಪಬ್ಲಿಕ್ ಪರೀಕ್ಷೆ ಬದಲು ತನ್ನ ಹೈಸ್ಕೂಲಿನಲ್ಲೇ ನಡೆಯುವ ವಾರ್ಷಿಕ ಪರೀಕ್ಷೆ ಬರೆಯುತ್ತದೆ ಹಾಗೂ ಪಿಯೂಸಿ ಪ್ರಥಮ ವರ್ಷಕ್ಕೆ ಸೇರಲು ಇನ್ನೊಂದು ಪ್ರವೇಶ ಪರೀಕ್ಷೆ ಬರೆಯುತ್ತದೆ. ಇದರರ್ಥ ಮಗು 11ನೇ ತರಗತಿ ಸೇರಲು ಎರಡು ಪರೀಕ್ಷೆ ಬರೆಯಬೇಕು! ಇದು extra ಒತ್ತಡವಲ್ಲವೇ?
ಇನ್ನೊಂದು ವಿಷಯ. ಕರ್ನಾಟಕದಲ್ಲಿ ನಡೆದ ಮಹತ್ವದ ಪ್ರಯೋಗವೊಂದನ್ನು ಗಮನಿಸಬೇಕು. ಕಳೆದ 3 ವರ್ಷದ ಹಿಂದೆ SSLC ಪರೀಕ್ಷೆಯ ಒತ್ತಡವನ್ನು ತಡೆಯಲು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಿತು. 100 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ 60 ಅಂಕಗಳಷ್ಟು ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡಿತು. ವಿವರಣಾತ್ಮಕ ಪ್ರಶ್ನೆಗಳನ್ನು ಕಡಿಮೆ ಮಾಡಿತು. ಇದರಿಂದ ಮಕ್ಕಳ ಮೇಲಿನ ಒತ್ತಡ ಕಡಿಮೆಯಾದದ್ದು ನಿಜ. ಆದರೆ, ಇದರ ಪರಿಣಾಮ ಪಿಯುಸಿ ದ್ವಿತೀಯ ಹಂತದಲ್ಲಿ ಕಾಣಿಸಿಕೊಂಡಿತು. ಸುಲಭವಾಗಿ SSLC ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು, ಪ್ರಥಮ ಪಿ.ಯು. ತರಗತಿಯಲ್ಲಿ ಕಷ್ಟ ಅನುಭವಿಸಿದರು ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಫೇಲಾದರು. ದ್ವಿತೀಯ ಪಿಯು ಪಾಸ್ ಫಲಿಂತಾಶ ಎಂದೂ ಇಲ್ಲದಷ್ಟು ಪ್ರಮಾಣದಲ್ಲಿ ಕುಸಿಯಿತು. ಇದೀಗ ರಾಜ್ಯದ ಶಿಕ್ಷಣ ತಜ್ಞರಿಗೆ ಈ ತಪ್ಪಿನ ಅರಿವಾಗಿದೆ. ಆದ್ದರಿಂದ ಮತ್ತೆ SSLC ಹಂತದಲ್ಲಿ ಪರೀಕ್ಷಾ ಪದ್ಧತಿ ಸರಿ ಮಾಡಲು ಈ ವರ್ಷದಿಂದ ಪ್ರಾರಂಭಿಸಿದ್ದಾರೆ. ಪರೀಕ್ಷೆಯನ್ನು ಸುಲಭಗೊಳಿಸಿದ್ದಕ್ಕೇ ಈ ಪರಿ ಫಲಿತಾಂಶ. ಇನ್ನು ಪರೀಕ್ಷೆಯನ್ನು ರದ್ದುಗೊಳಿಸಿದರೆ ಹೇಗಿರಬಹುದು ಪರಿಣಾಮ?
Point to be noted. ಅಡಿಪಾಯ ಗಟ್ಟಿ ಇಲ್ಲದೇ ಮನೆ ಕಟ್ಟಲು ಹೋದರೆ ಕಟ್ಟಡ ಕುಸಿಯದೇ ಇದ್ದೀತೆ? 12ನೇ ತರಗತಿಗೆ 10ನೇ ತರಗತಿಯೇ ಅಡಿಪಾಯ.
ಅಂದರೆ, 10ನೇ ತರಗತಿಯ ಪಬ್ಲಿಕ್ ಪರೀಕ್ಷೆ ರದ್ದು ಮಾಡಿದರೆ, ಅದರ ಒತ್ತಡ ಕೆಲವೇ ದಿನದಲ್ಲಿ ನಡೆಯುವ ಪ್ರವೇಶ ಪರೀಕ್ಷೆಯ ಮೇಲೆ ಅಥವಾ 11ನೇ ತರಗತಿಯ ಮೇಲೆ ಕಾಣಿಸಿಕೊಳ್ಳುತ್ತದೆ. ಅದರ ಪರಿಣಾಮ ವಗುವಿನ ಭವಿಷ್ಯಕ್ಕೆ ನಿರ್ಣಾಯಕವಾದ 12ನೇ ತರಗತಿಯ ಮೇಲೆ ಆಗುತ್ತದೆ.
ಇನ್ನು ಅಂಕಗಳ ಬದಲು ಗ್ರೇಡ್ ನೀಡುವುದಾಗಿ ಹಾಗೂ ಪರ್ಸೆಂಟ್ ಬದಲು ಪರ್ಸೆಂಟೈಲ್ ನೋಡುವುದಾಗಿ ಸಿಬಲ್ ಹೇಳಿದ್ದಾರೆ. ಸಿಬಲ್ ಪ್ರಸ್ತಾವದಲ್ಲಿ ಇದೊಂದೇ ತುಸು ಸಕಾರಾತ್ಮಕ ಅಂಶ. ಇದನ್ನು ಈಗಿನ ಪರೀಕ್ಷಾ ಪದ್ಧತಿಯಲ್ಲೂ ಜಾರಿ ಮಾಡಬಹುದಲ್ಲ!
ಫಂಡಾ 3: ಇದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ನಮ್ಮ ಇಡೀ ಜೀವನ, ಸ್ಪರ್ಧೆಯ ಸುತ್ತ ಗಿರಕಿಹೊಡೆಯುತ್ತದೆ. ಸ್ಪರ್ಧೆಯಲ್ಲಿ ಗೆಲ್ಲುವುದೇ ಮುಖ್ಯವಾಗುತ್ತದೆ. ಈ ಸ್ಪರ್ಧೆಯಲ್ಲಿ ಗೆಲ್ಲುವ ಬಗೆಯನ್ನು ಶಿಕ್ಷಣ ಕಲಿಸಿಕೊಡಬೇಕು. ಸ್ಪರ್ಧೆ ಎದುರಿಸುವ ಮನೋಸ್ಥೈರ್ಯವನ್ನು ಬೆಳೆಸಿಕೊಡಬೇಕು. ಜೀವನದ ವಾಸ್ತವ ಒತ್ತಡಗಳನ್ನು ಸ್ವೀಕರಿಸಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕು. Survival of the Fittest ಎಂಬ ಸತ್ಯದ ದರ್ಶನ ಮಾಡಿಸಬೇಕು. ಅದನ್ನು ಬಿಟ್ಟು ಒತ್ತಡಗಳಿಗೆ ಹೆದರಿ ಓಡಿಹೋಗುವ ಪಲಾಯನವಾದವನ್ನು ಕಲಿಸಬಾರದು. ಈಗ ಕಪಿಲ್ ಸಿಬಲ್ ನಮ್ಮ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ಓಡಿಹೋಗುವ ವಿದ್ಯೆ ಕಲಿಸಲು ಉದ್ದೇಶಿಸಿದ್ದಾರೆ!
ಫಂಡಾ 4 : ಪರೀಕ್ಷೆ ರದ್ದು ಮಾಡುವುದರಿಂದ, "ಹೇಗೂ ಪಾಸಾಗಬೇಕಿಲ್ಲ ಬಿಡು..." ಎಂದು, ಮಕ್ಕಳು ಬೇಜವಾಬ್ದಾರರಾಗುತ್ತಾರೆ. ಪರೀಕ್ಷೆ ಇಲ್ಲದಿದ್ದರೂ ತಾವು ಓದಬೇಕು ಎಂದು ಬಹುತೇಕ ಮಕ್ಕಳು ಅಂದುಕೊಳ್ಳುವುದಿಲ್ಲ. ಏಕೆಂದರೆ, ಓದುವುದು ಮಕ್ಕಳ ಸಹಜ Instinct ಅಲ್ಲ. ಆಡುವುದು ಅವರ ಸಹಜ ಗುಣ. ಆದ್ದರಿಂದ ಮಕ್ಕಳು ಪರೀಕ್ಷೆಯಿಲ್ಲದಿದ್ದರೂ ತಾವೇ ತಾವಾಗಿ ಓದಿಕೊಳ್ಳುತ್ತಾರೆ ಎಂಬುದು ಭ್ರಮೆ. ಮಕ್ಕಳನ್ನು ಓದಿಸುವ ಕಷ್ಟ ಬುದ್ದಿಜೀವಿಗಳಿಗಿಂತ ತಾಯಂದೀರಿಗೆ ಚೆನ್ನಾಗಿ ಗೊತ್ತು! ಅಲ್ಲದೇ, 16ನೇ ವಯಸ್ಸಿನ ಮಕ್ಕಳ ಮನಸ್ಸು ಚಂಚಲ. ಅವರಿಗಿನ್ನೂ ಜವಾಬ್ದಾರಿ ಮೂಡಿರದ ವಯಸ್ಸು ಅದು. ಅದಕ್ಕೇ ಅವರನ್ನು Adult ಎಂದು ಪರಿಗಣಿಸುವುದಿಲ್ಲ. ಆರರಿಂದ ಹದಿನಾರರವರೆಗೆ ಮಕ್ಕಳನ್ನು ಓದಿಸುವ ಜವಾಬ್ದಾರಿ ಹಿರಿಯರದು. ಈ ಹಿನ್ನೆಲೆಯಲ್ಲಿ, ಪರೀಕ್ಷೆ ಎಂಬುದು, ಮಕ್ಕಳಿಗೆ ಓದಲು ಒಂದು ಪ್ರಬಲ ಕಾರಣವಾಗುತ್ತದೆ. ಆದ್ದರಿಂದ, ಪರೀಕ್ಷೆಯನ್ನು ರದ್ದುಗೊಳಿಸುವುದು ತರವಲ್ಲ.
ಫಂಡಾ 5 : ದೇಶಾದ್ಯಂತ 10ನೇ ತರಗತಿಗೆ ಸಮಾನ ಪಠ್ಯಕ್ರಮ ಜಾರಿಯಾದರೆ, ಶೈಕ್ಷಣಿಕ ಗೊಂದಲ ನಿವಾರಣೆಯಾಗುತ್ತದೆ ಎಂದು ಕಪಿಲ್ ಸಿಬಲ್ ವಾದ. ಒಂದು ದೃಷ್ಟಿಯಲ್ಲಿ ಅದು ನಿಜ. ಆದರೆ, ಕೇಂದ್ರ ಪಠ್ಯಕ್ರಮದಲ್ಲಿ, ಆಯಾ ರಾಜ್ಯಗಳ ಭಾಷೆ, ಇತಿಹಾಸ, ಸಂಸ್ಕೃತಿ ಎಲ್ಲಾ ಏನಾಗುತ್ತದೆ? ಶಿಕ್ಷಣ ಎಂದರೆ ಬರೀ ಸೈನ್ಸು, ಮ್ಯಾಥ್ಸು ಅಲ್ಲವಲ್ಲ! ವಿಜ್ಞಾನ ಮತ್ತು ವಾಣಿಜ್ಯದಂಥ ವಿಷಯದಲ್ಲಿ ಸಮಾನ ಪಠ್ಯ ತರಬಹುದು. ಆದರೆ, ಇತಿಹಾಸ, ಸಂಸ್ಕೃತಿ, ಸಮಾಜ ಶಾಸ್ತ್ರ, ಭಾಷೆಯಂಥ ಸೂಕ್ಷ್ಮ ವಿಷಯದಲ್ಲಿ ಸಮಾನ ಪಠ್ಯಕ್ರಮ ತರವಲ್ಲ. ಅಲ್ಲದೇ, ಹಳ್ಳಿ ಮಕ್ಕಳಿಗೂ ದಿಲ್ಲಿ ಮಕ್ಕಳಿಗೂ ಒಂದೇ ಶಿಕ್ಷಣ ನೀಡಬೇಕು ಎಂದರೆ ಹೇಗೆ ಸರಿ. ದಿಲ್ಲಿ ಮಕ್ಕಳ ಠಸ್ ಪುಸ್ ಇಂಗ್ಲೀಷಿನ ಮುಂದೆ ನಮ್ಮ ಹಳ್ಳಿ ಮಕ್ಕಳ ಇಂಗ್ಲೀಷು ಹೇಗೆ ಸಮವಾದೀತು? ಕೇಂದ್ರ ಪಠ್ಯಕ್ರಮದಲ್ಲೂ ಕನ್ನಡಮಾಧ್ಯಮ ಶಿಕ್ಷಣ ಇರುವುದೇ? ಹಾಗೇನಾದರೂ ಇದ್ದರೂ, ಸಮಾನ ಪಠ್ಯಕ್ರಮಕ್ಕೆ ನಾವು ಒಪ್ಪಿಕೊಂಡರೆ, ಉತ್ತರ ಭಾರತದ ಝಾನ್ಸಿರಾಣಿ ಎಂದರೆ ನಮ್ಮ ಮಕ್ಕಳಿಗೆ ಗೊತ್ತಿರುತ್ತದೆ. ಕಿತ್ತೂರು ಚೆನ್ನಮ್ಮ ಎಂದರೆ ಅದ್ಯಾರು ಅಂತಾರೆ? ಏಕೆಂದರೆ, ಕೇಂದ್ರ ಪಠ್ಯಕ್ರಮ ಉತ್ತರ ಭಾರತದಲ್ಲಿ ಸಿದ್ಧವಾಗುತ್ತದೆ! ಇದೆಲ್ಲಾ ಹೊಸ ಟೆನ್ಶನ್ನಿಗೆ ಕಾರಣವಾಗುತ್ತದೆ.
ಫಂಡಾ 6: ಹೋಗಲಿ, ಸಿಬಲ್ ಹೇಳಿದ್ದನ್ನು ಒಪ್ಪಿಕೊಂಡು ಬಿಡೋಣ. ಪರೀಕ್ಷಾ ಒತ್ತಡದಿಂದ ಮಕ್ಕಳನ್ನೂ, ಪಾಲಕರನ್ನೂ ಪಾರುಮಾಡಬೇಕು ಎಂಬುದು ಅವರ ಸದುದ್ದೇಶ. ಪರೀಕ್ಷಾ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂಥ ಸ್ಥಿತಿ ಹೋಗಲಾಡಿಸಬೇಕು ಎಂಬುದು ಸರಿ. ಆದರೆ, ಈ ಪರೀಕ್ಷಾ ಒತ್ತಡ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ 12ನೇ ತರಗತಿಯಲ್ಲೂ ಇದೆಯಲ್ಲಾ! ಡಿಗ್ರಿ ಕ್ಲಾಸಿನಲ್ಲೂ ಇದೆಯಲ್ಲಾ? ಅವರನ್ನೆಲ್ಲಾ ಏಕೆ ಸಿಬಲ್ ಪರೀಕ್ಷಾ ಟ್ರಾಮಾದಿಂದ ಪಾರು ಮಾಡುವುದಿಲ್ಲ? ಭಾರತದಲ್ಲಿರುವ ಎಲ್ಲ ಕ್ಲಾಸಿನ ವಿದ್ಯಾರ್ಥಿಗಳನ್ನೂ ಪರೀಕ್ಷಾ ಟ್ರಾಮಾದಿಂದ ಪಾರುಮಾಡಿ ಎಲ್ಲರಿಗೂ ಸರ್ಟಿಫಿಕೆಟ್ ದಯಪಾಲಿಸಬಹುದಲ್ಲ? ಅದಕ್ಕಿಂತ ದೊಡ್ಡ ಶಿಕ್ಷಣ ಕ್ರಾಂತಿ ಇನ್ಯಾವುದಿದೆ!
ಪ್ಲೀಸ್ ಥಿಂಕ್ ಎಬೌಟ್ ಇಟ್ ಮಿಸ್ಟರ್ ಕಪಿ ಸಿಬಲ್.
